ಓದಿ ಓಡಿದವರು!

Tuesday 20 March 2012

ಮಾನವನಿಲ್ಲದ ಪ್ರಪಂಚ!


ಮಾನವನಿಲ್ಲದ ಪ್ರಪಂಚ! 


ಇದನ್ನು ಊಹಿಸಲು ಸಾಧ್ಯವಿದೆಯಾ? ಇಂದು ಮನುಷ್ಯನಿಗಾಗಿಯೇ ಪ್ರಪಂಚರಿವುದು. ಮನುಷ್ಯನಿಲ್ಲವಾದಲ್ಲಿ ಪ್ರಪಂಚ ವಿನಾಶವಾದಂತೆಯೇ ಲೆಕ್ಕ. ಈ ಪ್ರಪಂಚ ಮನುಷ್ಯನದೇ. ಇಷ್ಟು ಅಗಾಧವಾದ ಭೂಮಿಯನ್ನು (೨೦೦ ಮಿಲಿಯನ್ ಸ್ಕ್ವೇರ್ ಮೈಲ್) ೩೦ ರಿಂದ ೪೦ ಸೈಟ್ ಆಗಿ ಹರಿದು ಹಂಚಿಕೊಂಡು ಭೂಮಿಗೇ ಒಡೆಯನಾಗಿರುವ ಮಾನವ ಅಕಸ್ಮಾತ್ ಈ ಭೂಮಿ ಮೇಲೆ ಇಲ್ಲದೇ ಹೋಗಿದ್ದರೆ ಏನಾಗಬಹುದಿತ್ತು! ಕುತೂಹಲವೆನಿಸಿತು. ಮೊಟ್ಟ ಮೊದಲನೆಯದಾಗಿ, ಈ ನನ್ನ ಕಥೆಯನ್ನು ಓದಲು ಯಾರೂ ಇರುತ್ತಿರಲಿಲ್ಲ, ಕಥೆ ಬರೆಯಲು ನಾನೇ ಇರುತ್ತಿರಲಿಲ್ಲ, ಅದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಇದು ಶುದ್ಧ ಅಸಂಬದ್ಧ ಕಲ್ಪನೆ ಎಂದು ಮೊಟ್ಟಮೊದಲಿಗೇ ಅನಿಸಿತು. ಆದರೆ ಹಾಗೇ ಮಾನವ ವಿಕಾಸಕ್ಕೆ ಕಾರಣವಾದ ಆ ವಾನರನ ಕಾಲಕ್ಕೆ ಹಾಗೇ ಕಲ್ಪನೆಯಲ್ಲೇ ಹೋಗಿ ಅಂದು ಮರಗಳಿಲ್ಲದ, ಹುಲ್ಲುಗಳ ಪ್ರದೇಶದಲ್ಲಿ ತನ್ನ ಬಾಲದ ಉಪಯೋಗ ಕಾಣದೆ ಮತ್ತು ಹೊಟ್ಟೆ ಹೊರೆದುಕೊಳ್ಳಲೋಸಗ ಭೂಮಿಗಿಳಿದ ಅನಿವಾರ್ಯತೆಯಿಂದಾಗಿ ಕ್ರಮೇಣ ಮೆದುಳನ್ನು ಬೆಳೆಸಿಕೊಂಡು ಉದ್ದನೆಯ ಮುಂಗಾಲನ್ನು ಕಳೆದುಕೊಂಡು ಮಾನವನ ಉಗಮಕ್ಕೆ ಕಾರಣವಾನರರ ಗುಂಪು ಒಂದು ಅಕಸ್ಮಾತ್ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ನಾಶವಾಗಿದ್ದಲ್ಲಿ. ಮತ್ತೆ ಮರಗಳು ಬೆಳೆದು ಮತ್ತೆ ಬಾಲವನ್ನು ಉಪಯೋಗಿಸಿ, ಮರದಲ್ಲೇ ಉಳಿದಿದ್ದರೆ ಇಂದು ಏನಾಗಿರುತ್ತಿತ್ತು. ಇದು ತರ್ಕಬದ್ಧವಾದ ವಿಚಾರವೇ ಸರಿ. ಅಂದು ಹಾಗಾಗಿದ್ದಲ್ಲಿ, ಇಂದು!

ಈಗ ಈ ಭೂಮಿ ಮೇಲೆ ಮಾನವನಿಲ್ಲ. ಮಾನವನಿಲ್ಲವೆಂದ ತಕ್ಷಣ ಇಲ್ಲಿ ಮೊಟ್ಟಮೊದಲನೆಯದಾಗಿ ಎಂತೆಂಥಾ ಗಗನ ಚುಂಬೀ ಕಟ್ಟಡಗಳಿಂದ ಹಿಡಿದು ಪುಟ್ಟ ಗುಡಿಸಿಲಿನ ವರೆಗೂ ಯಾವುದೇ ರೀತಿಯ ಕಟ್ಟಡಗಳಿಲ್ಲ, ಕಟ್ಟಡಗಳೇ ಇಲ್ಲದ ಮೇಲೆ ರಸ್ತೆಗಳಿಗೇನು ಕೆಲಸ, ಮೊಬೈಲ್ ಟವರ್ ಗಳಿಲ್ಲ, ವಿದ್ಯುತ್ ಸ್ಥಾವರಳಲಿಲ್ಲ, ವಾಹನಗಳಿಲ್ಲ, ತೋಟಗಳಿಲ್ಲ, ಅಭಯಾರಣ್ಯಗಳಿಲ್ಲ, ಗಡಿಗಳಿಲ್ಲ, ಬಾವಿಗಳಿಲ್ಲ, ಕಾಲುವೆಗಳಿಲ್ಲ, ಕೆರೆಕಟ್ಟೆಗಳಿಲ್ಲ, ಅಣೆಕಟ್ಟುಗಳಿಲ್ಲ, ಪುತ್ಥಳಿಗಳಿಲ್ಲ, ದೇಶಗಳಿಲ್ಲ, ಹೆಸರುಗಳಿಲ್ಲ, ಜಾತಿಗಳಿಲ್ಲ, ಜಗಳಗಳಿಲ್ಲ, ದೇವರುಗಳಿಲ್ಲ, ಕರ್ಕಶ ಶಭ್ದಗಳಿಲ್ಲ, ಹೊಗೆಯಿಲ್ಲ, ಕೃತಕತೆಯಿಲ್ಲ, ಕೃತಕ ಮಾಲಿನ್ಯವಿಲ್ಲ, ಎಲ್ಲ ಕಡೆಯೂ, ಎಲ್ಲದರ ಬದಲೂ ನೆಲೆಸುವುದು ಹಚ್ಚ ಹಸಿರ ಜೀವಸಂಕುಲಗಳು. ಅಬ್ಬಬ್ಬಾ!!!!!!!!!!! ಭೂಮಿಯ ಮೇಲಿನ ೯೦% ಸಮಸ್ಯೆ ಅಲ್ಲೇ ನಿವಾರಣೆಯಾದ ಹಾಗಾಯಿತು. ಮನುಷ್ಯನೊಬ್ಬ ಇಲ್ಲದಿದ್ದಲ್ಲಿ ಪರಿಸರದ ಚಕ್ರದ ಕಳಚಿಹೋದ ಕೊಂಡಿ ಕೂಡಿಕೊಂಡು ಮತ್ತೆ ಚಕ್ರವಾಗುತ್ತಿತ್ತು. ಮೇಲಿನಿಂದ ನೋಡಿದರೆ ನೀಲಾಕಾಶದಲ್ಲಿ ಹಸಿರು, ನೀಲಿ ವರ್ಣಗಳಿಂದ ಕಂಗೊಳಿಸುತ್ತಿರುವ ಭೂಮಿ ಏನೂ ಚಟುವಟಿಕೆಗಳೇ ಇಲ್ಲದೆ ತಣ್ಣಗೆ ಸುತ್ತುತ್ತಿದೆ ಎಂಬಂತೆ ಭಾಸವಾಗುತ್ತಿತ್ತು.

ಯಾವುದೋ ಹೂವಿನ ಎಸಳನ್ನು ಸುರುಳಿಸುತ್ತಿ ಚಿಕ್ಕ ಉಂಡೆಯನ್ನಾಗಿ ಮಾಡಿ ತಳ್ಳುತ್ತಾ ಬರುತ್ತಿತ್ತು ಇರುವೆ, ಸ್ವಲ್ಪ ದೂರ ತಳ್ಳಿ ಸುಸ್ತಾಯ್ತೆಂಬಂತೆ  ಅಲ್ಲೇ ಕೊಂಚ ಸಮಯ ನಿಂತು ಮತ್ತೆ ಮನೆಯ ಕಡೆ ಹೊರಡುತ್ತಿರುವಂತೆ ತನ್ನ ದಾರಿ ಹಿಡಿದು ಸಾಗುತ್ತಿತ್ತು. ಅದರ ಗಾತ್ರಕ್ಕಿಂತ ಹತ್ತರಷ್ಟಿದ್ದ ಉಂಡೆಯನ್ನು, ಬಂಡೆಯನ್ನು ಹೊತ್ತಂತೆ ಹೊತ್ತು ತಳ್ಳುತ್ತಾ ಸಾಗುತ್ತಾ ಬಂದು ಥಟ್ಟನೆ ಜೇಡದ ಬಾಯಿಗೆ ಬಿತ್ತು. ಆ ಇರುವೆಯ ಹತ್ತರಷ್ಟಿದ್ದ ಜೇಡ ಒಂದೇ ಬಾಯಿಗೆ ತಿಂದು ಮುಗಿಸಿತು. ಅಷ್ಟು ದೂರದಲ್ಲಿ ಬರುತ್ತಿದ್ದ ಇರುವೆಯನ್ನು ತಿನ್ನಲು ಸಾವಧಾನವಾಗಿ ಹೊಂಚು ಹಾಕಿ ಕಾದು ತಿಂದು ಜೀರ್ಣಿಸಿಕೊಳ್ಳುವಷ್ಟರಲ್ಲಿ, ಅದನ್ನು ಉದ್ದ ನಾಲಿಗೆಯ ಕಪ್ಪೆ ನಾಲಿಗೆಯಿಂದ ಸೆಳೆದುಕೊಂಡು ಗಬಕ್ಕನೆ ತಿಂದು ಮುಗಿಸಿತು. ಅಷ್ಟು ದಪ್ಪ ಹಸಿರು ಕಪ್ಪೆ ನೇರವಾಗಿ ಮತ್ತೊಂದು ಹಾವಿನ ಹೊಟ್ಟೆ ಸೇರಿತು. ಸುರುಳಿ ಸುತ್ತಿ ಬಿದ್ದಿದ್ದ ಹಾವನ್ನು ಮುಂಗುಸಿ ತಿಂದಿತು. ಮುಂಗುಸಿಯನ್ನು ನಾಯಿ ಕೊಂದಿತು, ನಾಯಿ ತೋಳಗಳಿಗೆ ಬಲಿಯಾಯಿತು. ತೋಳ ಹುಲಿಗೆ, ಹುಲಿ ಆನೆಗೆ, ಆನೆ ಮತ್ತೆ ಇರುವೆಗಳಿಗೆ ಆಹಾರವಾಯ್ತು.
ನೆಲವೇ ಕಾಣದಂತೆ ಹಸಿರು ಹಾಸು ತುಂಬಿ ಹೋಗಿದೆ. ಸೂರ್ಯನ ಬೆಳಕೇ ಭೂಮಿಗೆ ತಾಗದಷ್ಟು ದಟ್ಟವಾಗಿ ಕಾಡು ಬೆಳೆದಿದೆ. ಹಲವು ಕಡೆ ದಿನದ ಹೊತ್ತೇ ಕತ್ತಲು ಆವರಿಸಿರುತ್ತದೆ. ಬೇಸಿಗೆಯ ಕಾಲದಲ್ಲೂ ತಣ್ಣನೆಯ ಗಾಳಿ ಬೀಸುತ್ತಲಿರುತ್ತದೆ. ಮಳೆ ಸದಾ ಕಾಲ ನಿರಂತರವಾಗಿ ಸುರಿಯುತ್ತಲೇ ಇರುತ್ತದೆ. ಪ್ರಾಣಿಗಳು ಸ್ವಚ್ಛಂದವಾಗಿ, ನಿರ್ಭಯವಾಗಿ ಓಡಾಡಿಕೊಂಡಿರುತ್ತವೆ. ಹುಲಿ, ಚಿರತೆ, ಆನೆ, ಕರಡಿ, ಮುಂತಾದ ಎಷ್ಟೋ ಪ್ರಾಣಿಗಳು ಇನ್ನೂ ವಿಕಾಸ ಹೊಂದಿ ಹಲವಾರು ಊಹಿಸಲೂ ಅಸಾಧ್ಯವಾದ ಪ್ರಬೇಧಗಳಲ್ಲಿ ಬದುಕಿವೆ. ದೈತ್ಯ ಆನೆಯೊಂದಕ್ಕೆ ಎರಡು ಸೊಂಡಲುಗಳಿವೆ, ಆರು ಕಾಲುಗಳಿವೆ. ಒಂದು ಬೆಕ್ಕಿನ ಗಾತ್ರದ ಹುಲಿ ಮಿಂಚಿನವೇಗದಲ್ಲಿ ಅಂತಹ ಆನೆಯ ಹೊಟ್ಟೆಯೊಳಗೆ ಕಣ್ಣು ಮಿಟುಕಿಸುವುದರೊಳಗಾಗಿ ತೂರಿ ರಂಧ್ರ ಮಾಡಿಕೊಂಡು ತಲೆಯ ಭಾಗದಿಂದ ಹೊರಬರುತ್ತದೆ. ಆನೆ ನೆಲಕ್ಕೆ ಉರುಳಿಬೀಳುತ್ತದೆ. ನಂತರ ಎಲ್ಲ ಹುಲಿಗಳು ಒಟ್ಟಿಗೇ ಹರಿದು ಹಂಚಿ ಕ್ಷಣಾರ್ಧದಲ್ಲಿ ತರಿದು ತಿಂದು ಮುಗಿಸುತ್ತವೆ. ಜಿಂಕೆಯೊಂದನ್ನು ಅಟ್ಟಿಸಿಕೊಂಡು ಬಂದ ಚೂಪನೆಯ ಮೂತಿಯ ಚಿರತೆಯೊಂದು ಕ್ಷಣಾರ್ಧದಲ್ಲಿ ಮರದ ಬೊಡ್ಡೆಯಂತೆ ಆಕಾರ ಬದಲಿಸಿ ಕೂತ ಜಿಂಕೆಯನ್ನು ಪತ್ತೆ ಹಚ್ಚಲಾಗದೆ ಸೋತು ಹಿಂದಿರುಗುತ್ತದೆ. ಅದಾವುದೋ ಪ್ರಾಣಿ ಚಂಗನೆ ಆಕಾಶಕ್ಕೆ ಹಾರಿ ರಾಕೆಟ್ ಮಾದರಿಯಲ್ಲಿ ಮೇಲೆ ಹೋಗಿ ಇನ್ನೆಲ್ಲೋ ಇಳಿಯುತ್ತದೆ. ಇನ್ನೂ ಪತ್ತೆ ಹಚ್ಚಲಾಗದ ಅದೆಷ್ಟೋ ಪ್ರಾಣಿಗಳು, ಬಣ್ಣ ಬಣ್ಣದ ಪಕ್ಷಿಗಳು, ಅವುಗಳ ದೂರ ದೂರದಲ್ಲಿನ ಸದ್ದು. ಗಮ್ಮನೆ ಮಣ್ಣಿನ ವಾಸನೆ. ತರಹೇವಾರಿ, ಕಲಾಕೃತಿಯಂತಿರುವ ಸಸ್ಯ ಸಂಕುಲ, ಹೂವು, ಹಣ್ಣು. ಇಡೀ ಪ್ರಪಂಚದ ತುಂಬಾ ಇರುವುದು ಪ್ರಾಣಿ ಪಕ್ಷಿ ಸಂಕುಲ ಮಾತ್ರ. ಶುಭ್ರವಾದ ಸಮುದ್ರ, ಭಯ ಹುಟ್ಟಿಸುವಂತ ಅಲೆಗಳೊಂದಿಗೆ ಆಟವಾಡುತ್ತಿರುವ ಜಲಚರಗಳು. ಸಾಗರದೊಳಗೆ ಮತ್ತೊಂದು ಜೀವ ಪ್ರಪಂಚ.

ಇಲ್ಲಿ ಯಾವ ಪ್ರಾಣಿಗಳಿಗೂ ಅಳಿವಿನ ಭಯವಿಲ್ಲ. ಸಮಯ, ಕಾಲ ಎಂಬ ಪದಗಳಿಗೆ ಇಲ್ಲಿ ಅರ್ಥ ಹುಡುಕಲು ಸಾಧ್ಯವಿಲ್ಲ. ಎಲ್ಲೋ ದೂರದಲ್ಲಿ ಮಹೋರಗಗಳ ಊಳಿಡುವ ಸದ್ದು, ಮೇಲೆ ಆಕಾಶದೆತ್ತರದಲ್ಲಿ ಎರಡು ಗರುಡಗಳ ಸಲ್ಲಾಪ, ಮರದ ಮೇಲೆ ಎರಡು ಮರಿ ಅಳಿಲುಗಳ ಆಟಾಟೋಪ, ಅಪರೂಪಕೊಮ್ಮೆ ಎಲ್ಲೋ ಹುಟ್ಟಿದ ಕಾಡ್ಗಿಚ್ಚಿನಿಂದ, ಅದರಿಂದ ಎದ್ದ ಹೊಗೆಯಿಂದ ಒಂದಷ್ಟು ಪ್ರಾಣಿ ಪಕ್ಷಿಗಳ ಸಾವು, ಮತ್ತಷ್ಟು ಪ್ರಾಣಿಗಳ ಸ್ಥಳಾಂತರ. ಇನ್ನೆಂದೋ ಸಮುದ್ರದಲ್ಲಿ ಎದ್ದ ಭೂಕಂಪ. ಮತ್ತೆಲ್ಲೋ ಆಗುವ ಜ್ವಾಲಾಮುಖಿಯ ಸ್ಫೋಟ. ಅಪರೂಪಕ್ಕೆ ಆಗುವ ಪ್ರಕೃತಿಯ ವೈಪರೀತ್ಯಗಳನ್ನ ಬಿಟ್ಟರೆ ಏಕತಾನತೆಯ ಪ್ರಪಂಚ. ಪ್ರಾಣಿಗಳು ಹಸಿವಾದಾಗ ಅದರದ್ದೇ ಆದ ರೀತಿಯಲ್ಲಿ ಆಹಾರ ಸಂಪಾದನೆಗೆ ಹೊರಡುವವು. ತನ್ನ ಸಂಸಾರಗಳೊಡಗೂಡಿ ಸಮಯ ಕಳೆಯುವವು. ಎಷ್ಟೋ ಮನ್ವಂತರಗಳು ಕಳೆದ ನಂತರ ಏನೋ ಕೊಂಚ ಪ್ರಾಣಿ ಪಕ್ಷಿಗಳಲ್ಲಿ ಪರಿವರ್ತನೆಗಳಾಗಿ ಆ ಪರಿವರ್ತನೆ ಅವಕ್ಕೆ ತಿಳಿಯದೆಯೂ ಜೀವನ ಸಾಗಣೆಗೆ ಪೂರಕವಾಗಿಯೇ ಆಗಿ ಭೂಮಿ ಸುತ್ತುತ್ತಾ ಸುತ್ತುತ್ತಾ ಹೋಗುತ್ತದೆ.

ಇಲ್ಲಿ ಒಂದು ಚಲನೆಯಿಲ್ಲ, ಕಥೆ ಮುಂದುವರೆಸಲು ಸಾಧ್ಯತೆಗಳಿಲ್ಲ. ಭೂಮಿಗೂ ಕೂಡ ಬೋರು ಹೊಡೆಯದೇ ಇರುವುದಿಲ್ಲ. ಅದಕ್ಕೇ ಮನುಷ್ಯ ಅಷ್ಟು ಮುಖ್ಯವಾಗುತ್ತಾನಾ ಅಂತ! ಈ ಚಲನೆಯಿಲ್ಲದೆ ಸಪ್ಪೆಯಾಗಿ ನಿಂತುಹೋದಂತಿರುವ ಪ್ರಪಂಚದಲ್ಲಿ ಒಬ್ಬ ಮನುಷ್ಯನನ್ನು ಪ್ರತಿಷ್ಠಾಪಿಸಿದರೆ ಕಥೆ ಹೇಗೆ ಧಿಗ್ಗನೆ ಓಟ ಶುರುಮಾಡುತ್ತದೆಂದರೆ, ಒಬ್ಬನೇ ಒಬ್ಬ ಮನುಷ್ಯ ಈ ಪ್ರಪಂಚದಲ್ಲಿ ಬಂದವನೇ, ಮೊದಲು ತನ್ನ ಹೊಟ್ಟೆಗಾಗಿ ಒಂದು ಆಹಾರವನ್ನು ಹುಡುಕುತ್ತಾನೆ. ಹೇರಳವಾಗಿ ತಿನ್ನಲು ದೊರೆಯುತ್ತಿದ್ದ ಹುಲಿಯನ್ನು ಕಂಡು, ಬೇಕೆಂದ ತಕ್ಷಣ ಅದಕ್ಕೊಂದು ಆಯುಧ ತಯಾರಿಸಿ, ಹೊಡೆದೇ ಬಿಡುತ್ತಾನೆ. ಒಂದು ಹುಲಿ ಬಲಿಯಾಗೇ ಬಿಡುತ್ತದೆ. ಸುತ್ತಲಿದ್ದ ಹುಲಿಗಳೆಲ್ಲ ಭಯದಿಂದ ಹೆದರಿ ಬೇಲಿ ಕೀಳುತ್ತವೆ. ಯಾವುದಕ್ಕೂ ಏನು ನಡೆಯುತ್ತಿದೆ ಎಂಬುದು ಅರ್ಥವಾಗುವುದಿಲ್ಲ. ಸುತ್ತ ಇದ್ದ ಹಲವು ಪ್ರಾಣಿಗಳು ದಿಕ್ಕಾಪಾಲಾಗಿ ಏನೋ ವಿಚಿತ್ರ ನಡೆದಿದೆ. ಹುಲಿ ಹೀಗೆ ಸತ್ತು ಬೀಳಲು ಏನೋ ಅಚಾತುರ್ಯ ನಡೆದಿರಬೇಕು ಎಂದು ತಮ್ಮ ತಮ್ಮ ಮನೆಗಳಲ್ಲಿ ಅಡಗುತ್ತವೆ. ಇನ್ನು ಮುಂದಿನ ಕಥೆ ನಮ್ಮನ್ನ ಇಂದಿನ ಸತ್ಯ ಪ್ರಪಂಚಕ್ಕೆ ತಂದೊಡ್ಡುತ್ತದೆ. 
             
                                                                                                          - ಹೇಮಂತ್

No comments:

Post a Comment