ಓದಿ ಓಡಿದವರು!

Thursday 28 June 2012

50 : 50!!




         ತ ನನ್ನ ತಲೆಯೊಳಗಡೆ ಮೂಕನಂತೆ ಕುಳಿತಿರುವ ವಿಚಿತ್ರ ಆಸಾಮಿ. ಮೂಕನೇನೂ ಅಲ್ಲ ಮಾತನಾಡಲು ಶುರುಮಾಡಿದನೆಂದರೆ ಅದಕ್ಕೆ ಕೊನೆಮೊದಲಿರುವುದಿಲ್ಲ. ನನ್ನ ಇಡೀ ತಲೆಯಲ್ಲಿನ ಪ್ರಪಂಚವನ್ನೇ ಅಲ್ಲೋಲಕಲ್ಲೋಲವೆಬ್ಬಿಸುವ ಶಕ್ತಿ ಈತನಿಗುಂಟು. ಇವನ ತಂಟೆಗೆ ನಾನು ಹೋಗುವುದು ತುಂಬಾ ಕಡಿಮೆ. ಪಕ್ಕಾ ಹುಚ್ಚ. ಇವನ ಮಾತುಗಳು ನನಗೇ ಒಪ್ಪಿಗೆಯಾಗುವುದಿಲ್ಲ ಇನ್ನು ಇತರರಿಗೆ ಎಲ್ಲಿಂದ ಒಪ್ಪಿಗೆಯಾಗಬೇಕು. ಅದಕ್ಕೇ ಮೂಲೆಗಟ್ಟಿದ್ದೆ. ಆತನೂ ಸಹ ನಾನಾಗಿ ನಾನೇ ಕೆಣಕದ ಹೊರತು ನನ್ನ ಸಹವಾಸಕ್ಕೆ ಬರುತ್ತಿರಲಿಲ್ಲ. ಆದರೆ ಇಂದು ಯಾಕೋ ಕೊಂಚ ಸಮಯವಿದ್ದಿದ್ದರಿಂದ ಕುಶಲೋಪರಿ ವಿಚಾರಿಸೋಣವೆಂದುಕೊಂಡೆ. ಅದೇ ನಾನು ಮಾಡಿದ ಮಹಾಪರಾಧ. ಮಾತು ಕೆಲಸ, ಪ್ರೇಮ, ಮದುವೆ, ಸಂಸಾರ, ಜೀವನ, ಮನೆ, ಎಲ್ಲಾ ಕಡೆ ಉರುಳಿ ಕೊನೆಗೆ ಗಂಡು ಮತ್ತು ಹೆಣ್ಣಿನ ಬಗ್ಗೆ ನಿಂತುಕೊಂಡಿತು. ಕೊಂಚ ಸಮಯ ಮೌನವಾಗಿ ಒಂದೆಡೆ ದಿಟ್ಟಿಸುತ್ತಾ ಕುಳಿತ. ಮತ್ತೇನೋ ಕಾದಿದೆ ನನಗೆ ಎಂದು ಆ ಮೌನದಲ್ಲೇ ಖಾತ್ರಿಯಾಯ್ತು. ಅಂದುಕೊಂಡಿದ್ದಂತೆಯೇ ಮೊದಲು ನನ್ನೆಡೆಗೆ ನಿಧಾನಕ್ಕೆ ಕಣ್ಣು ಹೊರಳಿಸಿ ಏನೋ ಹೇಳಲಿರುವವನೆಂಬಂತೆ ಕೈಯನ್ನು ನಿಧಾನಕ್ಕೆ ಮೇಲಕ್ಕೆ ಎತ್ತಿ ಶುರುಮಾಡಿದ. ಈ ಗಂಡು ಹೆಣ್ಣು ಅನ್ನೋ ನಂಬಿಕೇನೇ ಸುಳ್ಳು ಕಣೋ ಎಂದ. ತೊಗೋಳಪ್ಪಾ ಎಲ್ಲಾದ್ರೂ ಹೇಳಿಬಿಟ್ಟೀಯಾ ಮಾರಾಯ ತಲೆ ಹೋಳಾದೀತು ಅಂದೆ. ನನ್ನ ಮಾತಿಗೆ ತಲೆ ಕೆಡಿಸಿಕೊಳ್ಳದೇ ಮುಂದುವರೆಸಿದ. ನೀನು ನಂಬಿರುವುದು ಖಂಡಿತಾ ತಪ್ಪು. ಗಂಡು ಗಂಡಲ್ಲಾ, ಹೆಣ್ಣು ಹೆಣ್ಣಲ್ಲಾ ಅಂದ. ಇವನ ಬಳಿ ಮಾತನಾಡಲು ಬಂದೆನಲ್ಲಾ ನನಗೆ ಹುಚ್ಚಷ್ಟೇ. ಇದು ಬೇಕಿತ್ತಾ ನನಗೆ ಎಂದುಕೊಳ್ಳುತ್ತಲೇ ಲೋ ಅಪ್ಪಾ ಮಾರಾಯ ಇಡೀ ಪ್ರಪಂಚದಲ್ಲಿ ಇರುವುದೆರಡೇ ಜಾತಿ ಒಂದು ಗಂಡು ಜಾತಿ ಇನ್ನೊಂದು ಹೆಣ್ಣು ಜಾತಿ ಅಂತ ಎಲ್ಲ ಬಲ್ಲವರೂ, ಜಾತ್ಯಾತೀತವಾದವರೂ, ಮಾನವಕುಲಕ್ಕೆ ಸೇರಿದವರೂ, ಬುದ್ಧಿವಂತರುಗಳೂ, ತತ್ವಜ್ಞಾನಿಗಳೂ, ಮಹಾ ಪುರುಷರೂ ಹೇಳಿರುವ ಮಾತಿದು, ನೀನೇನಪ್ಪಾ ಅಂದರೆ ಗಂಡು ಹೆಣ್ಣು ಅನ್ನೋ ಜಾತಿ ಕೂಡ ಇಲ್ಲಾ ಅಂತ ಹೇಳೋಕೆ ಹೊರಟಿದ್ದೀಯಾ? ಸುಮ್ಮನಿದ್ದು ಬಿಡು ಇವಾಗ ಜಾಸ್ತಿ ತಲೆ ತಿನ್ನಬೇಡ ಎಂದೇನೋ ಹೇಳಿ ಎದ್ದು ಹೊರಟೆ.

ಆದರೆ, ಯಾಕೆ ಹಾಗೆ ಹೇಳ್ತಿದ್ದಾನೆ. ಇದೇ ಮೊದಲ ಬಾರಿಗೆ ಹೀಗೆ ಯಾರಾದರೂ ಹೇಳಿರುವುದು ನನಗೆ. ಏನವನ ವಿಚಾರ ತಿಳಿದೇ ಬಿಡೋಣವೆಂದು ಮತ್ತೆ ಕುಳಿತೆ. ಅವನಿಗೆ ಮುಂಚಿತವಾಗಿಯೇ ಗೊತ್ತಿತ್ತೆನಿಸುತ್ತೆ ನಾನು ಮತ್ತೆ ಬಂದು ಕೂರುವೆನೆಂದು. ತನ್ನ ಲಹರಿಯಲ್ಲೇ ಕಳೆದುಹೋಗಿದ್ದವನು ಹೊರಬಂದು, ‘ನೋಡು ಎಲ್ಲರೂ ಮನುಷ್ಯರಷ್ಟೇ ಪ್ರತಿಯೊಬ್ಬರಲ್ಲೂ ಗಂಡು ಹೆಣ್ಣು ಎರಡೂ ಅಂಶಗಳಿರುತ್ತವೆ’ ಅಂತ ಒಂದು ವೇದಾಂತ ಬಿಟ್ಟ. ನಗೆ ತಡೆಯಲಾಗಲಿಲ್ಲ. ಹೊಟ್ಟೆ ಹಿಡಿದು ನಗಲಾರಂಭಿಸಿದೆ. ಅವನು ನನ್ನ ನೋಡಿ ಕೊಂಚವೇ ನಕ್ಕ. ಸುಮ್ಮನಾದೆ. ಅವನ ಪ್ರವಚನ ಮುಂದುವರೆಯಿತು. ಸಮಯಕ್ಕಾನುಸಾರವಾಗಿ ಯಾವ ಮನುಷ್ಯ ಬೇಕಾದರೂ ಹೆಣ್ಣಾಗಬಹುದು ಗಂಡು ಕೂಡ ಆಗಬಹುದು. ಅದು ಹೇಗೆ? ದೇಹದ ವಿನ್ಯಾಸವನ್ನಾಧರಿಸಿ ಅಂದರೆ ದೇಹ ಹೊತ್ತಿರುವ ಭಾಗಗಳಿಗನುಸಾರವಾಗಿ ಲಿಂಗ ಇದ್ದರೆ ಗಂಡು ಯೋನಿ ಇದ್ದರೆ ಹೆಣ್ಣು, ಎದೆ ಇದ್ದರೆ ಗಂಡು, ಮೊಲೆಯಿದ್ದರೆ ಹೆಣ್ಣು ಎಂದು ಪರಿಗಣಿಸುತ್ತೀವಿ. ಆದರೆ ಅದು ಕಾಲು ಭಾಗ ಸತ್ಯವಷ್ಟೇ. ಅಂದರೆ ಇಪ್ಪತ್ತೈದು % ಗಂಡು ಅಥವಾ ಹೆಣ್ಣು ಸತ್ವವನ್ನು ಹೊತ್ತಿರುವ ಮನುಷ್ಯನಷ್ಟೇ. ಇನ್ನು ಮಿಕ್ಕ ಎಪ್ಪತ್ತೈದು% ಮನಸ್ಸಿಗೆ ಸಂಬಂಧ ಪಟ್ಟಿದ್ದು. ನನ್ನ ಬಾಯಿ ತೆರೆದುಕೊಂಡಿದ್ದು ಹಾಗೇ ಇತ್ತು. ಸೊಳ್ಳೆಗಳು ಒಳಹೊಕ್ಕು ಹೊರಬರುತ್ತಿದ್ದವೇನೋ ಅದರ ಕಡೆ ಪರಿವೆಯೇ ಇರಲಿಲ್ಲ. ಅಂದರೆ, ಲಿಂಗವನ್ನು ಹೊತ್ತಿರುವವನೂ ಸಹ ಹೆಣ್ಣಾಗಿರಬಹುದಾದ ಎಲ್ಲಾ ಸಾಧ್ಯತೆಗಳೂ ಇವೆ. ಯಪ್ಪಾ!!!!! ತಲೆ ಕೆಸರಿನಲ್ಲಿ ಅದ್ದಿ ಕಚ ಕಚ ಕಚನೆ ತುಳಿದು ಎತ್ತಿದ ಹಾಗಾಯ್ತು. ಕೂದಲುಗಳು ಪರಪರಪರ ಕಿತ್ತುಕೊಂಡು ಅದೇನು ಹೇಳುತ್ತಿದ್ದನೋ ಪುಣ್ಯಾತ್ಮ ಎಂದು ಅವನನ್ನೇ ನೋಡುತ್ತಾ ಹಾಗಾದ್ರೆ ನಾನು ಯಾರು ತಂದೆ ಅಂದೆ. ನೀನು ಎಪ್ಪತ್ತೈದು % ಗಂಡು ೨೫% ಹೆಣ್ಣು ಅಂದ, ಕಾಲಿನಲ್ಲಿರುವ ಮೆಟ್ಟು ಕಿತ್ತು ಅವನ ಮುಖಕ್ಕೆ ಎಸೆಯಬೇಕೆಂದುಕೊಂಡವನು ಸುಧಾರಿಸಿಕೊಂಡು, ಹಾಗಾದರೆ ನಮ್ಮಪ್ಪ ಅಂದೆ ಅರವತ್ತೈದು % ಗಂಡು, ಮುವತ್ತೈದು % ಹೆಣ್ಣು ಅಂದ, ನಮ್ಮಮ್ಮ ಅಂದೆ ಅರವತ್ತೈದು % ಹೆಣ್ಣೂ ಮುವತ್ತೈದು % ಗಂಡು ಎಂದ. ಬಾಯಿಗೆ ತರ್ಮಾಮೀಟರ್ ಇಟ್ಟಿದ್ದಿದ್ದರೆ ಕೋಪದ ಶಾಕಕ್ಕೇ ಒಡೆದು ಚೂರುಚೂರಾಗುತ್ತಿತ್ತು. ಯಾಕೆ ಅಂದೆ ಅಷ್ಟೇ? ನಿಮ್ಮಪ್ಪನದ್ದು ನೋಡಲು ಒರಟಾದರೂ ಮೃದು ಸ್ವಭಾವ, ನಿಮ್ಮ ಸಂಸಾರದಲ್ಲಿ ಯಾರಿಗೆ ಏನೇ ಆಪತ್ತಾದರೂ ಹೆಚ್ಚು ಘಾಸಿಯಾಗುವುದು ನಿನ್ನ ತಂದೆಗೇನೇ. ನಿಮ್ಮಮ್ಮ ನೋಡಲು ಸೌಮ್ಯ, ಆದರೆ ಗಟ್ಟಿ ಹೆಂಗಸು ಇಲ್ಲವಾದಲ್ಲಿ ನಿಮ್ಮಗಳನ್ನ ಸಾಕಲು ನಿಮ್ಮಪ್ಪನಿಂದ ಸಾಧ್ಯವೇ ಆಗುತ್ತಿರಲಿಲ್ಲ.

ನಾನೂ ಯೋಚನೆಗೊಳಗಾದೆ, ಹೌದು ಇವನು ಹೇಳುತ್ತಿರುವುದೇನೋ ಸರಿ ಆದರೆ ನಾನು ೨೫% ಹೆಣ್ಣೆಂದು ಒಪ್ಪಿಕೊಳ್ಳಲು ಕೊಂಚ ಕಸಿವಿಸಿಯಾಯ್ತು. ಹಾಗಾದರೆ ನೀನು ಎಷ್ಟು % ಗಂಡು ಎಂದು ಅವನನ್ನೇ ಪ್ರಶ್ನಿಸಿದೆ. ನಾನು ೧೦೦% ಗಂಡು ಕೆಲವು ಸಲ ೧೦೦% ಹೆಣ್ಣು ಕೆಲವು ಸಲ ಎಂದು ದಿಟ್ಟವಾಗಿ ಉತ್ತರಿಸಿದ. ನನಗೆ ಇವನ ಮಾತುಗಳು ಕೊಂಚವೂ ರುಚಿಸುವುದಿಲ್ಲ ಆದರೂ ಎಲ್ಲವನ್ನೂ ಕೇಳುತ್ತೇನೆ ಬೇರೆ ವಿಧಿಯಿಲ್ಲ. ತೇಜಸ್ವಿ ಅವರು ಎಂದೆ. 60% ಗಂಡು 40% ಹೆಣ್ಣು ಎಂದ. ಭಟ್ಟರು? 73%,27%. ಐಶ್ವರ್ಯ 40,60. ರಾಜಕಾರಿಣಿಗಳು 90,10(ಅಂದಾಜು). ಪೊಲೀಸರು 88,22 (ಅಂದಾಜು), ಕ್ರಿಯಾಶೀಲರು 100,100 (ಅಂದಾಜು), ಸಾಧುಗಳು 100,100 (ಅಂದಾಜು), ವಿದ್ಯಾರ್ಥಿಗಳು 59, 41 (ಅಂದಾಜು), ಭಾರತೀಯರು 60,40 (ಅಂದಾಜು), ವಿದೇಶೀಯರು 50,50 (ಅಂದಾಜು). ಇವನ ಸಮೀಕ್ಷೆ, ಅನ್ವೇಷಣೆ ಹುಚ್ಚುತನವೆಂದು ಗೊತ್ತಿದ್ದರೂ ನಾನು ಕೇಳುತ್ತಾ ಹೋಗಿದ್ದು ನನ್ನ ಮೂರ್ಖತನವಷ್ಟೇ.  

 ಹಾಗಾದರೆ ಗಂಡು ಹೆಣ್ಣೆಂದರೆ ಹೇಗೆ ವಿಭಜಿಸುತ್ತೀಯ? ಎಂದೆ. ವಿಕೃತಿ, ಕ್ರೋಧ, ಕ್ರೌರ್ಯ, ಧೈರ್ಯ, ಒರಟುತನ, ಗಟ್ಟಿತನ, ಹುಂಬತನ, ಸುಳ್ಳುಬುರುಕುತನ, ಮೋಸಗಾರಿಕೆ, ಕೊಲೆಪಾತಕತನ, ಹಾದರಿಕೆ, ಕಳ್ಳತನ, ಮೆರೆಯುವಿಕೆ, ಜಂಭ, ಅಧಿಕಾರೀ ನಡವಳಿಕೆ ಇತರೆ ಇತರೆ ಇತರೆ ಇದು ಗಂಡಸ್ತನ. ಹೆಣ್ತನವೆಂದರೆ ಸೌಂದರ್ಯ, ತ್ಯಾಗ, ಹೆದರುವಿಕೆ,ಸಹಿಶ್ಣುತೆ, ತಾಳ್ಮೆ, ಸಹನೆ, ನಗು, ಕನಸು, ಮೃದುತ್ವ, ಇತರೆ ಇತರೆ ಇತರೆ. ಹಾಗಾದರೆ ನೀನು ಹೇಳ್ತಿರೋದು ಪ್ರಬಲವಾದದ್ದು ಗಂಡು, ದುರ್ಬಲವಾದದ್ದು ಹೆಣ್ಣು ಅಂತಲೋ ಎಂದೆ. ಸುಮ್ಮನೆ ನಕ್ಕ. ಯಾವುದು ದುರ್ಬಲ ಮತ್ತೆ ಯೋಚನೆ ಮಾಡಿ ನೋಡು ಎಂದ. ನನ್ನ ಪ್ರಶ್ನೆಯಲ್ಲಿ ಸತ್ವವಿಲ್ಲದ್ದು ನನಗೆ ಅರಿವಾಯ್ತು. ಅವಗುಣಗಳೆಲ್ಲಾ ಪುರುಷತ್ವ ಮತ್ತು ಸದ್ಗುಣಗಳೆಲ್ಲಾ ಹೆಣ್ತನಗಳಾ ಹಾಗಾದರೆ ಎಂದು ಅದೇ ಪ್ರಶ್ನೆಯನ್ನು ತಿರುಚಿ ಕೇಳಿದೆ. ಒಳಿತು ಕೆಡುಕೆಂಬುದರ ಬೇಧ ಮಾಡಲು ಮಧ್ಯ ಒಂದು ರೇಖೆ ಎಳೆದು ಒಳಿತೊಂದು ಕಡೆ ಕೆಡುಕೊಂದು ಕಡೆ ಹಾಕಬೇಕಾಗುತ್ತದೆ. ಇಲ್ಲಿ ಆ ಮಧ್ಯ ರೇಖೆಯೇ ಇಲ್ಲವಾದ್ದರಿಂದ ಒಳಿತು ಕೆಡುಕು ಎಂಬ ಬೇಧವೇ ಇಲ್ಲವೆಂದ. ಇದ್ಯಾಕೋ ಖಂಡಿತವಾಗಿ ನನಗೆ ಅರಗಿಸಿಕೊಳ್ಳುವ ಮಿತಿಯನ್ನು ದಾಟಿ ತುಂಬಾ ದೂರಹೋಗುತ್ತಲಿತ್ತು. ತಲೆಯಲ್ಲಿನ ಪ್ರಪಂಚದಲ್ಲಿ ಕರ್ಕಶ ಸಿಳ್ಳು ಹುಟ್ಟಿಕೊಂಡಿತ್ತು. ನೇರ ಅವನ ಕಾಲಿಗೆ ಸಾಷ್ಟಾಂಗ ನಮಸ್ಕಾರ ಹಾಕಿ ಸಾಕು ಮಾಡು ನಿನ್ನ ಹುಚ್ಚು ಪ್ರವರ ಇದನ್ನು ನಾನೇ ಅಲ್ಲ ಪ್ರಪಂಚದಲ್ಲಿ ಯಾರಿಗೇ ಹೇಳೀದರೂ ನಗುವರಷ್ಟೇ ಹೊರತು ತಮ್ಮಲ್ಲಿ ಗಂಡು ಹೆಣ್ಣು ಇಬ್ಬರೂ ಇದ್ದಾರೆಂದು ಒಪ್ಪಿಕೊಳ್ಳಲಾರರು! ಪ್ರಪಂಚದಲ್ಲಿ ಜಾತಿಯೇ ಇಲ್ಲ, ಯಾರೂ ಮೇಲಲ್ಲಾ, ಕೀಳಲ್ಲಾ, ಸಮಾನರೂ ಅಲ್ಲ, ಯಾರು ಗಂಡೂ ಅಲ್ಲ, ಯಾರು ಹೆಣ್ಣೂ ಅಲ್ಲ, ಎಲ್ಲರೂ ಗಂಡೇ, ಎಲ್ಲರೂ ಹೆಣ್ಣೇ ಎಂದು ನೀವು ಒಪ್ಕೋತೀರಾ???









+ನೀ.ಮ. ಹೇಮಂತ್

Tuesday 26 June 2012

ಸುಸು ಕಥೆ!




         ದರೆ ಆ ಪಾಪು ಯಾಕೆ ಅಳೋಕೆ ಶುರು ಮಾಡ್ತು? ಮಕ್ಕಳ ಮನಸ್ಸನ್ನ ಅರ್ಥ ಮಾಡ್ಕೊಳ್ಳೋದು ಕೂಡ ಅಷ್ಟೋಂದು ಸುಲಭ ಇಲ್ಲ ಸ್ವಾಮಿ. ಏನೇನಾಯ್ತು ಅಷ್ತೊತ್ತಿಂದ ಅಂತ ಹಾಗೇ ಫ್ಲಾಶ್ ಬ್ಯಾಕಿನಲ್ಲಿ ಯೋಚನೆ ಮಾಡಿದೆ. ನಾನು ಮನೆಯಿಂದ ಹೊರಗಡೆ ಬಂದು ನಿಲ್ಲುವ ಸಮಯಕ್ಕೆ ಸರಿಯಾಗಿ ಎದುರು ಮನೆಯ ಆ ಮಗುವೂ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತಾ ನಡೆದು ಬಂದು ನಿಂತಿತು. ನನ್ನ ಮನೆಯೂ ಮೊದಲ ಮಹಡಿ, ಅದೂ ಸಹ ಮೊದಲ ಮಹಡಿಯ ಮಗುವೇ. ರಸ್ತೆಯಲ್ಲಿ ಯಾರೋ ಯಮುನಮ್ಮನೋ, ಮುನಿಯಮ್ಮನೋ, ರುಕ್ಮಿಣಮ್ಮನ ಹೆಸರಿನವರೋ ಆಂಟಿಯೊಬ್ಬರು ಆ ಎದುರು ಮನೆ ಪಾಪುವಿನ ವಯಸ್ಸಿನದ್ದೇ ಹೆಣ್ಮಗುವನ್ನ ಸೊಂಟಕ್ಕೆ ಏರಿಸಿಕೊಂಡು ಹೋಗುತ್ತಿದ್ದರು ಆ ಹೆಣ್ಮಗು ಮೇಲೆ ನೋಡಿ ನಗುತ್ತಲಿತ್ತು. ಅರೆರೆ ಯಾಕೆ ನಕ್ತಿತು ಅದು ಎಂದು ಮೇಲೆ ನೋಡಿದರೆ ಆಸಾಮಿ ಪುಟ್ಟ ಚಡ್ಡಿಯನ್ನೇ ಹಾಕದೇ ಸೆನ್ಸಾರ್ ಮಂಡಳಿಯನ್ನ ಪ್ರದರ್ಶನಕ್ಕಿಟ್ಟಿದ್ದಾನೆ. ಲೋ ರಾಜ ಸುಮ್ಮನೆ ಮಾನ ಕಳೀತೀಯಪ್ಪಾ ಹೋಗಿ ಚೆಡ್ಡಿ ಹಾಕ್ಕೋ ಹೋಗೊ ಎಂದು ಒಂದು ಟೆಲಿಪತಿ ಮೆಸೇಜನ್ನು ಅವನೆಡೆಗೆ ಒಗೆದೆ. ಅವನೇನು ಕಮ್ಮಿಯೇ ದೃಷ್ಟಿಯಲ್ಲೇ ೫ಜಿ ಸ್ಪೀಡಿನಲ್ಲಿ ಒಂದು ಮೆಸೇಜನ್ನ ಕಳಿಸಿದ ಹಾಗೆ ಲುಕ್ ಕೊಟ್ಟ. ಲೋ ಗೊಗ್ಗಯ್ಯನ ಮಾದರಿಯ ಗಡ್ಡದಾರಿ ಕಾಡು ಪ್ರಾಣಿ, ಏಸಿ ಗಾಳಿ ತೊಗೊಳ್ಳೋ ಸ್ವಾತಂತ್ರ್ಯ ಇರೋದೇ ಈಗ, ಅದಕ್ಕೂ ಕಲ್ಲು ಹಾಕಬೇಡ, ಬೇಕಾದರೆ ನೀನೂ ಸ್ವಾತಂತ್ರ್ಯವನ್ನ ಅನುಭವಿಸಿ ನೋಡು ಎಂದ. ಮೆಸೇಜನ್ನ ಸುಮ್ಮನೆ ಡಿಲೀಟ್ ಮಾಡಿ ಹಾಕಿ ಆ ಪೋರ್ಟಿಕೋದ ಗ್ರಿಲ್ಸ್ ಬಳಿ ನಿಂತು ಏನು ಮಾಡುತ್ತಿರುವನೆಂದು ಸುಮ್ಮನೆ ನೋಡುತ್ತಾ ನಿಂತೆ. ಈ ಮಕ್ಕಳು ಸುಮ್ಮನೆ ನಿಂತರೂ ನೋಡಲು ಚೆನ್ನ ಬಿಡಿ. ರಾತ್ರಿ ಎಂಟು ಗಂಟೆ, ಅಮ್ಮ ಒಳಗೆ ಚಪಾತಿ ಸುಡುತ್ತಿದ್ದಳು, ನಾನು ಅಪರೂಪಕ್ಕೆ ಮನೆಯಿಂದ ಹೊರಗಡೆ ಸುಮ್ಮನೆ ನಿಂತಿದ್ದೇನೆ. ನಾನು ಸುಮ್ಮನೆ ನಿಂತದ್ದು ನಿಜ ಆದರೆ ಮಕ್ಕಳು ಸುಮ್ಮನೆ ನಿಲ್ಲುವುದು ಖಂಡಿತಾ ಸುಳ್ಳು ಬೀದಿ ದೀಪದ ಬೆಳಕು ನಮ್ಮಿಬ್ಬರ ಮೇಲೂ ಬೀಳುತ್ತಿತ್ತು. ಕಬ್ಬಿಣದ ಕಂಬಿಗೆ ಬಾಯಿ ಹಾಕಿ ಚೀಪುತ್ತಿದ್ದ ಲೇ ಲೇ ತರಲೆ ಧೂಳಿದೆ ಮಾರಾಯ ಮೊದಲೇ ಕಬ್ಬಿಣ ಬೇರೆ, ಮಳೆ ನೀರು ಬಿದ್ದೂ ಬಿದ್ದೂ ಖಂಡಿತಾ ಪೈಂಟೆಲ್ಲಾ ಹೋಗಿ ತುಕ್ಕು ಹಿಡಿದಿರುತ್ತೆ ಕಣೋ ಅಯ್ಯೋ ನಿನಗೆ ವಿಜ್ಞಾನವೆಲ್ಲಾ ಈಗಲೇ ಎಲ್ಲಿ ಗೊತ್ತಾಗಬೇಕು, ಎರಡುವರೆ ವರ್ಷವೋ ಮೂರು ವರ್ಷವೋ ಆಗಿರಬೇಕು ನಿನಗೀಗತಾನೆ. ಗೊತ್ತೇ ಇಲ್ಲದ ಮೇಲೆ ಅವನಿಗೇನೂ ಆಗಲಾರದು ಎಂದುಕೊಂಡೆ. ನನ್ನ ಯೋಚನೆಗೆ ನನಗೇ ನಗು ಬಂತು. ಆದರೆ ಹೌದು, ಗೊತ್ತೇ ಇಲ್ಲದಾಗ ಹೊರಗೆ ಆಟವಾಡಿ ಬಂದು ಕೊಳಕು ಕೈಗಳಲ್ಲೇ ತಿಂಡಿ ತಿಂದಾಗ ಏನಾದರೂ ಆದ ಇತಿಹಾಸವಂತೂ ಇರಲೇ ಇಲ್ಲ, ಈಗ ತಿಂದದ್ದು ಒಳಗೂ ಹೋಗುವುದಿಲ್ಲ ಕೈತೊಳೆಯದಿದ್ದರೆ. ಗೊತ್ತಿಲ್ಲದಿದ್ದಾಗ, ಚಂದ್ರನ ಸುತ್ತ ನಾವು ಸುತ್ತುತ್ತಿದ್ದೆವು. ಈಗ ಚಂದ್ರನೇ ನಮ್ಮ ಸುತ್ತ ಸುತ್ತುತ್ತಿದ್ದಾನೆ. ಗೊತ್ತಿಲ್ಲದಿದ್ದಾಗ, ಊಟ ಮಾಡಿದ್ದಕ್ಕೆ ದುಡ್ಡು ಕೊಡಬೇಕಿತ್ತು, ಈಗ ಕೊಟ್ಟ ಕಾಸಿಗೆ ತಕ್ಕ ಕಜ್ಜಾಯ ಸಿಗುತ್ತೆ….

ನನ್ನನ್ನು ಯೋಚನೆಗೆ ಹಚ್ಚಿ ಅವನೇನು ಮಾಡುತ್ತಿದ್ದಾನಲ್ಲಿ, ಓಹೋ ಅವನೂ ಏನಾದ್ರೂ ಯೋಚಿಸ್ತಿರಬಹುದಾ. ಊಹೂ! ಸಾಧ್ಯಾನೇ ಇಲ್ಲ, ಯೋಚಿಸ್ತಿರೋ ಹಾಗಿದ್ರೆ ಆ ಮುಗ್ಧ ನಗು ಮುಖದಲ್ಲಿ ಇರೋಕೆ ಸಾಧ್ಯಾನೇ ಇಲ್ಲ. ಆ ಕಬ್ಬಿಣದ ಕಂಬಿಗಳನ್ನ ಎಳೆದಾಡುತ್ತಾ ಆಟವಾಡುತ್ತಾ ಇನ್ನೂ ನಿಂತಿದ್ದ. ನಿನ್ನದೇ ಜೀವನ ಕಣೋ, ತುಕ್ಕು ಹಿಡಿದಿರೋ ಕಂಬಿ ಸಾಕು ಆಟವಾಡೋಕೆ, ನಮಗೆ ಚಿನ್ನದ ಹುಚ್ಚು ಹೆಚ್ಚಿ ಬೇರೆಲ್ಲಾ ಸಪ್ಪೆಯಾಗಿ ಕಾಣುತ್ತೆ ಕಣೋ ಎಂದುಕೊಂಡು ಒಂದು ನಿಟ್ಟುಸಿರು ಬಿಟ್ಟು ಅವನ ಕಡೆ ನೋಡಿದರೆ ಸುಯ್ಯನೆ ಚಿಲುಮೆ ಹರಿಯುತ್ತಿದೆ ಅದೂ ಮನೆ ಕಡೆಗೇ ತಿರುಗಿ ಉಯ್ಯುತ್ತಿದ್ದಾನೆ. ಲೇ ಲೇ ಅದರಲ್ಲೂ ಆಟ ಬೇರೆ ಊರೆಲ್ಲಾ ಒಳ್ಳೇ ಗಿಡಕ್ಕೆ ನೀರು ಬಿಡೋ ಹಾಗೆ, ಬರ್ತಾರೆ ತಾಳು ಅಮ್ಮ ಇವಾಗ ಮಾಡ್ತಾರೆ ಸರಿಯಾಗಿ ಅಂತ ನೋಡುತ್ತಾ ನಿಂತೆ. ಟ್ಯಾಂಕು ಖಾಲಿಯಾಯ್ತಂತ ಕಾಣುತ್ತೆ. ಒಂದೆರಡು ನಿಮಿಷ ಸುಮ್ಮನೆ ನಿಂತ. ಯಾಕೆ ಸುಮ್ಮನೆ ನಿಂತಿದ್ದಾನೆ ಅಂತ ಗೊತ್ತಾಗಲಿಲ್ಲ ಕುತೂಹಲ ಹೆಚ್ಚಾಯ್ತು. ತಲೆ ಬಗ್ಗಿಸಿ ನೆಲದ ಮೇಲೆ ಸುಸು ಹರಡಿರುವುದನ್ನ ನೋಡುತ್ತಿದ್ದಾನೇನೋ ಅಂದುಕೊಂಡೆ. ಇರಬಹುದೂ ಸಹ. ಇದ್ದಕ್ಕಿದ್ದಂತೆ ಅಳಲು ಶುರುಮಾಡಿದ. ಅರೆರೆ ಸುಮ್ಮನೆ ನಿಂತಿದ್ದವನು ಅಳಲು ಶುರು ಮಾಡಿಕೊಂಡ! ಯಾರೂ ಹೊಡೆದಿಲ್ಲ. ನಾನಂತೂ ಏನೇ ಮಾತನಾಡಿದ್ದರೂ ಮನಸ್ಸಿನಲ್ಲೇ ಮಾತನಾಡಿಸಿದ್ದು ಅವನನ್ನ. ಅವನ ಮನೆಯ ಒಳಗಿನಿಂದಂತೂ ಸದ್ದೇ ಬಂದಿಲ್ಲ ಹೊರಗೆ. ಮತ್ಯಾಕೆ ಅತ್ತ ಇವ ಜಾಣ ಮರಿ. ಸುಮ್ಮನೆ ನಿಂತಿದ್ದವನ ತಲೆಗೆ ಹುಳ ಬಿಡ್ತಾನಲ್ಲಾ, ಸರಿ, ಕಾದೆ. ಯಾರೋ ಛಟೀರನೆ ಹೊಡೆದಿರುವ ಹಾಗೆ ಅಲ್ಲೇ ಕುಳಿತು ಹೋ ಎಂದು ಕಿರುಚುತ್ತಿದ್ದಾನೆ. ಒಳಗಿನಿಂದ ಯಾರೂ ಬರದಿದ್ದರಿಂದಲೋ ಏನೋ ಬಾಗಿಲವರೆಗೂ ಓಡಿದ ಅಮ್ಮಾ ಎಂದು ಅತ್ತ ಮತ್ತೆ ಓಡಿ ಬಂದು ಸುಸು ಮಾಡಿದ ಜಾಗದಲ್ಲಿ ಕುಳಿತ ಅತ್ತ. ನನಗೆ ಒಂದು ಕಡೆ ನಗು. ಇದೇನು ಹುಚ್ಚಾಟನಪ್ಪಾ ಇವನದ್ದು. ಲೋ ಯಾಕೋ ಮಾರಾಯ ಅಳ್ತಿದ್ದೀಯ, ಏನಾಯ್ತೋ ನಿನಗೆ ಎಂದು ಕೇಳಬೇಕೆನಿಸಿತು ಆದರೆ ರಸ್ತೆಯಲ್ಲಿ ಓಡಾಡುವವರೋ, ಅಕ್ಕ ಪಕ್ಕದವರೋ ಏನಂದುಕೊಂಡಾರೆಂಬ ಹಿಂಜರಿಕೆ. ಹೋ ಜಂಕ್ಷನ್ ಬಾಕ್ಸಿಗೆ ಇರುವೆ ಏನಾದರೂ ಕಚ್ಚಿರಬಹುದೇ ಅಂತ ಕೂಡ ಒಮ್ಮೆ ಸುಳಿದು ಹೋಯ್ತು ಬುದ್ಧಿಯ ಬತ್ತಳಿಕೆಯಲ್ಲಿ. ಪೋರ ಇನ್ನೂ ಅಳುತ್ತಾ ಬಾಗಿಲವರೆಗೂ ಪುಟುಪುಟುಪುಟು ಓಡುವುದು ಮತ್ತೆ ತೀರ್ಥ ಸ್ಥಳಕ್ಕೆ ಮರಳುವುದು. ಅಂತೂ ಮಹಾತಾಯಿ ನಿಧಾನವಾಗಿ ನೈಟಿ ವೇಷ ಭೂಷಣದಲ್ಲಿ ಹೊರಗೆ ಬಂದರು. ವಾಮನನಂತಹ ಈ ಪ್ರಚಂಡ ಹುಯಿಲೆಬ್ಬಿಸುತ್ತಿರುವುದನ್ನು ಕೇಳಿ ಬನಿಯನ್ನಿನ ಹೊಟ್ಟೆಯೊಂದು, ಮತ್ತು ಬೆಂಡಾದ ಎರಡು ಜೀವಗಳು ಹೊರಗೆ ಬಂದು ಸುತ್ತ ನೋಡಿದವು, ಏನಾಯ್ತೋ ಪುಟ್ಟ, ಓನಮ್ಮಾ ರಾಜಾ, ಬಂಗಾರ, ಏನಾಯ್ತು ನೋಡೇ, ಇರ್ಬೆ ಕಚ್ಚೈತೇನೋ ನೋಡು… ಅದು ಇದು ಮಾತನಾಡಿಕೊಂಡರು ಸುತ್ತಾ ನೋಡಿದರು, ನಾನು ಮೊಬೈಲು ಹಿಡಿದು ಗಮನಿಸಿಯೇ ಇಲ್ಲವೆಂಬಂತೆ ನಾಟಕವಾಡುತ್ತಿದ್ದೆ.

ಅವನನ್ನ ಎತ್ತಿಕೊಂಡರು, ಒಳಹೋಗಿ ಬಾಗಿಲು ಹಾಕಿಯೇ ಬಿಟ್ಟರು! ಅಯ್ಯೋ! ರೀ ನನ್ನ ಕಥೆ ಗತಿ ಏನು, ಏನಾಯ್ತು, ಯಾಕಾಯ್ತು, ಏನು ಕಥೆ, ಇಷ್ಟು ಹೊತ್ತೂ ನಿಂತು ತಲೆ ಕೆಡಿಸಿಕೊಂಡವನು ನಾನು, ನೀವೇನಪ್ಪ ಅಂದ್ರೆ ಬಂದ್ರಿ ಹೀರೋನೇ ಹೊತ್ಕೊಂಡು ಹೊರಟೋದ್ರಿ. ಈಗ ಕಥೆ ಹೇಗೆ ಮುಕ್ತಾಯ ಮಾಡಲಿ ನಾನು. ಓದ್ತಿರೋ ಮಹಾಶಯರು ಇಲ್ಲಿವರೆಗೂ ಓದುವ ದುಸ್ಸಾಹ ಮಾಡಿದ್ರೆ ಮುಂದಿನ ನನ್ನ ಕಥೆಗೆ ಕುತ್ತು ಗ್ಯಾರಂಟಿ. ಥತ್ ತೇರೀಕಿ. ಸುಮ್ಮನೆ ವ್ಯರ್ಥವಾಯ್ತಲ್ರೀ ಎಲ್ಲಾ ಕ್ಲೈಮಾಕ್ಸೇ ಇಲ್ಲದ ಕಥೆ ಆಗೋಯ್ತಾ ಇದು? ಆದರೆ ಆ ಪಾಪು ಅತ್ತಿದ್ದು ಯಾಕೆ?

ಕೆಲವು ದಿನಗಳ ನಂತರ ಆಫೀಸಿನಿಂದ ಮನೆಗೆ ಬರುತ್ತಿದ್ದಾಗ ಸಂಜೆ, ಎದುರಿನ ಅದೇ ಮನೆಯಲ್ಲಿ ನಾಲ್ಕೈದು ಹೆಂಗಸರು ನಿಂತು ಬಾಯಿಚಪಲ ತೀರಿಸಿಕೊಳ್ಳುತ್ತಿದ್ದರು, ಈ ಪುಟ್ಟ ಅವರ ಸ್ವಲ್ಪ ಹಿಂದೆಯೇ ನಿಂತಿದ್ದ ಮತ್ತೆ ಸುಸು ಮಾಡಿಕೊಂಡ, ಅದರ ನೈಟಿ ಅಮ್ಮ ಹೇಯ್, ನಿನಗೆ ಎಷ್ಟು ಸಲ ಹೇಳಬೇಕೋ, ಸುಸು ಬಂದ್ರೆ ಅಮ್ಮ ಅಂತ ಕರೀಬೇಕು ಅಂತ ಹೇಳಿಲ್ಲಾ ಅಂತ ನಿಂತಲ್ಲಿಂದಲೇ ಗುಟುರು ಹಾಕಿದ್ರು. ಅವನು ಹೋ ಎಂದು ಅಳಲು ಶುರುಮಾಡಿದ. ಆಹಾ! ಏನ್ ಪ್ರತಿಭಾವಂತನಪ್ಪ ಇವನು, ಅಮ್ಮ ಬಯ್ಯದಿರಲೆಂದು, ಅಮ್ಮನ ಗಮನ ಸುಸುವಿನೆಡೆಗೆ ಹೋಗದಿರಲೆಂದು ಆವತ್ತು ಹಾಗೆ ಅತ್ತನೇನೋ. ಭಾರತದ ರಾಜಕೀಯ ಕ್ಷೇತ್ರಕ್ಕೆ ಒಳ್ಳೆಯ ಭವಿಷ್ಯವಂತೂ ಖಂಡಿತಾ ಇದೆ! ಏನಂತೀರಿ?









+ನೀ.ಮ. ಹೇಮಂತ್

Monday 25 June 2012

ಪ್ರಾಣಿಗಳ ಆಟ!




      ವಾರಾಂತ್ಯ ಬಂತೆಂದರೆ ಬೆಂಗಾಡಿನಲ್ಲಿ ಈ ಆಟಗಳಿಗೆ ಬೇಡಿಕೆಯೋ ಬೇಡಿಕೆ. ವಾರ ಪೂರ್ತಿ ಕತ್ತೆ, ನಾಯಿ, ಹಂದಿಗಳಂತೆ ದುಡಿಯುವ ಆಟವಾಡಿದ ವಯಸ್ಕ ಮನುಷ್ಯ ಪ್ರಾಣಿಗಳಿಗೆ, ಮತ್ತು ಪುಸ್ತಕಗಳನ್ನು ತಲೆಯ ಮೇಲೆ ಹೊತ್ತು ಶಿಕ್ಷೆ ಪಡೆದ ಮರಿ ಪ್ರಾಣಿಗಳಿಗೆ ವಾರಂತ್ಯದಲ್ಲಿ ಮನೋರಂಜನೆಗಾಗಿ ಕೂಡ ಚಿತ್ರ ವಿಚಿತ್ರ ಆಟಗಳು ಬೇಕೇ ಬೇಕು. ಹಾಗಾಗಿ ತೆರೆದುಕೊಂಡಿತು ಈ ಪ್ರಾಣಿಗಳ ಆಟದ ಮೈದಾನ. ಮೊದಮೊದಲು ಇದಕ್ಕೆ ವಿರೋಧ ವ್ಯಕ್ತವಾಯ್ತೇ ಆದರೂ, ಅತಿಶೀಘ್ರದಲ್ಲಿ ಜನರ ಬೆಂಬಲ ದೊರೆತದ್ದರಿಂದ ಚಾಲ್ತಿಯಲ್ಲಿದೆಯಂತೆ. ಈ ಮೈದಾನದಿಂದ ಎತೇಚ್ಛವಾಗಿ ದುಡ್ಡು ಹುಟ್ಟುತ್ತಿದೆ ಎಂದು ಗೊತ್ತಾದ ಮೇಲೆ ಯಾವ ಸರ್ಕಾರ, ಸಂಘ ಬಂದರೂ, ಸ್ವತಹ ಭಗವಂತನೆಂಬ ಭೂತಕಾಲದ ಪ್ರಾಣಿ ಎದ್ದು ಬಂದರೂ ಸಹ ತಡೆಯಲು ಸಾಧ್ಯವಿಲ್ಲ! ಈಗ್ಗೆ ಕೆಲವು ದಿನಗಳ ಹಿಂದೆ ಇಲ್ಲಿ ಹುಲಿ, ಚಿರತೆ, ಕಾಡು ಕೋಣ, ಆನೆ, ಸಿಂಹ ಈ ರೀತಿಯ ವಿಚಿತ್ರ ಪ್ರಾಣಿಗಳೂ ಸಹ ಇದ್ದವಂತೆ. ಅವುಗಳ ಕಿವಿ ಹಿಂಡಿ, ಮೂತಿ ತಿವಿದು, ತಲೆ ಮೇಲೆ ಹೊಡೆದು, ಕಾಲುಗಳನ್ನು ಎಳೆದು, ಇನ್ನೊಂದು ಮತ್ತೊಂದು ಕೀಟಲೆ ಮಾಡಿ ತೊಂದರೆ ಕೊಟ್ಟು ಮನೋರಂಜನೆ ತೆಗೆದುಕೊಳ್ಳಬಹುದಿತ್ತಂತೆ. ಅವುಗಳು ಅಯ್ಯೋ ನೋವಾಗುತ್ತೆ ಕಣೋ ಬೋಳಿ ಮಗನೆ ಎಂಬಂತೆ ಗುರ್‍ರ್‍ರ್‍ರ್‍, ಟುರ್‍ರ್‍ರ್‍ರ್‍, ಬುರ್‍ರ್‍ರ್‍ರ್‍ ಎಂದು ಆರ್ತನಾದಗಯ್ಯುತಿರೆ ಇನ್ನೂ ಹುರುಪುಗೊಂಡು ಕೀಟಲೆ ಮಾಡುತ್ತಿದ್ದರಂತೆ. ಒಳಗಿದ್ದ ಪ್ರಾಣಿಗಳ ವಿರುದ್ಧ ಹೊರಗಿದ್ದ ಪ್ರಾಣಿಗಳ ಸೆಣಸಾಟದಲ್ಲಿ ಹೊರಗಿನವರು ಗೆದ್ದರೆ ಆನೆಯ ಬಾಲವನ್ನೋ, ಹುಲಿಯ ಮೀಸೆಯನ್ನೋ ಬಹುಮಾನವಾಗಿ ಕೊಡಲಾಗುತ್ತಿತ್ತಂತೆ. ಹೀಗೆ ಹೇಗೋ ನಡೆದುಕೊಂಡು ಹೋಗುತ್ತಿದ್ದ ಮೈದಾನದಲ್ಲಿ ಕ್ರಮೇಣ ಮನುಷ್ಯ ಪ್ರಾಣಿಗಳು ಬರುವುದು ಕುಂಟಿತವಾಗುತ್ತಾ ಬಂತಂತೆ. ಆ ಅಪರೂಪದ ಪ್ರಾಣಿಗಳು ದಿನೇ ದಿನೇ ಕಡಿಮೆಯಾಗಿದ್ದಕ್ಕೆ ಜನ ಬರಲಿಲ್ಲವೋ ಅಥವಾ ತನಗೆ ಕಾಟ ಕೊಡುವವರಿಲ್ಲದೇ ಆ ವಿಚಿತ್ರ ಪ್ರಾಣಿಗಳು ಅಸುನೀಗಿದವೋ ಗೊತ್ತಿಲ್ಲ ಒಟ್ಟಿನಲ್ಲಿ ಆಟದ ಮೈದಾನ ಮುಚ್ಚುವ ಪರಿಸ್ಥಿತಿಯಲ್ಲಿ ಬಂದಿತ್ತಂತೆ. ಹಯ್ಯೋ ಒಂದು ದಿನ ಸಂಪೂರ್ಣ ಮಜಾ ಉಡಾಯಿಸಬೇಕೆಂದು ಬಂದವರಿಗೆ ಈ ಸೆಕ್ಯುರಿಟಿ ತಾತ ಇತಿಹಾಸ ಕುಯ್ಯಲು ಶುರುಮಾಡಿ ಸುಮ್ಮನೆ ಕಾಲಹರಣ ಮಾಡ್ತಿದ್ದ. ತೊಗೋ ತಲೆ ತಿನ್ನಬೇಡ ಇದನ್ನು ತಿನ್ನು ಎಂದು ಒಂದು ಗಾಂಧಿಯ ಗರಿ ಗರಿ ನೋಟೊಂದನ್ನ ಬಾಯಿಗೆ ತುರುಕಿದ್ದೇ ಸುಮ್ಮನೆ ತಿನ್ನಲು ಶುರುಮಾಡಿದ. ನಾವು ಒಳಗೆ ಹೊರಟೆವು. ಎಲ್ಲಾ ಆಟಗಳಿಗೂ ರಶೀದಿ ಪಡೆದಿದ್ದರಿಂದ ತಾತನ ಹರಿಕತೆಯನ್ನೆಲ್ಲಾ ತಲೆಯಿಂದ ಕಿತ್ತು ಬಾಗಿಲಲ್ಲೇ ಇದ್ದ ಕಸದ ಬುಟ್ಟಿಗೆ ಎಸೆದು ಸುಯ್ಯನೆ ಒಳಗೆ ಲಗ್ಗೆಯಿಟ್ಟೆವು.

ಅಬ್ಬಾ ಎಷ್ಟೋಂದು ಮನುಷ್ಯ ಪ್ರಾಣಿಗಳೆಂದರೆ ಪಾಪ ಮಧ್ಯದಲ್ಲಿರಬಹುದಾದ ಮಾತು ಅರ್ಥವಾಗದ ಪ್ರಾಣಿಗಳು ನೋಡಿಯೇ ಹೆದರಿ ಸತ್ತಿರುತ್ತವೆ ಅನ್ನಿಸುತ್ತೆ ಎಂದುಕೊಳ್ಳುತ್ತಲೇ ಪ್ಲಾನ್ ಪ್ರಕಾರವೇ ನಾವು ನಾಲ್ವರು ಗೆಳೆಯರೂ ಒಂದೊಂದು ಆಟಕ್ಕೆ ಹೋಗುವುದೆಂದು ಮೆನು ಕಾರ್ಡ್ ಗಳನ್ನು ಕೈಯಲ್ಲಿ ಹಿಡಿದು ವಿಭಜನೆಯಾದೆವು. ನಾನೂ ಹೊರಟೆ. ಅರೆರೆ ಇಷ್ಟೊಂದು ಆಟಗಳಿವೆ ಯಾವುದಪ್ಪಾ ಆಯ್ಕೆ ಮಾಡಿಕೊಳ್ಳಲಿ ಎಂದು ತೀರ್ಮಾನಿಸುವಷ್ಟರಲ್ಲಿ ಸಾಕು ಸಾಕಾಯ್ತು. ಸರಿ ಸುಲಭದ ಆಟದೊಂದಿಗೆ ಶುರುಮಾಡೋಣವೆಂದು ಬೆಕ್ಕು ಸೊಕ್ಕು ಎಂಬ ಆಟವನ್ನ ಆಯ್ಕೆ ಮಾಡಿಕೊಂಡು ಮೂರನೇ ಕ್ರಾಸ್, ಎರಡನೆಯ ಅಡ್ಡೆ ಎಂದು ಬರೆದಿತ್ತು ಸೀದಾ ಅಲ್ಲಿಗೆ ಹೋದೆ. ಹೋಗಿ ನೋಡಿದರೆ ಎಲ್ಲಾ ಚಿಕ್ಕ ಚಿಕ್ಕ ಮಕ್ಕಳು. ಅಯ್ಯಯ್ಯೋ ಇದು ಏಳು ವರ್ಷದ ಒಳಗಿನ ಮಕ್ಕಳಿಗೆ ಮಾತ್ರ! ಸರಿ ಬಂದಾಗಿದೆ ಯಾವ ರೀತಿಯ ಆಟವೆಂದಾದರೂ ನೋಡಿ ಹೋಗೋಣವೆಂದು ನಿಂತೆ. ಒಂದು ವೃತ್ತ ಅದರ ಒಳಗೆ ಒಂದು ಸಣಕಲು ಬೆಕ್ಕನ್ನ ಬಿಟ್ಟಿರುತ್ತಾರೆ ಆದನ್ನ ಮಗು ಹಿಡಿದು ಮೂಲೆಯಲ್ಲಿರುವ ನೀರಿನ ಕೊಳಕ್ಕೆ ಅದನ್ನ ಹಾಕಬೇಕು. ಬೆಕ್ಕು ತಪ್ಪಿಸಿಕೊಳ್ಳುತ್ತಿರುತ್ತದೆ, ಮಗು ಅದನ್ನ ಅಟ್ಟಿಸಿಕೊಂಡು ಹಿಡಿಯುತ್ತಿರುತ್ತದೆ, ಕೊಟ್ಟ ಸಮಯಾವಕಾಶದಲ್ಲಿ ಮಗು ಗೆದ್ದರೆ ಬಹುಮಾನ. ಒಂದು ಮಗು ಬೆಕ್ಕನ್ನ ಹೆದರೆದರುತ್ತಾ ಹಿಡಿಯಲು ಪ್ರಯತ್ನಿಸುತ್ತಿತ್ತು, ಬೆಕ್ಕು ಮೂಲೆಮೂಲೆಗೆ ತೆವಳಿಕೊಂಡು ತಪ್ಪಿಸಿಕೊಳ್ಳುತ್ತಿತ್ತು, ಅದರ ಅಪ್ಪ ಅಮ್ಮ ಹುರಿದುಂಬಿಸುತ್ತಿದ್ದರು. ಈ ಆಟದ ಪಕ್ಕದಲ್ಲೇ ಇಲಿಗೆ ಕೋಲಿನಲ್ಲಿ ಹೊಡೆಯುವ, ಜಿರಲೆಗಳನ್ನು ಬೆಂಕಿಗೆ ಎಸೆಯುವ ಆಟಗಳೂ ಮಕ್ಕಳಿಗಾಗಿ ಇತ್ತು. ನೋಡುತ್ತಿದ್ದರೆ ಕೆಲಸವಾಗೋಲ್ಲವೆಂದು ಅಲ್ಲಿಂದ ಕಾಲ್ಕಿತ್ತೆ. ಸರಿಯಾಗಿ ಮೆನು ಕಾರ್ಡನ್ನು ಓದಿ, ಮಕ್ಕಳ ಆಟಗಳನ್ನು ಹೊರತುಪಡಿಸಿ ವಯಸ್ಕರಿಗಾಗಿ ಇದ್ದ ಆಟಗಳೆಡೆಗೆ ಹೊರಟೆ.

ಕೈಯಲ್ಲಿ ಇನ್ನು ಮೂರು ಕಲ್ಲುಗಳು ಉಳಿದಿದ್ದವು. ಹೇಗಾದರೂ ಮಾಡಿ ಆ ನಾಯಿಯ ತಲೆಗೆ ಗುರಿ ಇಟ್ಟು ಹೊಡೆಯಲೇ ಬೇಕು. ಸುತ್ತ ಕೋರ್ಟಿನ ಹೊರಗಡೆ ನೆರೆದಿದ್ದ ಜನರ ಪ್ರೋತ್ಸಾಹಕ್ಕೆ, ಕೇಕೆಗಳಿಗೆ, ಹೊಡಿ ಹೊಡಿ ಎಂಬ ಕೂಗುವಿಕೆಯ ಕಡೆಗೆ ಲಕ್ಷ್ಯ ಕೊಡದೆ ಎದುರಿಗಿದ್ದ ನಾಯಿಯನ್ನೇ ತದೇಕಚಿತ್ತದಿಂದ ನೋಡುತ್ತಿದ್ದೆ, ಧರಿದ್ರದ್ದು ಆ ನಾಯಿಯೂ ಕೂಡ ನನ್ನಷ್ಟೇ ಏಕಾಗ್ರತೆವಹಿಸಿತ್ತು. ಸ್ಕೋರ್ ಬೋರ್ಡಿನ ಕಡೆ ಒಮ್ಮೆ ನೋಡಿದೆ. ಇನ್ನೂ ನಾಲಕ್ಕು ಪಾಯಿಂಟುಗಳು ಬೇಕಾಗಿತ್ತು, ಮತ್ತು ನನ್ನ ಬಳಿ ಉಳಿದಿದ್ದು ಮೂರು ಕಲ್ಲುಗಳು ಮಾತ್ರ, ತಲೆಗೆ ಹೊಡೆದರೆ ಮಾತ್ರ ನಾಲಕ್ಕು ಪಾಯಿಂಟುಗಳು ಬರುವುದರಲ್ಲಿದ್ದವು. ಮೊದಲನೆಯ ಕಲ್ಲನ್ನ ಎಸೆದೆ ನಾಯಿ ಗುರ್‍ರ್‍ ರೌ ಬೌ ಎಂದು ಒಮ್ಮೆ ಚೂರು ಮುಂದೆ ಬಂದು ಅದರ ಮುಂಗಾಲಿಗೆ ಏಟು ಬಿದ್ದದ್ದಕ್ಕೆ ತಪ್ಪಿಸಿಕೊಂಡು ಹಿಂದೆ ಓಡಿತು. ಅಯ್ಯೋ ಸ್ವಲ್ಪದರಲ್ಲಿ ತಪ್ಪಿತು. ಅದು ಅಲ್ಲಾಡದ ಹಾಗಿದ್ದಿದ್ದರೆ ತಲೆಗೆ ಹೊಡೆಯಲು ಅಷ್ಟು ಕಷ್ಟವಾಗುತ್ತಿರಲಿಲ್ಲ. ಸರಿ ಇನ್ನೊಂದು ಕಲ್ಲು ಗುರಿಯಿಟ್ಟೆ. ಕಲ್ಲನ್ನು ಅದರೆಡೆಗೆ ಗುರಿಯಿಡುತ್ತಿದ್ದಂತೆಯೇ ಎದುರಿನ ನಾಯಿ ಹುಶಾರಾಗಿಬಿಡುತ್ತಿತ್ತು, ನನ್ನ ಕೈಯಲ್ಲಿದ್ದ ಕಲ್ಲಿಗೇ ತನ್ನ ಎರಡು ಕಣ್ಣುಗಳನ್ನು ನೆಟ್ಟು ತಪ್ಪಿಸಿಕೊಳ್ಳುವ ಶತಪ್ರಯತ್ನಗಳನ್ನೂ ಮಾಡುತ್ತಿತ್ತು, ಅದರ ಗಮನ ಮತ್ತೊಂದು ಕಡೆ ಸೆಳೆಯಲು ಎಡಗೈಯನ್ನು ಸುಮ್ಮನೆ ಹೊಡೆಯುವ ಹಾಗೆ ಮಾಡಿ, ನಾಯಿ ಕೊಂಚವೇ ಅತ್ತ ತಿರುಗಿದ್ದೇ ತೆಗೆದು ಬೀಸಿದೆ, ಕಲ್ಲು ನೇರ ಅದರ ತಲೆಯ ಮಧ್ಯಭಾಗಕ್ಕೇ ಗಾಳಿಯನ್ನು ಸೀಳಿಕೊಂಡು ಸಾಗುತ್ತಿತ್ತು, ನನ್ನ ಎದೆ ಬಡಿತ ನಾಯಿಗೂ ಸಹ ಕೇಳಿಸಿರಬಹುದೇನೋ, ಸುತ್ತ ನೆರೆದು ನೋಡುತ್ತಿದ್ದ ಜನ ಒಮ್ಮೆ ಸ್ತಬ್ಧವಾಗಿ ನೋಡುತ್ತಿದ್ದರು, ಈ ಬಾರಿ ನಾಯಿ ಸೋತಿತು ಈ ಬಾರಿ ಎಂದು ವಿಜಯೋತ್ಸವ ಆಚರಿಸುವವನಿದ್ದೆ. ಕೊಂಚವೇ ಅತ್ತ ತಿರುಗಿದ್ದು ಕಲ್ಲು ಇನ್ನೇನು ತೆಲೆಗೆ ಬಡಿಯಬೇಕು ನಾಯಿ ಕದಲಿಯೇಬಿಟ್ಟಿತು ಕುತ್ತಿಗೆಗೆ ಹೊಡೆದು ಕಲ್ಲು ಕೆಳಗೆ ಬಿತ್ತು, ನಾಯಿ ಕೋಪಕ್ಕೆ ಆ ಕಲ್ಲನ್ನೇ ಕಟಕಟನೆ ಕಡಿದು ಹಾಕಿತು. ಥೂ, ಈ ಬಾರಿಯೂ ಆಗಲಿಲ್ಲ ಇನ್ನು ನನ್ನ ಬಳಿ ಉಳಿದಿರುವುದು ಒಂದೇ ಕಲ್ಲು. ಇದರಲ್ಲಿ ತಲೆಗೇ ಹೊಡೆಯಬೇಕಿತ್ತು. ಈ ಬಾರಿ ಆ ನಾಯಿಯ ಮೇಲೆ ಎದ್ದಿದ್ದ ರೊಚ್ಚಿಗೆ ಕೈಯಲ್ಲಿರುವ ಶಕ್ತಿಯನ್ನೆಲ್ಲಾ ಬೀಸಿ ಆ ನಾಯಿ ಹಿಂದಿನ ದಾಳಿಯಿಂದ ಎಚ್ಚೆತ್ತುಕೊಳ್ಳುವ ಮುನ್ನವೇ ಗುರಿಯಿಟ್ಟು ಅದಕ್ಕೆ ತಯಾರಾಗುವ ಅವಕಾಶವನ್ನೂ ಕೊಡದೇ ಕಲ್ಲನ್ನು ಬೀಸಿದೆ. ನೇರ ಹೋಗಿ ತಲೆಯ ಮಧ್ಯಭಾಗದಲ್ಲಿ ಬಿತ್ತು. ನಾಯಿ ಕುಯ್ ಕುಯ್ ಎಂದು ಚೀರುತ್ತಾ ಕೆಳಗುರುಳಿತು. ಸುತ್ತ ಇದ್ದ ವೀಕ್ಷಕರು ಹೋ ಎಂದರು. ನನಗೆ ಎರಡನೆಯ ಸುತ್ತಿಗೆ ಅರ್ಹತೆ ಸಿಕ್ಕಿತ್ತು ಮೂರು ಪಾಯಿಂಟ್ ಬೋನಸ್ಸಿನೊಂದಿಗೆ. ಎದುರುಗಡೆ ಎರಡು ಹುಚ್ಚು ನಾಯಿಗಳು ಗುರ್‍ರ್‍ ಎಂದು ನನ್ನನ್ನು ತರಿದು ತಿನ್ನುವ ಹಾಗೆ ಬಾಯಿ ತೆರೆದಿದ್ದವು. ಜೊಲ್ಲು ಹೊರಸೋರುತ್ತಿತ್ತು. ನನ್ನ ಕೈಯಲ್ಲಿ ಎರಡು ಉದ್ದನೆಯ ಕೋಲುಗಳಿದ್ದವು ಈಗ ಅದರ ಬಾಲ ಕತ್ತರಿಸಬೇಕಿತ್ತು. ಒಂದೊಂದು ಕೈಯಿಗೆ ಮೂರು ಮೂರು ಹೊಡೆತಗಳ ಅವಕಾಶ ನನ್ನದು. ಅಂತೂ ಹಾಗೂ ಹೀಗೂ ನಾಲಕ್ಕು ಸುತ್ತುಗಳನ್ನು ಗೆದ್ದು ಹೊರಬಂದೆ. ಒಳಗೆ ಆಡುವಾಗ ಗೊತ್ತಾಗಲಿಲ್ಲ ಮೈಪೂರ್ತಿ ಬೆವರು ಸುರಿದುಹೋಗಿರುವುದು. ಬಟ್ಟೆಯೆಲ್ಲಾ ತೊಯ್ದುಹೋಗಿದ್ದವು.

ಬೆವರೊರೆಸಿಕೊಳ್ಳುತ್ತಾ ಸ್ನೇಹಿತರೆಲ್ಲಿದ್ದಾರೆಂದು ಹುಡುಕಾಡಿದೆ. ಒಬ್ಬ ಹಂದಿಯನ್ನು ಹಿಡಿಯುವ ಆಟದಲ್ಲಿದ್ದ. ಅದು ಎಲ್ಲಂದರೆ ಅಲ್ಲಿ ನುಗ್ಗುತ್ತಿರುತ್ತದೆ ಸ್ಪರ್ಧಿಗಳು ಅದರ ಕಿವಿ ಹಿಡಿದು ನಿಲ್ಲಿಸಬೇಕು. ಅದೂ ಒಂದು ರೀತಿ ಚೆನ್ನಾಗಿತ್ತು. ಇನ್ನೊಬ್ಬ ಓಡಿಬಂದವನೇ ಲೋ ಏಕ್ ಮಾರ್ ದೋ ತುಕಡಾ ಆಟ ಆಡಿದ್ದೀಯ ಬಾ ನೋಡು ಎಂದು ಕರೆದು ಹೋದ. ಒಂದು ಡುಪ್ಲಿಕೇಟ್ ಕುರಿ ಇರುತ್ತದೆ ಒಂದೇ ಏಟಿಗೆ ಅದರ ರುಂಡ ಮುಂಡ ಬೇರ್ಪಡಿಸಬೇಕು. ಮೊದಲು ಕುರಿ, ಮುಂದಿನ ಸುತ್ತು ಹಂದಿ, ಅದರ ಮುಂದಿನ ಸುತ್ತು ಹಸು ಅದರ ಮುಂದಿನ ಸುತ್ತು ಹೋರಿಯನ್ನು ಬಿಡುವರಂತೆ. ಸ್ನೇಹಿತ ಎಲ್ಲಾ ಒರಿಜಿನಲ್ ಪ್ರಾಣಿಗಳನ್ನೇ ಇಟ್ಟಿದ್ದಾರೆ ಇದೊಂದು ಮಾತ್ರ ಮೋಸ ಅಲ್ವಾ ಮಗಾ, ಎಂದ ಒಮ್ಮೆ ಲೋ ಪ್ರತೀ ಬಾರಿ ಹೋದವರು ಹೊಡೆದುರುಳಿಸುತ್ತಿದ್ದರೆ ಲಾಸ್ ಅಲ್ವಾ ಅವರಿಗೆ ಅದಕ್ಕೇ ಹೀಗೆ ಮಾಡಿರಬಹುದು ಆದರೂ ಒಂದೇ ಏಟಿಗೆ ಕತ್ತು ಕತ್ತರಿಸೋದಕ್ಕೆ ಸಾಧ್ಯಾನೇನೋ ಅಷ್ಟು ದೊಡ್ಡ ಪ್ರಾಣಿಗಳ ಕುತ್ತಿಗೆಯನ್ನ ಅಂತ ಕುತೂಹಲದಿಂದ ಯಾರೋ ಸಿದ್ಧನಾಗುತ್ತಿದ್ದವನ ಕಡೆ ನೋಡಹತ್ತಿದೆವು. ಸ್ಪರ್ಧಿಯ ಕೈಯಲ್ಲಿದ್ದ ಮಚ್ಚನ್ನೇ ನೋಡುತ್ತಲೇ ಲೋ ನಮ್ಮೂರ್ ಜಾತ್ರೆನಲ್ಲಿ ಒಬ್ಬನೇ ಇಪ್ಪತ್ತರಿಂದ ಇಪ್ಪತ್ತೈದು ಕುರಿಗಳ ಕತ್ತು ಒಂದೇ ಏಟಿಗೆ ಕಡಿದು ರೆಕಾರ್ಡ್ ಮಾಡಿದ್ದಾನೆ ಗೊತ್ತಾ ಅಂದ. ಇರಬಹುದೇನೋ ಎಂದುಕೊಂಡು ಇನ್ನೇನು ಮಚ್ಚು ಬೀಸಲು ಸನ್ನದ್ಧನಾದವನನ್ನು ಕಣ್ಣು ಪಿಳುಕಿಸದೇ ನೋಡಿದೆವು. ಮೂರು ಬಾರಿ ಗಾಳಿಯಲ್ಲಿ ಬೀಸಿ ಬೀಸಿ ಉಸಿರು ಕಟ್ಟಿ ಹುಂ ಎಂದು ಸ್ವರ ಹೊರಡಿಸಿ ಧೊಪ್ಪನೆ ಕುರಿಯ ಕುತ್ತಿಗೆಯ ಭಾಗಕ್ಕೆ ಹೊಡೆದ ನೈಜ ಅನುಭವ ಕೊಡಲೆಂದು ಅದರ ಕುತ್ತಿಗೆಯ ಭಾಗಕ್ಕೆ ಕೆಂಪು ಬಣ್ಣವನ್ನೂ ತುಂಬಿದ್ದರು ಚಿಲುಮೆಯೋಪಾದಿಯಲ್ಲಿ ಚಿಲ್ಲನೆ ಹೊರಚೆಲ್ಲಿತು ಕುತ್ತಿಗೆ ಕೊಂಚವೇ ತಗುಲಿಕೊಂಡು ನೇತಾಡುತ್ತಿತ್ತು. ಹೊರಗಿದ್ದ ಜನ ಹೋssssssss ಎಂದುದ್ಗಾರ ತೆಗೆದರು. ಆ ಕುರಿಯ ಜಾಗದಲ್ಲಿ ಮತ್ತೊಂದನ್ನ ತಂದಿರಿಸಲಾಯ್ತು.

ಬುಲ್ ಫೈಟ್ ಆಟಕ್ಕೆ ಮೂವರು ಗೆಳೆಯರೂ ಒಟ್ಟಿಗೆ ಹೋಗೋಣವೆಂದು ತೀರ್ಮಾನಿಸಿ ಹೊರಟವರಿಗೆ ಎದುರುಗಡೆ ಒಳಗಡೆಯಿಂದ ಪಟಪಟನೆ ಮುಖ ಮುಚ್ಚಿಕೊಂಡು ಹೊರಗೆ ಓಡಿಬಂದು ಜನಜಂಗುಳಿಯಲ್ಲಿ ಕಳೆದುಹೋಗುತ್ತಿದ್ದ ಜನರನ್ನು ಕಂಡು ಆಶ್ಚರ್ಯವಾಯ್ತು. ಅರೆರೆ! ಇದ್ಯಾಕೆ ಈ ರೀತಿ ಹೊರಗೆ ಮುಖ ಮರೆಸಿಕೊಂಡು ಹೋಗುತ್ತಿದ್ದಾರೆಂದು ಅದರ ವಿವರ ಮೆನು ಕಾರ್ಡಿನಲ್ಲಿ ನೋಡಿದರೆ ವಯಸ್ಕರಿಗೆ ಮಾತ್ರ ಇರುವ ಆಟವೆಂದು ತಿಳಿಯಿತು. ಮತ್ತು ಇದಕ್ಕೆ ಕನಿಷ್ಟ ನಾಲ್ಕು ಸದಸ್ಯರು ಬೇಕಿತ್ತು. ಸರಿ ನಾಲ್ವರೂ ಒಟ್ಟು ಸೇರಿ ಹೊರಟೆವು. ಕತ್ತಲೆ ಗುಹೆಯಂತಿದ್ದ ಇದ್ದ ಕಟ್ಟಡ ಒಳ ಹೊಕ್ಕರೆ ಒಂದೊಂದು ಬ್ಯಾಚ್ ಮಾಡಿ ಒಳ ಬಿಡುತ್ತಿದ್ದರು. ನಾವು ನಾಲ್ವರಿದ್ದದ್ದರಿಂದ ತೊಂದರೆಯಾಗಲಿಲ್ಲ. ಒಂದು ಹೆಣ್ಣು ನಾಯಿಯಿರುತ್ತದೆ ಅದರ ಹಿಂದೆ ನಾಲಕ್ಕು ನಾಯಿಗಳನ್ನು ಬಿಡುತ್ತಾರೆ ಆ ನಾಲಕ್ಕು ನಾಯಿಗಳ ಕೊರಳಿಗೆ ಕಟ್ಟಿರುವ ದಾರದ ಇನ್ನೊಂದು ತುದಿಯನ್ನ ಕಬ್ಬಿಣದ ಬೇಲಿಯ ಹೊರಗಡೆ ನಿಲ್ಲುವ ನಾಲ್ವರಿಗೆ ಕೊಡಲಾಗುತ್ತದೆ. ಮೂರು ನಾಯಿಗಳನ್ನು ತಪ್ಪಿಸಿ ಆ ನಾಯಿ ಗೆಲ್ಲಬೇಕು. ಗುದ್ದಾಡಿ, ಬಡಿದಾಡಿ, ಯಾರೂ ಗೆಲ್ಲದೇ ಸಮಯಾವಕಾಶ ಮೀರಿ ಹೊರಗೆ ಒಬ್ಬರನ್ನೊಬ್ಬರು ಛೇಡಿಸುತ್ತಾ, ಆಡುವಾಗ ಒಬ್ಬೊಬ್ಬರೂ ನೀಡುತ್ತಿದ್ದ ಮುಖಭಾವವನ್ನು ಅನುಕರಿಸುತ್ತಾ, ನಗುತ್ತಾ ಹೊರಬಂದೆವು. ಹೊಟ್ಟೆ ಹುಣ್ಣಾಗುವಷ್ಟು ನಕ್ಕೆವು. ಕಣ್ಣುಗಳು ಮಂಜು ಮಂಜಾಗಿಹೋಯ್ತು ಒಬ್ಬೊಬ್ಬರ ಮುಖಭಾವ, ಪ್ರಯತ್ನಗಳನ್ನೂ ನೆನೆನೆನೆಸಿಕೊಂಡು. ಸುಸ್ತಾಗಿ, ಅಲ್ಲೇ ಸ್ವಲ್ಪ ದೂರ ಬಂದು ಕಟ್ಟೆಯ ಮೇಲೆ ಕುಳಿತೆವು. ಎದುರುಗಡೆ ಒಂದು ಆಟದ ಕೋರ್ಟನ್ನು ಕಟ್ಟಲಾಗುತ್ತಿತ್ತು. ಇದೇನಿರಬಹುದೆಂದು ಮೆನು ಕಾರ್ಡನ್ನು ನೋಡಿದೆ. ಕಣ್ಣು ತುಂಬಿದ್ದ ನೀರು ಒರೆಸಿಕೊಂಡು ನೋಡಿದರೆ ಅತಿಶೀಘ್ರದಲ್ಲಿ ಅಲ್ಲಿ ಮನುಷ್ಯ ಪ್ರಾಣಿಯನ್ನು ಇಡಲಾಗುವುದೆಂದು ಬರೆದಿತ್ತು.

ದೊಡ್ಡ ಜಾರೋ ಬಂಡೆ, ಅದರಲ್ಲಿ ನೀರು ಸುರಿಸುರಿದು ಜಾರುತ್ತಲಿತ್ತು ಹಾಕಲು ಬಟ್ಟೆಯೂ ಕೊಟ್ಟಿಲ್ಲ ಏರಿಯನ್ನು ಏರಿ ಮೇಲೆ ತಲುಪುವುದು ನನ್ನ ಕೆಲಸ, ನನ್ನನ್ನು ತಡೆದು ಕೆಳಗೆ ಹಳ್ಳಕ್ಕೆ ಬೀಳಿಸಲು ಸುತ್ತೆಲ್ಲ ಕಡೆ ನಿಂತಿರುವ ಜನರಿಗೆ ಹಗ್ಗ ಕೊಡಲಾಗಿತ್ತು ನನ್ನ ಕೈಯಿಗೋ ಕಾಲಿಗೋ ಸೊಂಟಕ್ಕೋ ಎಸೆದು ಸಿಕ್ಕಿಸಿ ಕೆಳಗೆಳೆಯುತ್ತಿದ್ದರು. ನಾನು ಜೀವಕ್ಕಾಗಿ ಹೋರಾಡುತ್ತಿದ್ದೆ ಅವರು ಮನೋರಂಜನೆಗಾಗಿ ಹೋರಾಡುತ್ತಿದ್ದರು. ಎಷ್ಟು ಬಾರಿ ಬಿಡಿಸಿಕೊಂಡು ಮೇಲೆ ಏರುತ್ತಿದ್ದರೂ ಇನ್ನೇನು ಮೇಲಿನ ಘಟ್ಟಕ್ಕೆ ತಲುಪಿಯೇ ಬಿಟ್ಟೆ ನಾನೇ ಗೆದ್ದೆ ಎಂದುಕೊಳ್ಳುವಷ್ಟರಲ್ಲಿ ಹಗ್ಗ ಹಾಕಿ ಎಳೆದುಬಿಡುತ್ತಿದ್ದರು ಕೆಳಗೆ ನೋಡಿದರೆ ಹಳ್ಳದಲ್ಲಿ ಹಂದಿ, ಹುಚ್ಚು ನಾಯಿ, ಕುರಿ, ಕೋಳಿ, ಇರುವೆ, ಜಿರಳೆ, ಇಲಿ, ಬೆಕ್ಕು, ಹಸು, ಎಲ್ಲಾ ಬಾಯಿ ತೆರೆದು ಅರಚುತ್ತಾ ನಾನು ಬೀಳುವುದನ್ನೇ ಕಾಯುತ್ತಿದ್ದವು. ಹಸುವಿನ ಬಾಯಲ್ಲಿ ನನ್ನ ವಸ್ತ್ರಗಳೆಲ್ಲಾ ಸೇರಿಹೋಗುತ್ತಿದ್ದವು. ಅಯ್ಯಯ್ಯೋ ನಾನು ಹಳ್ಳಕ್ಕೆ ಬಿದ್ದರೆ ಖಂಡಿತಾ ನನ್ನನ್ನು ಬಿಡುವುದಿಲ್ಲ, ತರಿದುತಿಂದುಬಿಡುತ್ತವೆ. ಯಾರಾದರೂ ನನ್ನ ಸಹಾಯಕ್ಕೆ ಇದ್ದಾರೋ ಎಂದು ಸುತ್ತ ನೋಡಿದೆ, ಹಗ್ಗ ಎಸೆಯುತ್ತಿದ್ದವರಲ್ಲಿ ನನ್ನ ಸ್ನೇಹಿತರೂ ಇದ್ದರು. ಕಣ್ಣು ತಿಂಬಿಹೋದವು, ಉಸಿರುಕಟ್ಟಿಬರುತ್ತಿತ್ತು. ಮೈಕೈಯಲ್ಲಿ ಇದ್ದ ಶಕ್ತಿಯೆಲ್ಲವನ್ನೂ ಉಪಯೋಗಿಸಿ ಮೇಲೆ ಗುರಿ ಮುಟ್ಟುವತನಕ ಯಾವ ಪಾಶದ ದಾಳಿಗೂ ಕುಗ್ಗದೇ ಏರುವುದೆಂದು ದೃಷ್ಟಿ ನೆಟ್ಟೆ ಏರಿದೆ, ಎಲ್ಲ ಬದಿಯಿಂದಲೂ ಜನರು ಹಗ್ಗಗಳನ್ನು ಎಸೆದು ಎಳೆಯಲು ಶುರುಮಾಡಿದರು. ಅಯ್ಯೋ ನನಗ್ಯಾಕೀಗತಿ ಬಂತೋ ಗೊತ್ತಿಲ್ಲ ಚೀರಿದೆ, ಇನ್ನೂ ಶಕ್ತಿಯುಪಯೋಗಿಸಿ ಮೇಲೆ ಹತ್ತಲು ಪ್ರಯತ್ನಿಸಿದೆ. ಇಲ್ಲಿಂದ ಮೊದಲು ಓಡಿಹೋಗಬೇಕೆನಿಸಿತು.

ಇನ್ನೂ ಹೊಟ್ಟೆ ಹಿಡಿದುಕೊಂಡು ನಗುತ್ತಲಿದ್ದ ಸ್ನೇಹಿತರನ್ನೊಮ್ಮೆ ನೋಡಿದೆ, ಮಂಜು ಮಂಜಾಗಿ ನಿರ್ಮಾಣವಾಗುತ್ತಿದ್ದ ಮೈದಾನವನ್ನು ನೋಡಿದೆ ಕೈಕಾಲು ಹೃದಯ ಥರಥರನೆ ನಡುಗುತ್ತಿತ್ತು. ನನ್ನಲ್ಲಿನ ನಗು ಯಾವುದೋ ಕಾಲದಲ್ಲಿ ಉಡುಗಿಹೋಗಿತ್ತು. ಆ ಎತ್ತರದ ಪ್ರದೇಶದಲ್ಲಿ ರಕ್ತಕಣ್ಣೀರಿನೊಂದಿಗೆ, ಹಗ್ಗಗಳ ಸರಳಿನೊಂದಿಗೆ ಇನ್ನೂ ನಿಂತಿರುವಂತೆ ಕಂಡಿತು. ಕೈಯಲ್ಲಿದ್ದ ಮೆನು ಕಾರ್ಡನ್ನು ಬಿಸುಟಿ ಮನುಷ್ಯ ಪ್ರಾಣಿಗಳನ್ನು ನೂಕಿ, ನುಸುಳಿ, ಜಾಗ ಮಾಡಿಕೊಂಡು ಓಡಿದೆ, ಓಡಿದೆ, ಓಡಿದೆ, ಓಡಿದೆ ಆಟದ ಮೈದಾನಗಳಿಂದಾಚೆಗೆ, ಮನುಷ್ಯ ಪ್ರಾಣಿಗಳಿಂದ ದೂರಕೆ, ಓಡುತ್ತಲೇ ಇದ್ದೆ. ಸೆಕ್ಯುರಿಟಿ ತಾತ ಗಾಂಧಿ ನೋಟನ್ನು ಥುಪುಕ್ಕನೆ ನನ್ನೆಡೆಗೆ ಉಗಿದು ಕೈ ತೋರಿಸುತ್ತಾ ಹೇssss ಹೆಹೆಹೆಹೆಹೆ ಎಂದು ನಗುತ್ತಲಿದ್ದಂತೆನಿಸಿತು, ಹಿಂದಿರುಗಿ ನೋಡಲೂ ಇಲ್ಲ ಶಬ್ಧಗಳು ಮರೆಯಾಗುವವರೆಗೂ, ಕತ್ತಲೆ ಕವಿಯುವವರೆಗೂ, ಓಡುತ್ತಲೇ ಇದ್ದೆ.








+ನೀ.ಮ. ಹೇಮಂತ್

Friday 22 June 2012

ಪಡುವಣದಲ್ಲುದಯರವಿ!




              ಪ್ಪ ನನಗೆ ವಯಸ್ಸಾಗ್ತಾ ಬಂತು ಕೂದಲು ಉದುರಿಹೋಗುವ ಮುನ್ನ ಮದುವೆ ಮಾಡಿಬಿಡಪ್ಪಾ! ಒಮ್ಮಿಂದೊಮ್ಮೆಗೆ ಇಪ್ಪತ್ತಾರು ವರ್ಷದ ತನ್ನ ಮಗ ಎದುರು ನಿಂತು ಹೀಗೆ ಕೇಳುವನೆಂದು ಯೋಚಿಸಿರಲಿಲ್ಲವೇನೋ ಮಂಜುನಾಥಯ್ಯನವರು. ಯಾವುದೋ ಲೆಕ್ಕಾಚಾರದಲ್ಲಿ ಮುಳುಗಿದ್ದವರು ಕಾಲ್ಕುಲೇಟರನ್ನು ಕೆಳಗಿಟ್ಟು ಕನ್ನಡಕವನ್ನು ಕಣ್ಣಿನಿಂದ ತೆಗೆದು ಕೈಗೆ ಅಲಂಕರಿಸಿ ಮಗನನ್ನು ಕಾಲಿನಿಂದ ತಲೆಯವರೆಗೂ ಒಮ್ಮೆ ಸ್ಕಾನ್ ಮಾಡುವರು. ಏನಪ್ಪಾ, ನನಗೂ ಸಂಗಾತಿ ಬೇಕು ಅನ್ನಿಸ್ತಿದೆ ಇದೇ ಸರಿಯಾದ ಸಮಯ ಮದುವೆ ಮಾಡಿಬಿಡಿ, ಎಂದು ಮತ್ತೊಮ್ಮೆ ಹೇಳಿದ್ದನ್ನು ಕೇಳಿದ ನಂತರ ಲೆಕ್ಕಾಚಾರದಿಂದ ಸಂಪೂರ್ಣ ಹೊರಗೆ ಬಂದ ಮಂಜುನಾಥಯ್ಯನವರು, ನಿಧಾನಕ್ಕೆ ಕುರ್ಚಿಗೆ ಒರಗಿ ಹಾ ಆಗಪ್ಪಾ ಯಾರು ಬೇಡ ಅಂದ್ರು ಇವಾಗ, ಎನ್ನುವರು. ಅರೆ ಇದೇನು ಅಪ್ಪ ಹೀಗೆ ಹೇಳುತ್ತಿರುವರಲ್ಲಾ ಎಂದು ಅಚ್ಚರಿಯಾಗಿ ಹೆಣ್ಣು ಹುಡುಕಿ ಮತ್ತೆ ಎಂದು ಮತ್ತೆ ನಾಚಿಕೆ ಬಿಟ್ಟು ಹೇಳುವನು. ಲೋ ನಿನಗೇನಾಗಿದೆ, ಹುಡುಗಿ ಹುಡುಕ್ಕೊಂಡು ಬಂದು ನಮಗೆ ಹೇಳಿದ್ರೆ ಮದುವೆ ಮಾಡ್ಸೊಲ್ಲ ಅಂದಿದ್ದೀವಾ? ಮೊದಲು ಯಾರನ್ನಾದರೂ ಲವ್ ಮಾಡು ಆಮೇಲೆ ಎಲ್ಲಾ ಓಕೆ ಸರಿ ಎಂದೆನಿಸಿದರೆ ಬಂದು ಹೇಳು ಮದುವೆ ಏರ್ಪಾಡು ಮಾಡೋಣಂತೆ ಎಂದು ಆರಾಮವಾಗಿ ಹೇಳಿ ಕಾಲ್ಕುಲೇಟರನ್ನು ಹಿಡಿದು ಕನ್ನಡಕ ಮತ್ತೆ ಕಣ್ಣಿಗೆ ಅಲಂಕರಿಸಿ ತಮ್ಮ ಕೆಲಸದಲ್ಲಿ ಮಗ್ನರಾಗಲು ಹೊರಟವರನ್ನು ತಡೆದು ಅಪ್ಪಾ ಏನ್ ಹೇಳ್ತಿದ್ದೀರಾ. ಈ ಲವ್ವು ಮಾಡು, ಹುಡುಗಿಗೆ ಮೆಸೇಜು ಮಾಡು, ಘಂಟೆಗಟ್ಟಲೆ ಫೋನಿನಲ್ಲಿ ಮಾತನಾಡು, ಜೊತೆ ಹಾಕೊಂಡು ಸುತ್ತು, ಗಿಫ್ಟ್ ಕೊಡಿಸು, ಜಗಳವಾಡು, ಅವಳ ಜುಟ್ಟು ಜನಿವಾರಗಳನ್ನ ನಾನು ತೊಗೋ, ನನ್ನದನ್ನ ಅವಳಿಗೆ ಕೊಡು, ಉಫ್!!! ಸುಮ್ಮನೆ ಕಾಲಹರಣನಪ್ಪಾ ನೀವೇ ಯಾವುದಾದರೂ ಹುಡುಗಿಯನ್ನ ನಿಮ್ಮ ಮತ್ತು ಅಮ್ಮನ ಅಭಿರುಚಿಗೆ ತಕ್ಕಂತೆ, ಈ ಮನೆಗೆ ಹೊಂದಿಕೊಂಡು ಹೋಗ್ತಾಳೆ, ಮತ್ತು ನನ್ನ ಗುಣಾವಗುಣಗಳಿಗೆ ಸರಿಯಾದ ಮ್ಯಾಚ್ ಅನ್ನಿಸೋ ಹುಡುಗಿ, ಮತ್ತು ಒಳ್ಳೆಯ ಮನೆತನ ಅನ್ನಿಸಿದ್ರೆ ಅವಳನ್ನು ನನಗೆ ನನ್ನನ್ನು ಅವಳಿಗೆ ತೋರಿಸಿ, ಅವಳನ್ನೇ ಕಣ್ಣುಮುಚ್ಚಿಕೊಂಡು ಮದುವೆ ಆಗಿಬಿಡ್ತೀನಿ ಎಂದು ಮಗ ಅಂದದ್ದಕ್ಕೆ ಕೊಂಚ ಹೊತ್ತು ಯೋಚಿಸಿ, ಲೋ ಅವೆಲ್ಲಾ ರಿಸ್ಕು ಕಣೋ, ಹೇಳಿದಷ್ಟು ಸುಲಭ ಅಲ್ಲ. ಅರೇಂಜ್ಡ್ ಮ್ಯಾರೇಜುಗಳು ಮುರಿದು ಬೀಳ್ತಾವೆ, ಮೆಂಟಾಲಿಟಿ ಹೊಂದಿಕೆಯಾಗೋಲ್ಲ ಹಲವು ಸಲ, ಮತ್ತೆ ಮನೆಗೆ ಬರುವವಳು ಹೊಂದಿಕೊಳ್ಳದೇ, ನಿಮ್ಮಮ್ಮನೊಂದಿಗೋ ಇಲ್ಲ ನಿನ್ನೊಂದಿಗೋ ಜಗಳ, ವೈಮನಸ್ಯ ಶುರುಮಾಡಿಕೊಂಡರೆ ಸುಮ್ಮನೆ ಎಲ್ಲರ ನೆಮ್ಮದಿ ಹಾಳು. ಇನ್ನು ನಿನ್ನ ತಮ್ಮ ಪಟ್ಟಕ್ಕೆ ಬಂದು ಅವನೂ ಅರೇಂಜ್ಡ್ ಮ್ಯಾರೇಜೇ ಮಾಡಿಸಿ ಅಂತ ಪಟ್ಟು ಹಿಡಿದು ನಂತರ ಇಬ್ಬರೂ ಸೊಸೆಯರು ಒಂದು ದಿನ ಜುಟ್ಟು ಹಿಡಿದು ಬೀದಿರಂಪ ಮಾಡಿದ್ರೆ ಮಾನ ಮರ್ಯಾದೆ ಎಲ್ಲಾ ಮೂರಾಬಟ್ಟೆಯಾಗಲ್ಲ ಅನ್ನೋದಕ್ಕೆ ಏನು ಗ್ಯಾರಂಟಿನಪ್ಪಾ ಸುಮ್ಮನೆ ನಿಮ್ಮ ನಿಮ್ಮ ಜೀವನ ಸಂಗಾತಿಗಳನ್ನ ನೀವೇ ಹುಡ್ಕೊಳ್ಳಿ ಎಂದು ಅಪ್ಪ ಕಡ್ಡಿ ಮುರಿದ ಹಾಗೆ ಹೇಳಿದ್ದನ್ನು ಕಂಡು ಮಗನೂ ತಲೆ ಕೆಡಿಸಿಕೊಳ್ಳುವನು!

ಈ ಅಪ್ಪನಿಗೆ ಏನಪ್ಪಾ ಹೇಳುವುದು ಒಳ್ಳೇ ಹಳೇ ಸಿಡಿ ಪ್ಲೇಯರ್ ತರಹ ಅದೇ ಹಾಡಿಗೆ ಸಿಕ್ಕಾಕೊಂಡಿದ್ದಾರೆ, ಮುಂದೆ ಹೋಗಲ್ಲಾ ಹಿಂದೆ ಬರಲ್ಲಾ. ಏನು ಮಾಡೋದೀಗ, ಧಿಡೀರನೆ ಲವ್ ಮಾಡು ಅಂದ್ರೆ ಎಲ್ಲಿಂದ ಹುಡುಗಿ ಹುಡುಕೋದು, ಎಲ್ಲಾ ಹುಡುಗಿಯರು ಅರೇಂಜ್ಡ್ ಮ್ಯಾರೇಜೇ ಒಳ್ಳೆಯದು ಅಂತ ಕುಣೀತಿರ್ತಾರೆ. ಹಯ್! ಈ ಮದುವೆ ಸಹವಾಸವೇ ಬೇಡಾ ಹಾಳಾಗೋಗ್ಲಿ ಎಂದು ಮಾತು ಮುಂದುವರೆಸದೇ ಹೋಗುತ್ತಿದ್ದ ಮಗನೆಡೆಗೆ ನೋಡಿ ಲೋ ಲೋ ಬಾರೋ ಇಲ್ಲಿ, ಏನಾಯ್ತು, ಏನು ನಿರ್ಧಾರ ಮಾಡಿದಿ? ಎಂದು ಎದುರಿಗೆ ಕೂರಲು ಕೈತೋರಿಸುವರು. ಮಗನೂ ಕೂತು ಇನ್ನೇನಪ್ಪಾ ನಿಮ್ಮದೊಳ್ಳೇ ಕಥೆ ಆಯ್ತು, ನನಗೆ ಈ ಮದುವೆ ಸಹವಾಸವೇ ಬೇಡ ಬಿಡಿ ಎಂದು ಎದ್ದು ಹೋಗಲು ಅನುವಾದವನಿಗೆ ಮುಚ್ಕೊಂಡ್ ಕೂತ್ಕೊಳ್ಳಪ್ಪಾ, ಅಲ್ವೋ ಕಾಲೇಜ್ ದಿನಗಳಲ್ಲಿ ಏನ್ ಮಣ್ಣು ಮುಕ್ತಿದ್ಯಾ? ಈ ವಯಸ್ಸಿನಲ್ಲಿ ಲವ್ ಮಾಡಲ್ಲಾ ಅಂದ್ರೆ ಹಲ್ಲುದುರಿದ ಮೇಲೆ ಮಾಡ್ತೀಯೇನೋ? ಹಾಳು ಮಾಡ್ಕೊಂಡಿದ್ಯ ಜೀವನಾನಾ ಹಾಗಾದ್ರೆ ನೀನು. ಏನೋ ಉದ್ಧಾರ ಮಾಡೋ ಹಾಗೆ ಹೊಸ ಹೊಸ ಬಟ್ಟೆ, ಕಿತ್ತೋಗಿರೋ ಸೌಂಡು ಮಾಡೋ ಗಾಡಿ, ಸೆಂಟು ಎಲ್ಲಾ ಮತ್ಯಾಕ್ ತೊಗೋತಿದ್ದೆ? ಎಂದು ನೇರವಾಗಿ ಪ್ರಶ್ನಿಸಿದ್ದನ್ನು ಕಂಡು ಅವಮಾನವೊಂದು ಕಡೆ, ಸಿಟ್ಟೊಂದು ಕಡೆ? ಇನ್ನ ಉತ್ತರಿಸುವುದೆಂತ? ತಲೆ ಬಗ್ಗಿಸಿ ಕಾಲ್ಕುಲೇಟರಿನೊಂದಿಗೆ ಬೆರಳಾಡಿಸುತ್ತಾ, ಏನು ಹೇಳುವುದೀಗ ಎಂದು ಯೋಚಿಸುವನು. ಥಟ್ಟನೆ ಹೊಳೆದು, ಯಾರನ್ನಾದರೂ ಇಷ್ಟ ಪಟ್ಟು, ಅವಳ ಹಿಂದೆ ಅಲೆದು, ಅವಳು ಅಕಸ್ಮಾತ್ ಒಪ್ಪಿಕೊಳ್ಳದೇ ಇನ್ನಾರ ಜೊತೆಗೋ ಹೋಗಿದ್ರೆ ವಿದ್ಯಾಭ್ಯಾಸ ಹಾಳಾಗ್ತಿರಲಿಲ್ವಾ, ಮಾರ್ಕ್ಸ್ ಗಳು ಹೊಗೆ ಹಾಕೊಂಡಿದ್ರೆ ಒಳ್ಳೇ ಕೆಲಸ ಸಿಗದೇ ಕೂಲಿ ಮಾಡಬೇಕಿತ್ತಷ್ಟೇ, ನೀವೂ ಸರಿಯಾಗಿ ಹೇಳ್ತೀರಾ ಬಿಡಿ ಎಂದು ಅಪ್ಪನನ್ನು ದಬಾಯಿಸಲು ಪ್ರಯತ್ನಿಸುವನು. ಅದಕ್ಕೆ ಉತ್ತರ ಸಿದ್ಧವಾಗಿ ಇಟ್ಟುಕೊಂಡಿದ್ದರೇನೋ ಎಂಬಂತೆ, ಕೈ ತೋರಿಸುತ್ತಲೇ ಆಹಾ ಲೋ ಏನ್ ಭಾರೀ ಘನಂದಾರಿ ಕೆಲ್ಸಾನಪ್ಪಾ ನೀನು ಮಾಡ್ತಿರೋದು ಈಗ. ಆಯ್ತು ಏನೋ ಒಳ್ಳೇ ಸಂಬಳ ಬರ್ತಿದೆ ಅಂತಾನೇ ಇಟ್ಕೋ ಏನು ಉಪ್ಪಿನಕಾಯಿ ಹಾಕೊಂಡು ನೆಕ್ತೀಯಾ ದುಡ್ಡೊಂದನ್ನೇ ಇಟ್ಟುಕೊಂಡು? ಹಾ. ಧೈರ್ಯ ಇರಲಿಲ್ಲ ಅಂತ ಹೇಳು. ಇನ್ನೂ ದೇವ-ಡಿ ಕಾಲದಲ್ಲೇ ಇರು ನೀನು. ನಿನ್ನನ್ನ ನನ್ನ ಮಗ ಅಂತ ಹೇಳಿಕೊಳ್ಳೋದಕ್ಕೂ ನಾಚಿಕೆ ಆಗುತ್ತೆ ಕಣೋ ಥೂ ಎದ್ದೋಗು ಅದೇನ್ ಮಾಡ್ತೀಯೋ ಮಾಡ್ಕೋ, ಒಂದು ವಾರ ಸಮಯ ತೊಗೋ, ನಿನ್ನ ಕೈಯಲ್ಲಿ ಹುಡುಗಿ ಹುಡುಕಿಕೊಳ್ಳುವುದಕ್ಕೆ ಆಗಲ್ಲ ಅಂದ್ರೆ ಆಮೇಲೂ ಹೇಳು ನಿನ್ನ ಹಣೆಬರಹ ನಾವೇನ್ ಮಾಡೋಣ ಎನ್ನುವರು. ಅಲ್ಲಪ್ಪಾ ಅರೇಂಜ್ಡ್ ಮ್ಯಾರೇಜಂದ್ರೆ ಅಷ್ಟೋಂದು ನಕಾರಾತ್ಮಕವಾಗಿ ಯಾಕೆ ಮಾತನಾಡ್ತೀರಾ? ನನ್ನ ಸ್ನೇಹಿತರೆಲ್ಲಾ ಚೆನ್ನಾಗೇ ಇದ್ದಾರಪ್ಪಾ ಯಾವ ಸಮಸ್ಯೆನೂ ಇಲ್ಲ ಅವರ ಮಧ್ಯೆ, ಅನ್ಯೋನ್ಯವಾಗಿ ಒಂದು ಹೆತ್ತುಕೊಂಡು ಚೆನ್ನಾಗೇ ಇದ್ದಾರೆ ಎಂದು ಹೇಳಿ ಅಪ್ಪನ ಪ್ರತಿಕ್ರಿಯೆಗೂ ಕಾಯದೆ ನಡೆದುಹೋಗುವನು.

ಈಗಿನ ಮಕ್ಕಳೋ ಒಂದೂ ಹೇಳಿದ ಮೇತೇ ಕೇಳಲ್ಲಪ್ಪಾ! ಅವರು ನಡೆದಿದ್ದೇ ದಾರಿ ಎಂದು ಒಂದು ದೀರ್ಘ ನಿಟ್ಟುಸಿರು ಬಿಟ್ಟು, ಮತ್ತೆ ಲೆಕ್ಕಾಚಾರ ಶುರುಮಾಡುವರು!






+ನೀ.ಮ. ಹೇಮಂತ್

ಸೊಳ್ಳೆ!




ನನ್ನ ಹುಡುಗಿ ಸುಂದರ ದೊಡ್ಡ ಕಲಾಕೃತಿಯಂತೆ ಕಾಣುತ್ತಿದ್ದಳು ನನಗೆ. ಅವಳ ಅಂದ, ಚೆಂದ, ವ್ಯಕ್ತಿತ್ವ, ಕಣ್ಣುಗೊಂಬೆಗಳ ತೀಕ್ಷ್ಣತೆ, ಮಾದಕತೆ, ಮೈಮಾಟ, ವೈಯ್ಯಾರ, ಅವಳ ಉಡುಗೆಗಳಿಂದ ಹೊರಗೆ ಇಣುಕಿ ನೋಡಿ ಕಣ್ಣು ಪಿಳುಕಿಸುತ್ತಿದ್ದ ಅವಳ ದೇಹ ಸಿರಿ, ಪ್ರತಿಬಾರಿ ನಕ್ಕಾಗಲೂ ಸಣ್ಣದಾಗಿ ಕಂಡು ಒಳಗೆ ಸೇರಿಬಿಡುತ್ತಿದ್ದ ಬಿಳಿ ಬಿಳಿ ದಂತಪಂಕ್ತಿಗಳು, ಜೇನುತುಪ್ಪವನ್ನೇ ಸವರಿಕೊಂಡು ಸದಾ ಸೆಳೆಯುತ್ತಿದ್ದ ಅವಳ ತುಟಿಗಳು, ಬಟ್ಟೆಗೆ ತಕ್ಕ ಬಣ್ಣವನ್ನಲಂಕರಿಸಿದ ಮೃದುವಾದ ಉಗುರುಗಳ ಪುಟ್ಟ ಪುಟ್ಟ ಬೆರಳುಗಳನ್ನು ನೀಳ ಕಪ್ಪು ಕೂದಲನ್ನು ಕಿವಿಯ ಹಿಂದೆ ಸಿಕ್ಕಿಸಲು ಬಳಸಿದಾಗ ಕೊಂಚವೇ ಅಲುಗುತ್ತಿದ್ದ ಓಲೆಗಳು ಎಲ್ಲ ನನ್ನನ್ನು ಸೆಳೆದು, ಅವಳ ಆ ದೈತ್ಯ ಸೌಂದರ್ಯದ ಮುಂದೆ ನನ್ನನ್ನು ತುಂಬಾ ಚಿಕ್ಕ ಸೊಳ್ಳೆಯಂತೆ ಮಾಡಿ ಬಿಟ್ಟಿತು. ನಾನು ಸದಾ ಅವಳ ಬಳಿಯೇ ಹಾರಲು ಶುರುಮಾಡಿದೆ. ನನಗವಳ ಸಾನ್ನಿಧ್ಯ ಬೇಕಿತ್ತು. ಅವಳೂ ತಿಂಡಿ ತಿನ್ನುವಾಗ ಸುಮ್ಮನೆ ದೂರದಲ್ಲಿ ಕುಳಿತು ಅವಳು ಚೂರು ಚೂರೇ ತಿನ್ನುವ ಪರಿಯನ್ನು ನೋಡಿದೆ. ಈಗ ತಾನೆ ಶುರುಮಾಡಿದಳೇನೋ ಎಂದುಕೊಳ್ಳುವಷ್ಟರಲ್ಲೇ ತಿಂದು ಮುಗಿಸಿದ್ದಳು ಅವಳು. ಅರೆ ನಿನ್ನ! ಯಾಕೇ? ತಿನ್ನೇ ಸರಿಯಾಗಿ! ಎಂದು ಕೂಗಿ ಹೇಳಬೇಕೆನಿಸಿತು. ಓಹೋ ಡೈಯೆಟಿಂಗ್ ಇರಬಹುದೇನೋ ಪಾಪ ಇಷ್ಟು ಆಕರ್ಷಕವಾಗಿ ಕಾಣುವುದಕ್ಕೆ ಇವಳು ತಿನ್ನುವುದನ್ನೂ ತ್ಯಾಗ ಮಾಡಿರಬಹುದು ಎಂದುಕೊಂಡು ಸುಮ್ಮನಾದೆ. ಬ್ಯಾಗು ತೆಗೆದುಕೊಂಡು ಹೊರನಡೆದಳು. ಓಹೋ ಇನ್ನು ಕೆಲಸದಲ್ಲಿ ಬಿಜಿಯಾಗಿಬಿಡುವಳೆಂದು ಗೊತ್ತಾಯ್ತು. ಅವಳ ಮಡಿಲನ್ನಲಂಕರಿಸಿದ್ದ ಬ್ಯಾಗಿನ ಮೇಲೆ ಕುಳಿತು ಕಿವಿಗೆ ಹಾಡು ಸಿಕ್ಕಿಸಿಕೊಂಡು ಮೆಲ್ಲಗೆ ಗುನುಗುನಿಸುತ್ತಿದ್ದವಳನ್ನು ನೋಡುತ್ತಾ ಅದ್ಯಾವಾಗ ಆಫೀಸು ಬಂದುಬಿಡ್ತೋ ಗೊತ್ತೇ ಆಗಲಿಲ್ಲ. ಬಸ್ಸಿನಿಂದ ಇಳಿಯುವಾಗ ಕಣ್ಮುಚ್ಚಿ ನಿದ್ರೆಯ ಮಂಪರಲ್ಲಿ ಕಳೆದುಹೋಗಿದ್ದವಳು ಚಕಚಕನೆ ಎಚ್ಚೆತ್ತು ಮೊಬೈಲು ಬ್ಯಾಗಿನಲ್ಲಿ ತುರುಕುವಾಗ ನಾನು ಕೆಳಗೆ ಕಾಲು ಜಾರಿ ಬಿದ್ದೋದೆ. ಅವಳನ್ನು ಕಣ್ಣುಗಳಲ್ಲೇ ಅನುಭವಿಸುತ್ತಿದ್ದ ನನ್ನ ಮಂದ ಬುದ್ಧಿಗೆ ರೆಕ್ಕೆಯೂ ಇವೆ ಅದನ್ನು ಬಳಸಲೂಬಹುದೆಂದು ಗೊತ್ತಾಗುವಷ್ಟರಲ್ಲಿ ಬಸ್ಸಿನ ಸೀಟಿನ ಮೇಲೆ ಬಿದ್ದಿದ್ದೆ. ಮತ್ಯಾವುದೋ ದೊಡ್ಡ ಸೂಟ್ಕೇಸೊಂದು ನನ್ನ ಮೇಲೆ ಬೀಳುತ್ತಿರುವುದನ್ನು ಕಂಡು ಭಯಕ್ಕೋ ಏನೋ ಮೆದುಳು ಚುರುಕಾಗಿ ಕೆಲಸ ಮಾಡಿ ಹಾರಿ ಬಸ್ಸಿನಿಂದ ಹೊರಗೆ ಬಂದೆ. ಎತ್ತ ಹೊರೆಟುಹೋಗಿದ್ದಳೋ ಗೊತ್ತಾಗಲಿಲ್ಲ. ಆಫೀಸಿನ ಒಳಕ್ಕೆ ಹಾರಿ ಹೊರಟೆ. ಎತ್ತ ನೋಡಿದರೂ ತಲೆಗಳು, ಛತ್ರಿಗಳೇ ಕಾಣುತ್ತಿದ್ದವು. ನನ್ನವಳೆಲ್ಲಿ ಅಂತ ಹುಡುಕಲಿ ಈಗ. ಪಟಪಟನೆ ರೆಕ್ಕೆ ಬಡಿಯುತ್ತಾ ಹಾರಿ ಹಾರಿ ಮುಂದೆ ಹೋಗುವುದು ಅನುಮಾನ ಬಂದವರ ಕಡೆಗೆ ತಿರುಗಿ ನೋಡಿ ಅಲ್ಲವೆಂದು ಗೊತ್ತಾಗಿ ಮತ್ತೆ ಮುಂದುವರೆಯುವುದು. ಛೆ ಎತ್ತ ಹೊರಟು ಹೋದಳೋ!

ಮಧ್ಯಾಹ್ನದವರೆಗೂ ಹುಡುಕಿದರೂ ಗೊತ್ತೇ ಆಗಲಿಲ್ಲ, ಹುಡುಕಿ ಹುಡುಕಿ ಸಾಕಾದರೂ ಸಿಗಲೇ ಇಲ್ಲ, ಬೇಸರ, ಹಸಿವು, ಸಂಕಟ, ಸುಸ್ತು ಎಲ್ಲ ಒಟ್ಟೊಟ್ಟಿಗೇ ಬಾಧಿಸುತ್ತಿತ್ತು. ಸುಮ್ಮನೆ ಕ್ಯಾಂಟೀನಿನ ನೀರು ಚೆಲ್ಲಿದ್ದ ಜಾಗದಲ್ಲಿ ಕುಳಿತು ಕಾಲಹರಣ ಮಾಡುತ್ತಿದ್ದೆ. ಸುತ್ತ ಓಡಾಡುತ್ತಿದ್ದವರ ಕಡೆಗೆ ಯಾಂತ್ರಿಕವಾಗಿ ಕಣ್ಣಾಡಿಸುತ್ತಲಿದ್ದೆ. ಧಿಡೀರನೆ ನನ್ನ ಹುಡುಗಿ ಕಂಡಳು! ಜೀವದಲ್ಲಿ ಉಡುಗಿ ಹೋಗಿದ್ದ ಶಕ್ತಿ ಎಲ್ಲಿತ್ತೋ ಬಂತು ಹೋಗಿದ್ದೇ ಅವಳ ಕೆನ್ನೆಗೆ ಒಂದು ಮುತ್ತು ಕೊಟ್ಟುಬಿಡೋಣವೆಂದು ಸುಯ್ಯನೆ ಹೊರಟೆ. ಸುತ್ತ ಮುತ್ತ ಅವಳ ಜೊತೆ ನಗುತ್ತಿದ್ದರು ಹಲವರು. ಕೊಂಚ ದೂರದಲ್ಲೇ ಗಾಳಿಯಲ್ಲಿ ನಿಂತೆ. ಅವನ್ಯಾರೋ ಬೇಕಂತಲೇ ಅವಳ ಮೈ ತಾಕುವ ಹಾಗೆ ಕುಳಿತಿದ್ದ. ಮೈ ಉರಿಹೊತ್ತಿಕೊಂಡು ಅವಳ ಕಡೆ ಹೊರಟಿದ್ದವನು ದಿಕ್ಕು ಬದಲಿಸಿ ಅವನ ಕಡೆಗೆ ಸಾಧ್ಯವಾದಷ್ಟೂ ವೇಗದಲ್ಲಿ ಹೋಗಿ ಭುಜಕ್ಕೆ ಇರುವ ಅಷ್ಟೂ ಶಕ್ತಿಯನ್ನು ಉಪಯೋಗಿಸಿ ಕಚ್ಚಿ ರಕ್ತ ಹೀರಿ ಅವನ ದಾಳಿಯನ್ನು ತಪ್ಪಿಸಿಕೊಂಡು ಬಚ್ಚಿಟ್ಟುಕೊಂಡೆ. ಸರಿದು ಕುಳಿತುಕೊಂಡ, ಉಳಿದುಕೊಂಡ!

ಸಂಜೆ ಯಾವಾಗ ಆಗುವುದೋ ಇವಳ ಒಂದೇ ರೀತಿಯ ಕೆಲಸ ಯಾವಾಗ ಮುಗಿಯುವುದೋ ಎಂದು ಕಾಯುತ್ತಾ, ಅವಳನ್ನು ನೋಡುತ್ತಾ ಕುಳಿತೆ. ನಿದ್ರೆ ಬರಹತ್ತಿತು. ಇವಳಿಗೆ ನನ್ನ ಇರವೇ ತಿಳಿಯುತ್ತಿಲ್ಲವಲ್ಲ ಎಂದು ಕೊಂಚ ತರಲೆ ಮಾಡಲು ಮನಸ್ಸಾಯ್ತು. ಕಿವಿಯ ಬಳಿ ಜುಯ್ಯನೆ ಶಬ್ಧ ಮಾಡಿದ್ದೇ ಆಹ್! ಆಹ್! ಎಂದು ಪುಟಿದು ಕುಳಿತುಕೊಳ್ಳುತ್ತಿದ್ದಳು. ನನಗೆ ಒಂದು ಕಡೆ ನಗು ಇನ್ನೊಂದು ಕಡೆ ಇನ್ನೂ ಆಟವಾಡಿಸಲು ಉತ್ಸಾಹ. ಬಚ್ಚಿಟ್ಟುಕೊಳ್ಳುವುದು, ಮತ್ತೆ ಅವಳು ಕೆಲಸದ ಕಡೆ ಗಮನವಹಿಸಿದಂತೆಯೇ ಮೂಗಿನ ಮೇಲೆ ಹೋಗಿ ಕೂತು ವೆ ವೆ ವೆ ವೆ ವೆ ಎಂದು ನಾಲಿಗೆ ಹೊರಗೆ ಹಾಕಿ ರೇಗಿಸುತ್ತಿದ್ದೆ. ಕಿರಿಕಿರಿಯಾಗಿ ಮತ್ತೆ ಹೊಡೆಯಲು ಯತ್ನಿಸುತ್ತಿದ್ದಳು. ಕಣ್ಣಾಮುಚ್ಚಾಲೆ ಶುರು. ಆಟವಾಡುತ್ತಲೇ, ಕಿವಿಗೆ, ಕೆನ್ನೆಗಳಿಗೆ, ಗಲ್ಲಕ್ಕೆ, ಕುತ್ತಿಗೆಗೆ ಮೆತ್ತೆಗೆ ಮುತ್ತು ಕೊಟ್ಟುಬಿಟ್ಟೆ. ಅಂತೂ ಹೇಗೋ ಅವಳೊಂದಿಗೆ ಆಟವಾಡುತ್ತಲೇ ಸಂಜೆಯಾಗಿ ಹೋಯ್ತು.

ಮನೆಗೆ ಬಂದದ್ದೇ ಬ್ಯಾಗನ್ನು ಬಿಸಾಡಿ ರೂಮಿನಲ್ಲಿ ಹಾಸಿಗೆಯ ಮೇಲೆ ಉರುಳಿದಳು. ಪಾಪ ಎಷ್ಟು ಸುಸ್ತಾಗಿತ್ತೋ ಕೆಲಸ ಮಾಡಿ, ನಾನು ಬೇರೆ ತೊಂದರೆ ಕೊಡುತ್ತಲೇ ಇದ್ದೆನಲ್ಲ ಎಂದು ಬೇಸರವಾಯ್ತು. ಅವಳ ಮುಖದ ಬಳಿಯೇ ಕೂತು ಅವಳ ಉಸಿರಿಗೆ ಪುಳಕಿತನಾಗುತ್ತಾ ಕುಳಿತೆ. ಕೊಂಚ ಸಮಯದ ನಂತರ, ಎದ್ದು ಬಟ್ಟೆ ಹಿಡಿದುಕೊಂಡು ಬಚ್ಚಲಿಗೆ ಹೊರಟೇ ಹೋದಳು. ಹೇಯ್ ನಾನೂ ಬಂದೆ ಇರೇ ಎಂದು ಇನ್ನೇನು ಬಾಗಿಲು ಮುಚ್ಚುವುದಕ್ಕೂ ಒಳಗೆ ನಾನು ಸೇರಿಕೊಳ್ಳುವುದಕ್ಕೂ ಸರಿ ಹೋಯ್ತು. ಅಯ್ಯಯ್ಯೋ ನನ್ನ ಹುಡುಗಿಯನ್ನು ನಾನೇ ಕದ್ದು ಮುಚ್ಚಿ ನೋಡುವುದು ತಪ್ಪೆಂದು ಕಣ್ಣು ಮುಚ್ಚಿಕೊಳ್ಳಲು ಪ್ರಯತ್ನಿಸಿದಷ್ಟೂ ಕಣ್ಣು ತೆರೆದುಕೊಳ್ಳುತ್ತಿತ್ತು. ನಾಚಿಕೊಳ್ಳುತ್ತಲೇ ನೋಡಿಯೇ ನೋಡಿದೆ, ನೀರಿನಲ್ಲಿ ನಿಂತು ಅವಳು ಶುಭ್ರವಾಗುತ್ತಿದ್ದಳೋ, ನೀರೇ ಅವಳ ಮೇಲೆ ಹರಿದು ಶುಭ್ರವಾಗುತ್ತಿತ್ತೋ ಗೊತ್ತಾಗದೇ ಇಂಚು ಇಂಚೂ ನೋಡಿ ರೋಮಾಂಚಿತನಾದೆ. ಟವೆಲು ಸುತ್ತಿಕೊಂಡು ಹೊರಬಂದವಳೇ ಕನ್ನಡಿಯ ಮುಂದೆ ನಿಂತು ಅದ್ಯಾಕೋ ಚಕ್ಕನೆ ಹೆದರಿದಳು. ಅಯ್ಯಯ್ಯೋ, ಎಲ್ಲೋ ಸ್ವರ್ಗದಲ್ಲಿ ತೇಲುತ್ತಿದ್ದವನಿಗೆ ಒಮ್ಮೆಲೇ ಅವಳ ಮುಖವನ್ನು ಕಂಡು ಭಯವಾಗಿ ಕನ್ನಡಿಯ ಬಳಿ ಹಾರಿ ಹೋದೆ. ನೋಡಿದರೆ ಅವಳ ಜಾರೋಬಂಡೆಯಂತ ಕೆನ್ನೆಯಲ್ಲಿ ಒಂದು ಕೆಂಪಾನೆ ಕೆಂಪು ಮೊಡವೆ! ಅದನ್ನು ಮರೆಮಾಚಲು ಏನೆಲ್ಲಾ ಮಾಡಬಹುದೋ ಎಲ್ಲಾ ಮಾಡಿದಳು. ಆದರೂ ಯಾಕೋ ಸಮಾಧಾನವಾದ ಹಾಗೆ ಕಾಣಲಿಲ್ಲ. ಒಂದು ಕೈ ಮುಖದ ಮೇಲೆಯೇ ಓಡಾಡುತ್ತಾ ಊಟದ ಶಾಸ್ತ್ರ ಮುಗಿಸಿ ಬಂದು ಪುಸ್ತಕ ಹಿಡಿದಿದ್ದವಳು ಹಂಗೇ ಕನಸಿನ ಪ್ರಪಂಚಕ್ಕೆ ಜಾರಿದಳು. ರಾತ್ರಿಯಿಡೀ ಕಷ್ಟ ಪಟ್ಟು ಮೊಡವೆಯೊಳಗೆ ಕಟ್ಟಿದ್ದ ರಕ್ತವನ್ನು ಹೀರಿ ಹೀರಿ ಹೊರಗೆ ಹಾಕಿದೆ. ಶಕ್ತಿಯೆಲ್ಲಾ ಉಡುಗಿಹೋಗಿ ಬೆಳಗಾಗುತ್ತಲೇ ಜ್ಞಾನತಪ್ಪಿ ಬಿದ್ದು ಹೋದೆ. ಎರಡು ದಿನದಿಂದ ನಿದ್ರೆಯಿರಲಿಲ್ಲ.

ಎಚ್ಚರವಾದಾಗ ಅವಳು ಆಗಲೇ ಹೊರಟು ಹೋಗಿದ್ದಳು. ಆಫೀಸಿನೆಡೆಗೆ ಹಾರಿ ಹೊರಟೆ, ಏನಾಗಿರಬಹುದೋ ಗೊತ್ತಿರಲಿಲ್ಲ. ಕೆನ್ನೆ ನನ್ನಿಂದ ಊದಿಕೊಂಡಿದ್ದರೆ? ಇನ್ನೂ ಕೆಂಪಾಗಿದ್ದರೆ ? ಗಾಯವಾಗಿದ್ದರೆ? ಅಷ್ಟು ಚಿಕ್ಕ ಮೊಡವೆಗೇ ಅಷ್ಟು ಬೇಸರಿಸಿದ್ದಳು ಇನ್ನು ನನ್ನ ಹೆಡ್ಡತನದಿಂದ ಏನಾಗಿರುವುದೋ ಆಫೀಸಿಗೇ ಹೋಗಿದ್ದರೆ ಸಾಕೆಂದು ಎಲ್ಲೂ ನಿಲ್ಲದೇ, ನೀರು ಕೂಡಾ ಕುಡಿಯದೇ ಹಾರಿದೆ. ಹೋಗಿ ನೋಡಿದರೆ ಎಲ್ಲರೊಂದಿಗೆ ನಗುತ್ತಲಿದ್ದಳು. ಕೆನ್ನೆಯ ಮೇಲೆ ಚಿಕ್ಕದಾಗಿ ಕಲೆಯಿತ್ತು ಮೊಡವೆ ಮಾಯವಾಗಿತ್ತು. ನನ್ನ ಶ್ರಮ ಫಲವಿಟ್ಟಿತೆಂದು ಖುಷಿ ತಾಳಲಾರದೇ ಮೊಡವೆಯಿದ್ದ ಜಾಗಕ್ಕೆ ಮುತ್ತು ಕೊಟ್ಟುಬಿಡಬೇಕೆಂದು ಹಾರಿದೆ ಇನ್ನೇನು ಮುತ್ತು ಕೊಟ್ಟೇ ಬಿಡಬೇಕು ಪಕ್ಕದಲ್ಲಿದ್ದ ಅದೇ ಮೂರ್ಖ ದಾಳಿಮಾಡಿ ಹೊಡೆದುರುಳಿಸಿಯೇ ಬಿಟ್ಟ.

ಧಿಗ್ಗನೆ ಎಚ್ಚರವಾಯ್ತು. ಅವಳಿನ್ನೂ ಕಿಲಕಿಲನೆ ನಗುತ್ತಲೇ ಕೈಯಾಡಿಸುತ್ತಲೇ ಇದ್ದಳು. ನಾನೂ ಅವಳಿಂದ ಮೂರನೆಯ ಸಾಲಿನಲ್ಲಿ ಒಬ್ಬನೆ ಕುಳಿತೇ ಇದ್ದೆ. ಎದ್ದು ಹೋಗುವಾಗ ಒಮ್ಮೆ ನನ್ನೆಡೆ ನೋಡಿ ನಕ್ಕಳೇನೋ ಅನಿಸುತ್ತೆ. ಅಥವಾ ನನಗೆ ಮಾತ್ರ ಹಾಗೆನಿಸಿತೇನೋ ಗೊತ್ತಿಲ್ಲ. ಕಾಫಿ ಕಪ್ಪಗಿ ಕೈ ಹಾಕುವಷ್ಟರಲ್ಲೇ ಒಂದು ಸೊಳ್ಳೆ ಕಚ್ಚಿತು. ಛಟ್ಟನೆ ಹೊಡೆದೆ, ಅಯ್ಯೋ ಎಂಬ ಆರ್ಥನಾದ ಕೇಳಿಬಂತು. ಟೇಬಲ್ ನೋಡಿದರೆ ಕಾಫಿ ಕಪ್ಪಿನ ಪಕ್ಕದಲ್ಲಿ ಅರೆಜೀವವಾಗಿ ಸೊಳ್ಳೆ ಬಿದ್ದಿತ್ತು! 








+ನೀ.ಮ. ಹೇಮಂತ್

Monday 18 June 2012

ನಮ್ಮಪ್ಪನದೂ ಒಂದು ಕಥೆ!




            ಲೋ ಚೆನ್ನಾಗಿ ಓದಿ ಕ್ಲಾಸಿಗೇ ಫರ್ಸ್ಟ್ ರಾಂಕ್ ಬರಬೇಕೋ, ಟಿವಿ, ಆಟ ಎಲ್ಲಾ ಕಡಿಮೆ ಮಾಡಬೇಕು. ಈ ವಯಸ್ಸಿನಲ್ಲಿ ಓದುವುದರ ಬಗ್ಗೆ ಆಸಕ್ತಿ ಹೆಚ್ಚಿರಬೇಕು. ಬೆಳಗ್ಗೆ ಬೇಗ ಎದ್ದು ಪುಸ್ತಕ ಕೈಯಲ್ಲಿ ಹಿಡ್ಕೋ, ವಿದ್ಯೆ ಚೆನ್ನಾಗಿ ತಲೆಗೆ ಹತ್ತುತ್ತೆ. ಸ್ಕೂಲಿನಿಂದ ಒಂದೂ ಕಂಪ್ಲೇಂಟ್ ತರಬಾರದು. ಕೆಟ್ಟವರ ಸಹವಾಸ ಮಾಡಬಾರದು. ಹೊರಗಡೆ ಎಲ್ಲಂದರೆ ಅಲ್ಲಿ ತಿನ್ನಬಾರದು. ಹೊಟ್ಟೆ ತುಂಬಾ ಚೆನ್ನಾಗಿ, ಟೈಮಿಗೆ ಸರಿಯಾಗಿ ತಿನ್ನಬೇಕು, ತರಕಾರಿ ತಟ್ಟೆ ಬದಿಯಲ್ಲಿ ಎತ್ತಿಡಬಾರದು, ಜೀರ್ಣ ಆಗಲ್ಲಾ. ಇವೆಲ್ಲಾ ಸ್ಕೂಲಿನಲ್ಲಿದ್ದಾಗ. ಆದರೆ, ಕಾಲೇಜಿಗೆ ಕಾಲಿಡುತ್ತಿದ್ದಂತೆಯೇ, ಕ್ಲಾಸ್ ಬಂಕ್ ಮಾಡಬಾರದು. ಸಿಗರೇಟು, ಎಣ್ಣೆ, ಗುಟ್ಖಾ ಅದು ಇದು ಚಟಗಳಿಂದ ದೂರ ಇರಬೇಕು. ಸಿನಿಮಾಗಳಿಗೆ ಹೋಗಬೇಕಂದ್ರೆ ಮನೆನಲ್ಲಿ ಹೇಳಿ ಹೋಗು ಬೇಡಾ ಅನ್ನಲ್ಲ, ಮನೆನಲ್ಲಿ ಸುಳ್ಳು ಹೇಳೋ ಅಭ್ಯಾಸ ಇಟ್ಕೋಬೇಡ. ಏನ್ ಬೇಕೋ ಕೇಳು, ಏನ್ ಬೇಕೋ ತೊಗೋ, ಇನ್ನು ಮುಂದೆ ಸ್ನೇಹಿತರು ಅಂತ ತಿಳ್ಕೋ ಅಪ್ಪ ಅಮ್ಮನ್ನ. ಸ್ನೇಹಿತರ ಜೊತೆ ಹೆಚ್ಚು ಹೊತ್ತು ಸುತ್ತುತ್ತಿರಬೇಡ. ಸಂಬಂಧಿಕರ ಮನೆನಲ್ಲಿ ಸಮಾರಂಭಗಳೇನಾದ್ರೂ ಇದ್ರೆ ಬರೋದನ್ನ ಕಲಿ. ಹುಡುಗಿಯರ ಜೊತೆ ರಸ್ತೆಗಳಲ್ಲಿ ಅಲ್ಲಿ ಇಲ್ಲಿ ಮಾತಾಡೋಂತದ್ದು ಏನಿರುತ್ತೆ. ಮನೆಗೆ ಕರೆಸಿ ಮಾತನಾಡಿ ಕಳುಹಿಸೋಕೇನು ಕಷ್ಟ ನಿನಗೆ. ಕೆಲ್ಸಕ್ಕೆ ಸೇರ್ಕೊಂಡೆ. ಅಳಕ್ ಬುಳಕ್ ಪಾಸ್ ಕೂಡ ಆಗಿದ್ದೆ. ಯಾರೋ ದಡ್ಡ ಕಂಪನಿಯವರು ಕೆಲ್ಸ ಕೂಡ ಕೊಟ್ಟಿದ್ರು. ಕೆಲಸಕ್ಕೆ ಸೇರಿದ ಮೇಲೂ ಸಹ ನೂರು ಉಪದೇಶಗಳು ಇದ್ದವು. ಹೆಚ್ಚು ಖರ್ಚು ಮಾಡಬೇಡ, ಕ್ರೆಡಿಟ್ ಕಾರ್ಡ್ ಜಾಸ್ತಿ ಸವೆಸಬೇಡ. ಅಕೌಂಟ್ ಖಾಲಿ ಮಾಡಿಕೊಂಡಿರಬೇಡ. ಅದು ಇದು. ನಮ್ಮಪ್ಪ ಅಂದರೆ ಉಪದೇಶಗಳ ಖಾತೆನಾ ಅಂತ ಒಂದೊಂದು ಸಲ ಅನ್ನಿಸುತ್ತಿತ್ತು, ನಿಜ. ಆದರೆ ಇಷ್ಟೆಲ್ಲಾ ನನ್ನನ್ನ ತಿದ್ದುತ್ತಾ, ತೀಡುತ್ತಾ, ಪ್ರತಿ ಹಂತದಲ್ಲೂ, ಪ್ರತಿ ಅವಕಾಶ ದೊರೆತಾಗಲೂ ಉಪದೇಶ ನೀಡಿ, ಕೆಲವು ಸಲ ನನ್ನ ಕೆಲ್ಸವನ್ನ ತಾನೇ ಮಾಡುತ್ತಿದ್ದ ನನ್ನ ಅಪ್ಪ, ಹೀಗೇ ಇರಬೇಕು, ಹೀಗೇ ಮಾಡಬೇಕು, ಹಾಗೇ ಬದುಕಬೇಕು, ಹಾಗೇ ವರ್ತಿಸಬೇಕು, ಅದೇ ಕೆಲಸವನ್ನ ಮಾಡಬೇಕು, ಅದೇ ಜಾಗದಲ್ಲಿ ಇರಬೇಕು, ಇಂಥದ್ದೇ ರೀತಿಯಲ್ಲಿ ಬಟ್ಟೆ ತೊಡಬೇಕು, ದಾಡಿ ಬಿಡಬಾರದು ಎಂದೆಲ್ಲಾ ನನ್ನನ್ನು ನಿಯಂತ್ರಿಸುತ್ತಿದ್ದ, ಯಾವುದೋ ಒಂದು ಕಂಪನಿಯಲ್ಲಿ ಇನ್ನೂ ದುಡಿಯುತ್ತಿದ್ದ ನನ್ನ ಅಪ್ಪನೆಂಬುವನ ಬಗ್ಗೆ ನಾನು ಅಪರೂಪಕ್ಕೊಮ್ಮೆ ಯೋಚಿಸುತ್ತಿದ್ದುದುಂಟು. ಅಲ್ಲ, ಇಷ್ಟೆಲ್ಲಾ ಹೇಳ್ತಾರಲ್ಲಾ, ಇವರಿಗೂ ಒಂದು ಬಾಲ್ಯ, ಯೌವ್ವನ ಇದ್ದಿರಬಹುದೇ? ಇದ್ದಿದ್ದಲ್ಲಿ ಇವರು ಹೇಗೆ ಬದುಕಿರಬಹುದು ಎಂದು ಸುಮ್ಮನೆ ಅವರ ಲಕ್ಷಾಂತರ ಬುದ್ದಿವಾದಗಳ ಆಧಾರದ ಮೇಲೆ ಅವರ ನನ್ನ ವಯಸ್ಸನ್ನು ಲೆಕ್ಕಾಚಾರ ಮಾಡಿದೆ.



ರಾತ್ರಿ ಒಂಬತ್ತಕ್ಕೆ ಗಂಟೆ ಢಣ್ಣನೆ ಹೊಡೆದುಕೊಂಡದ್ದೇ ಹೋಗಿ ಮಲಗಿಬಿಡುವರು. ಬೆಳಗ್ಗೆ ನಾಲಕ್ಕು ಗಂಟೆಗೆ ಎದ್ದು ಸ್ನಾನಾದಿ ಮುಗಿಸಿ ಪುಸ್ತಕ ಹಿಡಿದು ಕೂರುವರು. ನಂತರ ಸಮಯಕ್ಕೆ ಸರಿಯಾಗಿ ತಿಂಡಿ ತಿಂದು ಸ್ಕೂಲಿಗೆ ಶಿಸ್ತಾಗಿ ಹೊರಡುವರು. ತರಗತಿಗಳಲ್ಲಿ ಅತ್ತ ಇತ್ತ ತಿರುಗುವುದೇ ಇಲ್ಲ. ಮೊದಲ ಸಾಲಿನಲ್ಲಿ ಕುಳಿತು ಗುರುಗಳು ಹೇಳಿದ್ದನ್ನ ಚಾಚೂ ತಪ್ಪದೇ ಕಣ್ಣ ರೆಪ್ಪೆಗಳನ್ನು ಪಿಳುಕಿಸದೇನೇ ಎಲ್ಲವನ್ನು ಮನನ ಮಾಡಿಕೊಂಡು, ಒಂದು ಘಂಟೆಯ ಆಟದ ಸಮಯವನ್ನ ಮಾತ್ರ ಆಟಕ್ಕೆ ಮೀಸಲಿಟ್ಟು, ಸ್ನೇಹಿತರೊಂದಿಗೆ ಮಿತವಾಗಿ ಮಾತನಾಡಿ ಮನೆಗೆ ಮರಳುವರು. ಲೆಕ್ಕಾಚಾರದ ಪ್ರಕಾರ ತಿಂಡಿ ತೀರ್ಥ ಇಳಿಸಿ, ಕೊಂಚ ಸಮಯ ಟಿವಿ ಅಥವಾ ಸುತ್ತ ಮುತ್ತಲ ಸ್ನೇಹಿತರೊಂದಿಗೆ ಆಟವಾಡಿ. ವಾಚ್ ನೋಡಿಕೊಂಡು ಮತ್ತೆ ತಾವೇ, ಅವರ ಅಪ್ಪ ಅಮ್ಮನಿಂದ ಹೇಳಿಸಿಕೊಳ್ಳದೆಯೇ ಮನೆಗೆ ಮರಳಿ, ಕೈಕಾಲು ಮುಖ ತೊಳೆದು ಪುಸ್ತಕ ಹಿಡಿದು ಹೋಮ್ ವರ್ಕುಗಳು ಮುಗಿಸಿ, ಎಲ್ಲ ಅಂದಿನ ಪಾಠಗಳನ್ನು ಮತ್ತೊಮ್ಮೆ ಓದಿ ಮಲಗಿಬಿಡುವರು. ಹೀಗೆ ಪ್ರತಿದಿನದ ಯಾಂತ್ರಿಕ ಶ್ರಮದ ಫಲವಾಗಿ ಸ್ಕೂಲಿನಲ್ಲಿ ಪ್ರತಿ ಬಾರಿಯೂ ಪ್ರಥಮ ಶ್ರೇಣಿ ಪಡೆದು ಗುರು ಹಿರಿಯರ ಅಚ್ಚುಮೆಚ್ಚಿನ ಹುಡುಗನಾಗುವರು. ಕಾಲೇಜಂತೂ ತಲೆ ಎತ್ತದೇ ಹೋಗಿ, ತಲೆ ಬಗ್ಗಿಸಿಕೊಂಡೇ ಮನೆಗೆ ಮರಳಿ, ಉಪನ್ಯಾಸಕರು ಹೇಳಿದ ಎಲ್ಲ ಪುಸ್ತಕಗಳನ್ನೂ ಚಾಚೂ ತಪ್ಪದೇ ಪ್ರತಿದಿನ ಓದಿ ಅರ್ಥವಾಗದ್ದನ್ನು ಚರ್ಚಿಸಿ ತಿಳಿದುಕೊಂಡು, ಅಪರೂಪಕ್ಕೊಮ್ಮೆ ಗೆಳೆಯರೊಂದಿಗೆ ಸಿನಿಮಾ, ಟ್ರಿಪ್ಪೆಂದು ಕಳೆದು, ಒಂದು ದುರಭ್ಯಾಸಗಳಿಲ್ಲದೇ ಲೈಬ್ರೇರಿ, ಕಾಲೇಜು, ಮನೆ ಅಷ್ಟರಲ್ಲೇ ಕಳೆದು ಕಾಲೇಜು ಕೂಡ ದಬ್ಬಾಕಿಬಿಡುವರು. ಅಲ್ಲೂ ಚಿನ್ನದ ಪದಕ, ಬೆಸ್ಟ್ ಸ್ಟೂಡೆಂಟ್ ಪದಕಗಳನ್ನು ಗಳಿಸಿ ಮಾದರಿ ವಿದ್ಯಾರ್ಥಿ ಎನಿಸಿಕೊಳ್ಳುವರು. ಅಕಸ್ಮಾತ್ ಯಾವುದಾದರೂ ಹುಡುಗಿ ಬಂದು ಇವರ ಸನ್ನಡತೆಯನ್ನು ಕಂಡು ಬೆಕ್ಕಸ ಬೆರಗಾಗಿ(!) ಆಕರ್ಷಿತಳಾಗಿ ಇವರನ್ನು ಪ್ರೊಪೋಸ್ ಮಾಡುವ ದುಸ್ಸಾಹಸಕ್ಕೆ ಕೈಹಚ್ಚಿದಳೆಂದರೆ, ಅವಳನ್ನು ನೇರವಾಗಿ ಮನೆಗೆ ಕರೆಯಿಸಿ ಹಾ ಈಗ ಹೇಳಿ ಎಂದು ಅವರ ಅಪ್ಪ ಅಮ್ಮನ ಮುಂದೆ ಅವಳ ಮನಸ್ಸಿನ ಭಾವನೆಯನ್ನ ಹಂಚಿಕೊಳ್ಳಲು ಕೇಳಿದ್ದಿರಬೇಕು. ಹಾಗಾಗಿ ಆ ಹುಡುಗಿ ಯಾವುದೋ ನೋಟ್ಸ್ ಬೇಕೆಂದೋ, ಬೇರೇನೋ ಹೇಳಿ ಹೋಗಿರಬಹುದು. ಹಾಗಾಗಿ ನಮ್ಮಪ್ಪನ ಮೊದಲ ಪ್ರೇಮದ ದೋಣಿ ಕಟ್ಟುವ ಮುನ್ನವೇ ಮುಳುಗಿ ಹೋಗಿರಬಹುದು. ನಂತರ ಒಳ್ಳೆಯ ಚಿನ್ನದ ಪದಕದ ಫಲಿತಾಂಶವಿರುವವರಿಗೆ ಅದೆಷ್ಟೋ ಕಂಪನಿಗಳು ಮನೆಯ ಬಾಗಿಲಿಗೇ ಹುಡುಕಿಕೊಂಡು ಬಂದು ಕೆಲಸ ಕೊಟ್ಟಿರಬಹುದು. ಅದರಲ್ಲಿ ಯಾವುದು ಉತ್ತಮವಾದ ಸಂಬಳ ಮತ್ತು ಕೆಲಸ ಎಂದು ಅಳೆದು ನೋಡಿ ಉತ್ತಮವೆನಿಸಿದ ಕಂಪನಿಗೇ ಸೇರಿರಬಹುದು. ಕೆಲಸ, ಮನೆ, ವೃತ್ತಪತ್ರಿಕೆ, ಕಾಫಿ, ಅಪರೂಪಕ್ಕೆ ಹೊಸದಾಗಿ ಕೊಂಡ ಮೊಬೈಲ್ ಫೋನೆಂಬ ಜಂಗಮಗಂಟೆಯಲ್ಲಿ ಕಳೆದುಹೋದ ಯಾರೋ ಒಂದಿಬ್ಬರು ಸ್ನೇಹಿತರುಗಳು ಫೋನು ಮಾಡಿ ಕಂಪನಿಯ ಬಗ್ಗೆ, ಕೆಲಸದ ಬಗ್ಗೆ ವಿವರ ವಿನಿಮಯ ಮಾಡಿಕೊಳ್ಳುತ್ತಲೇ ಮದುವೆಗೆ ಆಮಂತ್ರಿಸಲು ಮನೆಗೆ ಬಂದುಬಿಡುವರು. ಅವರಿವರ ಲಗ್ನ ಪತ್ರಿಕೆಗಳನ್ನು ನೋಡಿದ ಅಪ್ಪನ ತಂದೆ ತಾಯಿಗಳು ಒಳ್ಳೇ ಕೆಲಸ ಇದೆ, ಚಿನ್ನದಂತಹ ಗುಣ, ಯಾಕೆ ಮದುವೆ ಮಾಡಿಬಿಡಬಾರದೆಂದು ಯೋಚಿಸಿದ್ದೇ, ತಂದು ಒಂದು ಮೂಗುದಾರ ಹಾಕಿಯೇ ಬಿಡುವರು.

ತನ್ನ ಟೈಂ ಟೇಬಲ್ ಪ್ರಕಾರ ಒಂಬತ್ತು ಘಂಟೆಯ ಕೆಲಸ, ನಂತರ ಪುಸ್ತಕ, ಪೇಪರು, ಟಿವಿ, ಅದು ಇದು ಎಂದು ಕಾಲ ಕಳೆಯುತ್ತಿದ್ದ ಅಪ್ಪ ಹೊಸದಾಗಿ ಮದುವೆಯಾಗಿ ಅಂತೂ ತನ್ನ ಟೈಮೆಂಬ ಟೇಬಲ್ಲನ್ನ ಬೆಡ್ರೂಮಿನಲ್ಲಿರಿಸಿ, ನಂತರ ಅಡುಗೆ ಮನೆಯಲ್ಲಿರಿಸಿ, ನಂತರ ನಡುಮನೆಗೆ ತಂದಿರಿಸುವಷ್ಟರಲ್ಲಿ ನಾನೆಂಬ ನಾನು ಹುಟ್ಟಿ ನಂತರದ ಉಪದೇಶಾಮೃತಂ ನಿತ್ಯಂ ಕಥೆ ಶುರುವಾಗಿರಬಹುದೆಂದು ಸ್ಪಷ್ಟವಾಗಿ ಗೊತ್ತಾಗಿಹೋಗಿತ್ತು. ಇದೊಳ್ಳೇ ಪಕ್ಕಾ ಕಲಾತ್ಮಕ ಸಿನಿಮಾ ನೋಡಿದ ಹಾಗಾಯ್ತು ನನಗೆ. ಹೆಂಗೆ ಸಾರ್ ಬದುಕುತ್ತಾರೆ ಈ ನಮ್ಮ ಅಪ್ಪಂದರೂ? ಅವರನ್ನೇ ನೇರವಾಗಿ ಕೇಳಿಯೂಬಿಟ್ಟೆ ಒಮ್ಮೆ. ಅಪ್ಪ ನೀವು ಲವ್ ಏನಾದ್ರೂ ಮಾಡಿದ್ರಾ ಅಂತ. ಲವ್ವಾ? ಯಾಕೋ? ಅಂಥವೆಲ್ಲಾ ಮಾಡಿಲ್ಲ ಅಂದ್ರೂ. ಮತ್ತೆ ನಾನು ಹೆಂಗಪ್ಪಾ ಹುಟ್ಟಿದೆ ಅಂಥ ಕೇಳಿದ್ದಕ್ಕೆ. ಇವತ್ಯಾಕೋ ತಿಂದಿದ್ದು ಜಾಸ್ತಿಯಾಗಿದೆ ಕಣೋ ನಿನಗೆ ಅನ್ನೋದಕ್ಕೂ, ಅಮ್ಮ ಅಡುಗೆ ರೆಡಿ ಇದೆ ಬನ್ನಿ ಅಂತ ಕರೆಯೋದಕ್ಕೂ ಸರಿಹೋಯ್ತು.



ನಾನಂತೂ ಸ್ಕೂಲಿನಲ್ಲಿದ್ದಾಗ ಸಿಕ್ಕಿಬೀಳದ ಹಾಗೆ ತರಲೆಗಳನ್ನು ಮಾಡುತ್ತಿದ್ದೆ. ಮನೆವರೆಗೂ ಕಂಪ್ಲೇಂಟುಗಳು ತಲುಪದ ಹಾಗೆ ವ್ಯವಸ್ಥೆಗಳನ್ನೂ ಮಾಡಿಕೊಂಡಿದ್ದೆ. ಕಾಲೇಜಿನಲ್ಲೇ ಸಿಗರೇಟು ನುಂಗಿ ಹೊಗೆ ಬಿಡುತ್ತಿದ್ದೆ ಮಿಂಟಿ ತಿಂದು ಮನೆಗೆ ಹೋಗುತ್ತಿದ್ದೆ. ಮನೆಯಿಂದ ದೂರ ಎಲ್ಲಾದರೂ ಹೋಗಿದ್ದಾಗ ಪೆಗ್ ಕೂಡ ಸುರಿದುಕೊಳ್ಳುತ್ತಿದ್ದೆ. ಎರಡು ಬಾರಿ ಲವ್ ಅಟ್ ಫರ್ಟ್ ಸೈಟ್ ಆಗಿ ಸೋತಿದ್ದೆ. ಮೂರನೆಯ ಬಾರಿ ಹಾಕಿದ್ದ ಕಾಳು ಹಕ್ಕಿ ತಿಂದು ಅಂತೂ ಕದ್ದು ಮುಚ್ಚಿ ಓಡಾಡಿಕೊಂಡು, ಸಿನಿಮಾ ನೋಡಿಕೊಂಡು, ತರಗತಿಗಳು ಬಂಕ್ ಮಾಡಿಕೊಂಡು, ಊರೂರು ಸುತ್ತುತ್ತಿದ್ದೆವು. ಎಲೆಕ್ಟ್ರಾನಿಕ್ಸ್ ಪಠ್ಯ ಪುಸ್ತಕಕ್ಕೆ ತೆಗೆದುಕೊಂಡ ಕಾಸು ಕೆ ಎಫ್ ಸಿ ನಲ್ಲಿ ಗ್ರಿಲ್ ಮಾಡಿ ಹೊಟ್ಟೆಗೆ ಹಾಕಿಕೊಳ್ಳುತ್ತಿದ್ದೆವು. ಆದರೆ ಯಾವುದನ್ನೂ ಮನೆಯಲ್ಲಿ ಅಪ್ಪನ ಎದುರಿಗೇ ಆಗಲಿ ಅಷ್ಟು ಮುದ್ದು ಮಾಡುವ ಅಮ್ಮನಿಗೇ ಆಗಲಿ ಹೇಳುವ ಧೈರ್ಯ ಮಾಡಿರಲಿಲ್ಲ. ಆ ಅಪರಾಧಿ ಭಾವನೆ ಒಳಗೆಲ್ಲೋ ಒಂದು ಕಡೆ ಖಂಡಿತಾ ಕಾಡುತ್ತಿತ್ತು. ಅದರಿಂದಾಗಿಯೇ ಅಪ್ಪನ ಬಗ್ಗೆ ಅಮ್ಮನ ಬಗ್ಗೆ, ಅವರ ಹಿಂದಿನ ಜೀವನದ ಬಗ್ಗೆ, ಚಿಂತಿಸಲು ಪ್ರೇರೇಪಿಸುತ್ತಿತ್ತು. ಯಾವುದೇ ದುರಭ್ಯಾಸಗಳ ಬಗ್ಗೆ ಅಪ್ಪನಿಗೆ ಗೊತ್ತಾದರೆ ಖಂಡಿತಾ ನನ್ನ ಬಗ್ಗೆ ಅಸಹ್ಯ ಪಟ್ಟುಕೊಂಡಾರು. ಅವನ್ನೆಲ್ಲಾ ಅಪ್ಪನಿಗೆ ಗೊತ್ತಾಗದ ಹಾಗೆಯೇ ಬಿಟ್ಟೂ ಸಹ ಬಿಡಬಹುದೇನೋ. ಆದರೆ ಪ್ರೀತಿ! ಅಂತೂ ಅಪ್ಪನ ನಿರೀಕ್ಷೆಯಷ್ಟಲ್ಲದಿದ್ದರೂ ತಕ್ಕ ಮಟ್ಟಿಗೆ ಕಳಪೆಯಲ್ಲದ (ನನ್ನ ಮಟ್ಟಿಗೆ) ಅಂಕಗಳನ್ನು ಪಡೆದು ಒಂದೇ ಹೊಡೆತಕ್ಕೆ ತೇರ್ಗಡೆಯಾಗಿ ಕಾಲೇಜಿನಿಂದ ಹೊರಗೆ ಬಂದಾಯ್ತು. ಕೆಲಸ ಕೊಡುವ ಹೆಸರಿನಲ್ಲಿ ಕೆಲಸ ತೆಗೆದುಕೊಳ್ಳುವ ಎಷ್ಟೋ ಬುದ್ಧಿವಂತರುಗಳಿಗೆ ನನ್ನಂತಹ ದಡ್ಡರುಗಳೇ ಬೇಕಾಗಿರುತ್ತಾರೆ. ಅಂತೆಯೇ ನಾನೂ ಒಂದು ಕಡೆ ಸಿಕ್ಕಿಬಿದ್ದೆ. ಸಂಬಳ ಬರುತ್ತಿತ್ತು ಬೇಡವೆಂದು ತಡೆದಷ್ಟೂ ಅವಳನ್ನು ಅಲ್ಲಿ ಇಲ್ಲಿ ಕರೆದುಕೊಂಡು ಹೋಗಿ ತಿನ್ನಿಸಿ, ಸುಖಾ ಸುಮ್ಮನೆ ಏನಾದರೂ ಕೊಡಿಸಿ ಖರ್ಚು ಮಾಡದಿದ್ದರೆ ಕೈಯಲ್ಲಿನ ಕೆರೆತ ಹೋಗುವುದೇ ಇಲ್ಲ. ಅಂತೂ ನನ್ನಲ್ಲಿಯ ಅಪರಾಧೀ ಭಾವನೆ ಹೋಗುವುದಿರಲಿ, ಜಾಸ್ತಿಯಾಗುತ್ತಲೇ ಹೋಗುತ್ತಿತ್ತು. ಇನ್ನು ಪ್ರೇಮ ಪ್ರಕರಣದ ಪುಟ ಬೇರೆ ತೆರೆದಿಡಬೇಕಿತ್ತು. ಏನು ಕಾದಿದೆಯೋ, ಜಾತಿ, ಧರ್ಮ, ವೇಷ, ಮಣ್ಣು ಮಸಿ ಎಲ್ಲದಕ್ಕೂ ತಕರಾರುಗಳು ಎರಡೂ ಕಡೆಯಿಂದ ಏಳಲೇ ಬೇಕಿತ್ತು, ಅದು ನಮಗೆ ಗೊತ್ತಿತ್ತು ಆದರೂ ಪ್ರೀತಿ ನಿರಾತಂಕವಾಗಿ ಮುಂದುವರೆದಿತ್ತು. ಇಂತಿರ್ಪ ಸಮಯದಲ್ಲೇ ಅವಳ ಮನೆಯಲ್ಲಿ ಗಂಡು ಹುಡುಕುವ ಯೋಜನೆ ಶುರುವಾಗಿ ಇನ್ನು ಹೆಚ್ಚು ಕಾಲಾವಕಾಶವಿಲ್ಲವೆಂದು ಮನೆಯಲ್ಲಿ ವಿಷಯ ಪ್ರಸ್ತಾಪಿಸಿಯೇ ಬಿಡುವುದೆಂದು ತೀರ್ಮಾನಿಸಿ ಕೈಕಾಲು ನಡುಗಿಸಿಕೊಂಡು, ಎದೆ ಬಡಿತ ಹೆಚ್ಚಿಸಿಕೊಂಡು ಮನೆಗೆ ಹೊರಟೆ.

ಅದೇ ಮಾಮೂಲಿ ಡಾಂ ಡೂಂ ಡಸ್ ಪುಸ್ ಕೊಯ್ ಕೊಟಾರ್ ಗಳು ಶುರುವಾದವು. ಏನು ಮಾಡುವುದೋ ಗೊತ್ತಿರಲಿಲ್ಲ. ಇವಳನ್ನು ನಡು ನೀರಿನಲ್ಲಿ ಬಿಟ್ಟುಬಿಡುವ ಸ್ಥಿತಿಯಲ್ಲಿ ನಾನು ಅಥವಾ ಅವಳು ಉಳಿದಿರಲಿಲ್ಲ. ಅಪ್ಪ ಅಮ್ಮನನ್ನು ಎದುರಿಸಿ ಮದುವೆಯಾಗೋಣವೆನ್ನಲು ಅವರು ನಮ್ಮನ್ನು ಆ ಪರಿಸ್ಥಿತಿಗೆ ತಳ್ಳಿರಲಿಲ್ಲ. ಆರ್ ಯಾ ಪಾರ್ ಎಂದು ಬದುಕುತ್ತಿರುವವರದೇ ಸುಖವಾದ ಜೀವನವೆಂದು ನನಗೆ ಯಾವಾಗಲೂ ಅನಿಸುತ್ತಿತ್ತು. ಮಧ್ಯ ಇರುತ್ತಾರಲ್ಲಾ ನನ್ನಂತಹ ಆರಕ್ಕೆ ಏರದ ಮೂರಕ್ಕೆ ಇಳಿಯದ ಮಧ್ಯಮಮತಿಗಳು ನಮ್ಮ ಸಮಸ್ಯೆಯೇ ಇಷ್ಟು ಅತ್ತ ಬಗೆ ಹರಿಯುವುದಿಲ್ಲ, ಇತ್ತ ಬಗೆಹರಿಯದೆಯೂ ಇರುವುದಿಲ್ಲ. ನನ್ನಪ್ಪನಂತಹ ಅಪ್ಪನಿಗೆ ನನ್ನಂತಹ ಮಗನಿರಬಾರದಿತ್ತೆಂದು ಖಿನ್ನನಾಗಿಹೋಗಿದ್ದೆ. ಎಷ್ಟೆಲ್ಲಾ ನನ್ನ ಬಗ್ಗೆ ಜಾಗ್ರತೆವಹಿಸಿದ ಅಪ್ಪನನ್ನು ಏಕ್ದಂ ಧಿಕ್ಕರಿಸಿ ಹೋಗಿ ಮದುವೆಯಗುವುದು ಸರಿಯಲ್ಲ. ಅದಕ್ಕೆ ಅವಳು ಒಪ್ಪುವುದೂ ಇಲ್ಲ. ಒಪ್ಪಿಸಿ ಮದುವೆಯಾಗುವುದು ಮರೀಚಿಕೆಯಂತಹ ವಿಷಯ. ಹೀಗೇ ತಲೆ ಮೇಲೆ ಕೈ ಹೊತ್ತು ತಿರುಗಾಡುತ್ತಿರಲು, ಅಪ್ಪನ ಸ್ನೇಹಿತರೊಬ್ಬರು ದಾರಿಮಧ್ಯದಲ್ಲಿ ಸಿಕ್ಕು ಬ್ಲೇಡೊಂದನ್ನು ತೆಗೆದು ಬಾಯಲ್ಲಿ ಹಾಕಿಕೊಂಡರು. ಇನ್ನು ಎಷ್ಟು ಕುಯ್ಯುವರೋ ಎಂದು ಹತ್ತಿ, ಬ್ಯಾಂಡೇಜುಗಳು, ಆಯಿಂಟ್ಮೆಂಟುಗಳು ತೆಗೆದುಕೊಂಡು ದಾಳಿಗೆ ಸನ್ನದ್ಧನಾದೆ. ನೇರವಾಗಿ ನನ್ನ ಪ್ರೀತಿಯ ವಿಷಯ ಎತ್ತಿದರು. ಓಹೋ ನಮ್ಮಪ್ಪ ಆಗಲೇ ನನ್ನ ಮಾನ ಹರಾಜಾಕುತ್ತಿದ್ದಾರೆಂದು ಮನದಲ್ಲೇ ಬ್ಲಡಿ ಬಗರ್ ಫಾದರ್ ಎಂದು ಬಯ್ದುಕೊಂಡೆ. ನನ್ನ ಸಪ್ಪೆ ಮೋರೆಯನ್ನು ನೋಡಿದ್ದೇ ಹೆಗಲ ಮೇಲೆ ಕೈಹಾಕಿ ನಡೆಯುತ್ತಾ ಕರೆದುಕೊಂಡು ಹೋದರು. ನಿಮ್ಮಪ್ಪ ಒಪ್ಲಿಲ್ವಾ? ಒಪ್ತಾನೆ ಬಿಡು, ಸ್ವಲ್ಪ ಲೇಟಾಗಾದರೂ ಎಂದು ಪೊಳ್ಳು ಧೈರ್ಯ ತುಂಬುತ್ತಿದ್ದಾರೆಂದುಕೊಂಡೆ. ಕಥೆ ನಿಧಾನಕ್ಕೆ ವಿಚಿತ್ರ ಟ್ವಿಸ್ಟ್ ತೆಗೆದುಕೊಂಡಿತು. ನಮ್ಮಪ್ಪನ ಕಥೆ! ನಿಮ್ಮಪ್ಪ ಆಡಿದ್ ಆಟಗಳು ನೋಡಬೇಕಿತ್ತು ನೀನು. ನಿನ್ನ ಮುಂದೆ ಹೇಳ್ತಿದ್ದೀನಿ ಅಂತ ದುರುಪಯೋಗ ಪಡಿಸಿಕೊಳ್ಳಬೇಡ. ಸ್ಕೂಲ್ ಸಮಯದಲ್ಲೇ ಮಹಾನ್ ತರಲೆ ನಿಮ್ಮಪ್ಪ. ಸಿಕ್ಕ ಸಿಕ್ಕವರ ಜೊತೆ ಜಗಳ ಆಡೋದು, ಮೂತಿ ಮುಸುಡಿ ನೋಡದಂಗೆ ಹೊಡೆಯೋದು, ನಿಮ್ಮಗಳ ತರಹ ಬಡಕಲಾಗಿರಲಿಲ್ಲ, ಕಟ್ಟುಮಸ್ತು ಮೂರು ಆಳು ಸೇರಿದರೆ ಇವನೊಬ್ಬ. ಇವನ ಕಾಟ ತಾಳಲಾರದೆ ನಿಮ್ಮ ತಾತನಿಗೆ ಪ್ರತಿನಿತ್ಯ ಒಂದು ಹೊಸ ಕಂಪ್ಲೈಂಟು ಬರುತ್ತಿತ್ತು. ಎಷ್ಟು ಬಡಿದ್ರೂ ಇಲ್ಲ, ಹಾಸ್ಟೆಲ್ಲು ಸೇರಿಸಿದರೂ ಇಲ್ಲ, ಹಠಮಾರಿ ಬೇರೇ. ಇಂಥದ್ದು ಮಾಡಬೇಡ ಅಂದ್ರೆ ಅದನ್ನೇ ಮಾಡೋವ್ನು. ತನಗೆ ಬೇಕೆಂದಿದ್ದು ಬೇಕು. ಕಾಲೇಜು ಸೇರಿದಮೇಲಂತೂ ಯಾಕ್ ಕೇಳ್ತೀಯ ಅವನ ಲೀಲೆಗಳನ್ನ. ಸಿನಿಮಾ ಹುಚ್ಚು, ಯಾವ ಹೊಸ ಪಿಕ್ಚರಿನಲ್ಲಿ ಹೊಸ ರೀತಯ ಬಟ್ಟೆ ಬರಲಿ ಇವನಿಗೆ ಅದು ಬೇಕಿತ್ತು, ಹಿಪ್ಪಿ ಮಾಡಿಕೊಂಡು ಓಡಾಡ್ತಿರ್ತಿದ್ದ. ಬಂಗಾರದ ಮನುಷ್ಯ ಸಿನಿಮಾ ಬಿಡುಗಡೆಯಾದಾಗ ನಾಲಕ್ಕು ದಿನ ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ್ದಾನೆ, ಮನೆ ಇಲ್ಲ ಮಠ ಇಲ್ಲ ಅದೆಲ್ಲಿ ಇದ್ದನೋ ಗೊತ್ತಿಲ್ಲ. ಬೆಂಗಳೂರಿಗೆ ಬಂದು ಫುಟ್ಪಾತಿನಲ್ಲಿ ಬಿದ್ಕೊಂಡು ಮೂರು ಮೂರು ಸಿನಿಮಾಗಳು ನೋಡ್ಕೊಂಡು ಮನೆನಲ್ಲಿ ಬುರುಡೆ ಬಿಟ್ಕೊಂಡು ತಿರುಗಾಡ್ತಿದ್ದ. ಒಂದೊಂದು ಸಲ ಮನೆನಲ್ಲಿ ಹೇಳದೇ ಕೇಳದೇ ಹೋದವನು ವಾರ ಬಿಟ್ಟು ಮನೆಗೆ ಬರೋದು ಎಲ್ಲೋ ಹೋಗಿದ್ದೆ ಅಂತ ಎಲ್ಲಾ ಸೇರಿ ಬಾರಿಸಿ ಕೇಳೀದ್ರೆ, ಊಟಿ ಹೋಗಿದ್ದೆ ಅನ್ನೋವ್ನು. ಒಂದು ಪರೀಕ್ಷೆನಲ್ಲಿ ಸ್ವಂತವಾಗಿ ಬರೆದು ಪಾಸಾಗಿದ್ರೆ ಕೇಳು. ಬುಕ್ ಹಿಡ್ಕೊಂಡು ಕಾಪಿ ಹೊಡೆಯೋನು ಮಾರಾಯ, ಅದೆಲ್ಲಿತ್ತೋ ಅಷ್ಟು ಧೈರ್ಯ ಅವನಿಗೆ, ಆದರೆ ಒಮ್ಮೆ ಕೂಡ ಸಿಕ್ಕಿಬೀಳ್ತಿರಲಿಲ್ಲ. ಎಲ್ಲಾ ಹುಡುಗಿಯರು ಇವನ ಹಿಂದೆ, ಇವನು ಮಾತ್ರ ನಮ್ಮ ಕ್ಲಾಸ್ ಸುಂದರಿ ಹಿಂದೆ. ನಿಮ್ಮಪ್ಪನ್ನ ಸಶೀ ಸಶೀ ಅಂತ ಕರೀತಿತ್ತು ಇಡೀ ಕಾಲೇಜು ಎಂದರು. ಅದೇನು ಸಶೀ ಎಂದರೆ, ಸಂತೋಷ, ಶೀಲ ಮಿಕ್ಸ್ ಮಾಡಿ ಕರೀತಿದ್ವು. ಅವಳಿಗೊಂದು ಕಾಟ ಕೊಟ್ಟಾ ಕೊಟ್ಟಾ ಕೊನೆಗೂ ಅವಳೂ ಅವಳ ಹಠ ಬಿಡಲಿಲ್ಲ, ಒಪ್ಪಲಿಲ್ಲ. ಇವನೂ ಅವಳು ಮದುವೆ ಹಿಂದಿನ ದಿನಾನೂ ಅವರ ಮನೆ ಮುಂದೆ ಕೂತು, ಜಗಳ ಮಾಡಿ, ರಂಪಾಟ ಮಾಡಿ, ಕೊನೆಗೆ ಅವಳ ಮದುವೆ ಆದ ಮೇಲೆ ಕುಡಿಯೋದು ಕಲಿತು, ಸಿಕ್ಕ ಸಿಕ್ಕಲ್ಲಿ ಬಿದ್ಕೊಂಡು, ನಿಮ್ಮ ತಾತನಿಗೆ ದೊಡ್ಡ ತಲೆ ನೋವು ಮಾಡಿಟ್ಟಿದ್ದ. ನಿಮ್ಮ ತಾತನಿಗೆ ಹುಶಾರು ತಪ್ಪಿದ ಮೇಲೆ ಅದೇನಾಯ್ತೋ ಆಸಾಮಿಗೆ ಎಲ್ಲಾ ಬಿಟ್ಟು, ಕಾಲೇಜು ಮುಗಿಸಿ ಕೆಲಸಕ್ಕೆ ಸೇರಿದ ಈಗ ನೋಡಿದ್ಯಲ್ಲಾ ದೂರವಾಸ ಮುನಿ ಹಾಗಿದ್ದಾನೆ. ಎಂದು ನಕ್ಕರು. ಯಾಕೋ ಅಪ್ಪ ಯಾವತ್ತಿಗಿಂತ ತುಂಬಾನೇ ಹತ್ತಿರವಾಗ ಹತ್ತಿದರು. ಇವರುಗಳು ಜೀವನ ಮಾಡಿರೋದರ ಮುಂದೆ ನಾನೇನು ಮಾಡಿರೋದು ಅನ್ನಿಸೋಕೆ ಶುರುವಾಯ್ತು. ಈಗಲೂ ಸಹ ಎಂಥ ಅಪ್ಪನಿಗೆ ಎಂಥ ಮಗ ನಾನು ಎಂದೇ ಅನಿಸಿತು. ನೇರವಾಗಿ ಮನೆಗೆ ನಡೆದೆ. ಅಪ್ಪ ನಿಮ್ಮ ಸ್ನೇಹಿತ ಅದೇ ಬ್ಯಾಂಕಲ್ಲಿ ಕೆಲಸ ಮಾಡ್ತಾರಲ್ಲಾ ಅವರು ಸಿಕ್ಕಿದ್ರು ಅಂದೆ. ಸರಿ ಎಂದಷ್ಟೇ ಅಂದು ಟಿವಿ ನೋಡ್ತಾನೇ ಇದ್ರು. ಮೆಲ್ಲಗೆ ಸಶೀ ವಿಷಯ ಎಲ್ಲಾ ಹೇಳಿದ್ರು ಅಂದೆ. ಮುಖದ ಬಣ್ಣವೇ ಬದಲಾಗೋಯ್ತು. ಮಾತು ಬರಲ್ಲ ಹೊರಗೆ ಅಂತ ಗೊತ್ತಿತ್ತು. ರಾತ್ರಿ ತುಂಬಾ ತಡವಾಗಿ ಮನೆಗೆ ಬಂದ್ರು. ಅದಾಗಿ ಮೂರು ತಿಂಗಳಿಗೆ ನನ್ನ ಮದುವೆಗೆ ಅಪ್ಪನೇ ಮೊದಲ ಸಾಕ್ಷಿಯ ಸಹಿ ಹಾಕಿದ್ರು. 








+ನೀ.ಮ. ಹೇಮಂತ್

Saturday 16 June 2012

ನಿಮಗೆ ಬೇಕಾ….. ಪ್ರೀತಿ!




          ಯಾವನಾದರೂ ಇನ್ನು ಮುಂದೆ ಲವ್ ಆಗಿದ್ಯ ನಿನಗೆ ಅಂತ ಕೇಳಿದ್ರಿ ಅಂದ್ರೆ ಹಿಗ್ಗಾ ಮುಗ್ಗಾ ಒದೆ ತಿಂತೀರಾ ಹುಶಾರಾಗಿರಿ ಹೇಳಿದ್ದೀನಿ. ಲವ್ ಅಂತೇ ಲವ್ವು ಸುಡುಗಾಡು. ಬರೀ ಬೂಟಾಟಿಕೆ. ಲವ್ವು ಅಂದದ್ದೇ ಹದಿನೈದರಿಂದ ಇಪ್ಪತ್ತೈದು ವರ್ಷದ ಹುಡುಗ ಹುಡುಗಿಯ ಚಿತ್ರವನ್ನ ಮನದ ಮುಂದೆ ತಂದು ನಿಲ್ಲಿಸಿಕೊಂಡು, ಪಾರ್ಕು, ಥಿಯೇಟರು, ಕಾಫೀ ಡೇ, ರೆಸಾರ್ಟುಗಳಿಗೆಲ್ಲಾ ಹೋಗಿಬಂದುಬಿಡ್ತೀರಿ. ನಾಚಿಕೆ ಆಗಲ್ವೇನ್ರೀ ಯಾರಿಗೂ. ನಾನೂ ನಂಬಿದ್ದೆ ಪ್ರೀತಿ ಇನ್ನೂ ಉಳ್ಕೊಂಡಿದೆ ಅಂತ. ಆದರೆ ಎಲ್ಲಿ ಉಳ್ಕೊಂಡಿದೆ ಅಂತ ಹುಡುಕೋಕೆ ಹೊರಟಾಗಲೇ ಗೊತ್ತಾಗಿದ್ದು…….

ನನ್ನಲ್ಲಿ ಬೆಟ್ಟದಷ್ಟು ತುಂಬಿಕೊಂಡಿದ್ದ ಪ್ರೀತಿಯಲ್ಲಿ ಒಂದು ಚಮಚೆಯಷ್ಟನ್ನ ಅಂಗೈಯಲ್ಲಿ ಇಟ್ಟುಕೊಂಡು ಯಾರಿಗಾದರೂ ಒಬ್ಬರಿಗೆ ಪ್ರೀತಿ ಕೊಡೋಣೆಂದು ಹೊರಟೆ. ಯಾರಿಗೆ ಕೊಡಲೆಂದೇ ಪ್ರಶ್ನೆ. ಆರೆ ಯಾರಿಗಾದರೇನಂತೆ ಎಲ್ಲರೂ ಮನುಷ್ಯರೇ ತಾನೆ? ಇನ್ನೂ ನೋಡಿದರೆ ಪ್ರಾಣಿಗಳಿಗೂ ಸಹ ಕೊಡಬಹುದು ನಾನು. ಯಾರಾದರೇನಂತೇ ಒಂದು ಜೀವ ನನ್ನ ಪ್ರೀತಿ ಪಡೆದುಕೊಂಡರೆ ಸಾಕಿತ್ತು ನನಗೆ. ಸರಿ, ಯಾರಿಗೆ ಕೊಡಲಿ. ಈ ರಸ್ತೆಯ ಆ ಪಕ್ಕದಲ್ಲಿ ಯಾರೋ ಒಬ್ಬ ನಿಂತಿರುವನು. ಏನೋ ಗಲಿಬಿಲಿಗೊಂಡವನಂತೆ ಕಾಣುತ್ತಿರುವನು. ಅವನಿಗೂ ನನ್ನಂತೆಯೇ ಯಾರೂ ಪ್ರೀತಿ ಕೊಟ್ಟೇ ಇಲ್ಲವೇನೋ ಅದಕ್ಕೇ ನನ್ನಂತೆಯೇ ಚಿಂತೆಯಲ್ಲಿರುವನೆಂದು ಊಹಿಸಿಕೊಂಡು ನೇರ ಅವನ ಬಳಿಗೇ ಹೊರಟೆ. ಫೋನಿನಲ್ಲಿ ಯಾರ ಅಮ್ಮನನ್ನೋ, ಅಕ್ಕನನ್ನೋ ಕೆಟ್ಟದಾಗಿಯಾದರೂ ನೆನಪಿಸಿಕೊಳ್ಳುತ್ತಿದ್ದ. ಅವನು ಮಾತು ಮುಗಿಸಲೆಂದು ನನ್ನ ಮುಷ್ಟಿ ತುಂಬು ಪ್ರೀತಿಯನ್ನು ಹಿಡಿದೇ ಕಾದೆ. ಆತ ಯಾರೋ ತನ್ನ ಸ್ನೇಹಿತನಿರಬೇಕು ಅವನ ಸಂಸಾರ, ವಂಶವನ್ನೆಲ್ಲಾ ನೆನಪಿಸಿಕೊಳ್ಳುತ್ತಲೇ ಇದ್ದ. ಅಕಸ್ಮಾತಾಗಿ ನನ್ನ ಕಡೆ ತಿರುಗಿದೊಡನೆಯೇ ಸಾರ್ ನನ್ನ ಪ್ರೀತಿ ತೊಗೊಳ್ಳಿ ಸಾರ್ ಎಂದು ನನ್ನ ಕೈ ಮುಂದೆ ಹಿಡಿದೆ. ಆತ ಮಾತನಾಡುವುದನ್ನ ನಿಲ್ಲಿಸಿ ನನ್ನ ಕೈ ಕುತೂಹಲದಿಂದ ನೋಡಿದ. ಮುಷ್ಟಿ ಮುಚ್ಚಿದ್ದರಿಂದ ಕಾಣಲಿಲ್ಲವೋ ಏನೋ. ಸಾರ್ ನನ್ನ ಪ್ರೀತಿ ಸಾರ್, ತೊಗೊಳ್ಳಿ ಎಂದೆ. ಮತ್ತೆ ತನ್ನ ಮಾತುಕತೆಗಳಲ್ಲಿ ಮಗ್ನನಾದ. ಮತ್ತೆ ಕಾದೆ. ಇನ್ನೂ ಅವನ ಬೆನ್ನಿಗೇ ನಿಂತಿರುವುದನ್ನ ಗಮನಿಸಿ ಮತ್ತೆ ನನ್ನೆಡೆಗೆ ತಿರುಗಿ ಏನು ಎಂದ. ಸಾರ್ ನನ್ನ ಪ್ರೀತಿ ಸಾರ್, ತೊಗೊಳ್ಳಿ ಎಂದೆ ದೈನ್ಯದಿಂದ. ಏನು! ನಿಂಗೇನ್ ತಲೆ ಕೆಟ್ಟಿದೆಯೇನಯ್ಯಾ ಎಂದುಬಿಟ್ಟ. ಸಾರ್, ಅಲ್ಲಾ ಸಾರ್ ನನ್ನ ಪ್ರೀತಿ ತೊಗೊಳ್ಳಿ ಸಾರ್ ಎಂದೆ ಮತ್ತೆ ವಿಚಲಿತನಾಗದೆಯೇ. ಯೋ ಹೋಗಯ್ಯಾ ಸುಮ್ಮನೆ ತಲೆ ತಿನ್ನಬೇಡ ನೀನು, ನನ್ನದೇ ನನಗೆ ಹರಿದುಹೋಗ್ತಾ ಇದೆ ಇವನು ಬೇರೆ. ಹಾ ಹೇಳೋ ಬೋ..ಮಗನೆ ಎಂದು ಮತ್ತೆ ತನ್ನ ಫೋನಿನೊಂದಿಗೆ ಮಾತು ಮುಂದುವರೆಸಿದ. ಓಹೋ ಈತನಿಗೆ ನನ್ನ ಪ್ರೀತಿ ಬೇಡವಾಯಿತು ಸರಿ, ಇನ್ನಾರಿಗಾದರೂ ಕೊಟ್ಟರಾಯಿತೆಂದು ಹೊರಟೆ ಅಲ್ಲಿಂದ. ಆತನ ಬಳಿ ಪಾಪ ನನ್ನ ಪ್ರೀತಿ ಸ್ವೀಕರಿಸಲು ಸಮಯವಿರಲಿಲ್ಲವೆನಿಸುತ್ತೆ. ಇನ್ನಾರಾದರೂ ಸಮಯವಿದ್ದವರ ಬಳಿ ಹೋಗಿ ನನ್ನ ಪ್ರೀತಿಯನ್ನು ಕೊಡುವುದೆಂದು ನಿರ್ಧರಿಸಿ ಹೊರಟೆ.

ಅದ್ಯಾರೋ ಕಾರಿನಲ್ಲಿ ಕುಳಿತು ಯಾರಿಗೋ ಕಾಯುತ್ತಿರುವವನಂತೆ ಕಂಡ, ಮಿಂಚುತ್ತಿರುವ ಬಟ್ಟೆ ತೊಟ್ಟು, ಪ್ರೀತಿ ಕೊಡುವವರಿಗಾಗಿಯೇ ಕಾಯುತ್ತಿರುವನೇನೋ ಎಂದು ಇವನು ನನ್ನ ಪ್ರೀತಿ ಸ್ವೀಕರಿಸೇ ಸ್ವೀಕರಿಸುತ್ತಾನೆಂದು ನಂಬಿ ಅವನ ಬಳಿ ಹೊರಟೆ. ಮುಷ್ಠಿ ಮುಂದೆ ಹಿಡಿದು ಸಾರ್ ನನ್ನ ಪ್ರೀತಿ ತೊಗೊಳ್ಳಿ ಸಾರ್ ಎಂದೆ. ವಾಟ್ ಎಂದು ಕಿವಿಯಲ್ಲಿ ಸಿಕ್ಕಿಸಿಕೊಂಡದ್ದೇನನ್ನೋ ತೆಗೆದು ಮತ್ತೆ ಏನದು ಎಂದು ಕೇಳಿದ. ನನ್ನ ಪ್ರೀತಿ, ತೊಗೊಳ್ಳಿ ಸಾರ್ ಎಂದೆ. ನಿನ್ ಮೂತಿ, ಹುಚ್ಚ ನನ್ನ ಮಗನೆ ಡೋಂಟ್ ವೇಸ್ಟ್ ಮೈ ಟೈಮ್, ಮುಚ್ಕೊಂಡ್ ಹೋಗು ಎಂದಂದು ಮತ್ತೆ ಕಿವಿಗೆ ಸಿಕ್ಕಿಸಿಕೊಳ್ಳಲು ಅನುವಾಗುತ್ತಿದ್ದವನನ್ನು ಮತ್ತೆ ಶಾಂತವಾಗಿಯೇ ತಡೆದೆ. ಸಾರ್ ಇದರಲ್ಲಿ ನನ್ನ ಪ್ರೀತಿಯಿದೆ, ತೊಗೊಳ್ಳಿ ಸಾರ್ ಎಂದೆ. ಹ ಹ ಹ ಎಂದು ನಕ್ಕುಬಿಟ್ಟ. ಏನಿದೆ, ನಿನ್ನ ಪ್ರೀತಿನಾ, ಯೋ ಯಾಕಯ್ಯಾ ಬೇರೆ ಯಾರೂ ಸಿಕ್ಕಲಿಲ್ವ ನಿನಗೆ ಬಕ್ರಾ ಮಾಡೋಕೆ. ಏನಾಗಿದೆ ನಿನಗೆ ಚೆನ್ನಾಗಿದ್ದೀಯಲ್ಲಾ, ದುಡಿದು ತಿನ್ನೋಕೆ ರೋಗಾನಾ ನಿನಗೆ. ಹೋಗಲಿ ತೊಗೊಂಡು ಹಾಳಾಗಿಹೋಗು ಮತ್ತೆ ಮುಖ ತೋರಿಸಬೇಡ ಎಂದು ದುಡ್ಡು ತೆಗೆದು ನನ್ನೆಡೆಗೆ ಹಿಡಿದ. ಸಾರ್ ನಾನು ಭಿಕ್ಷೆ ಬೇಡಲು ಬಂದಿಲ್ಲ ಸಾರ್, ನನ್ನ ಪ್ರೀತಿ ನಿಮಗೆ ಕೊಡೋಕೆ ಬಂದೆನಷ್ಟೇ ಎಂದು ದುಡ್ಡನ್ನು ನಿರಾಕರಿಸಿದ್ದಕ್ಕೆ. ಜಸ್ಟ್ ಫಕಾಫ್ ಮ್ಯಾನ್ ಎಂದು ಏನೋ ಹೇಳಿ ಕಾರು ಚಾಲ್ತಿ ಮಾಡಿಕೊಂಡು ಹೊರಟೇ ಹೋದ. ದುಡ್ಡು ಅಲ್ಲೇ ಬಿತ್ತು. ನನಗೆ ದುಡ್ಡು ಬೇಕಿರಲಿಲ್ಲ. ಸರಿ ಸುಮ್ಮನೆ ಮುನ್ನಡೆದೆ.



ಸೂಟು ಹಾಕಿಕೊಂಡು, ಸೂಟ್ ಕೇಸೊಂದನ್ನು ಹಿಡಿದಿದ್ದವನು ನಾನು ಕೇಳಿದ ತಕ್ಷಣವೇ ಕೊಡು ಏನಿದೆ ಅದರಲ್ಲಿ ಎಂದು ನನ್ನ ಮುಷ್ಠಿ ಬಿಚ್ಚಿ ನೋಡಲು ಪ್ರಯತ್ನ ಪಟ್ಟ. ಸಾರ್ ತೊಗೊಂಡ ಮೇಲೆ ನೋಡಿ, ಮುಂಚೆನೇ ಏನು ಎತ್ತ ಎಲ್ಲ ವಿಚಾರಣೆ ಮಾಡಲಾಗುವುದಿಲ್ಲ ಎಂದೆ. ನಿನ್ನ ಏನಾದರೂ ಇರಲಿ ನಿನ್ನ ಕೈಯಲ್ಲಿ ಆದರೆ ನನಗೇನಾದ್ರೂ ಉಪಯೋಗ ಇದ್ಯಾ ಅದರಿಂದ. ನಾನು ಲಾಭಕ್ಕಾಗಿ ದುಡಿಯುವ ಮನುಷ್ಯ. ಇದರಿಂದ ನನಗೇನಾದರೂ ಲಾಭವಿದೆ ಎಂದರೆ ತೊಗೋತೀನಿ ಎಂದು ಮತ್ತೆ ಮುಷ್ಟಿ ಬಿಚ್ಚಿ ನೋಡಲು ಪ್ರಯತ್ನ ಪಟ್ಟ. ಕೊಸರಿಕೊಂಡು ಬಂದುಬಿಟ್ಟೆ. ಸ್ವಲ್ಪ ದೂರದಲ್ಲೇ ಯಾರೋ ಕಷ್ಟ ಪಟ್ಟು ನಡೆದು ಬರುತ್ತಿದ್ದುದನ್ನು ಕಂಡು ಈತ ಖಂಡಿತಾ ನನ್ನ ಪ್ರೀತಿಯನ್ನು ಸ್ವೀಕರಿಸುತ್ತಾನೆ. ಕಷ್ಟ ಪಟ್ಟವರಿಗೇ ಪ್ರೀತಿಯ ಬೆಲೆ ಗೊತ್ತಿರುವುದೆಂದು ಲೆಕ್ಕಾಚಾರ ಮಾಡಿ ಹೊರಟೆ.

ಕೈಯಲ್ಲಿದ್ದ ಊರುಗೋಲನ್ನು ತೆಗೆದು ತಲೆಗೆ ಬಾರಿಸಿಯೇ ಬಿಟ್ಟ. ತಲೆ ಒಡೆದು ರಕ್ತವೂ ಬಂದುಬಿಟ್ಟಿತು. ಅಯ್ಯಯ್ಯೋ ಯಾಕ್ ಹೊಡೆದ್ರಿ ಸಾರ್ ಎಂದು ಇನ್ನೂ ದೈನ್ಯದಿಂದ, ಸಹನೆಯಿಂದಲೇ ಕೇಳಿದ್ದಕ್ಕೆ. ಏನ್ ನನ್ನನ್ನ “ಗೇ” ಅಂದುಕೊಂಡಿದ್ದೀಯ, ನಾನು ಕುಂಟ ಹೌದು, ಆದರೆ ನನಗೂ ಮದುವೆ ಆಗಿದೆ ಕಣಲೇ ಲೋಫರ್, ಮುಖ ಮೂತಿ ನೋಡ್ದೀರಾ ಚಚ್ಚಾಕಿ ಬಿಡ್ತೀನಿ ಹುಶಾರು ಎಂದು ಹಿಂದಿರುಗಿ ನೋಡದೆಯೇ ಹೊರಟುಹೋದ. ಅರೆ ನಾನೇನೂ ಸೆಕ್ಸ್ ಮಾಡಲು ಕರೆದೆನೆಂದುಕೊಂಡನೋ ಅರ್ಥವಾಗದೇ ಎದ್ದು ಸಾವರಿಸಿಕೊಂಡು ತಲೆಯ ಗಾಯ ಒರೆಸಿಕೊಳ್ಳುತ್ತಾ ಮುಷ್ಟಿಯನ್ನು ನೋಡಿಕೊಂಡು ಮುನ್ನಡೆದೆ. ಒಬ್ಬಳು ತರುಣಿ. ಕೇಳಿದ್ದೇ ಕಪಾಳೆಗೆ ಹೊಡೆದು ನಿನ್ನ ಉಟ್ಟಿಗೆ ಪ್ರೀತಿ ಬೇರೆ ಕೇಡು. ಮುಖ ನೋಡ್ಕೊಂಡಿದ್ದೀಯ ಕನ್ನಡಿಯಲ್ಲಿ. ಚಪ್ಪರ್ ಥೂ ಎಂದು ಹೊರಟೇ ಹೋದಳು. ಒಂದು ಪುಟ್ಟ ಮಗು ಒಂದು ಕೈಯಲ್ಲಿ ಇನ್ನೊಂದು ಕೈಯಲ್ಲಿ ಬಾಸ್ಕೆಟ್ಟು ತುಂಬಾ ತರಕಾರಿ ಹಣ್ಣುಗಳನ್ನು ತುಂಬಿಸಿಕೊಂಡು ಬರುತ್ತಿದ್ದಳೊಬ್ಬಳು ತಾಯಿ. ಆಹಾ ತಾಯಿಗಲ್ಲದೇ ಇನ್ನಾರಿಗೆ ತಾನೇ ಗೊತ್ತಿರುತ್ತೆ ಪ್ರೀತಿಯ ಮೌಲ್ಯ. ಇವಳು ನನ್ನ ಪ್ರೀತಿಯನ್ನ ಸ್ವೀಕರಿಸಿಯೇ ತೀರುವಳೆಂದು ನಂಬಿ ಓಡಿ ಅವಳ ಎದುರು ನಿಂತು ಮುಷ್ಟಿ ಮುಂದೆ ನೀಡಿ ಹೇಳಿದೆ. ಅಯ್ಯಯ್ಯೋ ಏನ್ ಹೇಳ್ತಿದ್ಯೋ, ಏನ್ ಅಂದುಕೊಂಡಿದ್ದೀಯ ನನ್ನನ್ನ, ಇಲ್ನೋಡ್ರೀ ಇವನು ಹೇಗೆ ಮಾತನಾಡ್ತಿದ್ದಾನೆ, ಒಂಟಿ ಹೆಂಗಸು ಅಂತ ಮೈಮೇಲೆ ಬಿದ್ದಿದ್ದೂ ಅಲ್ಲದೇ ನೋಡಿ ಬಾಯಿಗೆ ಬಂದಂಗೆ ಮಾತನಾಡ್ತಿದ್ದಾನೆ, ಥು ನಿನ್ನ ಮುಖಕ್ಕೆ ಎಂದು ಉಗಿದಿದ್ದೂ ಅಲ್ಲದೇ ನೋಡ ನೋಡುತ್ತಲೇ, ಏನು ನಡೆಯುತ್ತಿದೆಯೆಂದು ಅರಿವಾಗುವಷ್ಟರಲ್ಲೇ ಎದೆ ಎದೆ ಬಡಿದುಕೊಂಡು, ಬ್ಯಾಸ್ಕೆಟ್ಟು ಕೆಳಗೆ ಕುಕ್ಕಿ, ಮಗುವಿನ ಕೈ ಬಿಟ್ಟು, ಸುತ್ತ ಮುತ್ತಲ ಜನರನ್ನು ಬೊಬ್ಬೆಯಿಟ್ಟು ಸೇರಿಸಿ ಹೊಡೆದೂ ಹೊಡೆದಳು, ನೆರೆದವರೆಲ್ಲಾ ಸೇರಿ ಜಪ್ಪಿದರು. ಬಂದವರಲ್ಲಾರಿಗಾದರೂ ನನ್ನ ಪ್ರೀತಿ ಬೇಕಾದೀತೇನೋ ಎಂದು ಎಲ್ಲರನ್ನೂ ಕೇಳಿದೆ. ಯಾರೂ ಕೇಳುವ ವ್ಯವಧಾನವಿಟ್ಟುಕೊಂಡಿರಲಿಲ್ಲ, ಕೈಲಾದಷ್ಟೂ ಹೊಡೆದು ಹಾಕಿದ್ದ ಹಳೆಯ ಬಟ್ಟೆಯನ್ನೂ ಚಿಂದಿ ಚೂರು ಮಾಡಿ ಹೋದರು. ಮೈಕೈಯೆಲ್ಲಾ ಬಾತುಕೊಳ್ಳಲು ಶುರುಮಾಡಿಬಿಟ್ಟಿತು. ಕಷ್ಟ ಪಟ್ಟು ಎದ್ದು ಅಷ್ಟು ದೂರದಲ್ಲಿ ಕೋಲಿನ ಆಸರೆಯಲ್ಲಿ ನಡೆದುಬರುತ್ತಿದ್ದ ಮುದುಕಿಯೋರ್ವಳನ್ನು ಕಂಡದ್ದೇ ನನ್ನ ಆಸೆ, ಕನಸು ಮತ್ತೆ ಚಿಗುರಿಕೊಂಡಿತು, ಥೂ ಯಾರು ಯಾರನ್ನೋ ಕೇಳಿದೆನಲ್ಲಾ, ವಯಸ್ಸಿನ ಜೊತೆಯಲ್ಲಿ ಮಾಗಿ ಪ್ರೀತಿ ಎಂದರೇನೆಂದು ಅರಿತಿರಬಹುದಾದವರು ಯಾರಾದರೂ ಇದ್ದರೆ ಅದು ಈ ಅಜ್ಜಿಯೇ ಎಂದು ತೆವಳುವವನ ಹಾಗೇ ಓಡಿದೆ.

ಈ ವಯಸ್ಸಿನಲ್ಲಿ ನಿನ್ನ ಪ್ರೀತಿ ಕಟ್ಟಿಕೊಂಡು ನಾನೇನು ಮಾಡಲಪ್ಪ, ಈ ಇಳಿ ವಯಸ್ಸಿಗೆ ಊರುಗೋಲಾಗು, ಆಸರೆ ಕೊಡು ಸಾಕೆಂದಳು. ಯಾವುದೂ ಸಾಧ್ಯವಾಗದಿದ್ದಲ್ಲಿ ಕೈಲಾದಷ್ಟು ಸಹಾಯ ಮಾಡು ಸಾಕೆಂದಳು. ಯಾವುದೂ ನನ್ನ ಬಳಿ ಇಲ್ಲಜ್ಜಿ. ನನ್ನ ಬಳಿ ನನ್ನ ಪ್ರೀತಿಯೊಂದನ್ನು ಬಿಟ್ಟರೆ ಬೇರೇನೂ ಇಲ್ಲ ಎಂದೆ. ಮತ್ತೆ ನಿನ್ನ ಪ್ರೀತಿ ಇಟ್ಟುಕೊಂಡು ಏನ್ ಮಾಡ್ಲೀ ನಾನು. ದಾರಿ ಬಿಡು ಎಂದು ಉಶ್ಶೋ ಅಪ್ಪ ಎನ್ನುತ್ತಾ ಮುದುಕಿಯೂ ಹೋಯ್ತು. ಅಲ್ಲೇ ಕೂತೆ. ಯಾರಿಗೂ ಬೇಕಾಗಿಲ್ವಾ ನನ್ನ ಪ್ರೀತಿ. ಕಾಲು ನೆಲಕ್ಕೆ ಹೂತು ಹೋಗುತ್ತಿತ್ತು. ಅದಾಗಲೇ ಮಳೆ ಶುರುವಾಯ್ತು. ಮಳೆಯಿಂದ ಮೈಯ ತೊಯ್ದುಹೋಯ್ತೋ ಅಥವಾ ಕಣ್ಣಿಂದಲೇ ತೊಯ್ದು ತೊಪ್ಪೆಯಾಯ್ತೋ ಗೊತ್ತಾಗಲಿಲ್ಲ. ಮುಷ್ಟಿ ಹಿಡಿದು ಇನ್ನೂ ನೆನೆಯುತ್ತಲೇ ಇದ್ದೆ. ಚಮಚೆಯಷ್ಟು ಪ್ರೀತಿಯೇ ಯಾರಿಗೂ ಬೇಕಾಗಿಲ್ಲ ಇನ್ನು ಬೆಟ್ಟದಷ್ಟಿರುವುದನ್ನ ಯಾರಿಗೆ ತಾನೇ ಕೊಡಲೆಂದು ಮುಷ್ಟಿ ತೆರೆದೆ. ನನ್ನ ಪ್ರೀತಿಯ ವಜ್ರ ಇನ್ನೂ ಹೊಳೆಯುತ್ತಲೇ ಇತ್ತು. ಮಳೆಗೆ ತೊಯ್ದಷ್ಟೂ ಇನ್ನೂ ಸ್ಫಟಿಕ ಶುಭ್ರವಾಗಿ ಮಿಂಚುತ್ತಿತ್ತು. ಬೆಲೆಯಿಲ್ಲದ, ಯಾರೂ ಮೂಸಿ ನೋಡದ ಈ ಪ್ರೀತಿಯನ್ನು ಇಟ್ಟುಕೊಂಡೇನು ಮಾಡಲೆಂದು ಸುಮ್ಮನೆ ಅದೇ ಕೆಸರಿಗೆಸೆದು ಎದ್ದು ನಿಧಾನಕ್ಕೆ ನಡೆದು ಹೊರಟೆ. ನನ್ನೆದುರಿಗೆ ಒಬ್ಬ ಅಪ್ಪ ಮಗ ಛತ್ರಿ ಹಿಡಿದು ನಡೆದು ಬರುತ್ತಿದ್ದವರು, ಆ ಪುಟ್ಟ ಮಗು ನೋಡಿ ಕೈ ತೋರಿಸಿ ನಗುತ್ತಲಿತ್ತು. ಅದೂ ಸಹ ಹುಚ್ಚನೆಂದು ನಗೆಯಾಡುತ್ತಿರುವುದೇನೋ.

ಮುಗ್ಧ ಮಗು ಮುಂದೆ ಸರಿದ ಮೇಲೂ ಅದರ ಕಡೆಗೆ ತಿರುಗಿ ನೋಡುತ್ತಾ ನಿಂತೆ. ಕೆಸರು ಮೆತ್ತಿಕೊಂಡಿದ್ದ ಆ ನನ್ನ ಪ್ರೀತಿಯನ್ನು ಆ ಮಗು ಹೆಕ್ಕಿ ಮುಷ್ಟಿಯಲ್ಲಿ ಹಿಡಿದು ಒಮ್ಮೆ ನನ್ನ ಕಡೆ ನೋಡಿ ನಕ್ಕು ನಡೆಯ ತೊಡಗಿತು. ಮಳೆ ನಿಂತಿತ್ತು, ಕಣ್ಣಿನಲ್ಲಿ ಮೋಡ ಕಟ್ಟಿತು. 








+ನೀ. ಮ. ಹೇಮಂತ್

Thursday 14 June 2012

ಜೀವನವಲ್ಲ ಕಥೆ!




       “ನಾನು ಸತ್ತೋದೆ! ಅಣ್ಣಾ ನಾನು ವಿಷ ಕುಡಿದು ಸತ್ತೋದೆ! ನೋಡು ನನ್ನ ಯಂಡ್ರು ಯಂಗೆ ಕ್ಯಾಮೆರಾಗೆ ಮುಖ ತೋರಿಸ್ಕಂಡು ಅಳ್ತಾವ್ಳೆ!” ಅರೆ ಇವತ್ತು ಮಧ್ಯಾಹ್ನ ಸತ್ತವನು ನೇರ ನನ್ನ ಬಳಿಗೆ ಯಾಕೆ ಬಂದನೋ ಗೊತ್ತಾಗಲಿಲ್ಲ. ಟಿವಿಯಲ್ಲೇನೋ ಸಂಜೆ ಇವನ ಮುಖಕ್ಕೆ ಝೂಮ್ ಹಾಕೀ ಹಾಕೀ ತೋರಿಸಿದ್ದರು. ಮುಖ ನೀಲಿಗಟ್ಟಿತ್ತು. ಅವನ ಹೆಂಡತಿ ಕ್ಯಾಮೆರಾ ಕಡೆ ನೋಡಿ ನೋಡಿ ಅಳು ಇನ್ನೂ ಜೋರು ಮಾಡಿದ್ದಂತೂ ಹೌದು. ಸಂಬಂಧಿಕರೋ, ಸುತ್ತಮುತ್ತಲವರೋ ಅವರಲ್ಲಿ ಸಂತಾಪ ನಿಜವಾಗಲೂ ಇತ್ತೋ ಇಲ್ಲವೋ ಅವನ ಹೆಂಡತಿಯಷ್ಟೇ ಶೋಕ ಕ್ಯಾಮೆರಾ ಮುಂದೆ ಹೊರಹಾಕಿದರು. ಎಲ್ಲಾ ನಾಟಕವೆಂದುಕೊಂಡಿದ್ದೆ ಆಗ ನೋಡಿದಾಗ. ಇವನೀಗ ಎದುರಿಗೇ ನಿಂತಿದ್ದಾನೆ. ಏನೆಂದು ಪ್ರತಿಕ್ರಿಯಿಸಲಿ. ಆತನ ಹೆಣ ನೋಡಿದಾಗಲಂತೂ ದೇವರಾಣೆ ನನಗೆ ಯವುದೇ ರೀತಿಯ ಸಂತಾಪವೂ ಹತ್ತು ಸೆಕೆಂಡಿಗಿಂತ ಹೆಚ್ಚಿಗೆ ಉಳಿದಿರಲಿಲ್ಲ. ಪಕ್ಕದ ಚಾನೆಲ್ಲಿನಲ್ಲಿ ಹೊಸ ಸಿನಿಮಾದ ಹಾಡು ಎಲ್ಲವನ್ನು ಮರೆಸಿತ್ತು, ಮರೆತಿದ್ದೆ. ಆದರೆ ಈತ ನನ್ನನ್ನೇ ಹುಡುಕಿ ಬಂದಿದ್ದಾನೆ. ಏನೆಂದು ಪ್ರತಿಕ್ರಿಯಿಸಲಿ. ಆಗಿದ್ದಾಯ್ತು ಹೋಗಲಿ ಬಿಡು ಎಂದು ಹೇಳಿ ಸಾಗಹಾಕಲೇ, ನೀನು ಯಾರೆಂದು ಗೊತ್ತೇ ಇಲ್ಲ ಹೊರಡು ಇಲ್ಲಿಂದ ಎಂದು ಹೊರದಬ್ಬಲೇ. ಅಥವಾ ಮಾಮೂಲಿನಂತೆ ಬೂಟಾಟಿಕೆ ಸಂತಾಪ ಸೂಚಿಸುತ್ತಾ ಧೈರ್ಯ ತಂದುಕೋ, ಎಲ್ಲ ಒಳ್ಳೆಯದೇ ಆಗುತ್ತದೆಂದು ಹೇಳಿ ಧೈರ್ಯ ತುಂಬಲೇ. ಅರೆರೆ! ಅವನಾಗಲೇ ಸತ್ತಾಗಿದೆ ಅವನಿಗೆಂಥಾ ಧೈರ್ಯ ಹೇಳುವುದು. ನನ್ನ ನಂಬಿಕೆಯ ಪ್ರಕಾರ ಆತ ಸತ್ತ ಮೇಲೆ ಎಲ್ಲ ಕಷ್ಟ ಸುಖಗಳು ಮುಗಿದಹಾಗೆಯೇ. ಸ್ವರ್ಗ ನರಕಗಳ ನಾನ್ಸೆನ್ಸ್ ನಂಬಿಕೆ ನನ್ನಲ್ಲಿಲ್ಲದ ಕಾರಣ ಮತ್ತು ಆತ್ಮದ ಬಗ್ಗೆ ನನಗೆ ತಿಳಿಯದ ಮತ್ತು ತಿಳಿಯಲಿಚ್ಛಿಸದ ಪ್ರಕಾರ ಆತನ ದೇಹದ ಜೊತೆಗೆ ಆತನ ಆತ್ಮವೆನ್ನುವುದನ್ನೇನಾದರೂ ಸಾಯುವ ಮುನ್ನ ಈ ಸಮಾಜ ಉಳಿಸಿದ್ದರೆ ಅದೂ ದಫನ್ ಆಗಿರಬೇಕಿತ್ತು. ಆದರೆ ಈತ ನನ್ನ ಮುಂದಿದ್ದಾನೆ ಈಗ. ಕಲ್ಲು ಮಣ್ಣು ಹುಳ ಹುಪ್ಪಟೆಯಲ್ಲೂ ಕಥೆ ಹುಡುಕುವ ನನ್ನ ಮೂರ್ಕಾಸಿನ ಬುದ್ದಿಗೆ ಇವನಲ್ಲಿ ಮಾತು ಬೆಳೆಸಿದರೆ ಕಥೆಗಾಗುವಂತಹ ವಸ್ತು ಹುಟ್ಟಬಹುದೇನೋ ಎಂಬ ಕೆಟ್ಟ ಕುತೂಹಲ ಕತ್ತಲೆ ರಸ್ತೆಯಲ್ಲಿನ ಟಾರ್ಚ್ ದೀಪದಂತೆ ಹೊತ್ತಿಕೊಂಡಿತು ಆದರೆ ನೈತಿಕತೆ ಮಾನವೀಯತೆಯೆಂಬ ಭೂತಗಳು ಎಂತಹ ಕತ್ತಲೆಯಲ್ಲೂ ಭಯೋತ್ಪಾದನೆ ಮಾಡುತ್ತಾವದ್ದರಿಂದ ಟಾರ್ಚಿನ ಬೆಳಕಿನಿಂದ ನನ್ನ ಇರುವಿಕೆ ತೋರ್ಪಡಿಸಕೂಡದೆಂದು ಟಾರ್ಚ್ ಆಫ್ ಮಾಡಿ ಸುಮ್ಮನೆ ಅವನ ಮುಖ ಒಮ್ಮೆ ನನ್ನ ಕಾಲನ್ನೊಮ್ಮೆ ನೋಡುತ್ತಾ ಕುಳಿತೆ.

ತಿನ್ನಾಕ್ ಹಿಟ್ಟಿರ್ನಿಲ್ಲ. ಇವತ್ತ ಅಳ್ತಾವ್ಳೆ ನನ್ನೆಂಡ್ರು, ಕಳದ್ ಸಾರಿ ವಿಷ ಕುಡ್ದಾಗಲೇ ಎಚ್ಚೆತ್ಕಂಡಿದ್ರೆ ನಾನ್ ಈಗ ಕುಡಿತಿದ್ನಾ. ಈಗ ಅಳ್ತಾವ್ಳೆ. ಮನ್ಯಾಗ್ ಜಗಳ, ಊರಾಗ್ ಜಗಳ, ಮಾರ್ಕೆಟ್ನಾಗ್ ಜಗಳ, ಬ್ಯಾಂಕ್ನವ್ರ್ ತಾವ್ ಜಗಳ, ಎಲ್ಲಾ ಕಡೆಯೂ ಜಗಳವೇ ಆಗೋಯ್ತು ಒಂದ್ ತಾವೂ ಗೆಲ್ಲೋದಂತೂ ಇಲ್ಲ. ಸಾಯೋವಾಗಾದ್ರೂ ನೆಮ್ಮದಿಯಾಗ್ ಸಾಯಲಿಲ್ಲಂದ ಮ್ಯಾಕೆ ಸತ್ತೂ ಏನ್ ಭಾಗ್ಯ ಬಂತೋ ಗೊತ್ತಿಲ್ಲ. ಕಥೆಗಾರನೇನೋ ಇನ್ನೂ ಟಾರ್ಚಿನ ಮೇಲೆ ಕೈ ಇಟ್ಟುಕೊಂಡೇ ಇದ್ದ, ಟಾರ್ಚ್ ಹೊತ್ತಿಸಿ ಯಾಕೆ ವಿಷ ಕುಡಿದ್ರಿ ಎಂದು ಕೇಳಿ ಥಟ್ಟನೆ ಟಾರ್ಚ್ ಆರಿಸುವ ಯತ್ನದಲ್ಲಿದ್ದವನನ್ನು ತಡೆದೆ. ಯಾಕೆ ಸಾಯ್ತಿದ್ದಾರೆ ಅಂತ ಪ್ರತಿಯೊಬ್ಬರಿಗೂ ಗೊತ್ತಿರುವಂತಹ ವಿಷಯವೇ ಅದನ್ನೇ ಮತ್ತೊಮ್ಮೆ ಪ್ರಶ್ನಿಸಿ ಅವನ ಗೋಳಿನ ಕಥೆಯನ್ನು ಕೇಳುವ ವ್ಯವಧಾನವೂ ಇರಲಿಲ್ಲ ಮತ್ತು ಅದನ್ನು ಕಥೆಯಾಗಿಸಿ ಮೊಳೆ ಹೊಡೆದರೆ ಅದೇ ಮಾಮೂಲಿನ ಕಥೆ ಎಂದು ಯಾವ ಮಹಾಶಯರೂ ಓದುವುದೂ ಇಲ್ಲವೆನ್ನುವುದು ಖಚಿತವಾಗಿ ಗೊತ್ತಿದ್ದುದರಿಂದ ಕಥೆಗಾರನ ತಲೆಯಮೇಲೆ ಹೊಡೆದು ಟಾರ್ಚನ್ನು ಕಿತ್ತೆಸೆದೆ. ವಿಷ ಕುಡಿದವನ ಹೆಸರೂ, ವ್ಯ(ಕ)ಥೆಯೂ ಗೊತ್ತಾಗಲೇ ಇಲ್ಲ. ಬಂದ ದಾರಿಯಲ್ಲಿಯೇ ಆತನೂ ಹೊರಟುಹೋದ.

ಪ್ರೇಮಕಥೆಗಳನ್ನ ಪ್ರೇಮಕಾವ್ಯಗಳನ್ನ ಬೇಡಬೇಡವೆನ್ನುತ್ತಲೇ ಜನ ಓದ್ತಾರೆ, ವಿಮರ್ಶೆ ಮಾಡ್ತಾರೆ, ಹಾಗಾಗಿ ಏನು ಮಾಡೋಣ ಎಂದು ಯೋಚಿಸುತ್ತಿರುವಾಗಲೇ ನನ್ನ ಹಳೆಯ ಸೋತ ಪ್ರೇಮಕಥೆ ನೆನಪಾಗಿ ಅದನ್ನೇ ಬಣ್ಣಗಳನ್ನು ಹಚ್ಚಿ ರೆಕ್ಕೆ ಪುಕ್ಕ ಬರೆದು ಹೇಳಿದರೆ ಹೇಗೆಂದು ಚಿಂತಿಸುವಷ್ಟರಲ್ಲೇ ಕೈಯಲ್ಲಿದ್ದ ಕಾದಂಬರಿಯಲ್ಲಿನ ಅಕ್ಷರಗಳನ್ನು ಸರಿಸಿ ನನ್ನ ಮಾಜಿ ಹುಡುಗಿ ಮುಖ ಹ ಹ ಹ ಎಂದು ನಕ್ಕು ಥು ನಿನ್ನ ಮುಖಕ್ಕೆ, ನನ್ನನ್ನು ಉಳಿಸಿಕೊಳ್ಳುವ ಯೋಗ್ಯತೆಯಿರಲಿಲ್ಲ ಈಗ ಕಥೆ ಮಾಡಲು ಹೊರಟಿದ್ದೀಯ ನಾಚಿಕೆಗೇಡು ಜೀವನ ನಿನ್ನದೆಂದು ಉಗಿದು ಮರೆಯಾದಳು. ತೆಪ್ಪಗೆ ಆಫೀಸು ತಲುಪಿ ಕೂರಲು ಪಕ್ಕದ ಚೇರಿನಲ್ಲಿ ಕೂದಲು ಕೆದರಿಕೊಂಡು ಹರಿದ ಟಾಪು ಮತ್ತು ಬಾಟಮ್ ತೊಡದೆಯೇ ಕುಳಿತು ಕಣ್ಣೊರೆಸಿಕೊಂಡು ನನ್ನತ್ತ ನೋಡಿ ನನ್ನನ್ನು ಆರು ಜನ ಸೇರಿ ಕೊಂದರು ಎಂದಳು. ಕೈ ಕಾಲು ನಡುಕ ಶುರುವಾಯ್ತು. ಬಸ್ಸಿನಲ್ಲಿ ಮಾಜಿ ಬಂದು ಉಗಿಯುವ ಕೊಂಚ ಮೊದಲು ಪಕ್ಕದವನ ಪೇಪರಿನಲ್ಲಿ ಗಟ್ಟಿಯಾಗಿ ಓದುತ್ತಿದ್ದ ಬಿಸಿ ಬಿಸಿ ಸಮಾಚಾರದ ದುರಂತ ನಾಯಕಿ ಇವಳೇನಾ. ಬೆವರು ತನ್ನಿಂತಾನೇ ಬಂತು. ನನಗೆ ಗೊತ್ತಿದ್ದ ಹಾಗೆ ಆರು ಜನ ಸೇರಿ ಮಾನಾಪಹರಣ ಮಾಡಿ ಉಸಿರು ಕಟ್ಟಿಸಿ ಕೊಂದು ಎಸೆದು ಹೋಗಿದ್ದರೆಂಬುದು ಸುದ್ದಿ. ಇವಳು ನೋಡಿದರೆ ಇಲ್ಲಿ ನನ್ನ ಪಕ್ಕದಲ್ಲಿ ಈ ಅವಸ್ಥೆಯಲ್ಲಿ. ಅಣ್ಣಾ ಹೊಟ್ಟೆ ನೋಯ್ತಿತ್ತು, ಮೈಕೈಯೆಲ್ಲಾ ನಡುಗುತ್ತಿತ್ತು, ರಕ್ತ ಹರಿದು ಹರಿದು ತಲೆ ಸುತ್ತು ಬರ್ತಿತ್ತು. ನನ್ನ ಕಾಲುಗಳು ನೋಡಣ್ಣಾ ತರಿದು ಹೋಗಿದೆ. ಬಾಯಲ್ಲಿ ಪ್ಲೀಸ್ ಬಿಟ್ಬಿಡಿ ಅಂತ ಹೇಳಲು ಅದೆಷ್ಟೋ ಪ್ರಯತ್ನಿಸಿದೆ, ಪದಗಳೇ ಗಂಟಲಿಂದ ಹೊರಗಡೆ ಬರಲಿಲ್ಲಣ್ಣ ಎಂದು ಇನ್ನೂ ಏನೋ ಹೇಳುತ್ತಿದ್ದಳು ಹೊಟ್ಟೆಯಿಂದೆಲ್ಲಾ ಬೆಳಗ್ಗಿನ ಇಡ್ಲಿ ಹೊರಗೆ ಬಂದಂಗಾಯ್ತು. ಅಯ್ಯಯ್ಯೋ ಬೇಡಮ್ಮಾ, ತಾಯಿ ದಯವಿಟ್ಟು ನನ್ನಲ್ಲಿ ಇಷ್ಟು ಶಕ್ತಿಯಿಲ್ಲ ಸತ್ತೋಗ್ತೀನಿ ಇಲ್ಲೇ ಪ್ಲೀಸ್ ಏನೂ ಹೇಳಬೇಡ ಎಂದು ನನಗೇ ಗೊತ್ತಿಲ್ಲದೇ ಗಟ್ಟಿಯಾಗಿ ತಬ್ಬಿ ತಲೇ ಕೂದಲು ನೇವರಿಸಿದೆ. ನಡುಗುತ್ತಲೇ ಇದ್ದಳು, ಅವಳ ದೇಹದ ಕಂಪನ ರಿಕ್ಟರ್ ಮಾಪನದಲ್ಲಿ ಬಹುಶಃ ಏಳರ ಮೇಲೇ ಇದ್ದೀತು, ಭೂಮಿಯ ಪ್ರಳಯಕ್ಕೆ ಸಾಕಷ್ಟು. ತಬ್ಬಿಕೊಂಡವಳ ಗಟ್ಟಿಯಾಗಿ ಕಂಪನ ಕಡಿಮೆಯಾದೀತೇನೋ ಎಂದು ಕಾದೆ, ಬರೀತೀಯಲ್ಲಣ್ಣ ನನ್ನ ಬಗ್ಗೆ, ಓದ್ತಾರಲ್ಲಣ್ಣ ನನ್ನ ಬಗ್ಗೆ ಎಂದು ಕಿವಿಯ ಬಳಿಯೇ ಸೂಕ್ಷ್ಮವಾಗಿ ಉಸುರಿದಳು. ಧಿಡೀರನೆ ಕುಳಿತಿದ್ದ ಚೇರಿನಿಂದ ಬಿದ್ದೆ. ಸುತ್ತಲಿದ್ದವರು ಚಕಿತರಾಗಿ ನನ್ನನ್ನೇ ನೋಡುತ್ತಿದ್ದರು. ನಿದ್ರೆ ಮಾಡುತ್ತಿದ್ದೆನೆಂದು ತಿಳಿದರೋ ಏನೋ ಬಹುಶಃ, ಅವರುಗಳ ಕಣ್ಣಿನಲ್ಲಿದ್ದ ಅರ್ಧ ನಗು ಅರ್ಧ ಆಶ್ಚರ್ಯವನ್ನು ಎದುರಿಸಲಾಗದೇ ಹಿಂದಿರುಗದೇ ಎದ್ದು ಹೊರನಡೆದೆ.

ಆಫೀಸಿನಲ್ಲಿದ್ದವರೆಲ್ಲಾ ನನ್ನ ಕಡೆಗೇ ಕೈತೋರಿಸಿ ಊರಗಲದ ಬಾಯನ್ನು ತೆರೆದು ಹೋಹಹಹಹಹ ಎಂದು ನಗುತ್ತಿದ್ದಂತೆ, ನಾನು ಮಧ್ಯದಲ್ಲಿ ತಲೆ ಒತ್ತಿ ಹಿಡಿದು ಅದೇ ಚೇರ್ ಮೇಲೆಯೇ ಕುಳಿತಿದ್ದಂತೆ ಕಣ್ಮುಂದೆ ಬರುತ್ತಲಿತ್ತು. ವಿಷ ಕುಡಿದವನು, ಮಾನ ಪ್ರಾಣ ಕಳೆದುಕೊಂಡವಳ ಪ್ರಶ್ನೆಗಳು ಕಾಡುತ್ತಿದ್ದವು. ನಡೆಯುತ್ತಲೇ ಇದ್ದೆ. ಅವಳ ದೇಹದ ಕಂಪನವನ್ನು ನನ್ನ ಹೃದಯಕ್ಕೆ ಸ್ಥಳಾಂತರಿಸಿದ್ದಳು ಅವಳು. ಎದೆ ಹೊಡೆದುಕೊಂಡಷ್ಟೂ ಬೆವರು, ಬೆವರಿನ ಜೊತೆಯಲ್ಲಿ ಕಣ್ಣು ತೇವಗೊಳ್ಳುತ್ತಲೇ ಇತ್ತು.  ಕಟ್ಟಡದ ಹೊರಗಡೆಯೇ ಸಿಗರೇಟು ಸೇದುತ್ತಾ ನಿಂತಿದ್ದವನೊಬ್ಬ ನನ್ನನ್ನು ತಡೆದು ಏನ್ ಸಾರ್ ಎಲ್ಲಿಗೆ ಎಂದ. ಎದೆ ಒಮ್ಮೆ ನಿಂತೇ ಹೋಗಿತ್ತು. ಇವನಾರಪ್ಪಾ ಮತ್ತೊಬ್ಬ ಎಂದುಕೊಂಡೆ ನೋಡಿದರೆ ಗೊತ್ತಿರುವ ಮುಖವೇ. ಯಾರೆಂದು ಅರ್ಥವಾಗುವಷ್ಟರಲ್ಲಿ ಕೊಂಚ ಹೊತ್ತೇ ಹಿಡಿಯಿತು. ತಲೆ ಬಗ್ಗಿಸಿಕೊಂಡು ಕಣ್ಣೊರೆಸಿಕೊಂಡೆ, ಮುಖ ಒರೆಸಿಕೊಳ್ಳುತ್ತಾ ಓಹೋ ನೀವಾ, ಕ್ಷಮಿಸಿ ಏನೋ ಬೇರೆ ಆಲೋಚನೆಯಲ್ಲಿದ್ದೆ ಸಿಗ್ತೇನೆ ಆಮೇಲೆ ಎಂದು ಕಳಚಿಕೊಳ್ಳಲು ಪ್ರಯತ್ನಿಸಿದೆ. ಅರೆ ಸಾರ್ ಇರೀ ಸಾರ್, ಒಂದು ಕಥೆ ಹೇಳ್ತೀನಿ ಕೇಳಿ, ನಿಮ್ಮ ಕಥೆ ಬರಿಯಲಿಕ್ಕೆ ಆಗುತ್ತೆ, ಅದೇ ನನ್ನ ಫ್ರೆಂಡು ಮದುವೆ ಗೊತ್ತಾಗಿದೆ ಅಂತ ಹೇಳ್ತಿದ್ದೆನಲ್ಲ, ಅವನ ಮದುವೆ ನಿಂತು ಹೋಯಿತೆಂದು ಕೂಡ ಹೇಳಿದ್ನಲ್ಲಾ ಕಾರಣವೇನಂತೆ ಗೊತ್ತಾ ಫೇಸ್ಬುಕ್ಕಿನಿಂದ ಹ ಹ ಹ ಎಂದು ನಕ್ಕ. ಆ ಬಾಯೊಳಗೇ ಎಲ್ಲಿ ಹೋಗಿಬಿಡುವೆನೋ ಎಂಬಷ್ಟು ಭಯವಾಯ್ತು, ಅವನು ಹಿಡಿದಿದ್ದ ಕೈಯನ್ನು ಕೊಸರಿಕೊಂಡು ಹಿಂದೆ ಬಂದೆ ಈ ವಿಷಯ ಇವನು ನನಗೆ ಹೇಳಿದ್ದು ನೆನ್ನೆ ಫೋನಿನಲ್ಲಿ ಎಂಬುದು ನೆನಪಾಯ್ತು, ಎದುರಿಗಿದ್ದವನು ಸಿಗರೇಟು, ಸಿಗರೇಟಿನ ಹೊಗೆಯ ಸಮೇತ ಆವಿಯಾಗಿ ಹೋದ. ಇನ್ನೂ ಜೋರಾಗಿ ಓಡಿದೆ ರಸ್ತೆಯ ತುಂಬೆಲ್ಲಾ ಇದ್ದ ಜನರು ನನ್ನನ್ನೇ ಕೆಕ್ಕರಿಸಿ ನೋಡುತ್ತಿದ್ದ ಹಾಗೆ ಭಾಸವಾಗುತ್ತಿತ್ತು. ಬಾಲಕೃಷ್ಣನ ವೇಷತೊಡಿಸಿ ಮಗನನ್ನು ಹಿಡಿದು ನಡೆದುಬರುತ್ತಿದ್ದ ಬುರ್ಖಾಧಾರಿ ಹೆಂಗಸು ನನ್ನ ಕಡೆಗೇ ಕೈಬೀಸಿ ಕರೆಯುತ್ತಿದ್ದಳು. ಅವಳ ವಿರುದ್ಧ ದಿಕ್ಕಿಗೆ ಓಡಿದೆ. ರಸ್ತೆಯಲ್ಲಿ ಬಾಯ್ತುಂಬಾ ಇದ್ದ  ತಾಂಬೂಲವನ್ನು ಉಗಿದವನೊಬ್ಬ ಕೆಕ್ಕರಿಸಿ ನನ್ನನ್ನೇ ನೋಡಿ ನಕ್ಕ, ಕಪಾಳೆಗೆ ಹೊಡೆಯುವ ಮನಸ್ಸಾಯ್ತು, ಓಡಿದೆ. ಹೊಲಿದಾಗಿನಿಂದ ಬಹುಶಃ ನೀರೇ ತೋರಿಸಿರದ, ಅವನಿಗೆರಡರಷ್ಟು ಸೈಜಿನ ಪ್ಯಾಂಟನ್ನು ಕೈಯಲ್ಲಿ ಹಿಡಿದು ಅದೇ ರಸ್ತೆಯಲ್ಲಿ ಮಾಮೂಲಿನಂತೆ ಒಂದು ಬನ್ನು, ಒಂದು ಪುಟ್ಟ ಕವರಿನಲ್ಲಿ ಪಾಪ್ ಕಾರ್ನ್ ಹಿಡಿದು ಅದೇ ರಸ್ತೆಯಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಓಡುತ್ತಿದ್ದವನು ಇವತ್ತು ಬಾ ಬಾ ಎಂದು ನನ್ನನ್ನೇ ಕರೆಯುತ್ತಿದ್ದ, ಹೇ ನನ್ನ ಕಥೆ ಕೇಳೋ ಎಂದು ಕೂಗುತ್ತಲೇ ಇದ್ದ, ಓಡಿದೆ.



ಎಷ್ಟು ದೂರ ಎಷ್ಟು ಜನರಿಂದ, ಎಷ್ಟು ಜನರ ಕಣ್ಣುಗಳಿಂದ, ಎಷ್ಟು ಜನರ ಪರಿಸ್ಥಿತಿಗಳು ಹೇಳುತ್ತಿದ್ದ ಕಥೆಗಳಿಂದ ತಪ್ಪಿಸಿಕೊಂಡು ಓಡಿದ್ದೆನೋ ಗೊತ್ತಿಲ್ಲ. ಮೊದಲು ಮನೆಗೆ ಹೋಗಿ ಸೇರಿಕೊಂಡುಬಿಡಬೇಕು ಯಾರ ಕಾಟವೂ ಇರುವುದಿಲ್ಲ ನಾನು ನನ್ನ ಪುಸ್ತಕವಷ್ಟೇ ಅಲ್ಲಿ ಎಂದು ಬಸ್ ಸ್ಟಾಂಡಿನೆಡೆಗೆ ಹೋದೆ. ಕಾಲುಂಗುರ ಹಾಕಿರುವ ಅಪರೂಪಕ್ಕೆ ಸುಸ್ತಾಗಿರುತ್ತಿದ್ದ ನನ್ನ ಚೆಲುವೆ ಅವಳ ಸೆಕ್ಯುರಿಟಿ ಧಡೂತಿ ಆಂಟಿ, ಸಿಮೆಂಟು ಮೆತ್ತಿಕೊಂಡಿದ್ದವರು, ಊರುಗೋಲು ಹಿಡಿದಿದ್ದವರು, ಸಜ್ಞಾ ಭಾಷೆಯಲ್ಲಿ ಮಾತನಾಡುತ್ತಿದ್ದ ಇಬ್ಬರು ಸಮವಸ್ತ್ರ ಶಾಲಾ ಹುಡುಗರು, ಇನ್ನೂ ಎಷ್ಟೋ ಜನರು ಒಟ್ಟಿಗೆ ನನ್ನನ್ನು ಮುತ್ತಿಗೆ ಹಾಕಿದರು. ಸುತ್ತಲೂ ಜನ. ಇಷ್ಟು ಹೊತ್ತೂ ನಾನು ಸುಮ್ಮನೇ ಓಡುತ್ತಿದ್ದೆ. ಅಯ್ಯಯ್ಯೋ ಬಿಟ್ಟುಬಿಡಿ ನಾನು ಬರೆಯುವುದಿಲ್ಲ. ನಿಮ್ಮಾರ ಕಥೆಯನ್ನೂ ನಾನು ಬರೆಯುವುದಿಲ್ಲ ಯಾಕೆ ನನ್ನ ಬೆನ್ನ ಹಿಂದೆ ಬಿದ್ದಿದ್ದೀರ ಬಿಟ್ಟುಬಿಡಿ ನನ್ನನ್ನ ಎಂದು ಕಾಲುಗಳಿಗೆ ಬಿದ್ದೆ. ಮುಂದೆ ಮುಂದೆ ಬರುತ್ತಲೇ ಇದ್ದರು, ತುಳಿದೇಬಿಡುವರೆನ್ನುವ ಭಯದಲ್ಲಿ ಎಲ್ಲರನ್ನೂ ನೂಕಿ ಓಡಿದೆ. ದೇವಸ್ಥಾನದ ಮೇಲೆ ಹಾರುತ್ತಿದ್ದ ಗರುಡ ಇಳಿದದ್ದೇ ನನ್ನ ಹೆಗಲ ಮೇಲೆಯೇ ಕುಳಿತಿತು, ವಾಹನಕ್ಕೆ ಸಿಕ್ಕು ಕಾಲು ಕುಂಟಾಗಿದ್ದ ಬಾಲವಿಲ್ಲದ ನಾಯಿ ನನ್ನ ಮೇಲೆ ಹಾರಿ ಬನ್ನಿಗಂಟಿಕೊಂಡಿತು, ತುಂಬಿ  ಹರಿಯುತ್ತಿದ್ದ ಒಳಚರಂಡಿ ನೀರು ಮೈ ಪೂರಾ ತೊಯ್ದು ತೊಪ್ಪೆಯಾಗಿಸಿತು. ಹಿಂದೆ ನೂರಾರು ಸಾವಿರಾರು ಜನ ಓಡಿಬರುತ್ತಲೇ ಇದ್ದರು. ರಸ್ತೆಯ ಇಕ್ಕೆಲದಲ್ಲಿದ್ದ ಇನ್ನೊಂದಷ್ಟು ತರಕಾರಿ ಮಾರುವವರು, ಬಳೆ ಕೊಳ್ಳುತ್ತಿದ್ದವರು, ಹೂವ ಕೈಯಲ್ಲಿ ಹಿಡಿದಿದ್ದ ಅಪರೂಪದ ಹೂವಿನ ಚಿತ್ರದ ಲಂಗದ, ತಲೆಗೆ ಎಣ್ಣೆ ಸುರಿದಿದ್ದ ಹುಡುಗಿ ಹಿಡಿಯಲು ಓಡಿಬರುತ್ತಿದ್ದರು. ರಸ್ತೆ ನೋಡಿದರೆ, ರಸ್ತೆಗಳೆಲ್ಲಾ ಗುಂಡಿಗಳಿಂದಲೇ ತುಂಬಿಹೋಗಿತ್ತು ಪಕ್ಕದಲ್ಲೇ ರಾರಾಜಿಸುತ್ತಿದ್ದ ಪುಡಾರಿಯೊಬ್ಬ ಫೋಟೋದೊಳಗಿಂದ ಕೈ ಮುಗಿದುಕೊಂಡೇ ಓಡಿಬಂದ.

ರಸ್ತೆಯಲ್ಲಿದ್ದ ಟ್ರಾಫಿಕ್ಕಿನಲ್ಲಿ ಸಿಕ್ಕಿಬಿದ್ದಿದ್ದ ಆಂಬುಲೆನ್ಸು, ಚಿಲ್ಲರೆ ಭಿಕ್ಷೆ ಬೇಡುತ್ತಿದ್ದ ಖಾಕಿಯವರು, ಕಂಡಕ್ಟರಿಂದ ರೋಸಿ ಹೋಗಿದ್ದ ಪಾಸೆಂಜರುಗಳು, ಜನರಿಂದ ತಾಳ್ಮೆ ಕಳೆದುಕೊಂಡಿದ್ದ ಡ್ರೈವರು, ಸಿಕ್ಕ ಸಿಕ್ಕಲ್ಲಿ ನುಗ್ಗುತ್ತಿದ್ದ ಆಟೋ ರಾಜ, ಮಿಡ್ಡಿ ಚೆಡ್ಡಿ ಹಾಕಿದ್ದ ಕಾಲೇಜು ಕನ್ಯೆಯರು ಎಲ್ಲರೂ ತಮ್ಮ ತಮ್ಮ ಕೈಲಿದ್ದದ್ದನ್ನೆಲ್ಲಾ ನನ್ನೆಡೆಗೆ ಎಸೆಯಲು ಶುರುಮಾಡಿದ್ದರು. ಓಡಿ ಓಡಿ ಓಡಿ ಮನೆ ಸೇರಿದೆ.

ವಿಷ ಕುಡಿದವನು ಇನ್ನೂ ಮನೆಯಲ್ಲೇ ಇದ್ದ. ಹತ್ತಿರ ಬರಬೇಡ ಬಂದರೆ, ಬಂದರೆ, ಬಂದರೆ, ಏನು ಮಾಡಬಹುದು ನಾನು? ಕೊಂದು ಹಾಕುತ್ತೇನೆ. ಹಾ ಕೊಂದು ಹಾಕುತ್ತೇನೆಂದೆ. ಆಗಲೇ ಕೊಂದಿದ್ದಾರೆ ಸಮಾಜ ಒಂದು ಸಲ, ನಾ ಕುಡಿದ ವಿಷ ಒಂದು ಸಲ ಎಂದ. ನಿನ್ನ ಭಾಷಣ ನನಗೆ ಬೇಕಾಗಿಲ್ಲ, ತೊಲಗು ಇಲ್ಲಿಂದ ನಾನು ಕಥೆ ಬರೆಯುವುದನ್ನ ಬಿಟ್ಟುಬಿಟ್ಟಿದ್ದೇನೆ ಎಂದೆ. ಸಾಧ್ಯಾನಾ ಅದು ನಿನ್ನ ಕೈಯಲ್ಲಿ ಎಂದು ಕರ್ಕಶವಾಗಿ ಗಹಗಹಿಸಿ ನಕ್ಕ. ಥು ನಿನ್ನ, ನಗಬೇಡ ಈಗ ಎಂದು ಹೊರಗೆ ಆಗುತ್ತಿದ್ದ ಗದ್ದಲವನ್ನು ಗಮನಿಸಿ ಹೊರಗೋಗಲು ಹೆದರಿ ಕಿಟಕಿಯಿಂದ ಹೊರನೋಡಿದೆ, ಅಕ್ಕ ಪಕ್ಕದ ಬಾಯಿಬಡಕಿ ಆಂಟಿಯರಿಂದ ಸೇರಿಸಿ ನಾ ಕಂಡಿದ್ದ ಎಲ್ಲ ವಿಚಿತ್ರಾಕೃತಿಗಳೂ ಇದ್ದವು ಆ ಯಾರೊಂದಿಗೂ ಮಾತನಾಡದ ತನ್ನಷ್ಟಕ್ಕೇ ಮಾತಾಡಿಕೊಂಡಿರುತ್ತಿದ್ದ ಪ್ಯಾಂಟು ಕೈಯಲ್ಲಿ ಹಿಡಿದಿದ್ದ ಹುಚ್ಚನೂ ಸಹ ಬನ್ನು ಗಬಗಬನೆ ಕಚ್ಚಿ ತಿನ್ನುತ್ತಾ ನಿಂತಿದ್ದ. ಎಲ್ಲ ಕಿಟಕಿಗಳನ್ನು, ಬಾಗಿಲನ್ನು, ಪರದೆಗಳನ್ನು ಮುಚ್ಚಿದೆ. ಈ ವಿಷ ಕುಡಿದವನನ್ನು ಹೊರಗೆ ದಬ್ಬಬೇಕಿತ್ತು. ಇಲ್ಲಾ ಇವನು ಹೋಗುವ ಆಸಾಮಿಯಲ್ಲ, ನಾನೇ ರೂಮಿಗೆ ಹೋಗಿ ಬಾಗಿಲು ಹಾಕಿಕೊಳ್ಳಬೇಕೆಂದು ತೀರ್ಮಾನಿಸಿ ಹೊರಟೆ. ಎದುರಿಗೆ ಜಿಗಿದು ನಾನು ಹೆಂಗೆ ಸತ್ತೆ ಗೊತ್ತಾ ಎಂದ. ನಿನ್ನ ಸಾವು ಕಟ್ಟಿಕೊಂಡು ನಾನೇನು ಸಾಯಲಾ ಎಂದೆ, ಇದ್ದ ಅಷ್ಟೂ ಉರಿಯನ್ನು ಹೊರಗೆಡವಿ. ನಕ್ಕ, ಧರಿದ್ರವಾಗಿ ನಕ್ಕ. ಹೊರಗೆ ಗಲಾಟೆ ಶುರುವಾಗಿತ್ತು. ಯಾರೋ ಕಿಟಕಿಯ ಗಾಜಿಗೆ ಕಲ್ಲು ಎಸೆಯುತ್ತಿದ್ದರು. ಅಯ್ಯೋ ಏನು ಮಾಡುವುದೀಗ ಗೊತ್ತಾಗದೇ ಚಡಪಡಿಸುತ್ತಾ ಅಂಡು ಸುಟ್ಟ ಬೆಕ್ಕಿನಂತಾದೆ. ಯಾರೋ ಬಾಗಿಲು ಬಡಿದರು. ದಬ ದಬ ದಬ ಒಳ್ಳೇ ಢೋಲು ಹೊಡೆದ ಹಾಗೆ ಬಡಿಯುತ್ತಿದ್ದರು. ಯಾರು ಎಂದು ಕೇಳಬೇಕೆನಿಸಿತು. ಇಲ್ಲಾ ಪ್ರತಿಕ್ರಿಯಿಸುವುದಿಲ್ಲ ಎಂದು ತೀರ್ಮಾನಿಸಿದ್ದೆ. ಫೋನು ಹೊಡೆದುಕೊಳ್ಳಲು ಶುರುವಾಯ್ತು. ಸ್ನೇಹಿತನೆಂದು ಗೊತ್ತಾಗಿ ಆಪದ್ಬಾಂಧವ ಎಂದು ಸ್ವೀಕರಿಸಿದೆ, ನನಗೇ ಗೊತ್ತಿಲ್ಲದೇ ನನ್ನ ಕಥೆ ಬೆರೆದೆಯಲ್ಲಾ ಅನುಭವಿಸು ಮಗನೇ ಎಂದು ಗಹಗಹಿಸಿ ನಕ್ಕು ಫೋನಿಟ್ಟ. ಮೊಬೈಲನ್ನು ತೆಗೆದು ಗೋಡೆಗೆ ಅಪ್ಪಳಿಸಿದೆ. ಕಿಟಕಿ ಗಾಜುಗಳು ಒಂದರ ಮೇಲೊಂದು ಒಡೆದು ಹೋಗುತ್ತಲೇ ಇತ್ತು. ಕಲ್ಲುಗಳು ಕಿಟಕಿಗಳ ಸರಳನ್ನು ದಾಟಿ, ಪರದೆಗಳನ್ನು ಹರಿದು ಒಳಗೆ ಬೀಳುತ್ತಿದ್ದವು, ವಿಷಕಂಠ ನಾಲಿಗೆ ಹೊರಗಾಕಿ ನಗುತ್ತಲೇ ಇದ್ದ. ಬಾಗಿಲು ಬಡಿಯುತ್ತಲೇ ಇತ್ತು, ಮೊಬೈಲ್ ಚೂರು ಚೂರಾದರೂ ಹೊಡೆದುಕೊಳ್ಳುತ್ತಲೇ ಇತ್ತು, ಹೊರಗಿದ್ದ ಜನ ಕೂಗುತ್ತಲೇ ಇದ್ದರು. ರೂಮಿನಲ್ಲಿದ್ದ ಅಷ್ಟೂ ಪುಸ್ತಕಗಳು ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿದ್ದವು. ಇಡೀ ಮನೆ ಗಿರಗಿರಗಿರಗಿರಗಿರಗಿರಗಿರಗಿರಗಿರನೆ ತಿರುಗಲು ಶುರುಮಾಡಿತು. ಮನೆಯಲ್ಲಿದ್ದ ಸಮಸ್ತ ಸಾಮಾನು, ಪುಸ್ತಕ, ಪೇಪರು, ಪೆನ್ನು ಹಾರಾಡುತ್ತಿದ್ದವು. ನಲ್ಲಿಗಳು ಪೈಪುಗಳಿಂದ ನೀರು ಚಿಲ್ಲನೆ ಸುರಿಯುತ್ತಿದ್ದವು, ಬಲ್ಬುಗಳು ಕಣ್ಣುಕುಕ್ಕುವಹಾಗೆ ಹೊಡೆದುಕೊಳ್ಳುತ್ತಿದ್ದವು. ಸುತ್ತಿ ಸುತ್ತಿ ಸುತ್ತಿ… ಬಿದ್ದೆ!








+ನೀ.ಮ. ಹೇಮಂತ್

Monday 11 June 2012

ಕಳ್ಳರ ಠಾಣೆಯಿರುವ ಊರಿನಲ್ಲಿ!




ಒಂದೆಡೆ

ಮಾಡ್ತೀಯೇನೋ ಬಡ್ಡೀ ಮಗನೇ? ಬೊಗಳೋ ಬಾಯಿ ಬಿಡೋ ಲೌ..ಕಾ..ಲ್. ಇನ್ನೊಂದ್ಸಾರಿ ಪೊಲೀಸ್ತನ ಮಾಡ್ತೀಯೇನೋ. ಈ ದೊಣ್ಣೇಗೆ ಖಾರಾ ಪುಡಿ ಹಾಕಿ ತುರಕಬಾರದ ಜಾಗದಲ್ಲಿ ತುರುಕಿದ್ರೆ ಬರುತ್ತೆ ಬುದ್ಧಿ ನಿನಗೆ ಎಂದು ಎಡ ಬಲ ಮೇಲೆ ಕೆಳಗೆ ಏನೂ ನೋಡದೆ ಜಡಿಯುತ್ತಿದ್ದರು ಕಳ್ಳರು, ಕಳ್ಳರ ಠಾಣೆಯಲ್ಲಿ. ಸಾರ್ ಇಲ್ಲಾ ಸಾರ್ ಬಿಟ್ಟುಬಿಡಿ ಸಾರ್ ನಾನು ಪೊಲೀಸ್ತನ ಮಾಡಿಲ್ಲ ಸಾರ್. ದೇವರಾಣೆ, ನಮ್ಮಮ್ಮನಾಣೆ ಎಲ್ಲಾ ಕಸುಬು ಬಿಟ್ಟು ಬಹಳ ದಿನಗಳಾಯ್ತು ಸಾರ್. ನಂಬೀ ಸಾರ್ ನಿಮ್ಮ ಕಾಲಿಗೆ ಬೀಳ್ತೀನಿ ಬಿಟ್ಬಿಡಿ ಸಾರ್ ಹೆಂಡತಿ ಮಕ್ಕಳೊಂದಿಗ ಪ್ಲೀಸ್ ಜೈಲಿಗೆ ಹಾಕಬೇಡಿ ಎಂದು ಕಾಲಿಗೆ ಬಿದ್ದು ಗೋಗರೆಯುತ್ತಿದ್ದರೂ ಏನೂ ಪ್ರಯೋಜನವಾಗದೇ ಏರೋಪ್ಲೇನ್ ಹತ್ತಿಸುತ್ತಲೇ ಇದ್ದರು ಡೊಳ್ಳು ಹೊಟ್ಟೆಯ ಎರಡು ನಕ್ಷತ್ರ, ಮೂರು ನಕ್ಷತ್ರಗಳನ್ನು ಹೊತ್ತ ಕಳ್ಳರುಗಳು. ಅದೆಷ್ಟೋ ಹೊತ್ತಿನ ನಂತರ ಅಪರಾಧಿಯ ಶಕ್ತಿ ಉಡುಗಿಹೋಯ್ತೋ ಅಥವಾ ಕಳ್ಳರುಗಳ ತಿಂದಿದ್ದ ಕನ್ನ ಜೀರ್ಣವಾಯ್ತೋ ಗೊತ್ತಿಲ್ಲ ಅಪರಾಧಿಯನ್ನು ಸೆಲ್ಲಿನಲ್ಲಿ ಹಾಕಿ ಬೀಗ ಜಡಿದು ಹೊರಬಂದರು.

ನಾಳೆ ಆ ಪೊಲೀಸನನ್ನು ಅನ್ಯಾಯಾಲಯಕ್ಕೆ ಹಾಜರು ಪಡಿಸಬೇಕು ರಿಪೋರ್ಟು ತಯಾರು ಮಾಡೆಂದು ಕನಿಷ್ಟಬಿಲ್ಲೆಯೊಬ್ಬನಿಗೆ ಹೇಳಿ ತನ್ನ ಆಸನದಲ್ಲಿ ವಿರಾಜಮಾನವಾಗುವಷ್ಟರಲ್ಲಿ ಆ ಅನಾಥಾಶ್ರಮ ನಡೆಸುತ್ತಿದ್ದವನ ಮೊಕದ್ದಮೆ ಇವತ್ತು ಇನ್ನು ಒಂದು ಘಂಟೆಯಲ್ಲಿ ಶುರುವಾಗಲಿದೆ ಎಂದು ಹೇಳಿದ್ದೇ ನೆಡಿ ಎಂದು ತನ್ನ ಗರಿ ಗರಿ ಟೊಪ್ಪಿಗೆಯನ್ನು ತಲೆಯ ಮೇಲೆ ಅಲಂಕರಿಸಿ, ಪ್ಯಾಂಟು ಸರಿಪಡಿಸಿಕೊಂಡು ಹೊರಬೀಳುವನು. ತನ್ನ ಬೆನ್ಝ್ ಕಾರಿನಲ್ಲಿ ಜುಯ್ಯನೆ ಹಾರಿದವನೆ ಅನ್ಯಾಯಾಲಯದ ಮುಂದೆ ಇಳಿದು ಬಿಕೋ ಎನ್ನುತ್ತಿದ್ದ ಆವರಣದಲ್ಲಿ ಆಕಳಿಸುತ್ತಾ ಹತ್ತು ನಿಮಿಷ ಮುಂಚಿತವಾಗಿಯೇ ತಲುಪಿದೆನಲ್ಲಾ ಎಂದುಕೊಳ್ಳುತ್ತಾ ಒಳಪ್ರವೇಶಿಸಿದರೆ ಸಮಯಕ್ಕೆ ಮುಂಚಿತವಾಗಿಯೇ ವಾದ ಶುರುವಾಗಿರುವುದನ್ನು ಕಂಡು ತನ್ನ ಕಡತಗಳನ್ನು ಮಂಡಿಸಿ ಕೂರುವನು. ಕಟಕಟೆಯಲ್ಲಿ ನಿಂತಿದ್ದ ಅನ್ಯಾಯಾಧೀಶರು ವಾದ ಮಂಡಿಸುತ್ತಿದ್ದ ವಾಕಿಲರನ್ನೊಮ್ಮೆ, ಪೆದ್ದನಂತೆ ಮೇಲೆ ಹತ್ತಿ ಕೂತಿದ್ದ ಅಪರಾಧಿಯನ್ನೊಮ್ಮೆ ನೋಡುತ್ತಲಿರುವರು. ಗೌರವಾನ್ವಿತರೇ ಈ ಸ್ಥಾನದಲ್ಲಿ ಕುಳಿತಿರುವ ಈ ವ್ಯಕ್ತಿ ಎರಡು ಸಾವಿರ ಎಕರೆಗಳ ಭೂಮಿಯನ್ನು ಆಶ್ರಮ, ಪ್ರಾರ್ಥನಾ ಮಂದಿರಗಳನ್ನು ಕಟ್ಟುವುದಾಗಿ ಹೇಳಿ ಪಡೆದದ್ದೂ ಅಲ್ಲದೇ ಈಗ ಅನಾಥಾಶ್ರಮ ಕಟ್ಟಲು ಮುಂದಾಗಿದ್ದಾನೆ ಮಾತ್ರವಲ್ಲದೇ ಈಗಾಗಲೇ ಹಲವಾರು ರೀತಿಯಲ್ಲಿ ದಾನ ಮಾಡಿ ತನ್ನ ಶ್ರೀಮಂತಿಕೆಯನ್ನು ಕಳೆದುಕೊಂಡಿದ್ದಾನೆ. ಸಿಕ್ಕ ಸಿಕ್ಕವರಲ್ಲಿ ಒಳ್ಳೆಯತನ, ಹೃದಯವೈಶಾಲ್ಯತೆಯ ಬಗ್ಗೆ ಮೊಳೆ ಹೊಡೆಯುತ್ತಿರುತ್ತಾನೆ. ಇವನಂತಹ ಒಬ್ಬರಿದ್ದರೆ ಸಾಕು ನಮ್ಮ ಊರು ಸರ್ವನಾಶವಾಗುವುದಕ್ಕೆ. ಇನ್ನೊಬ್ಬರು ಈತನಿಂದ ಪ್ರೇರಿತರಾಗಿ ಸಮಾಜಸೇವೆಗೆ ಇಳಿಯುವ ಮುನ್ನ ಈತನಿಗೆ ಘೋರವಾದ ಶಿಕ್ಷೆಯಾಗಬೇಕೆಂದು ನನ್ನ ವಿನಂತಿ. ಅನ್ಯಾಯಾಧೀಶರು ತಲೆಕೆರೆದುಕೊಳ್ಳುತ್ತಾ ಏನಯ್ಯಾ ನೀನು ಮಾಡಿದ್ದು ಸರಿಯೇ ಎನ್ನಲು, ಆತ ಒಮ್ಮೆ ಬಿಳಿಬಟ್ಟೆ ಕಣ್ಣಿಗೆ ಕಟ್ಟಿಕೊಂಡಿರುವ, ತಕ್ಕಡಿಯ ಮೇಲೆ ನಿಂತಿರುವ ಕಪ್ಪು ಗಂಡು ಮೂರ್ತಿಯ ಕಡೆ ಒಮ್ಮೆ ನೋಡಿ ಮತ್ತೊಮ್ಮೆ ತನ್ನ ಪರ ವಾಕಿಲರ ಕಡೆ ಒಮ್ಮೆ ನೋಡಿ ಕಣ್ಣು ಹೊಡೆಯಲು ಆತ ಛಂಗನೆ ಮೇಲೆದ್ದು ಇಲ್ಲಾ ಮಹಾಸ್ವಾಮಿ ನನ್ನ ಕುಕ್ಷೀದಾರ ಅಂತಹ ಅಪರಾಧವನ್ನೇನೂ ಮಾಡಿಲ್ಲ ಈ ಅಪವಾದಗಳೆಲ್ಲಾ ಸುಳ್ಳು, ಆಧಾರರಹಿತ. ಆತ ತೆರೆಯಲು ಹೊರಟಿದ್ದು ಹೈಟೆಕ್ ವೇಶ್ಯಾವಾಟಿಕೆಯನ್ನೇ, ಇದಕ್ಕೆ ಸಂಬಂಧಪಟ್ಟ ಪುರಾವೆಗಳು ನಮ್ಮ ಬಳಿಯೇ ಇದ್ದಾವೆ ಎಂದು ಅದನ್ನು ಮಂಡಿಸುವನು. ಅನ್ಯಾಯಾಧೀಶರು ಅದನ್ನು ತಮ್ಮ ಬೋಳುತಲೆಯೊಳಗೆ ತುರುಕಿ ಪರಾಂಬರಿಸಿ ಮೊಕದ್ದಮೆಯ ವಿಚಾರಣೆಯನ್ನು ಅಲ್ಲಿಗೇ ಮೊಟಕುಗೊಳಿಸಿ ತೀರ್ಪನ್ನು ತತ್ಕ್ಷಣವೇ ಇತ್ತು ಮೊಕದ್ದಮೆಯನ್ನು ವಜಾಗೊಳಿಸಿ ಅಪರಾಧಿ ಸ್ಥಾನದಲ್ಲಿದ್ದವನ ವಿಸಿಟಿಂಗ್ ಕಾರ್ಡ್ ಕೇಳಿ ಪಡೆದು ಜಾಗ ಖಾಲಿ ಮಾಡುವರು. ಇಂಥ ದಾನ ಧರ್ಮ ಮಾಡೋರನ್ನೆಲ್ಲಾ ಗುಂಡಿಟ್ಟು ಕೊಲ್ಲುವುದನ್ನ ಬಿಟ್ಟು ವಿಚಾರಣೆ ಮಾಡಿ ಲಂಚ ತಿಂದು ಹೊರಗೆ ಕಳುಹಿಸಿ ಪ್ರಪಂಚ ಹಾಳು ಮಾಡ್ತಾರೆ ಸೂ.. ಮಕ್ಕಳು ಎಂದು ತನ್ನಷ್ಟಕ್ಕೆ ತಾನೇ ಬಯ್ದುಕೊಳ್ಳುತ್ತಾ ಬೆನ್ಝ್ ಹೊಕ್ಕು ಮತ್ತೆ ಠಾಣೆಗೆ ಬಂದು ಇದ್ದ ಬದ್ದ ಕೋಪವನ್ನೆಲ್ಲಾ ಸೆಲ್ ಗಳಲ್ಲಿ ಮುದುರಿಕೊಂಡಿದ್ದ ಸತ್ಯ, ನೀತಿ, ಪ್ರೀತಿಯ ಪ್ರತಿನಿಧಿಗಳ ಮೇಲೆ ತೀರಿಸಿಕೊಳ್ಳೂವನು.

ಇನ್ನೊಂದೆಡೆ

ಸೈಲೆನ್ಸ್ ಪ್ಲೀಸ್ ಎಂಬ ನಾಮಫಲಕ ಕೂಡ ನಾಚುವಷ್ಟು ಸ್ತಬ್ಧ ಪ್ರಪಂಚ. ಎಲ್ಲ ಸತ್ತೇ ಹೋಗಿರುವರೇನೋ ಎಂದು ಪರಿಗಣಿಸಬಹುದಾದಷ್ಟು ಚಿಕ್ಕದಾಗಿ ಉಸಿರೆಳೆದುಬಿಡುತ್ತಿರುವರು. ಇಂತಹ ಶಾಂತವಾದ ವಾತಾವರಣವನ್ನು ಒಂದೇ ಕ್ಷಣದಲ್ಲಿ ಧಿಡೀರನೆ ಕಲಕಿ ಕೋಲಾಹಾಲವೆಬ್ಬಿಸುವಂತೆ ಫೋನೊಂದು ಟುರ್ರ್‍ರ್‍ರ್‍ರ್‍ರ್‍ರ್‍ರ್‍ ಎಂದು ಬಾಯಿ ಬಾಯಿ ಬಡಿದುಕೊಂಡಿದ್ದೇ ಆಸ್ಪತ್ರೆಯ ವಿಶೇಷ, ಸಾಧಾರಣ ಕೊಠಡಿಗಳಲ್ಲಿ ಮಂಚಗಳ ಮೇಲೆ ಮಲಗಿದ್ದ ಎಲ್ಲ ಕಣ್ಣು, ಕಿವಿ, ಮೂಗು, ನರ, ಸಾಮಾನು, ಕೈಕಾಲು, ಉಗುರು ತಜ್ಞರುಗಳ ನವರಂದ್ರಗಳಲ್ಲಿ ಫೋನಿನ ಘಂಟಾನಾದ ಹೊಕ್ಕು ನರಮಂಡಲವನ್ನೆಲ್ಲಾ ಒಮ್ಮೆ ಜಾಗೃತಗೊಳಿಸಿ ಎದ್ದು ಬಿದ್ದು ಓಹೋ.. ಕರೆ ಬಂದಿರುವುದು ನನಗೇ ನನಗೇ ಎಂದು ನೂಕುನುಗ್ಗಲಿನಲ್ಲಿ ಫೋನಿನೆಡೆಗೆ ಧಾವಿಸಿ ಫೋನಿನ್ನೂ ಬಾಯಿಬಡಿದುಕೊಳ್ಳುತ್ತಿದ್ದರೂ ನಾನು ತಾನು ಎಂದು ಜಗ್ಗಾಡಿ ಗುದ್ದಾಡಿ ಮತ್ತೆ ಮಾಮೂಲಿನಂತೆ ಒಪ್ಪಂದಕ್ಕೆ ಬಂದು ಲೌಡ್ ಸ್ಪೀಕರ್ ಹಾಕಿ ಅತ್ತಣಿನಿಂದ ಬರಬೇಕಾದ ಅತ್ಯಮೂಲ್ಯ ದನಿಗೆ ಸಕಲ ಕಣ್ಣು ಬಾಯಿಗಳನ್ನು ತೆರೆದು ತೀಕ್ಷ್ಣವಾಗಿ ಆಲಿಸುವರು. ಹಲ್ಲೋ ಎನ್ನುವ ಧ್ವನಿ ಹೊರಬರುವ ಮೊದಲೇ ಕಂಚಿನ ಕಂಠದ ಧ್ವನಿಯು ಉಹು ಉಹು ಎಂದು ಕೆಮ್ಮಿದ್ದೇ ಇದು ನನ್ನ ವಿಭಾಗ ಎಂದು ಗಂಟಲ ತಜ್ಞ, ಇಲ್ಲಾ ಇದು ನನ್ನ ವಿಭಾಗ ಎಂದು ಮೂಗು ತಜ್ಞ, ಸಾಧ್ಯವೇ ಇಲ್ಲ ಇದು ತನ್ನ ವಿಭಾಗ ಎಂದು ಟಿಬಿ ತಜ್ಞ ಕಿತ್ತಾಡಲು ಶುರುಮಾಡಿಯೇ ಸಾರ್ ನಿಮಗೆ ಯಾವಾಗಿನಿಂದ ಕೆಮ್ಮು, ಯಾವ ರೀತಿ ಕೆಮ್ಮು ಬರುತ್ತಿದೆ, ಎದೆ ಉರಿ ಏನಾದರೂ ಕಾಣಿಸಿಕೊಳ್ಳುವುದೇ, ಕೆಮ್ಮಿದಾಗ ಕಫದ ಜೊತೆಗೆ ರಕ್ತವೇನಾದರೂ ಬರುವುದಾ ಎಂದೆಲ್ಲಾ ಒಂದೇ ಉಸಿರಿಗೆ ಕೇಳಿದ್ದಕ್ಕೆ ಹೆದರಿದ ಫೋನ್ ಜೀವ ಆರಾಮವಾಗಿ ಪ್ರತಿಕ್ರಿಯಿಸುತ್ತಾ ಅಯ್ಯೋ ಇಲ್ಲ ನೋಡಿ ಇವರೇ ನಿಮ್ಮ ಆಸ್ಪತ್ರೆ ತುಂಬಾ ಹೆಸರುವಾಸಿ ಆಸ್ಪತ್ರೆ ದೊಡ್ಡ ದೊಡ್ಡ ತಜ್ಞರನ್ನ ಒಳಗೊಂಡಿದೆ ಅಂತ ಕೇಳ್ಪಟ್ಟೆ, ಆದರೆ ನನಗೆ ಈ ಬಾರಿ ಯಾರೂ ವಿಶೇಷ ತಜ್ಞರು ಬೇಕಾಗಿರಲಿಲ್ಲ ಎನ್ನುವಷ್ಟರಲ್ಲಿಯೇ ಇತ್ತ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಸರ್ ಧನ್ಯವಾದಗಳು ನಮ್ಮ ಆಸ್ಪತ್ರೆಯ ಮೇಲೆ ನಂಬಿಕೆಯಿಟ್ಟು ಕರೆ ಮಾಡಿದ್ದಕ್ಕೆ. ಯಾವ ರೀತಿಯ ಸೇವೆ ಬೇಕಾಗಿತ್ತು ತಮಗೆ. ನಾವು ಹೊಸ ಸದಸ್ಯರಿಗೆ ಮೊದಲ ಮೂರು ಭೇಟಿಗೆ ಯಾವುದೇ ರೀತಿಯಲ್ಲಿ ಚಾರ್ಜ್ ಮಾಡುವುದಿಲ್ಲ. ನಂತರವೂ ಸಹ ಶಸ್ತ್ರಚಿಕಿತ್ಸೆಗಳಲ್ಲಿ, ಸ್ಕ್ಯಾನಿಂಗ್ ಇನ್ನೂ ಹಲವು ಚೆಕಪ್ ಗಳಲ್ಲಿ ರಿಯಯಿತಿ ನೀಡಲಾಗುತ್ತದೆ. ನಿಮಗೀಗ ಏನಾಗಬೇಕಿತ್ತು ಹೇಳಿ ನಮ್ಮ ವೈದ್ಯರ ತಂಡವು ಅರ್ಧ ತಾಸಿನಲ್ಲಿ ನಿಮ್ಮ ಸೇವೆಯಲ್ಲಿರುತ್ತೆ ಎಂದು ಪೂರ್ತಿ ವಿವರ ಒಪ್ಪಿಸುತ್ತಾರೆ. ಆ ಧ್ವನಿ ಎಲ್ಲಾ ಕೇಳಿ, ನನ್ನ ಸಮಸ್ಯೆ ಏನೆಂದರೆ ನನ್ನ ತಂದೆ ತೀರಿಹೋಗಿದ್ದಾರೆ, ನಿಮ್ಮ ವೈದ್ಯರೊಬ್ಬರು ಬಂದು ತಪಾಸಣೆ ಮಾಡಿ ರಿಪೋರ್ಟ್ ನೀಡಿದರೆ ನನ್ನ ಮುಂದಿನ ಖರ್ಚಿನ ಮರುಪಾವತಿಗೆ ಸುಲಭವಾಗುತ್ತದೆ, ಇದಕ್ಕೆ ನಿಮ್ಮ ಆಸ್ಪತ್ರೆಯಲ್ಲಿ ಯಾವ ರೀತಿ ಚಾರ್ಜ್ ಮಾಡ್ತೀರಿ, ಮುಂದೆ ಇನ್ನೂ ತಾಯಿಯ ಕೆಲವು ಚೆಕಪ್ ಗಳು, ಶಸ್ತ್ರಚಿಕಿತ್ಸೆಗಳು ಇವೆ ನಿಮ್ಮನ್ನೇ ಸಂಪರ್ಕಿಸುತ್ತೇನೆ ಎಂದದ್ದಕ್ಕೆ, ವೈದ್ಯಾಧಿಕಾರಿ ನಿಮ್ಮ ತಂದೆಯ ಆತ್ಮಕ್ಕೆ ಶಾಂತಿ ಸಿಗಲಿ, ಹಾಗೂ ನೋಡಿ ಮರಣಾನಂತರದ ಸೇವೆಗೆ ನಮ್ಮ ಆಸ್ಪತ್ರೆಯಲ್ಲಿ ಯಾವುದೇ ರೀತಿಯ ಶುಲ್ಕ ವಿಧಿಸುವುದಿಲ್ಲ. ನೀವು ದಯವಿಟ್ಟು ನಿಮ್ಮ ವಿಳಾಸ ಬರೆಸಿದರೆ ಅರ್ಧ ಘಂಟೆಯಲ್ಲಿ ನಮ್ಮ ವೈದ್ಯರು ನಿಮ್ಮ ಮನೆಗೆ ತಲುಪುತ್ತಾರೆ ಎಂದು ಆಡಿದಂತೆಯೇ, ನಿಗದಿಪಡಿಸಿದ ಅವಧಿಗೂ ಮುನ್ನ ಕೆಲಸ ಮುಗಿಸುವರು.

ತಾನು ಕರೆಯಿಸಿದ್ದ ಡಾಕ್ಟರುಗಳ ತಂಡ ಮತ್ತು ಸಾವಿನ ಮನೆಯೆಂದು ಗೊತ್ತಾದದ್ದೇ ತಮ್ಮ ವಿಸಿಟಿಂಗ್ ಕಾರ್ಡ್ ಕೊಡಲು ಬಂದಿದ್ದ ಇನ್ನೊಂದೆರಡು ಆಸ್ಪತ್ರೆಯವರನ್ನೂ ಸಾಗಹಾಕಿದ ನಂತರ ತನ್ನ ಹೆಂಡತಿ ವೈದ್ಯರನ್ನು ಕರೆಸುವ ಅಗತ್ಯವೇನಿತ್ತು ನಾವೇ ಇಂಟರ್ ನೆಟ್ಟಿನಲ್ಲಿ ಪಡೆಯಬಹುದಿತ್ತಲ್ಲಾ ಎಲ್ಲಾ ಮಾಹಿತಿ, ಎಂತೆಂಥಾ ಆರೋಗ್ಯ ಸಮಸ್ಯೆಗಳಿಗೇ ಕರೆಯೋದಿಲ್ಲ ಸುಖಾ ಸುಮ್ಮನೆ ಈಗ ಕರೆಸೋದು ಬೇಕಿತ್ತಾ ಎಂದು ತಕರಾರು ಶುರುಮಾಡಿದ್ದಕ್ಕೆ, ಅಯ್ಯೋ ಸುಮ್ಮನೆ ಒಂದು ಬಿಟ್ಟಿ ಫೋನು ಖರ್ಚಷ್ಟೇ ಉಚಿತವಾಗಿ ಮಾಡಿದರು ಹೋದರು, ಏನ್ ಹೆಣ ಇಟ್ಟುಕೊಂಡು ಕೋಟ್ಯಾಂತರ ರೂಪಾಯಿ ಕುಯ್ಕೋತಾರೆ ಅಂದಿದ್ದರೆ ಸಹವಾಸಕ್ಕೇ ಹೋಗ್ತಿರಲಿಲ್ಲ. ತಲೆ ಕೆಡಿಸಿಕೊಳ್ಳೋದು ಬೇಡ ಮುಂದಿನ ಕಾರ್ಯ ನೋಡೋಣ ನೆಡಿ ಎಂದು ಸುಮ್ಮನಾಗಿಸುವರು.




ಮತ್ತೊಂದೆಡೆ

ಗಲ್ಲಿ ಗಲ್ಲಿಗೊಬ್ಬೊಬ್ಬರು ಕಂತ್ರಿಯ ಫೋಟೋ ಉಳ್ಳ ದೊಡ್ಡ ದೊಡ್ಡ ಪೋಸ್ಟರುಗಳು. ಫೋಟೋಗಳಲ್ಲಿಯೂ ಕೈಯಲ್ಲಿ ದುಡ್ಡು ಹಿಡಿದು, ದುಡ್ಡನ್ನು ತಲೆಗೆ ಒತ್ತಿಕೊಳ್ಳುತ್ತಿರುವ ಹಾಗೆ, ದುಡ್ಡಿಗೆ ನಮಸ್ಕರಿಸುತ್ತಿರುವ ಹಾಗೆ ವಿಶೇಷ ಭಂಗಿಗಳಲ್ಲಿ ನಿಂತಿರುವರು. ಈ ಕಂತ್ರಿ ಪ್ರತಿನಿತ್ಯ ತನ್ನ ಕಪ್ಪು ಟೊಪ್ಪಿಗೆ ತೊಟ್ಟು ಯಾರ ಮನೆಯ ಮುಂದೆ ಪ್ರತ್ಯಕ್ಷನಾಗಿ ಕೈಜೋಡಿಸಿ ನಮಸ್ಕರಿಸುವ ಭಂಗಿಯಲ್ಲಿ ಹಿ ಹಿ ಹಿ ಎಂದು ಹಲ್ಲು ಕಿರಿದು ನಿಲ್ಲುವನೋ ಆ ಮನೆಯವರು ಹೊರಬಂದು ಇವನ ಮುಖಕ್ಕೆ ಕಾಸು ಎಸೆಯಬೇಕೆಂಬುದು ವಾಡಿಕೆ. ಆಗ ಕಂತ್ರಿಯ ಹಿಂದೆ ಚೀಲಗಳನ್ನು ಹಿಡಿದು ನಿಂತಿರುವ ಇಬ್ಬರು ಹೆಗಲ ಮೇಲೆ ನಕ್ಷತ್ರಗಳನ್ನು ಹೊತ್ತ ಡೊಳ್ಳು ಹೊಟ್ಟೆಯ ಕಳ್ಳರುಗಳು ತೆಗೆದುಕೊಂಡು ದೊಡ್ಡ ದೊಡ್ಡ ಚೀಲವನ್ನು ತುಂಬಿಸಿಕೊಂಡು ಹೆಗಲೇರಿಸಿಕೊಂಡು ಹೊರಡುವರು. ಯಾವ ಗಲ್ಲಿಯವರು ರಸ್ತೆ ರಿಪೇರಿ ಮಾಡಿಸಿದರೂ, ಎಲ್ಲಿ ನೀರು ಸರಬರಾಜಿನ ಕೆಲಸ ಮಾಡಿಸುತ್ತಿದ್ದರೂ ಈತ ಅದೇ ವೇಷದಲ್ಲಿ, ಭಂಗಿಯಲ್ಲಿ ಹಲ್ಲು ಕಿರಿಯುತ್ತಾ ಕೈಜೋಡಿಸಿಕೊಂಡು ಬಂದು ನಿಲ್ಲುವನು, ಇವನ ತಲೆಯ ಮೇಲಿನ ಕಪ್ಪು ಟೊಪ್ಪಿಗೆಯನ್ನು ನೋಡಿದ್ದೇ ಜನ ಇವನೆಡೆಗೆ ಕಾಸು ಚೆಲ್ಲುವರು. ಹೀಗೆ ಪ್ರತಿನಿತ್ಯ ಎಲ್ಲಂದರಲ್ಲಿ ಕಾಣಿಸಿಕೊಳ್ಳುವ ಈ ಕಂತ್ರಿ ಮಹಾಶಯರುಗಳು ಐದು ವರ್ಷಕ್ಕೊಮ್ಮೆ ಕಾಣೆಯಾಗಿ ಹೋಗುವರು. ಹೀಗೆ ಕಾಣೆಯಾಗಿ ಹೋದರೆಂದರೆ ಜನಕ್ಕೆ ಧಿಡೀರನೆ ನೆನಪಾಗಿಬಿಡುವುದು ಇದು ಚುನಾವಣೆಯ ಸಮಯ ಎಂದು. ಸಮಸ್ತ ನಾಗರೀಕ ಸಮಾಜದ ಸತ್-ಪ್ರಜೆಗಳು ಒಗ್ಗೂಡಿ ಚುನಾವಣೆಯನ್ನು ಏರ್ಪಡಿಸಿ ಎಲ್ಲ ಕಂತ್ರಿಗಳು ಮತ್ತು ಅವರ ಸ್ಪರ್ಧಿಗಳನ್ನು ಒಟ್ಟು ಗುಡ್ಡೆ ಹಾಕಿ ಚುನಾವಣೆ ನಡೆಸುವರು. ಮತ್ತೆ ಕಂತ್ರಿಯಾಗಲು ಕಂತ್ರಿಗಳು ವರ್ಸಸ್ ಸ್ಪರ್ಧಿಗಳಲ್ಲಿ ಯಾರು ಹೆಚ್ಚು ಅರ್ಹರು ಎಂದು ಚರ್ಚೆ ನಡೆಯುವುದು. ಕಂತ್ರಿಗಳು ಆಡಳಿತಾವಧಿಯಲ್ಲಿ ಎಷ್ಟು ಹಣ ಪಡೆಯಲು ಸಮರ್ಥರಾದರು ಸ್ಪರ್ಧಿಗಳು ಕಂತ್ರಿಗಳಿಂದ ಎಷ್ಟು ಹಣ ಕೊಳ್ಳೆ ಹೊಡೆಯಲು ಸಮರ್ಥರಾದರು ಎಂಬ ಆಧಾರದ ಮೇಲೆ ಮತ ನೀಡಿ ಮುಂದಿನ ಕಂತ್ರಿಗಳನ್ನು ನಿರ್ಧರಿಸುವರು. ಹೊಸ ಕಂತ್ರಿಯು ಮತ್ತೆ ಅದೇ ಕಾರ್ಯ ಮುಂದುವರೆಸುತ್ತಾ ಹೋಗುವನು.

ಎಡೆ

ಅಪ್ಪ ಈ ಬಾರಿ ಶಾಲೆಯಲ್ಲಿ ಫಲಿತಾಂಶದ ಮೊತ್ತ ಜಾಸ್ತಿ ಮಾಡಿದ್ದಾರೆ, ನೋಟೀಸ್ ಹಾಕಿದ್ರು ಎಂದದ್ದೇ ವೃತ್ತ ಪತ್ರಿಕೆ ಓದುತ್ತಿದ್ದವರು ಕೆಳಗಿಟ್ಟು ಎಷ್ಟಂತೆ ಎಂದು ಮಗನ ಕಡೆ ನೋಡಲು, ಒಂದು ಪರ್ ಸೆಂಟಿಗೆ ಒಂದು ಸಾವಿರ ಕಟ್ಟಬೇಕಂತೆ ಎನ್ನುವನು. ನಿನಗೆ ಬಂದಿರೋದೆಷ್ಟು ಇವಾಗ ಎನ್ನಲು ೨೩% ಬಂದಿದೆ ನನಗೆ ಬೇಕಿರುವ ಕಾಲೇಜಿಗೆ ಸೇರಬೇಕೆಂದರೆ ೬೪% ಅದ್ರೂ ಬೇಕು ಹಾಗಾಗಿ ನಲವತ್ತೊಂದು ಸಾವಿರವಾದರೂ ಬೇಕಾಗುತ್ತೆ ಎನ್ನುತ್ತಿದ್ದಂತೆಯೇ ಸಿಟ್ಟೇರಿ ಅದಕ್ಕೇ ಓದೋ ಚೆನ್ನಾಗಿ ಅಂದ್ರೆ ಕೇಳಲ್ಲಾ ನೋಡೀಗ ಯಾವ ಗತಿ ಎಂದು ಮತ್ತೇ ಪೇಪರು ಹಿಡಿದು ಸುಮ್ಮನಾಗುವರು. ಅಪ್ಪ ಈ ಮೆಡಿಕಲ್, ಇಂಜಿನೀರಿಂಗ್ ಆಸೆ ಬಿಟ್ಟು ಕಂತ್ರಿಗಳ ಪಾರ್ಟಿ ಸೇರಿಬಿಟ್ಟರೆ ಹೇಗೆ ಎಂದು ಪ್ರಶ್ನಿಸಿ ಅಪ್ಪನ ಮುಖ ನೋಡುವನು. ಏನು ಉತ್ತರ ಹೇಳುವುದೆಂದು ಅಪ್ಪ ಮಿಕಿ ಮಿಕಿ ನೋಡುವನು!




ನೀ.ಮ. ಹೇಮಂತ್