ಓದಿ ಓಡಿದವರು!

Sunday 29 April 2012

ಹಂತಕರು!




       ನಾನಿನ್ನೂ ಬದುಕಿದ್ದೇನೆ. ನನ್ನ ಮೇಲೆ ಮೊಟ್ಟ ಮೊದಲ ಬಾರಿ ಹಲ್ಲೆ ನಡೆದಿದ್ದು, ಸೀಸದ ಕಡ್ಡಿಯಿಂದ. ನಾನು ನನ್ನ ದೇಹಕ್ಕೆ ಇಂದ್ರಿಯಗಳನ್ನ ಅಂಟಿಸಿಕೊಂಡು ಆಗತಾನೆ ಕೆಲಸ ನಿರ್ವಹಿಸಲು ಶುರುಮಾಡಿತ್ತು. ನನಗೆ ಏನು ನಡೆಯುತ್ತಿದೆಯೆಂದು ಅರಿವಾಗುವ ಮುನ್ನವೇ ನನ್ನ ಮೇಲೆ ಮೊದಲ ಹಲ್ಲೆ ನಡೆದಿತ್ತು. ಅದೂ ಕೂಡ ನಿಷ್ಕಾರಣವಾಗಿ. ನಾನೂ ಆಗತಾನೆ ಸಮವಸ್ತ್ರ ಧರಿಸುವುದನ್ನ ಕಲಿತಿದ್ದೆ. ನನ್ನ ಜೊತೆ ಕೈ ಕೈ ಹಿಡಿದು ಓಡಾಡುತ್ತಿದ್ದವನೇ ನನ್ನ ಕೈ ಮೇಲೆ ಕಡ್ಡಿಯಿಂದ ಚುಚ್ಚಿದ್ದ. ಅದೇನು ಮಾರಣಾಂತಿಕ ಹಲ್ಲೆಯಾಗಿರದಿದ್ದರೂ ಮೊಟ್ಟ ಮೊದಲ ಬಾರಿಗೆ ಹೆದರಿದ್ದೆ. ಸಮವಸ್ತ್ರ ಧರಿಸುವುದಕ್ಕೆ, ಗುಂಪಿನಲ್ಲಿ ಕೂರುವುದಕ್ಕೆ, ಧೈರ್ಯ ತಂದುಕೊಳ್ಳಲಿಕ್ಕೆ, ಅಳುವುದಕ್ಕೆ ಕೂಡ ಹೆದರಿದ್ದೆ. ಆದರೂ ಬೇರೆ ವಿಧಿಯಿರಲಿಲ್ಲ. ನಾ ಹಾಕುತ್ತಿದ್ದ ಚೆಡ್ಡಿ ಚಿಕ್ಕದಾಗುತ್ತಾ ಬಂದಂತೆ, ನನ್ನ ಶೂ ಸೈಜಿನ ನಂಬರು ಹೆಚ್ಚುತ್ತಾ ಹೋದಂತೆ ನನ್ನ ಮೃದು ತೊಗಲು ಬಲಿಯುತ್ತಾ ಹೋಗುತ್ತಿರುವಂತೆ ಭಾಸವಾಗುತ್ತಿತ್ತು. ಸೂಕ್ಷ್ಮ ಸಂವೇದನೆಗಳಿಗೆ ಸ್ಪಂದಿಸುತ್ತಲೇ ಇರಲಿಲ್ಲ. ಮೃದುತ್ವದ ಪೊರೆ ಕಳಚಿದ್ದೆನೋ ಏನೋ. ನನಗೆ ದಿನೇ ದಿನೇ ಜಳಕಕ್ಕಿಟ್ಟ ಬಕೆಟ್ ನೀರಿನಲ್ಲಿ ಕೈಯ್ಯದ್ದಿ ಆಟವಾಡುವಾಗ ಸಿಗುತ್ತಿದ್ದ ಖುಷಿ ಸತ್ತುಹೋಗಿರುವ ಅನುಮಾನ ಶುರುವಾಗಿತ್ತು. ಬೂತಕನ್ನಡಿಯಡಿ ಇರುವೆಯನ್ನು ಬಿಸಿಲಿಗೆ ಒಡ್ಡಿ ಬೆಂಕಿ ಹೊತ್ತಿಸುವ ಹುಡುಗಾಟ ಬೋರು ಹೊಡೆಸುತ್ತಿತ್ತು. ನನಗೆ ಕೈಕಾಲು ಅಂಗಾಂಗಳನ್ನ ಕೊಟ್ಟವರೇ ತಮ್ಮ ಕೋಪಕ್ಕೆ ಬಳಸಿಕೊಳ್ಳುತ್ತಿದ್ದರು. ನನ್ನಲ್ಲಿ ಹುಟ್ಟುತ್ತಿದ್ದ ಸಾವಿರ ಪ್ರಶ್ನೆಗಳನ್ನು ಉತ್ತರಿಸುವವರಿಲ್ಲದೇ ನಾನೇ ಹತ್ಯೆಗಯ್ಯುತ್ತಿದ್ದೆ. ಕಿಟಕಿಯಿಂದ ಒಳಗೆ ಚೆಲ್ಲುತ್ತಿದ್ದ ಸೂರ್ಯನಕೋಲನ್ನು ಗಮನಿಸುವುದನ್ನೂ ಸಹ ದಿನೇ ದಿನೇ ಬಿಟ್ಟುಬಿಟ್ಟೆ. ನವಿಲುಗರಿ, ಕಾಗೆ ಭಂಡಾರ, ಜಿಯೋಮೆಟ್ರಿ ಬಾಕ್ಸಿನಲ್ಲಿದ್ದ ಬೆಣಚುಕಲ್ಲುಗಳು, ಪುಸ್ತಕದ ಮಧ್ಯ ಇದ್ದ ಎರೆದ ಪೆನ್ಸಿಲ್ ಪುಡಿಗಳು, ಬ್ಯಾಗಿನಲ್ಲಿದ್ದ ಹಾಳೆಗಳ ಚಿತ್ರವಿಚಿತ್ರ ಆಕಾರಗಳು ಇವೆಲ್ಲವೂ ನನಗೆ ಬುದ್ದಿ ಕಲಿಸುವವರ ಸ್ಕೇಲಿನ ಧಾಳಿ ಎದುರಿಸುತ್ತಾ ಮುಂದುವರೆದ ಹಾಗೆಯೇ ಕಸದ ರೀತಿ ಕಾಣಿಸಲು ಶುರುವಾಗಿದ್ದವು. ನನ್ನ ತರಲೆಗಳು, ತುಂಟುತನಗಳನ್ನು ತಾಳಲಾರದೆ ಒಬ್ಬರಲ್ಲಾ ಒಬ್ಬರು ನನ್ನ ಕಣ್ಣುಗಳು ಒದ್ದೆಯಾಗೇ ಇರುವ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ಹೊರುತ್ತಲೇ ಇದ್ದರು. ಅಂತೂ ನಾನು ಕಣ್ಣ ತೊಟ್ಟಿಯಲ್ಲಿನ ನೀರನ್ನಷ್ಟನ್ನೂ ಖರ್ಚು ಮಾಡಿ ಮಿಂದು ರಸ್ತೆಗೆ ಬಂದೆ. ಮಳೆಗಾಲ ಆಗತಾನೆ ಮುಗಿದಿತ್ತು. ಮನೆಗಳು, ಮರಗಳೂ ಸಹ ಮಿಂದು ಕಲರ್ ಕಲರ್ ಹೂವನ್ನು ಮುಡಿದು ಥೇಟ್ ಲಲನೆಯರಂತೆ ನಳನಳಿಸುತ್ತಿದ್ದವು.

ಛಳಿ ಛಳಿ. ಮೈಯಲ್ಲಿ ನಡುಕ ಹುಟ್ಟಿಸುವ ಛಳಿ. ದಪ್ಪ ಮೂರು ಪದರದ ಬಟ್ಟೆಗಳನ್ನೂ ದಾಟಿ ಬಂದು ಮಂದ ಚರ್ಮವನ್ನೂ ತಣ್ಣಗಾಗಿಸುವಷ್ಟು ಛಳಿ. ಬೆಂಕಿ, ಕಿಚ್ಚು, ಕಾವು, ಹೊಗೆ ಯಾಕೋ ಇವೇ ಇಷ್ಟವಾಗ ಹತ್ತಿದವು. ಛಳಿಗೆ ಮೈಬಿಸಿಯಾಗಲೆಂದು ಸಿಗರೇಟು ಹತ್ತಿಸಿದೆ. ಮಾಂಸಖಂಡಗಳನ್ನೂ ಸಹ ಬಿಸಿಯಾಗಿಸಬಲ್ಲ ಅಮೃತ ಹೀರಿದೆ. ಹೀಗೇ ಇರುವಾಗ ಉಸಿರನ್ನೂ ಸಹ ಬಿಸಿಯಾಗಿಸುವ ಚೆಲುವೆಯೊಬ್ಬಳು ಸಿಕ್ಕಳು. ಸಿಗರೇಟು ಹಂಚಿಕೊಂಡವರ ಭಯೋತ್ಪಾದಕ ಕಣ್ಣುಗಳಿಂದ ತಪ್ಪಿಸಿಕೊಂಡು ಹುಡುಗಿಯ ಜೊತೆ ಹೆಜ್ಜೆ ಹಾಕಿದೆ, ಕೈ ಹಿಡಿದೆ, ನಡು ಹಿಡಿದೆ, ಗಾಡಿಯ ಮೇಲೆ ಮನೆ ಮಾಡಿದಳು. ಊರು ಕೇರಿ ಅಳತೆ ಮಾಡಿದೆವು. ಕತ್ತಲೆ ಕೋಣೆಯಲ್ಲಿ ಪ್ರಪಂಚ ಕಂಡೆವು. ಮೈಚಳಿ ಬಿಡಿಸಿ ಕಾವು ಹುಟ್ಟಿಸುವ ಹಾಗೆ ಆಲಂಗಿಸಿದಳು, ಬಿಸಿಯುಸಿರು ಹಂಚಿಕೊಂಡಳು, ಅಂಟಿಕೊಂಡೆವು. ಯೌವನದ ಚಳಿಯಲ್ಲಿ ಜೊತೆಯಾದಳು. ಎದೆ ಗೂಡನ್ನು ಸವರುತ್ತಾ ಹೃದಯವನ್ನು ಹಿಡಿದುಕೊಂಡಳು. ಲಾಲಿಸಿದಳು, ಆಟವಾಡಿದಳು ಒಮ್ಮೆ ಇದ್ದಕ್ಕಿದ್ದಂತೆ ಕೈಕೊಸರಿಕೊಂಡು ಇನ್ನಾವುದೋ ಕೈ ಹಿಡಿದು ಹೊರೆಟೇ ಹೋದಳು. ಆ ಚುಮುಚುಮು ಚಳಿಯಲ್ಲೂ ಕಣ್ಣ ಬಿಸಿ ಹನಿಗಳು ಕಾಲ ಚಪ್ಪಲಿಯನ್ನು ಒದ್ದೆ ಮಾಡುತ್ತಿದ್ದವು. ಚಳಿಗೆ ಬಟ್ಟೆ ಬಿಚ್ಚಿ ನಿಲ್ಲಿಸಿದ ಹಾಗೆನಿಸುತ್ತಿತ್ತು. ಹೃದಯ ಮರಳಿಸದೇ ಕಣ್ಮರೆಯಾದಳು. ಎಲ್ಲಿದ್ದಳೋ, ಹೃದಯ ಹಿಂಡಿದಾಗಲೆಲ್ಲಾ ದೇಹ ಕಂಪಿಸುತ್ತಿತ್ತು. ಖಾಲಿ ಎದೆಗೂಡಿನಲ್ಲಿ ಸಿಗರೇಟಿನ ಹೊಗೆ ತುಂಬಿದೆ, ಸಾರಾಯಿ ಸುರಿದೆ. ಛಳಿಯ ಒಂಟಿತನದಲ್ಲೂ ದೇಹ ಬೆಚ್ಚಗಿತ್ತು. ಎಲ್ಲೆಲ್ಲೋ ಹೃದಯಬಡಿತವಿಲ್ಲದೇ ಸತ್ತು ಬಿದ್ದವನನ್ನು ಎತ್ತಿ ತಂದು ಹೃದಯವಿಲ್ಲದೇ ಮೆದುಳನ್ನುಪಯೋಗಿಸಿ ಬದುಕುವುದು ಹೇಗೆಂದು ದೇಹದ ಸಮಸ್ತಂಗಾಂಗಗಳನ್ನೂ ಕೊಟ್ಟವರು ಹೇಳಿಕೊಟ್ಟರು. ಅವರ ಕಣ್ಹನಿಗಳ, ಬೆವರ ಹನಿಗಳ, ನಿಟ್ಟುಸಿರುಗಳ ಮುಂದೆ ನನ್ನ ಹೃದಯ ಅಷ್ಟು ಬೆಲೆಬಾಳುವಂತದ್ದಲ್ಲವೆಂದು ಅರಿವಾದದ್ದೇ ದೇಹದಂಡಿಸಿ ದುಡ್ಡು ಮಾಡುವ ದಾರಿ ಹುಡುಕಿದೆ. ಹೃದಯಕ್ಕಿಂತ ಮೆದುಳಿಗಿರುವ ಬೆಲೆ ಹೆಚ್ಚೆಂದು ಕ್ರಮೇಣ ಅರಿವಾಗುತ್ತಾ ಹೋಯಿತು. ಛಳಿಗೆ ಬತ್ತಿ, ಹೆಣ್ಣು ಹೆಂಡವಲ್ಲದೇ ಹಣವೂ ಸಹ ಬೆಚ್ಚಗಿರಿಸಬಲ್ಲದೆಂದು ದುಡಿಯಲು ಶುರುಮಾಡಿದಮೇಲೇ ಗೊತ್ತಾಗಿದ್ದು. ಕಾಲು, ಕೈ, ಕಣ್ಣು, ಕಿವಿಗಳು ದುಡಿಯುತ್ತಿದ್ದರೂ ಎಲ್ಲ ತಲೆಯುಳ್ಳವರೂ ಮೆದುಳಿನ ಮೇಲೆಯೇ ಕದ್ದು ಆಕ್ರಮಣ ಮಾಡುತ್ತಿದ್ದರು. ಓದಿ ಓದಿ ದಷ್ಟಪುಷ್ಟವಾಗಿದ್ದ ಮೆದುಳು ಎಲ್ಲರ ಪ್ರಹಾರವನ್ನು ಎದುರಿಸಲು ಸನ್ನದ್ಧವಾಗಿತ್ತು. ನಿರಂತರ ದಾಳಿಗೂ ಹೆದರದೆ ಎದೆ ಸೆಟೆಸಿ ನಿಂತಿತ್ತು. ಉಂಗುಷ್ಟದ ಸಮೇತ ಸಮಸ್ತ ದೇಹದಂಗಾಂಗಗಳು ತನ್ನ ನೆರವಿಗಾಗಿ ದುಡಿಯುತ್ತಿರುವಾಗ ಯಾರ ದಾಳಿಗೆ ತಾನೇಕೆ ಹೆದರಬೇಕೆಂದು ಹೋರಾಟಕ್ಕಿಳಿದಿತ್ತು. ಎಷ್ಟು ದುಡ್ಡು ಬೇಕೋ ಅಷ್ಟೇ ಪ್ರಹಾರಗಳನ್ನ ಎದುರಿಸುವ ಅಗತ್ಯವಿತ್ತು. ಅಂತೂ ಒಮ್ಮೆ ಕೆಲಸ ಕೊಟ್ಟವರ ಬಲವಾದ ಏಟಿಗೆ ಮಣಿದು ಊನಗೊಂಡಿತು. ಮುದುಳು ಸಂಪೂರ್ಣ ಸಾಯುವ ಮುನ್ನ ಅದಕ್ಕೆ ಬೆಂಬಲವೆಂಬಂತೆ ದೇಹಕೊಟ್ಟವರು ಉಪಾಯ ಮಾಡಿ ಮತ್ತೊಂದು ಹೃದಯ ಕಳೆದುಕೊಂಡ ದೇಹವನ್ನು ಜೊತೆಯಾಗಿಸಿದರು. ಹೃದಯವಿಲ್ಲದೆಯೇ ಕೇವಲ ದೇಹಗಳೇ ಸ್ವಾಭಾವಿಕವೆಂಬಂತೆ ಪ್ರೀತಿಸಲು ಶುರುಮಾಡಿಕೊಂಡವು. ಅದಕ್ಕೆ ಫಲವಾಗಿ ತಾಜಾ ಹೃದಯವಿರುವ ಪುಟ್ಟ ದೇಹವೊಂದು ಹುಟ್ಟಿತು. ಬೆಂಬಲಕ್ಕೆ ಬಂದವಳು, ಕೆಲಸ ಕೊಟ್ಟವರು, ದೇಹದ ಮಾಲೀಕರು, ಸಮಾಜವೆಂಬ ಸುತ್ತ ಮುತ್ತಣ ದಾಳಿಕಾರರು ಒಟ್ಟು ಸೇರಿ ಮೆದುಳನ್ನು ಕಾಲಕ್ರಮೇಣ ಹೂತುಹಾಕಿದರು. ಛಳಿಗಾಲವೂ ಸರಿದು ಬೇಸಿಗೆಯ ಸ್ಪಷ್ಟ ಸೂಚನೆಗಳೆಂಬಂತೆ ಬೆವರ ಹನಿಗಳು ಹಣೆಯ ಮೇಲೆ ಮೂಡತೊಡಗಿದವು.

ನನ್ನ ಮೃದು, ಮುಗ್ಧ, ಸೂಕ್ಷ್ಮ ಚರ್ಮ, ನನ್ನದೇ ಭಾವನೆಗಳುಳ್ಳ ಹೃದಯ, ನನ್ನನ್ನು ನಿಯಂತ್ರಿಸುತ್ತಿದ್ದ ಮೆದುಳು, ಎಲ್ಲವನ್ನೂ ಕಿತ್ತುಕೊಂಡು, ಘಾಸಿಮಾಡಿ, ನನ್ನ ನೋವನ್ನೂ ಆನಂದಿಸುತ್ತಿರುವ ಇಡೀ ಸಮಾಜವನ್ನು ನಾನೇಕೆ ಸುಮ್ಮನೆ ಬಿಡಬೇಕು? ನಾನೂ ಪ್ರತೀಕಾರ ತೀರಿಸಿಕೊಳ್ಳುವ ಹಾದಿಯಲ್ಲಿ ಸಾಧ್ಯವಾದಷ್ಟೂ ತಲೆಗಳನ್ನ, ಕೈಗಳನ್ನ, ಹೃದಯಗಳನ್ನ, ಪಂಚೇಂದ್ರಿಯಗಳಲ್ಲಿ ಸಿಕ್ಕ ಸಿಕ್ಕದ್ದನ್ನ ಹತ್ಯೆಗಯ್ದೆ. ಹತ್ಯೆಗೊಳಗಾದವನ ನೋವೇನೆಂದು ಸಮಾಜಕ್ಕೆ ತೋರಿಸಿಕೊಟ್ಟೆ. ಮೊದಲೇ ದುಡಿದು, ಬಸವಳಿದಿದ್ದ ನನ್ನ ಅಳಿದುಳಿದ ಅಂಗಾಂಗಳು ಬಳಲುತ್ತಿದ್ದವು. ಯುದ್ಧ, ಪ್ರತೀಕಾರ ಸಾಕೆನಿಸಿತು. ಅವರು ಮಾಡಿದ್ದನ್ನು ಅವರೇ ಉಣ್ಣಲೆಂದು ತೀರ್ಮಾನಿಸಿ ಸುಮ್ಮನಾದೆ. ಕಿತ್ತು ಬರುತ್ತಿದ್ದ ಬೆವರು ಒಳಗಿದ್ದ ಜೀವವನ್ನೂ ಕ್ಷೀಣಿಸುತ್ತಿದ್ದವು. ಭೂಮಿಯ ಮೇಲಿನ ಧಗೆಯನ್ನು ತಡೆಯಲು ಸಾಧ್ಯವಿರಲಿಲ್ಲ. ಜೀವನದ ಮಳೆ, ಛಳಿಗಾಲವೇ ಚೆನ್ನಿತ್ತೇನೋ ಎಂದೊಮ್ಮೊಮ್ಮೆ ಅನ್ನಿಸಿದರೂ ಆ ಹೋರಾಟ, ಓಟ ಈಗ ಇಲ್ಲದೇ ಶಾಂತವಾಗಿರುವುದರಿಂದ ಬಿಸಿಲನ್ನು ಸಹಿಸಿಕೊಳ್ಳುವ ಸಾಹಸ ಮಾಡಿದೆ. ಜೀವನ ಪರ್ಯಂತ ಜೊತೆ ನೀಡಿದ್ದ ಕಾಲು, ಸೊಂಟ, ಕುತ್ತಿಗೆ, ಕೈಗಳು ದಿನೇ ದಿನೇ ಸೋಲುತ್ತಾ ಬಂದಿದ್ದವು. ನಾನು ದೇಹ ಕೊಟ್ಟವನೂ ನನ್ನ ಕೈಗಳು, ಕಾಲ್ಗಳನ್ನೂ ಕಿತ್ತುಕೊಂಡುಕೊಂಡ. ಜೀವನ ಪೂರ್ತಿ ಬಂದ ಹಂತಕರನ್ನು ನೆನೆಯುತ್ತಾ ಮಂಜು ಮಂಜಾಗಿದ್ದ ಕಣ್ಣನ್ನು ಮುಚ್ಚಿದೆ. ಮುಚ್ಚಿದ ಕಣ್ಣನ್ನು ತೆರೆಯೋಣವೆಂದರೆ ಕಣ್ಣುಗಳನ್ನೂ ಹೊತ್ತೊಯ್ದಿದ್ದರು. ನಾನಿನ್ನೂ ಬದುಕಿದ್ದೇನೆ!










-ನೀ.ಮ. ಹೇಮಂತ್

Saturday 28 April 2012

ಸುಕಪೈಲಿಚೊಮಿಯ!


(ಇದೊಂದು ಶುದ್ಧ ನಾನ್ ಸೆನ್ಸ್ ಕಥೆ. ಇದನ್ನ ಹೀಗೇ ಬರೀಬೇಕಂತ ತೀರ್ಮಾನಿಸಿ ಬರೆದೆ, ಆದರೆ ಅರ್ಥಪೂರ್ಣವಾಗಿ ಬರೆಯೋದಕ್ಕಿಂತ, ಅರ್ಥಹೀನವಾಗಿ, ಕೆಟ್ಟದಾಗಿ ಬರೆಯೋದು ತುಂಬಾನೇ ಕಷ್ಟ ಅಂತ ಈಗ ಗೊತ್ತಾಯ್ತು. ನಿಮಗೇನಾದ್ರೂ ಅರ್ಥವಾದರೆ ನೀವು ಗೆದ್ರಿ. ಏನೂ ಅರ್ಥವಾಗದಿದ್ರೆ, ಕಿತ್ತೋಗಿರೋ ಕಥೆಯಿಲ್ಲದ ಕಥೆ ಎಂದು ಕಷ್ಟ ಪಟ್ಟು ಓದಲು ಪ್ರಯತ್ನಿಸಿ ತಲೆ ಕೆಡಿಸಿಕೊಂಡು ನನ್ನನ್ನು ಬಯ್ದುಕೊಂಡರೆ, ನಾನು ಗೆದ್ದೆ, ಶುಭವಾಗಲಿ!)




                ಗಾಳಿ ಮೂಗಿನ ಹೊಳ್ಳೆಯೊಳಗೆ ಹೋಗ್ತಿದೆ. ಈ ಬೆಳಕು ಕಣ್ಣಿಗೆ ಮಾತ್ರ ಹೇಗೆ ತಾಗುತ್ತೆ! ಮೂಗಿಗೆ ಏಕೆ ಕಾಣಿಸ್ತಿಲ್ಲ? ಕಿವಿ ಬಾಯಿಯಾಗಿ, ಬಾಯಿ ಕಿವಿಗಳ ಜಾಗದಲ್ಲಿ ಅಲಂಕರಿಸಿದ್ದರೆ ಎಷ್ಟು ಚೆನ್ನಾಗಿರ್ತಿತ್ತು ಅಲ್ವಾ? ಥು ಅನಿಷ್ಟ ಎಲ್ಲಾ ಶುರುವಾಗಿದ್ದೂ ಈ ರೀತಿ ಪ್ರಶ್ನೆಗಳು ಹುಟ್ಟೋಕೆ ಶುರುವಾದಮೇಲೆಯೇ. ನಾನು ಹುಚ್ಚಾನಾ? ಸಾಧ್ಯಾನೇ ಇಲ್ಲಾ! ಯಾರನ್ನಾದರೂ ಕೇಳೋಣ ಅಂದುಕೊಂಡ್ರೆ. ಎಲ್ಲಾ ಹುಚ್ಚುಬಡ್ಡೀ ಮಕ್ಳೇ, ನಾನ್ಯಾಕೆ ಅವರ ಹತ್ತಿರ ಕೇಳಬೇಕು. ಬೇರೆಯವರಿಗೆ ನಾನು ಹುಚ್ಚಾನಾ ಅಲ್ವಾ ಅಂತ ನಿರ್ಧರಿಸೋ ಹಕ್ಕು ಕೊಟ್ರೇ ನಾನು ಖಂಡಿತಾ ಹುಚ್ಚ. ನಾನು ಹುಚ್ಚಾನಾ ಅಲ್ವಾ ಅಂತ ನಾನೇ ನಿರ್ಧರಿಸಬೇಕು. ನನಗೆ ಹುಚ್ಚು ಹುಚ್ಚು ಯೋಚನೆ ಬರುತ್ತಾ? ಪ್ರಶ್ನೆ ಕೇಳೋದು ಹುಚ್ಚುತನ ಅಂತ ಅನ್ಸುತ್ತೆ ಅಷ್ಟೇ ಅದರೆ ಅದು ಹುಚ್ಚುತನ ಆಗಿರೋಲ್ಲ. ಸುಮ್ಮನೆ ಪ್ರಶ್ನಿಸದೇ ಎಲ್ಲವನ್ನೂ ಒಪ್ಪಿಕೊಳ್ಳುವುದು ಹುಚ್ಚುತನದ ರೀತಿ ಕಾಣ್ಸೋಲ್ಲ, ಆದ್ರೆ ಅದು ಖಂಡಿತಾ ಹುಚ್ಚು, ಭಯಾನಕ, ಘೋರವಾದ ಹುಚ್ಚುತನ. ಈ ಮನೆಗೆ ಮೂರು ಬಾಗಿಲು ಒಂದು ಗೋಡೆ ಇರಬೇಕಿತ್ತು. ಗಾಳಿ ನನ್ನ ಅಪ್ಪಣೆ ಇಲ್ಲದೆ ಒಳಗೆ ಹೇಗೆ ನುಗ್ಗುತ್ತೆ. ವಿಷಪೂರಿತ ಗಾಳಿ. ಇಲ್ಲಾ, ಇದು ಹಿಟ್ಲರ್ ಗ್ಯಾಸ್ ಛೇಂಬರ್ ನಲ್ಲಿ ಮನುಷ್ಯರನ್ನೆಲ್ಲಾ ಸಾಯಿಸಲಿಕ್ಕೆ ಬಳಸ್ತಿದ್ನಲ್ಲ ಅದೇ ಇಷಪೂರಿತ ಗಾಳಿ ನನ್ನ ಮನೆಗೆ ಬರ್ತಿದೆ. ಇದು ನನ್ನ ಮನೆಯಲ್ಲ, ದೇಶ! ನನ್ನ ದೇಶದ ಜನರನ್ನ ಸಾಯಿಸಲಿಕ್ಕೇ ಬಿಟ್ಟಿದ್ದಾರೆ ಈ ವಿಷಪೂರಿತ ಗಾಳಿಯನ್ನ. ಎಲ್ಲಾ ಓಡಿ.., ಓಡಿ.., ಓಡಿ…, ತಪ್ಪಿಸಿಕೊಳ್ಳಿ ಈ ಗಾಳಿ ನಿಮ್ಮನ್ನ ಸಾಯಿಸಿಬಿಡುತ್ತೆ. ಉಸಿರು ಕಟ್ಟಿ ನರಳಾಡ್ತಾ ಸತ್ತುಹೋಗ್ತೀರಾ, ಓಡಿ. ಹಹಹ ಹೇಳಿದ ತಕ್ಷಣ ಓಡಿಬಿಟ್ರೂ, ಥೂ ಪುಕ್ಕಲು ಜನ. ಎಲ್ಲಾ ಬಾಲಗಳು, ಹಿಂಬಾಲಕರು, ಒಬ್ರೂ ನಾಯಕರೇ ಇಲ್ಲಾ. ನಾಯಕರು ಅನ್ನಿಸಿಕೊಂಡವರೂ ಕೂಡಾ ನಾಯಿ-ಕರುಗಳು. ಕಂತ್ರಿ, ಕಜ್ಜಿ, ಕಚ್ಚೋ ಹುಚ್ಚು ನಾಯಿಗಳು, ಗುಡ್ಡೆ ಹುಲ್ಲು ತಿಂದು ಹಾಲೇ ಕೊಡದ ಗೊಡ್ಡು ಕರುಗಳು. ಸಾಯಲಿ ಎಲ್ಲಾ. ಹೆಣಗಳನ್ನೇ ಪಾಯ ಮಾಡಿಕೊಂಡು ಮನೆ ಕಟ್ಟಬೇಕು. ಇಡೀ ದೇಶವನ್ನ ನನ್ನ ಮನೆಯಿಂದಾಚೆ ಓಡಿಸಿದ್ರೆ ನೆಮ್ಮದಿಯಾಗಿ ಬದುಕಬಹುದು.  

ಈ ಮನೆಯೊಳಗೊಂದು ಅಡುಗೆ ಮನೆ ಯಾಕಿರಬೇಕಿತ್ತು? ಅಡುಗೆಮನೆಯ ದೀಪ ಬೇರೆ, ಸದಾ ಉರೀತನೇ ಇರುತ್ತೆ. ಹೆಂಗಸೊಬ್ಬಳು ಸೇರ್ಕೊಂಡ್ರೆ ಹಿಂಗೇ ಉರೀತಾನೇ ಇರೋದೇನೋ, ದೀಪ.  ಈ ದೀಪಕ್ಕೂ ಹೆಂಗಸಿಗೂ ಏನಾದ್ರು ಸಂಬಂಧ ಇರಬಹುದಾ? ಈ ಗೋಡೆ ಮೇಲೆ ಆ ಹೆಂಗಸಿನ ನೆರಳು ಬೀಳ್ತಿತ್ತು. ಗೋಡೇನೇ ಹೆಂಗಸು. ಕೈಕಾಲು, ಮುಖ, ದೇಹದ ಆಕೃತಿಯೊಂದನ್ನ ಬಿಡಿಸಿದರೆ ಇದು ಹೆಂಗಸೇ. ಈ ಗೋಡೆಗೆ ಒಂದು ರಂಧ್ರವನ್ನ ಕೊರೆಯಬೇಕು. ಹೌದು ಈಗಲೇ ಕೊರೀತೀನಿ. ಹಾ.. ಹೂ.. ಹೋ.. ಹೇ… ಹೈ… ಹೌ… ಹಂಂಂಂಂಂಂಂ ಆಹಾssssssss.. ಓಹೋ… ಹ ಹ ಹ ಹ  ಚೆನ್ನಾಗಿತ್ತು. ಸುಸ್ತು. ಥು ಅಸಹ್ಯ ಅನ್ಸುತ್ತೆ ಇವಾಗ. ಈ ದೀಪ ಇನ್ನಾ ಉರಿತಾನೇ ಇದೆ. ಇದರಿಂದಾನೇ ಎಲ್ಲಾ ಆಗಿದ್ದು. ಹೊಡೆದುಹಾಕಬೇಕು. (ಛಟಾರ್) ಆಹಾ ಎಷ್ಟು ಸುಲಭವಾಗಿ ಚಿಂದಿ ಆಗೋಯ್ತು. ಹಾಳಾಗಿಹೋಗ್ಲಿ ಥಾಮಸ್ ಆಲ್ವಾ ಎಡಿಸನೇ ಸತ್ತಾಯ್ತು ಇನ್ನಾ ಇದನ್ನೇ ಇಟ್ಟುಕೊಂಡು ಯಾಕ್ ಒದ್ದಾಡ್ತಿದ್ವಿ ನಾವು. ಹೊಸದೇನಾದ್ರು ಬರಲಿ. ಅದೇನೋ ಸರಿ, ನಾನು ಇವನ್ನೆಲ್ಲಾ ಹೇಗೆ ನೋಡ್ತಿದ್ದೆ. ನನಗೆ ಕಣ್ಣೆಲ್ಲಿದೆ. ಕಣ್ಣುಗಳನ್ನ ಕಳೆದುಕೊಂಡು ಯಾವ ಕಾಲವಾಯ್ತು. ಸತ್ಯ, ಸೌಂದರ್ಯ ಕಾಣೋಕೆ ಕಣ್ಣು ಬೇಕಾ? ಕಣ್ಣುಗಳು ಕಳಕೊಂಡಮೇಲೇ ನಿಜವಾದ ಸೌಂದರ್ಯದ ದರ್ಶನವಾಗೋದು ಅನ್ಸುತ್ತೆ. ಕಣ್ಣಿದ್ದಾಗ ಕುರುಡನಾಗಿದ್ದೆ. ಕಣ್ಣು ಹೋದ ಮೇಲೆ ಎಲ್ಲಾ ಸರಿಯಾಗಿ ಕಾಣ್ತಿದೆ. ಇವೆಲ್ಲಾ ನನಗ್ಯಾಕೆ, ಏನ್ ಕಾಣುತ್ತೋ ಬಿಡತ್ತೋ ನನಗೆ ಕಣ್ಣುಗಳಿವೆ. ಯಾರೋ ಬಾಗಿಲು ಬಡೀತಿದ್ದಾರೆ. ಧಡ್ ಧಡ್ ಧಡ್ ಶಬ್ಧ. ಥು, ನಾನಿಲ್ಲಾ ನಾನು ಸತ್ತೋಗಿದ್ದೀನಿ. ಹೋಗಿ. ಇಲ್ಲಾ ನನ್ನ ಬಾಗಿಲೇ ಯಾರನ್ನೋ ಬಡೀತಿರಬೇಕು. ನನ್ನ ಬಾಗಿಲೇ ಸರಿ ಇಲ್ಲ. ಈ ಬಾಗಿಲನ್ನ ಕಿತ್ತು ಹಾಕಿ ಗೋಡೆಗಳೇ ಇಟ್ಟುಬಿಡಬೇಕು. ಎಲ್ಲಾ ಉಲ್ಟಾ ಅಗಿಹೋಗಬೇಕು.  

ಮೊದಲು ಈ ಬೀಗಕ್ಕೆ ಬಾಗಿಲು ಹಾಕಿಬಿಡ್ತೀನಿ. ಯಾಕೆ ಅವಾಗಾವಾಗ ನನ್ನ ತಲೆ, ಕೈನ ಕೆರೀತಿರುತ್ತೆ. ನನಗೆ ಈ ನೆರಳ ಮುಂದೆ ಮುಂದೆ ಹೋಗಿ ಸಾಕಾಗಿದೆ. ಎಷ್ಟು ಪ್ರಯತ್ನ ಪಟ್ಟರೂ ಈ ನೆಲ ನನ್ನ ಕಾಲಿನ ಕೆಳಗೇ ಯಾಕೆ ಸಿಕ್ಕಿಬೀಳುತ್ತೆ, ತಲೆ ಮೇಲೆ ಯಾಕೆ ಬರಲ್ಲ. ನನಗೆ ಊಟದ ತುಂಬಾ ಹೊಟ್ಟೆ ಮಾಡ್ಬೇಕು ಅನ್ಸುತ್ತೆ. ಸಿನಿಮಾಗಳು ನನ್ನನ್ನ ನೋಡ್ಬೆಕು ಯಾವಾಗಲಾದ್ರು. ನನ್ನ ಸ್ನೇಹಿತನನ್ನ ಅವನ ನಾಯಿ ಟೋನಿ ಸಾಕಿಕೊಂಡ ಹಾಗೆ ನನ್ನ ಮನೆಯಲ್ಲೂ ಒಂದು ನಾಯಿ ನನ್ನನ್ನು ಸಾಕಬೇಕು ಒಮ್ಮೆ. ದುಡ್ಡು ಕೂಡ ತುಂಬಾ ನನ್ನನ್ನ ಮಾಡಬೇಕು. ಆಕಾಶದಲ್ಲಿರುವ ಮಳೆಯಿಂದ ಮೋಡ ಭೂಮಿಗೆ ಬರಬೇಕು. ಮರದ ತುಂಬಾ ಭೂಮಿ ಬೆಳೀಬೇಕು. ಪ್ರೀತಿ ಪ್ರೀತಿ ನಡುವೆ ಮನುಷ್ಯ ತುಂಬಿರಬೇಕು. ನಾನು ಸೊಳ್ಳೆಗಳಿಗೆ ಕಚ್ಚಬೇಕು. ಕೋಳಿ ನನ್ನನ್ನ ತಿನ್ನಬೇಕು. ಮರ ನನ್ನನ್ನ ಕಡೀಬೇಕು. ನದಿ ನನ್ನನ್ನ ಕೊಳಕುಗೊಳಿಸಬೇಕು. ಮನೆಗಳೆಲ್ಲಾ ನನ್ನನ್ನ ಕಟ್ಟಬೇಕು. ಬಣ್ಣಕ್ಕೆ ಗೋಡೆ ಹೊಡೀಬೇಕು. ನನ್ನೊಳಗೊಂದು ಮನೆ ಸೇರ್ಕೋಬೇಕು. ಕಂಬಗಳ ಮೇಲೆ ಪಾಯ ನಿಲ್ಲಬೇಕು. ಯಾರಲ್ಲೂ ನನ್ನ ಮನೆ ಇರಬಾರದು.  

ಮತ್ತೆ ಬಾಗಿಲು ಯಾರನ್ನೋ ಬಡೀತಿದೆ. ತುಂಬಾ ಜನ ಹೊರಗಡೆ ಇದ್ದ ಹಾಗಿದ್ದಾರೆ. ಇಲ್ಲ, ಇಲ್ಲ ಹಾಗಿದ್ದಾರೆ ಇದ್ದ ಹೊರಗಡೆ ಜನ ತುಂಬಾ. (ಹೊರಗಿನಿಂದ ಗುಂಪು ಮಾತನಾಡಿಕೊಳ್ಳುತ್ತದೆ) “ಒಳಗೆ ಏನೋ ಆಗಿದೆ, ತುಂಬಾ ದಿನ ಆಯ್ತು, ಆ ಹುಚ್ಚ ಹೊರಗಡೆ ಬಂದು. ಪೊಲೀಸರಿಗೆ ಮೊದಲು ಫೋನ್ ಮಾಡಿ. ಬಾಗಿಲು ಹೊಡೀರಿ.” ಹೊಡೀರಿ ಬಾಗಿಲು. ಮಾಡಿ ಫೋನು ಮೊದಲು ಪೊಲೀಸರಿಗೆ. ಬಂದು ಹೊರಗಡೆ ಹುಚ್ಚ ಆ, ಆಯ್ತು ದಿನ ತುಂಬಾ, ಆಗಿದೆ ಏನೋ ಒಳಗೆ ಎಂದು ನನಗೆ ಅರ್ಥವಾಗುವ ಹಾಗೇ ಮಾತನಾಡ್ತಿದ್ದಾರೆ. ಹುಚ್ಚರು ಹಾ ಹಾ ಹಾ ಹಾ.. ಬಡೀರಿ ಇನ್ನೂ ಜೋರಾಗಿ ಬಡೀರೀ.. ಜೋರಾಗಿ ಇನ್ನೂ ಹಾ.. ಅನ್ಸುತ್ತೆ ಕಿತ್ತೇ ಇನ್ನೇನು ಬಾಗಿಲು. ಬಂದೇಬಿಡ್ತಾರೆ ಒಳಗೆ ಇನ್ನೇನು. ಮಾತನಾಡಬೇಕು ಹಾಗೆ ಅರ್ಥವಾಗೋ ಹುಚ್ಚರಿಗೆ ಈ ಯಾಕೆ ನಾನೂ. ಇಲ್ಲ ಇಲ್ಲ.. ಅಗಬೇಕು ಅರ್ಥ ಮಾತ್ರ ನನಗೆ ಮಾತನಾಡುವುದು ನಾನು. ಹಾಗಾದರೆ ಮಾತನಾಡಲ್ಲ ಹಿಂಗೆ ನಾನು. ಹೌದು ಹೌದು. ಬಿಟ್ರೂ ಬಂದೇ ಬಂದ್ರೂ.  (ಬಾಗಿಲು ಒಡೆದು ಒಳಗೆ ಬಂದ ನಾಲ್ಕೈದು ಜನ) ಏಯ್ ಇಲ್ಲೇ ಇದ್ದಾನೆ, ಬದುಕೇ ಇದ್ದಾನೆ, ಅವನ ಕೈಯಲ್ಲಿ ಏನೋ ಇದೆ ಅನ್ಸುತ್ತೆ. ಹೇಯ್ ಹೊರಗೆ ಬರೋಕೆ ಏನ್ ನಿನಗೆ, ಸತ್ತೋಗಿದ್ಯ ಅಂದುಕೊಂಡ್ವಿ. ಏನಾಗಿದೆ ನಿನಗೆ. ಸುಪಿಜೆಜೊವ್ಜೊಎಇ. ಏನು ಸರಿಯಾಗಿ ಮಾತನಾಡು, ಏನ್ ಹೇಳ್ತಿದ್ಯ. ಚುಮಾಚಿಮೊಪಲೆಇ ಜೆಇಔಎಅಲಿ. ಹೇಯ್ ಇವನು ಪೂರ್ತಿ ಹುಚ್ಚ ಆಗೋಗಿದ್ದಾನೆ. ಹಗ್ಗ ತೊಗೊಂಡ್ಬನ್ನಿ. ಹುಚ್ಚಾಸ್ಪತ್ರೆಗೆ ಫೋನು ಮಾಡಿ. ಬಾಗಿಲು ಹಾಕಿ ಮೊದಲು. ಹೆಇಊಸ್ಕೆವಜಿಎಲ್……. ಸುಕಪೈಲಿಚೊಮಿಯ… ಸುಕಪೈಲಿಚೊಮಿಯ… ಸುಕಪೈಲಿಚೊಮಿಯ.. 











                -ನೀ.ಮ. ಹೇಮಂತ್

Friday 27 April 2012

ಅಪ್ಪ, ಅಮ್ಮ ಮತ್ತು ಆಧ್ಯಾತ್ಮ!



ಪ್ರೀತಿ ಮಾಡುವುದು ಹೇಗೆಂದು ನಮ್ಮ ಕೈಲಿ ಹೇಳಿಸಿಕೊಳ್ಳುವ ತಂದೆ ತಾಯಿ ಸಿಕ್ಕಿರುವ ನಾವೆಷ್ಟು ಧನ್ಯ!? ಸ್ನೇಹಿತನೊಬ್ಬನ ಮನೆಯಲ್ಲಿ ಅಪ್ಪ ಅಮ್ಮನ ಮಧ್ಯೆ ಸಾಮರಸ್ಯವಿಲ್ಲದೇ ಸದಾ ಜಗಳ ಆಡುತ್ತಿರುವರೆಂದು ಇಬ್ಬರ ನಡುವೆ ಪ್ರೀತಿಯೇ ಉಳಿದಿಲ್ಲವೆಂದು ರಾತ್ರಿ ತಡವಾಗಿ ಮನೆ ಕಡೆಗೆ ಮುಖ ಮಾಡುತ್ತಿದ್ದ. ಆಗೆಲ್ಲಾ ಈ ತರಹ ತಂಟೆ ತಕರಾರುಗಳು ನಮ್ಮ ಮನೆಯಲ್ಲಿಲ್ಲವಲ್ಲ ಸಧ್ಯ ಎಂದುಕೊಳ್ಳುತ್ತಿದ್ದೆ. ನಾನು ಪ್ರಾಣ ತೆಕ್ಕೋತೀನಿ ಇಲ್ಲಾ ಎಲ್ಲಾದರೂ ಹೊರಟುಹೋಗ್ತೀನಿ ಎಂದು ಗುಡುಗಿದ್ದರು ಅಪ್ಪ. ತಟ್ಟೆಯಲ್ಲಿದ್ದ ದೋಸೆ ಬಾಯಿಗೆ ಹೋಗುವುದಿಲ್ಲವೆಂದಿತು. ಗಂಟಲಲ್ಲಿದ್ದ ತುತ್ತು ಅಲ್ಲೇ ಕಚ್ಚಿಕೊಂಡಿತು. ಇವತ್ತು ಮಾಮೂಲಿ ದಿನವಲ್ಲವೆಂದು ಖಾತ್ರಿಯಾಯ್ತು. ಎಲ್ಲಾ ಶುರುವಾಗಿದ್ದು ಅಪ್ಪ ಆಧ್ಯಾತ್ಮ ಕೇಂದ್ರಕ್ಕೆ ಹೋಗಲು ಶುರುಮಾಡಿದ ಮೇಲೆಯೇ. ದೇವರ ಕೋಣೆ ಸೇರಿದ್ದ ದೇವರಿಗೆ ಪ್ರತಿನಿತ್ಯ ಸ್ನಾನ ಮಾಡಿ ಕೈಮುಗಿದು ಮುಂದಿನ ಕೆಲಸಗಳು ಶುರುಮಾಡುತ್ತಿದ್ದವರು ದಿನೇ ದಿನೇ ಅದನ್ನು ಬಿಟ್ಟರು, ಇಡೀ ಜೀವನದಲ್ಲಿ ಆಗದ ಬದಲಾವಣೆಗಳು ಇದ್ದಕ್ಕಿದ್ದಂತೆ ಕಾಣುತ್ತಾ ಬಂತು. ಅಪರೂಪಕ್ಕೆ ದೇವಸ್ಥಾನಕ್ಕೆ ಹೋಗುತ್ತಿದ್ದವರು ದೇವಸ್ಥಾನಕ್ಕೆ ಹೋಗುವುದನ್ನು ಬಿಟ್ಟದ್ದಲ್ಲದೇ ದೇವಸ್ಥಾನದಲ್ಲಿ ಇರುವವರು ದೇವರಲ್ಲ, ಅದು ಬರೀ ಬೂಟಾಟಿಕೆ, ಬಿಜಿನೆಸ್ ಆಗಿ ಹೋಗಿದೆ. ದೇವರು ಎಲ್ಲರ ಮನದಲ್ಲಿದ್ದಾನೆ ಅವನಿಗೆ ವಿಶೇಷ ಪೂಜೆ, ಹೋಮ, ಹವನಕ್ಕೆ ಖರ್ಚು ಮಾಡಬೇಕಿಲ್ಲ, ಬೇಕಿರುವುದು ಶ್ರದ್ಧೆಯಿಂದ ಪ್ರತಿಕ್ಷಣ ಅವನನ್ನ ನೆನೆಯುವುದು. ದೇವಸ್ಥಾನಕ್ಕೆ ಹೋಗದಿದ್ರೆ, ಕೈ ಮುಗಿಯದಿದ್ರೆ ಕುಪಿತ ಸಹ ಆಗುವುದಿಲ್ಲ ದೇವರೆನಿಸಿಕೊಂಡವನು. ಆತ ಯಾವುದೇ ರೀತಿಯ ಕೆಡುಕನ್ನು ಮಾಡಲಾರ, ಕೆಡುಕು ಮಾಡುವವನು ದೇವರೇ ಆಗುವುದಿಲ್ಲ. ದೇವರ ಕೋಪಕ್ಕೆ ಹೆದರಿ ಪೂಜೆ ಮಾಡುವುದು ತಪ್ಪು ಅದು ಭಕ್ತಿಯಲ್ಲ ಎಂದೆಲ್ಲಾ ಹೇಳುವಷ್ಟು ಬದಲಾದರು. ಅದಕ್ಕೆ ಸರಿಯಾಗಿ ಮನೆಗೆ ನೆಂಟರುಗಳೆನಿಸಿಕೊಂಡವರು ಯಾರಾದರೂ ಬಂದರೆಂದರೆ ಅದಕ್ಕೆ ಮದುವೆ, ಮುಂಜಿ, ಜನ್ಮದಿನದ ಸಂಭ್ರಮಾಚರಣೆಯ ಆಮಂತ್ರಣದ ಸಂದರ್ಭವಲ್ಲದಿದ್ದರೆ, ಆ ಕಾರಣಗಳು ಎಲ್ಲರಿಗೂ ಗೊತ್ತಿರುವಂತೆ ಒಂದೋ ತಮ್ಮ ಮನೆಯಲ್ಲಿ ಹಮ್ಮಿಕೊಂಡಿರುವ ಸತ್ಯನಾರಾಯಣ ವ್ರತವೋ, ಗಣಹೋಮವೋ, ದಯ್ಯದ ಮನೆಯ ವಾರ್ಷಿಕ ಪೂಜೆಯೋ, ಕುಲದೇವರ ಪೂಜೆಯೋ ಆಗಿರುತ್ತವೆ. ಅವರ ಆರಕ್ಕೆ ಏರದ ಮೂರಕ್ಕೆ ಇಳಿಯದ ಹಣಕಾಸಿನ ಪರಿಸ್ಥಿತಿ ಚೆನ್ನಾಗಿ ಗೊತ್ತಿದ್ದ ಅಪ್ಪ ಈ ಕಷ್ಟದಲ್ಲಿ ಇದೂ ಬೇಕಾ, ಎಲ್ಲಾ ಬರ್ತಾರೆ ಊಟ ಮಾಡಿಕೊಂಡು ಹೋಗ್ತಾರೆ, ನಷ್ಟ ನಿಮಗೇ ಅಲ್ವಾ, ಯಾಕೆ ಹೀಗೆ ದುಂದು ವೆಚ್ಛ ಮಾಡ್ತೀರಿ, ಎಂದೆಲ್ಲಾ ಕೆಲವು ಬಾರಿ ಉಪದೇಶ ಮಾಡುವರು. ಅಪ್ಪನಿಗೇನೋ ತನ್ನ ತಮ್ಮ, ತಂಗಿ, ಅಣ್ಣ ಎಂಬ ಪ್ರೀತಿ, ಆದರೆ ಕೇಳುವವರಿಗೆ ಅಪ್ಪನ ದೊಡ್ಡ ಗಂಟಲು, ಒರಟು ಮಾತು ಒಳಗಿದ್ದ ಪ್ರೀತಿಯನ್ನು ಮುಚ್ಚಿಹಾಕುವುದು. ಮತ್ತು ತಮ್ಮ ಆಲೋಚನೆ, ಯೋಜನೆ, ಮುಖ್ಯವಾಗಿ ತಮ್ಮ ನಂಬಿಕೆಗೆ ವಿರುದ್ಧವಾದ್ದರಿಂದ ಒಳಗೊಳಗೇ ಅಸಮಾಧಾನ ಮನೆ ಮಾಡುವುದು. ಅಪ್ಪನ ನಂಬಿಕೆಗೆ ವಿರುದ್ಧವಾಗಿ ವಾದಿಸಿದರೂ ಅಪ್ಪ ತಮ್ಮ ದಾರಿಗೇ ಬದ್ಧರಾಗಿರುತ್ತಿದ್ದುದರಿಂದ ಅಪ್ಪನಿಗೆ ಹೇಳಿ ಉಪಯೋಗವಿಲ್ಲವೆಂದು ನೇರವಾಗಿ ಎಲ್ಲವನ್ನೂ ಕೇಳುತ್ತಿದ್ದ ಅಮ್ಮನ ಕಿವಿಯಲ್ಲಿ ತುಂಬಿಸುವರು.

ಯಾಕ್ ಹೀಗೆ ಬದಲಾಗಿ ಹೋದರು, ಎಲ್ಲಾ ಯೋಗ ತರಗತಿಗಳಲ್ಲಿ ಮಾಡಿರುವ ಬ್ರೈನ್ ವಾಶ್ ಎಂದೊಬ್ಬರು, ದೇವರನ್ನು ಪೂಜೆ ಮಾಡಬೇಡ ಅದು ಇದು ಎಂದು ಹೇಳಿಕೊಂಡು ತಿರುಗಿದರೆ ಏನಾದ್ರು ತೊಂದರೆ ಆದ್ರೆ ಏನ್ ಮಾಡೋದು ಎಂದೊಬ್ಬರು, ಮೊದಮೊದಲು ಹೀಗೆ ಅಧ್ಯಾತ್ಮದ ಬಗ್ಗೆ ಹುಚ್ಚು ಬರಿಸುತ್ತಾರೆ, ನಂತರ ಕ್ರಮೇಣ ಸಂಸಾರ, ಕೆಲಸ ಎಲ್ಲಾ ಬೇಡ ಧ್ಯಾನ ಮಣ್ಣು ಮಸಿ ಎಂದು ಹೊರಟೇ ಹೋಗುತ್ತಾರೆ, ವೈರಾಗ್ಯ ತರಿಸಿಬಿಡುತ್ತಾರೆ, ಪಕ್ಕದ ರೋಡಿನವರ ಬಗ್ಗೆಯೋ, ಸುಮಿತ್ರಮ್ಮನ ಗಂಡನ ಬಗ್ಗೆಯೋ, ರಾಮೇಶ್ವರಿಯವರ ಸಂಸಾರದ ಕಥೆಯ ಉದಾಹರಿಸಿ ತಲೆಯಲ್ಲಿ ಹುಳ ಬಿಟ್ಟು ಹೋಗುವರು. ಪ್ರತಿನಿತ್ಯ ಅಪ್ಪನನ್ನು ಗಮನಿಸುತ್ತಿದ್ದ ಅಮ್ಮ, ಯಾವತ್ತೂ ಇಲ್ಲದ್ದು, ಹಬ್ಬ ಹರಿದಿನಕ್ಕೂ ಬೇಗ ಏಳದವರು ಮುಂಜಾನೆ ಐದು ಘಂಟೆಗೆ ಎದ್ದು ಧ್ಯಾನ ತರಗತಿಗಳಿಗೆ ತಪ್ಪದೇ ಹೋಗಲು ಶುರುಮಾಡಿರುವುದನ್ನು, ನಂತರ ಯಾವ ಸಮಾರಂಭಗಳಿಗೂ ಅರ್ಧ ದಿನ ಕೆಲಸಕ್ಕೆ ರಜೆ ಹಾಕಿ ಬರದವರು, ತಮಿಳು ನಾಡಿನಲ್ಲೆಲ್ಲೋ ಯೋಗ ಶಿಬಿರವಿದೆಯೆಂದು ಬರೋಬ್ಬರಿ ಮೂರು ದಿನಗಳು ಕೆಲಸ ರಜೆ ಹಾಕಿ, ಮೊಬೈಲ್ ಕೂಡ ಮನೆಯಲ್ಲೇ ಬಿಟ್ಟು ವಾಪಾಸು ಬರುತ್ತಾ ಕೈಯಲ್ಲೊಂದು ದೊಡ್ಡ ನಿಲುವುಗನ್ನಡಿ, ಬಿಳಿ ಖಾದಿ ಜುಬ್ಬದಂತಹ ವಿಚಿತ್ರ ವೇಷದಲ್ಲಿ ಬಂದದ್ದಲ್ಲದೆ ಬಂದವರೇ ನಾಲ್ಕು ಹೊತ್ತೂ ಧ್ಯಾನ ಶಿಬಿರದಲ್ಲಿ ಕೊಟ್ಟ ಪ್ರವಚನದ ಧ್ವನಿ ಮುದ್ರಣವನ್ನು ಜೋರಾಗಿ ಕೇಳುತ್ತಾ ಯಾಕೋ ಎಲ್ಲರಂತೆ ಇವರೂ ಧ್ಯಾನ, ವೈರಾಗ್ಯ ಎಂದು ಹೊರೆಟೇ ಹೋಗುವರೇನೋ ಎಂದು ಸದಾ ಒಳಗಿದ್ದ ಭಯ ಗರಿಗೆದರಿ ಧ್ಯಾನ, ಯೋಗಕ್ಕೆ ಅಮ್ಮ ತಮ್ಮ ವಿರೋಧ ವ್ಯಕ್ತ ಪಡಿಸಲು ಶುರುಮಾಡುವರು. ಅಪ್ಪ ಯಾವುದೇ ಕೆಲಸ ಮಾಡಿದ್ರು ತಮ್ಮನ್ನ ಪೂರ್ತಿ ಅದರಲ್ಲಿ ತೊಡಗಿಸಿಕೊಂಡು ಮಾಡುವಂತಹ ವ್ಯಕ್ತಿ. ಯಾರು ಏನೇ ವಿರೋಧಿಸಲಿ, ತಾವು ಹೊರಟ ದಾರಿಯಲ್ಲಿ ಹಿಂದಿರುಗಿ ನೋಡುವಂತಹ ಜಾಯಮಾನದಿಂದ ಬಂದವರಲ್ಲ. ಎಷ್ಟೇ ಸಮಸ್ಯೆಗಳು, ತೊಡಕುಗಳು, ಕಲ್ಲು ಮುಳ್ಳುಗಳಿರಲಿ ತಮ್ಮ ಹಾದಿಯಲ್ಲಿ ಮುಂದುವರೆಯುತ್ತಲೇ ಇರುತ್ತಾರೆ. ಇನ್ನು ಅಮ್ಮ ಇನ್ನೊಂದು ದಿಕ್ಕು, ತನಗೆ ಯಾವುದಾದರೂ ವಿಷಯ ಅಥವಾ ಏನೇ ಆಗಲಿ ಇಷ್ಟವಾಯ್ತೆದೆಂದರೆ ಅಥವಾ ರುಚಿಸದಿದ್ದರೆ ಆ ತಮ್ಮ ಅಭಿಪ್ರಾಯವನ್ನು ಹಾಗೇ ಯಾರು ಏನು ಮಾಡಿದರೂ ಬದಲಾಯಿಸಲು ಸಾಧ್ಯವೇ ಇಲ್ಲ. ಒಮ್ಮೆ ಇಷ್ಟವಿಲ್ಲವೆಂದರೆ ಮುಗಿದು ಹೋಯಿತು. ಅದು ಹಾಗೇ ಇರುತ್ತೆ. ಬಹುಷಃ ಇವರಿಬ್ಬರ ಗುಣವೇ ಇವರ ಮಕ್ಕಳಾದ ನಮಗೂ ಬಂದಿರಬಹುದು. ನಾವೂ ಹಿಡಿದ ಕೆಲಸ, ಇಟ್ಟ ಗುರಿಗಾಗಿ ಸಂಪೂರ್ಣ ಹಠತೊಟ್ಟು, ಧ್ಯಾನಸ್ಥರಾಗಿ ಮಾಡುತ್ತೇವೆನಿಸುತ್ತದೆ. ಅಪ್ಪ ಅಮ್ಮನಲ್ಲಿರುವ ಈ ಹಠಯೋಗ ಇವರಿಲ್ಲಿರುವ ಅತ್ಯುತ್ಕ್ರುಷ್ಟವಾದ ಶಕ್ತಿಯೇನೋ ಹೌದು ಆದರೆ, ಹಲವು ಬಾರಿ ತಿರುಗುಬಾಣವಾಗುತ್ತವೆ. ಈಗ ಆಗಿದ್ದೂ ಅದೇ.

ತಮ್ಮ ವ್ಯಾಪಾರ, ಸಂಸಾರ, ಸಾಲ, ಮನೆ, ಇಷ್ಟರ ಪ್ರಪಂಚದಲ್ಲೇ ಇದ್ದ ಅಪ್ಪ ಧ್ಯಾನ ತರಗತಿಗಳೆಂಬ ಸಂಪೂರ್ಣ ಅಪರಿಚಿತ ಪ್ರಪಂಚಕ್ಕೆ ಪರಿಚಯವಾಗಲೂ ಒಂದು ಕಾರಣವಿದೆ. ಅಪ್ಪ ಮಾಡುವ ಕೆಲಸ ನಾನೋ ನನ್ನ ತಮ್ಮನೋ ಮಾಡುವೆವೆಂದುಕೊಳ್ಳಲೂ ಸಹ ಧೈರ್ಯ ಹುಟ್ಟುವುದಿಲ್ಲ. ಚಿಲ್ಲರೆ ವ್ಯಾಪಾರದಂಗಡಿಯವರು ಆರ್ಡರ್ ಮಾಡಿದ ಸಾಮಾನುಗಳನ್ನು ಮಾರುಕಟ್ಟೆಯಿಂದ ತಂದು ಒಂದು ಟನ್ನಿನಷ್ಟು ಭಾರ ತನ್ನ ಟಿವಿಎಸ್ ಮೇಲೆ ಹೊರಿಸಿ ಅಂಗಡಿಗಳಿಗೆ ತಲುಪಿಸಿ ಬರುವರು. ಮಳೆ ಬರುವಾಗ ಸಾಮಾನುಗಳಿಗೆ ಟಾರ್ಪಾಲು ಹೊರಿಸಿ ಯಾವುದೋ ಸಣ್ಣ ಜಾಗದಲ್ಲಿ ಅರ್ಧಂಬರ್ಧ ತೊಯ್ದು ನಿಂತಿರುವುದನ್ನ ಎಷ್ಟೋ ಸಲ ನೋಡಿದ್ದೇನೆ. ಬಿಸಿಲಲ್ಲಿ ಹೊರಗೆ ತಲೆ ಹಾಕಲಾಗದೆ ಮನೆಯಲ್ಲಿ ತಣ್ಣಗೆ ಕುಳಿತಿರುವ ನಮ್ಮ ಹೊಟ್ಟೆಯನ್ನೂ ಸಹ ತಣ್ಣಗಾಗಿಸಲು, ಯಾವುದನ್ನೂ ಲೆಕ್ಕಿಸದೇ ಬೆಳಗ್ಗೆ ಮನೆ ಬಿಟ್ಟರೆ ರಾತ್ರಿಯವರೆಗೂ ಬೆವರು ಸುರಿಸಿ ಮನೆಗೆ ಮರಳುತ್ತಿದ್ದರು. ಭಾನುವಾರದೊಂದಿನ ಅಥವಾ ಯಾವುದೇ ಹಬ್ಬಕ್ಕೇ ಆಗಲಿ ಹೊಸ ಬಟ್ಟೆ ತೊಟ್ಟು, ಎಲ್ಲರೊಂದಿಗೆ ಸಮಯ ವ್ಯಯ ಮಾಡಿದ್ದು ಕನಸಿನಲ್ಲೂ ಬರುವುದಿಲ್ಲ. ಯಾಕೆ ಹೀಗೆ ದುಡೀತಾರೋ ಎಂದೊಮ್ಮೊಮ್ಮೆ ಅನಿಸಿದರೂ, ಅಷ್ಟು ಶಕ್ತಿ ಎಲ್ಲಿಂದ ಪಡೆದುಕೊಂಡರೆಂದು ಅಚ್ಚರಿಯಾಗುತ್ತೆ. ಈ ನೆಲ ಗುದ್ದಿ ನೀರು ತೆಗೆಯುವ ವಯಸ್ಸಿನಲ್ಲಿ ನಾನಾಗಲಿ ನನ್ನ ತಮ್ಮನಾಗಲಿ ಕಿತ್ತು ಗುಡ್ಡೆ ಹಾಕುತ್ತಿರುವುದಂತೂ ಅಷ್ಟರಲ್ಲೇ ಇದೆ. ಮಕ್ಕಳು, ಮಕ್ಕಳ ವಿದ್ಯಾಭ್ಯಾಸ, ಮಕ್ಕಳ ಸಂತೋಷ ಇಷ್ಟೇ ಇವರ ಆಲೋಚನೆ. ಯಾಕೆ ಬೇಕು ಇವರಿಗೆ ನಮಗಾಗಿ ತಮ್ಮ ಆಯುಷ್ಯದ ಬಹುಮುಖ್ಯ ಭಾಗ, ತಮ್ಮ ಸ್ವಂತ ಸಂತೋಷ, ತಮ್ಮ ನೆಮ್ಮದಿ, ತಮ್ಮ ಸುಖ ಕಳೆದುಕೊಂಡರಲ್ಲಾ ಎಂಬುದೊಂದು ಚಿಂತೆ ಅವರ ಹರಿದ ಜೇಬುಗಳನ್ನು ಹೊಲಿದುಕೊಳ್ಳುತಿದ್ದಾಗಲೆಲ್ಲಾ ಕಾಡುತ್ತದೆ. ಇನ್ನು ಅಮ್ಮ. ಎದ್ದಿರುವ ಅಷ್ಟೂ ಹೊತ್ತು ನಮ್ಮ ಹೊಟ್ಟೆಗಾಗಿಯೇ ದುಡಿದಳಷ್ಟೇ. ಅಜ್ಜಿಯಾದ ಮೇಲೆ ಅವಳ ಮೊಮ್ಮಗು ಅಜ್ಜಿ ನೀವು ನಿಮ್ಮ ಜೀವನದಲ್ಲಿ ಏನು ನೋಡಿದ್ದೀರಿ, ಏನೇನು ಮಾಡಿದ್ದೀರೆಂದು ಅಕಸ್ಮಾತ್ ಕೇಳಿದರೆ, ನಿನ್ನ ಅಪ್ಪ ಚಿಕ್ಕಪ್ಪನ ಎಷ್ಟು ತಿಂದರೂ ತುಂಬದ ಬಕಾಸುರ ಹೊಟ್ಟೆಗಳನ್ನು ತುಂಬಿಸುತ್ತಲೇ ಇದ್ದೆ, ಅಡುಗೆ ಮನೆಯ ಖಾಲಿ ಪಾತ್ರೆಗಳಿಂದ ಹಿಡಿದು, ಪಾತ್ರೆಗಳ ಪಾಲಾಗುವವರೆಗೂ ಕಂಡೆನೆಂದು ಎಲ್ಲಿ ಹೇಳುವಳೋ ಎಂದು ಹೆದರಿಕೆಯಾಗುತ್ತದೆ. ತಿಂದ ತಟ್ಟೆಯನ್ನೂ ಸಹ ತೊಳೆದಿಡದ ಮಹಾನ್ ಪುತ್ರ ರತ್ನರು ನಾವುಗಳು. ಒಂದು ಊರು ತೋರಿಸಲು ಕರೆದೊಯ್ಯಲಿಲ್ಲ, ಒಂದು ಚಿನ್ನದ ಮೂಗುಬೊಟ್ಟು ಕೇಳಿದರೂ ಕೊಡಿಸುವ ಶಕ್ತಿ ಇನ್ನೂ ಬಂದಿಲ್ಲ, ತರಕಾರಿಗೆ, ದಿನಸಿಗೆಂದು ಅಪ್ಪ ಕೊಡುವ ಚೂರು ಪಾರು ದುಡ್ಡಲ್ಲಿಯೂ ಉಳಿಸಿ ಚೀಟಿಗಳನ್ನು ಹಾಕಿ ಚಿನ್ನ ಮಾಡುವ ಜಾಣ್ತನ, ಮತ್ತು ತಾಳ್ಮೆ ಅಮ್ಮನಂತಹ ದೈತ್ಯಪ್ರತಿಭೆಗಳಿಗಲ್ಲದೇ ಮತ್ತಾರಿಗೂ ಬರಲು ಸಾಧ್ಯವೇ ಇಲ್ಲ. ಅದೆಷ್ಟು ಬಾರಿ ಅನ್ನ ಕಡಿಮೆಯಾದಾಗ ಕಡಿಮೆ ಉಂಡಳೋ ಹಸಿವೇ ಇಲ್ಲ ಇವತ್ತು ಎಂದು ಸುಳ್ಳು ಬೇರೆ. ಇವರಿಗ್ಯಾಕೆ ಮಕ್ಕಳ ಮೇಲೆ ಇಷ್ಟು ವ್ಯಾಮೋಹ, ಮುಂದೆ ನಾವು ಎಂತೆಂಥಾ ಸೊಸೆಯರೆಂಬ ಕಿಲಾಡಿಗಳನ್ನು ಕರೆತಂದು ಯಾವ ಯಾವ ರೀತಿ ನೋವು ಕೊಡುವೆವೋ ಎಂದು ಭಯವಾಗುತ್ತೆ. ಇವರುಗಳು ಮಾಡಿರುವ ತ್ಯಾಗಕ್ಕೆ ಪ್ರತಿಯಾಗಿ ಎಂದಲ್ಲದಿದ್ದರೂ ಕನಿಷ್ಟ ಅಪ್ಪ ಅಮ್ಮನೆಂಬ ಪ್ರೀತಿ ಮಮತೆಯಾದರೂ ಬಂದವಳ ಮುತ್ತುಗಳು ಮರೆಸದಿರಲಿ ಎಂದು ಸದಾ ಪ್ರಾರ್ಥಿಸಿಕೊಳ್ಳುತ್ತೇನೆ. ಯಾರೂ ಕೆಟ್ಟವರಿರುವಿದಿಲ್ಲ ಆದರೆ, ಹೊಸ ಹಳೆಯ(ಅನುಭವಿ) ಆಲೋಚನೆಗಳ ದ್ವಂದ್ವದಿಂದಷ್ಟೇ ಎಷ್ಟೋ ಮನೆ ಮುರಿಯುತ್ತವೆ. ಅದೆಲ್ಲಾ ಇರಲಿ. ಈಗ ಆಗಿದ್ದಿಷ್ಟೇ.

ನಮ್ಮೆಲ್ಲರ ಜವಾಬ್ದಾರಿ ಹೊರುವುದಕ್ಕಾಗಿ ಸತತವಾಗಿ ವರ್ಷಾನುವರ್ಷ ಅಂಗಡಿಯ ಸಾಮಾನುಗಳನ್ನು ಹೊತ್ತ ತನ್ನ ಗಾಡಿಯ ಭಾರದ ದೆಸೆಯಿಂದಾಗಿ ಈಗ ಕೈ ಸ್ನಾಯುಗಳು ಉರಿ ಮತ್ತು ನೋವು ಕಾಣಿಸಿಕೊಂಡು ಕಾಡತೊಡಗಿದ್ದವು. ಹಾಗಾಗಿ ಹಲವಾರು ಇಂಗ್ಲೀಷು ಔಷಧಿ, ಆಯುರ್ವೇದ ಔಷಧಿ ಎಲ್ಲಾ ಖರ್ಚಾದರೂ ಕಡಿಮೆಯಾಗದೇ ಯಾರೋ ಹೇಳಿದ ಯೋಗ ಶಿಬಿರದ ಮೊರೆ ಹೊಕ್ಕು ಈಗ ಅದರಲ್ಲೇ ಏನೋ ಒಂದು ರೀತಿ ಕಾಲು, ಕೈಗಳ ನೋವು ಕೊಂಚ ಕಡಿಮೆಯಾದಂತೆನಿಸಿ, ಕೈಗೆ ಸಿಕ್ಕ ಮಾನಸಿಕ, ದೈಹಿಕ, ಸಾಂಸಾರಿಕ ತೊಂದರೆಗಳಿರುವವರಿಗೂ ಸಹ ಬಂದು ಸೇರಲು ಧ್ಯಾನ, ಯೋಗದಿಂದಾಗುವ ಲಾಭದ ಕುರಿತು ಚಿಕ್ಕ ಉಪದೇಶ ಕೊಡುತ್ತಿರುವ ಅಪ್ಪ,  ಹಲವರ ಅಪಾರ್ಥಕ್ಕೆ ಸಿಲುಕಿ ಅಮ್ಮನ ಕೆಂಗಣ್ಣಿಗೆ ಗುರಿಯಾಗಿರುವರು. ಅಮ್ಮನ ಇನ್ನೊಂದು ವಿಶೇಷತೆಯೇನಂದರೆ ತನಗೆ ಇಷ್ಟವಾಗದ ವಿಷಯಕ್ಕೆ ನೇರವಾಗಿ ಪ್ರತಿಭಟಿಸುವುದಿಲ್ಲ. ಅಪ್ಪ ಧ್ಯಾನಕ್ಕೆ ವ್ಯಯಿಸುತ್ತಿರುವ ಸಮಯ, ಮತ್ತು ತೋರುತ್ತಿರುವ ಆಸಕ್ತಿ, ಮನೆಯವರಲ್ಲಿ ಅಥವಾ ಬಂಧುಗಳಲ್ಲಿ ತೋರುತ್ತಿಲ್ಲ ಎಂದು ಮತ್ತು ತನಗೆ ಹಿಡಿಸದಿರುವ ಧ್ಯಾನ ತರಗತಿಗಳಿಗೆ ಮಧ್ಯ ಕೊಂಚ ದಿನ ಬಿಡುವು ಕೊಟ್ಟಿದ್ದರೂ ಈಗ ಮತ್ತೆ ಹೋಗಲು ಶುರುಮಾಡಿರುವುದರಿಂದ ಅಪ್ಪನೊಂದಿಗೆ ಮೌನವ್ರತ ಮಾಡಲು ಶುರುಮಾಡಿದ್ದರು. ಅಮ್ಮ ಅಪ್ಪನೊಂದಿಗೆ ಮೂರು ದಿನಗಳಿಂದ ಮಾತನಾಡುತ್ತಿರಲಿಲ್ಲವೆಂದು ನಮಗೂ ಸೂಕ್ಷ್ಮವಾಗಿ ಗೊತ್ತಾಗಿತ್ತು. ಅದೇನೂ ಅಂಥ ದೊಡ್ಡ ವಿಷಯವಾಗಿ ಕಾಣದಿದ್ದರಿಂದ ಸುಮ್ಮನಾಗಿದ್ದೆವು. ಇಂದು ಬೆಳಗ್ಗೆ ಎದ್ದು ಎಲ್ಲ ರೆಡಿಯಾಗುತ್ತಿದ್ದಂತೆಯೇ ಅಪ್ಪ ಎಲ್ಲರನ್ನೂ ಮನೆಯ ನಡುಮನೆಗೆ ಕರೆದು, ಮುಕ್ತವಾದ ಮಾತಿಗಿಳಿದರು. ನಡುಮನೆ ನ್ಯಾಯಾಲಯದ ರೂಪ ಪಡೆಯಿತು. ಅಮ್ಮನನ್ನು ನೇರವಾಗಿ ಪ್ರಶ್ನಿಸುತ್ತಾ ನಿನಗೆ ನನ್ನ ಮೇಲೇಕಷ್ಟು ಕೋಪ, ಯಾಕೆ ಮುಖ ಕೊಟ್ಟು ಮಾತನಾಡ್ತಿಲ್ಲ. ಮಕ್ಕಳ ಎದುರಿಗೇ ಕೇಳ್ತಿದ್ದೀನಿ. ಪ್ರೀತಿಯಿಂದ ನಡೆದುಕೊಳ್ಳೋಕೆ ಏನಾಗಿದೆ ಈಗ. ನಾನೇನು ಅಂತಹ ತಪ್ಪು ಮಾಡಿರುವುದು. ಎಂದರು. ಅಮ್ಮ ಟಿಫಿನ್ ಬಾಕ್ಸುಗಳಿಗೆ ಊಟ ಸುರುವುತ್ತಿದ್ದವರು, ಒಮ್ಮೆ ಚಕಿತರಾಗಿ ಮೇಲೆರಗುತ್ತಲೇ ಇದ್ದ ಪ್ರಶ್ನೆಗಳ ಸುರಿಮಳೆಯಿಂದ ಚೇತರಿಸಿಕೊಂಡು, ನನಗೆ ನೀವು ಧ್ಯಾನ ತರಗತಿಗಳಿಗೆ ಹೋಗೋದು ಇಷ್ಟ ಇಲ್ಲ. ಮೊದಲು ಬಿಡಿ ಅದನ್ನ ಎಂದರು. ಅದಕ್ಕಿದ್ದು ಅಪ್ಪ, ಅದಕ್ಕೂ ಇದಕ್ಕೂ ಏನು ಸಂಬಂಧ. ಇದು ಮೊದಲನೆ ಬಾರಿ ಅಲ್ಲ ನೀನು ನನ್ನ ಮೇಲೆ ಮುನಿಸಿಕೊಳ್ತಿರೋದು. ಎಷ್ಟು ಕಷ್ಟ ಆಗುತ್ತೆ ಗೊತ್ತಾ. ನಾನು ಎಲ್ಲಂದರಲ್ಲಿ ಕಣ್ಣಿಂದ ನೀರು ಹಾಕುವ ಹಾಗಿದೆ. ನಾನು ಪ್ರಾಣ ತೆಕ್ಕೋತೀನಿ ಇಲ್ಲಾ ಎಲ್ಲಾದರೂ ಹೊರಟುಹೋಗ್ತೀನಿ ಅಷ್ಟೇ ಮನೆಯ ವಾತಾವರಣ ಹಿಂಗೇ ಇದ್ದರೆ. ಎಲ್ಲರೊಟ್ಟಿಗೆ ಸರಿ ಇರ್ತೀಯ, ನನ್ನೊಟ್ಟಿಗೆ ಯಾಕ್ ಹಾಗೆ ನಡ್ಕೋಬೇಕು. ಹೋಗಲಿ ನಾನಾದರೂ ಯಾಕೆ ಧ್ಯಾನಕ್ಕೆ ಹೋಗ್ತಿದ್ದೀನಿ, ಆರೋಗ್ಯ ಸುಧಾರಿಸಲಿ ಅಂತ ತಾನೆ. ಅದೂ ನಾನೊಬ್ಬ ಚೆನ್ನಾಗಿರ್ಬೇಕು ಅಂತ ಏನಲ್ವಲ್ಲ. ಮೊದಲು ನನ್ನ ಆರೋಗ್ಯ ಚೆನ್ನಾಗಿದ್ದರೆ ಮನೆಯ ಹೊಣೆ ಹೊರೋಕೆ ಆಗೋದು. ಕಾಲು ಕೈ ಸೋತು ಮೂಲೇಲಿ ಕೂತರೆ ಮುಂದೆ ಯಾರು ನೋಡ್ತಾರೆ. ಬೇಡ ಅಂದ್ರೆ ಬೇಡಾ ಬಿಡು ಬಿಟ್ಟುಬಿಡ್ತೀನಿ. ಅಷ್ಟಕ್ಕೂ ಅಲ್ಲಿ ಏನು ಹೇಳ್ಕೊಡ್ತಾರೆ ಅಂತ ನಿನಗೆ ಹೇಗೆ ಗೊತ್ತಾಗುತ್ತ್. ಮನೆ ಬಿಟ್ತು ವೈರಾಗಿ ಆಗಿ, ಅಂತಾನೋ, ಇನ್ನೇನೋ ಹಾಳಾಗೋ ವಿಷಯ ಹೇಳಿಕೊಡೋದಿಲ್ವಲ್ಲ. ಅಲ್ಲಿ ಎಂಥಾ ಮುರಿದು ಹೋದ ಸಂಬಂಧಗಳು ಬಂದ್ರೂ, ಬೆಸುಗೆ ಹಾಕಿ ಕಳ್ಸಿರೋ ಎಷ್ಟು ಉದಾಹರಣೆಗಳಿವೆ. ನೀನು ಬಂದು ನೋಡು ಆಮೇಲೂ ಬೇಡ ಅನ್ನಿಸಿದ್ರೆ ನಾನೂ ಸಹ ಹೋಗೋದಿಲ್ಲ. ಗೊತ್ತಿಲ್ಲದೇ ಯಾವುದೇ ವಿಷಯವನ್ನು ತೀರ್ಮಾನಿಸಬಾರದು. ಎಂದು ಇನ್ನೂ ತಮ್ಮ ಮನದಾಳದ ನೋವನ್ನು, ತಮಗಾಗುತ್ತಿರುವ ಸಂಕಟವನ್ನು ಮುಕ್ತವಾಗಿ ಎಲ್ಲರ ಮುಂದಿಟ್ಟರು. ಒಂದೇ ಸೂರಿನಡಿಯಲ್ಲಿರುವ ಕೇವಲ ಮೂರು ಮತ್ತೊಂದು ಜನರಲ್ಲಿ ನಿಜವಾಗಲೂ ಏನು ನಡೆಯುತ್ತಿದೆ ಎಂದು ನಮಗೆ ಎಷ್ಟರ ಮಟ್ಟಿಗೆ ಗೊತ್ತಿದೆ. ಇಷ್ಟೆಲ್ಲಾ ಅಪ್ಪನಿಗಾಗುತ್ತಿದ್ದ ಕಿರುಕುಳ ಒಬ್ಬರಿಗಾದರೂ ಕಿಂಚಿತ್ತಾದರೂ ಅರಿವ್ಯಾಕಾಗಲಿಲ್ಲ. ಇನ್ನೇನು ನಾವು ಒಂದೇ ಮನೆಯಲ್ಲಿ ಬದುಕಿದ್ದರ ಉದೇಶ. ಸಂಸಾರ ಹೇಗಾಯ್ತಿದು. ಒಂದು ಮನೆಯಲ್ಲಿರುವ ನಾಲ್ಕು ಜನರ ಮನಸ್ಸು, ಇಷ್ಟ, ಕಷ್ಟಗಳನ್ನೇ ಅರ್ಥ ಮಾಡಿಕೊಳ್ಳುವುದೇ ಇಷ್ಟು ಕ್ಲಿಷ್ಟವಾದರೆ ಇಷ್ಟು ದೊಡ್ಡ ಪ್ರಪಂಚದಲ್ಲಿ ಎಷ್ಟೆಲ್ಲಾ ಯುದ್ಧಗಳು, ಜಗಳಗಳಲ್ಲಿ ಏನಾಶ್ಚರ್ಯ ಎಂದೊಮ್ಮೆ ಅನಿಸಿತು.

ಇಬ್ಬರಲ್ಲೂ ಪ್ರೀತಿ ಖಂಡಿತಾ ಇದೆ. ಕಳೆದುಕೊಳ್ಳುವ ಭಯವಿದೆ. ಅದಕ್ಕಾಗಿ ಹಂಬಲಿಸಿಯೇ ಅಪ್ಪ ವಿಷಯ ಪ್ರಸ್ತಾಪ ಮಾಡಿದ್ದು, ಮತ್ತು ಅಮ್ಮ ಅಪ್ಪನನ್ನು ಧ್ಯಾನಕೇಂದ್ರಕ್ಕೆ ಹೋಗದಂತೆ ತಡೆಯುತ್ತಿರುವುದು. ಆದರೆ ಅಪ್ಪನನ್ನು ಧ್ಯಾನಕೇಂದ್ರಕ್ಕೆ ಹೋಗದಂತೆ ತಡೆಯುವುದು ಸರಿಯಲ್ಲ, ಅಮ್ಮನನ್ನು ಮನವರಿಕೆ ಮಾಡಿಸಲು ಪ್ರಯತ್ನ ಪಟ್ಟಷ್ಟೂ ತನ್ನ ಪಟ್ಟು ಬಿಡಲೊಲ್ಲರು. ಅಪ್ಪನಿಗೇ ಸಾಧ್ಯವಾದಷ್ಟೂ ಮನದಟ್ಟು ಮಾಡಿಸಿ, ಸುಮ್ಮನೆ ಇಂಥಾ ಕ್ಷುಲ್ಲಕ ವಿಷಯಕ್ಕೆ ತಲೆಕೆಡಿಸಿಕೊಳ್ಳದೇ ಇಬ್ಬರೂ ಚೆನ್ನಾಗಿರಿ. ಈ ವಯಸ್ಸಿನಲ್ಲಿ ಈ ರೀತಿಯ ವೈಮನಸ್ಯ ಬೇಕಾ. ಸಾಲ, ಕೆಲಸ ಎಲ್ಲದರ ಹೊಣೆ ಹೊತ್ತದ್ದೂ ಸಾಕಿನ್ನು. ನಾವು ಮೀಸೆಗಳನ್ನು ಬೆಳೆಸಲು ಶುರುಮಾಡಿದ್ದೇವೆ. ನೋಡ್ಕೋತೀವಿ. ನೀವು ಇನ್ನಾದರೂ ಕೊಂಚ ಸಮಯ ಆರಾಮವಾಗಿ ಜೊತೆಗೆ ಓಡಾಡಿಕೊಂಡಿರುವುದನ್ನು ಪ್ರಯತ್ನಿಸಿ. ಹೆಚ್ಚು ಮಾತನಾಡಿ, ಜೊತೆಗೆ ಸಮಯ ಕಳೆಯುವುದನ್ನು ಶುರುಮಾಡಿ. ಇತರೆ ಇತರೆಯಾಗಿ ಆ ಸಮಯಕ್ಕೆ ಅಪ್ಪನನ್ನು ಸಮಾಧಾನ ಗೊಳಿಸಿದ್ದಾಯ್ತು. ಆದರೆ ಗೊತ್ತಿತ್ತು ಇದು ಸಮಸ್ಯೆಗೆ ಪರಿಹಾರವಲ್ಲವೆಂದು. ಕೆಲವು ವರ್ಷಗಳಿಂದ ದುಡಿಯುತ್ತಿದ್ದರೂ ಇದೇ ಮೊದಲ ಬಾರಿಗೆ ನಾವೂ ದೊಡ್ಡವರಾಗಿದ್ದೇವೆಂದು ಅನ್ನಿಸಹತ್ತಿತು. ಇದೇ ಮೊದಲ ಬಾರಿಗೆ ಅಪ್ಪ ಅಮ್ಮ ಮತ್ತೆ ಚಿಕ್ಕ ಮಕ್ಕಳಂತಾಗುತ್ತಿದ್ದಾರೆಂದು ಕೂಡ ಅನ್ನಿಸಿತು. ಮನಸ್ಸುಗಳು ಮಾಗಿದ ಮೇಲೆ ಮತ್ತೆ ಮಗುವಾಗುತ್ತವೆಯೇನೋ. ಮನೆಯಿಂದ ಹೊರಬಿದ್ದ ಮೇಲೂ ಎಲ್ಲರಲ್ಲೂ ಮನಃಶಾಂತಿ ಒದಗಿಸಬಲ್ಲ ಧ್ಯಾನ ಹೇಗೆ ನಮ್ಮ ಮನೆಯಲ್ಲಿ ನೆಮ್ಮದಿ ಕದಡುವ ಕೆಲಸ ಮಾಡಿತೆಂದು ಅರ್ಥವೇ ಆಗಲಿಲ್ಲ. ಮನೆಯಲ್ಲಿ ನಡೆದ ಎಲ್ಲ ಘಟನೆಗಳೂ ಹೊರಗೆ ಬಂದು ಚಿಂತಿಸಿದಾಗ ಹಾಸ್ಯಮಯವಾಗಿ ಕಂಡವು. ನಗಲಿಲ್ಲ. ಮನೆಗೆ ಹೋಗಿ ಹೊಂದಿಕೊಂಡು ಬದುಕದಿದ್ದರೆ ನಾನೇ ಮನೆ ಎಲ್ಲಾದರೂ ಹೊರಟು ಹೋಗುತ್ತೇನೆಂದು ಹೇಳಬೇಕೆನಿಸಿತು. ಹೇಳಲಿಲ್ಲ! 

                                                                                               - ನೀ.ಮ. ಹೇಮಂತ್


Monday 23 April 2012

ಏನಿಲ್ಲ!?



 ಬೆಳಗ್ಗಿನಿಂದ ಅತ್ತೂ ಅತ್ತೂ ಸಾಕಾಯ್ತು. ಕಣ್ಣೀರಿನ ಜೊತೆಗೆ ಮೂಗು ಕೂಡ ಸುರ್ ಸುರ್ ಎನ್ನಲು ಶುರುಮಾಡುತ್ತೆ, ಅದೇ ವಿಚಿತ್ರ. ಧರಿದ್ರದ್ದು ಕಣ್ಣಲ್ಲಿ ನೀರು ನಿಲ್ಲೋಕೆ ಏನಾದ್ರೂ ಮಾಡಬೇಕು. ಈ ನಲ್ಲಿಯಂತಹದ್ದೇನಾದ್ರೂ ಫಿಟ್ ಮಾಡಬಹುದಾಗಿದ್ದರೆ ಮೊದಲು ಮಾಡಿಬಿಡ್ತಿದ್ದೆ, ಕಣ್ಣೀರು ನಿಲ್ಲಿಸಬಹುದಿತ್ತು. ರಾತ್ರಿ ನಿದ್ರೆ ಮಾಡದ್ದರಿಂದ ಕಣ್ಣು, ನಿನ್ನೆ ರಾತ್ರಿ- ಇವತ್ತು ಬೆಳಗ್ಗೆ- ಮಧ್ಯಾಹ್ನ ಊಟ ಮಾಡಿರದಿದ್ದರಿಂದ ಹೊಟ್ಟೆ, ಚಿಂತಿಸಬಾರದ್ದನ್ನೆಲ್ಲಾ ಚಿಂತಿಸುತ್ತಿರುವುದರಿಂದ ಎದೆ ಒಟ್ಟೊಟ್ಟಿಗೇ ಉರೀತಿತ್ತು. ನೀರು ಕುಡಿದರೆ ಉರಿ ಕಡಿಮೆ ಆಗ್ತಿತ್ತೇನೋ, ಆದರೆ ಕುಡಿಯಲು ಭಯ, ಎಲ್ಲಾ ಕಣ್ಣಿನ ಮೂಲಕವೇ ಹೊರಗೆ ಬರುತ್ತೇನೋ ಅಂತ! ನನಗೇ ನಾಚಿಕೆಯಾಗುತ್ತೆ ಒಳ್ಳೇ ಹೆಂಗಸಿನ ತರಹ ಅಳ್ತೀನಲ್ಲಾ ಅಂತ. ಓಹ್! ಯಾವ ಗೂಬೆ ನನ್ನ ಮಗ ಹೇಳಿಕೊಟ್ಟನೋ ಹೆಂಗಸಿನ ತರಹ ಅಳೋದು ಅನ್ನೋ ಮಾತನ್ನ ಗೊತ್ತಿಲ್ಲ. ನೋವಾದ್ರೆ ಹೆಂಗಸರೇನು ಎಲ್ಲಾ ಪ್ರಾಣಿಗಳೂ ಅಳ್ತಾವೇನೋ. ನಾನು ಚಿಕ್ಕವನಿದ್ದಾಗ ನಮ್ಮಪ್ಪ ಕುಡಿದು ಬಂದು ಏನಾದರೂ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ನಮ್ಮಮ್ಮಿಗೆ ಹೊಡೆದಾಗಲೆಲ್ಲಾ ನಮ್ಮಮ್ಮಿ ಅತ್ತಿದ್ದನ್ನ ನಾನು ನೋಡೇ ಇರಲಿಲ್ಲ. ಪ್ರತಿಭಟಿಸುತ್ತಿದ್ದಳು. ಅಂಥಾ ಅಮ್ಮನಿಗೆ ಇಂಥಾ ಚಪ್ಪರ್ ಮಗ. ಆಗೆಲ್ಲಾ ನಮ್ಮಪ್ಪನ ಕತ್ತಿನ ಪಟ್ಟಿ ಹಿಡಿದು ಎರಡು ಬಿಗಿಯಾಗಿ ಕಪಾಳೆಗೆ ಬಿಟ್ಟು, ಈ ಪುರುಷಾರ್ಥಕ್ಕೆ, ನಿನ್ನ ಕುಟುಂಬ, ಅಮ್ಮನ ಕುಟುಂಬ ಎಲ್ಲಾ ಎದುರುಹಾಕಿಕೊಂಡು, ಪ್ರೇಮವಿವಾಹ ಬೇರೇ ಆಗಬೇಕಿತ್ತಾ ನೀನು, ಎಂದು ಕೇಳಬೇಕೆನಿಸುತ್ತಿತ್ತು. ಅವರ ಬಳಿ ಉತ್ತರವಿರಲು ಸಾಧ್ಯವೇ ಇಲ್ಲ. ಈಗ ಅಪ್ಪ ಅಮ್ಮಿಗೆ(ನಾವು ಹಾಗೇ ಕರೆಯೋದು) ಹೊಡೆಯೋ ಧೈರ್ಯ ಮಾಡಲು ಸಾಧ್ಯವಿಲ್ಲ. ನಾವಿದ್ದೀವಿ ಅಮ್ಮಿ ಕಡೆ ಅಂತ ಅವರಿಗೂ ಭಯ ಇದೆ.

ಆ ಕಜ್ಜೀ ನಾಯಿಯ ದೆವ್ವ ಇಡೀ ಈ ಪಾಳು ಬಿದ್ದಿರೋ ಆಫೀಸಿನಲ್ಲಿ ಕುಣಿದಾಡ್ತಿರೋ ಹಾಗೆ ಭಾಸವಾಗ್ತಿದೆ. ಅದು ಆಫೀಸಿನಲ್ಲಿ ಕುಣಿದಾಡ್ತಿತ್ತೋ, ನನ್ನ ತಲೆಯಲ್ಲೇ ಕುಣಿದಾಡ್ತಿತ್ತೋ. ದರಿದ್ರ ದೇವರನ್ನೇ ನಂಬದ ನಾನು, ದೆವ್ವವನ್ನ ಹೇಗೆ ನಂಬ್ತಿದ್ದೀನಿ ಅಂತ ನನಗೇ ಆಶ್ಚರ್ಯ. ಯಾವುದರ ಬಗ್ಗೆ ತಲೆ ಕೆಡಿಸಿಕೊಳ್ಳಲಿ, ಮನೆ, ವ್ಯಾಪಾರ, ಕೆಲಸ, ತಮ್ಮನ ಭವಿಷ್ಯ, ತಂಗಿಯ ಮದುವೆ, ಅಪ್ಪನ ರಾದ್ಧಾಂತ, ಇತರೆ ಇತರೆ ಇತರೆ.. ಮನೆ ಸಮಸ್ಯೆ ಶುರುವಾಗಿದ್ದು ನನ್ನಿಂದಲೇ. ಆದರೆ, ಜೇಬಲ್ಲಿ ದುಡ್ಡಿಲ್ಲ ಅಂದ್ರೆ ಆತ್ಮಗೌರವ ಬಿಟ್ಟು ಬದುಕಬೇಕಾ? ಆ ಎಂಟು ಮನೆಗಳ ವಟಾರದಲ್ಲಿ ಹದಿನೈದು ವರ್ಷದಿಂದ ಇದ್ದವರು ನಾವೊಬ್ಬರೇ. ಎಲ್ಲ ಮನೆಯ ಬಾಡಿಗೆಗಳೂ ನಮಗಿಂತ ಮೂರು ಪಟ್ಟು ವೃದ್ಧಿಸಿವೆ. ನಾವೂ ಖಾಲಿ ಮಾಡಿದ್ರೆ ಅಷ್ಟಕ್ಕೇ ಬರುವ ಜನರು ಸಿಕ್ಕೇ ಸಿಗ್ತಾರೆ. ನಮಗೆ ಒಂದೇ ಸಲ ಬಾಡಿಗೆ ಜಾಸ್ತಿ ಮಾಡಲೂ ಆಗ್ತಿಲ್ಲ, ಕಡ್ಡಿ ಮುರಿದಹಾಗೆ ಖಾಲಿ ಮಾಡಿ ಅಂತ ಹೇಳಲೂ ಆಗ್ತಿಲ್ಲ ಅವನಿಗೆ. ಅದಕ್ಕಾಗಿ ಏನೇನೋ ಇಲ್ಲಸಲ್ಲದ ವಿಷಯಗಳಿಗೆ ಜಗಳ ತೆಗೀತಿದ್ದಾನೆ. ಅತ್ತಲಾಗಿ ನಾವೇ ಖಾಲಿ ಮಾಡಿ ಎಲ್ಲಾದ್ರೂ ಹಾಳಾಗಿಹೋಗೋಣ ಇವನ ಸಹವಾಸ ಸಾಕಿನ್ನ ಅನ್ನಿಸುತ್ತೆ ಆದ್ರೆ ತಿಂಗಳಿಗೆ ಕನಿಷ್ಠಪಕ್ಷ ಐದು ಸಾವಿರ ನಮ್ಮದಲ್ಲ ಅಂತ ಎತ್ತಿಡಬೇಕು. ಬೋಗ್ಯಕ್ಕೆ ಹೋಗಬೇಕಂದ್ರೆ ಎರಡು ಲಕ್ಷನಾದರೂ ಬೇಕು. ಬರೋದು ಹತ್ತು ಸಾವಿರ ಸಂಬಳ. ಇಂಜಿನೀರಿಂಗ್ ಮಾಡಿ ನಾನು ಕೆಲಸ ಮಾಡ್ತಿರೋ ಕಂಪೆನಿ, ನಾನು ಎಣಿಸುತ್ತಿರುವ ಸಂಬಳ ನೋಡಿದ್ರೆ ನನಗೆ ನಾಚಿಕೆಯಾಗುತ್ತೆ. ನನ್ನ ಗ್ರೂಪ್ ಹುಡುಗಿಯರೂ ಕೂಡ ಕಾರ್ ತೊಗೊಳ್ಳೋ ಯೋಜನೆಯಲ್ಲಿದ್ದಾರೆ, ನಾನು ನೋಡಿದ್ರೆ ಅಕ್ಸೆಸ್ ತೊಗೊಳ್ಳೋಕೂ ದುಡ್ಡು ಸಾಲದೆ ಸಾಲ ಮಾಡಿ ಮೂರು ತಿಂಗಳು ತೀರಿಸೋ ಪರಿಸ್ಥಿತಿ. ನನ್ನ ಪರಿಸ್ಥಿತಿಗೆ ನಾನೇ ಕಾರಣ ಅಂತ ಒಂದೊಂದು ಸಲ ಅನ್ನಿಸಿದ್ರೆ, ನಮ್ಮಪ್ಪ ಅಮ್ಮನೇ ಕಾರಣ ಅಂತ ಒಂದೊಂದ್ಸಲ ಅನ್ಸುತ್ತೆ. ಬುದ್ದಿ ಬಂದಾಗಿನಿಂದ ಅಪ್ಪನ ಜೊತೆ ಪ್ರೆಸ್ಸಿನಲ್ಲಿ ದುಡಿಯೋದೇ ಅಗೋಯ್ತು, ಇಂಜಿನಿಯರಿಂಗ್ ಹೆಂಗೆ ಮುಗಿಸಿದೆನೋ ಅನ್ಸುತ್ತೆ ಇವಾಗ.

ಎರಡು ಲಕ್ಷ ಸಾಲ ಮಾಡಿ ಮನೆ ಬೋಗ್ಯಕ್ಕೆ ಹಾಕಿಕೊಂಡುಬಿಡೋಣ ಅಂದುಕೊಂಡ್ರೆ, ಸ್ವಂತ ಪ್ರೆಸ್ ಶುರುಮಾಡಬೇಕೆಂದಿರುವ ಕನಸು ಮುಂದೂಡಬೇಕಾಗುತ್ತೆ. ಧೈರ್ಯ ಮಾಡಿ ಪ್ರೆಸ್ ಶುರುಮಾಡಿದ್ರೆ ಆಮೇಲೆ ಮನೆ ಮಾಲಿಕ ಇನ್ನೇನಾದರೂ ತಕರಾರು ತೆಗೆದು ಮನೆ ಖಾಲಿ ಮಾಡಿ ಎಂದರೆ ಬೀದಿಗೆ ಬೇಳಬೇಕಾಗುತ್ತೆ. ಪಕ್ಕದಮನೆಯವರ ಹತ್ತಿರ ಈ ವಟಾರದಲ್ಲಿರುವ ಪಾರಿವಾಳಗಳು ಬೇಜ್ಜಾನ್ ಹಾರಾಡ್ತಾ ಇವೆ ರೆಕ್ಕೆ ಕತ್ತರಿಸಬೇಕು ಸಧ್ಯದಲ್ಲೇ ಅಂತ ಪರೋಕ್ಷವಾಗಿ ನಮಗೇ ಹೇಳಿದಹಾಗೆ ಹೇಳ್ತಿದ್ನಂತೆ. ಎಲ್ಲದಕ್ಕೂ ಉತ್ತರ ಕೊಡಬೇಕು ಸರಿಯಾಗಿ ಅಂತ ಕಿಚ್ಚು ಹುಟ್ಟುತ್ತೆ. ನನ್ನ ತಮ್ಮನಾದರೂ ಮೂರು ವರ್ಷದಿಂದ ಬಾಕಿ ಉಳಿದಿರುವ ಡಿಪ್ಲೊಮಾದ ಒಂದೇ ಒಂದು ವಿಷಯ ಪಾಸು ಮಾಡ್ಕೊಳ್ಳೋ ಅಂದ್ರೆ ಕೇಳಲ್ಲಾ, ಒಂದು ಕೆಲ್ಸಾನೂ ಪ್ಲಾನ್ ಮಾಡಿ ಮಾಡಲ್ಲ, ಸುಮ್ಮನೆ ದುಡ್ಡು ಸುರೀತಾನೆ. ಏನಾದ್ರೂ ಹೇಳೋಕೆ ಹೋದ್ರೆ ಲೋ ನಿನ್ನ ಜೀವನ ನೋಡ್ಕೊಳ್ಳೋ ಹೋಗೋ ಅಂತಾನೆ. ದುರಹಂಕಾರಿ. ಸೇರಿದ್ದು ಕಾರ್ ಡ್ರೈವರ್ ಆಗಿ, ಈಗ ಫ್ಯಾಕ್ಟರಿ ಸೂಪರ್ವೈಸಿಂಗ್ ಕೂಡ ಸೇರಿಸಿ ಹನ್ನೆರಡು ಘಂಟೆ ಕೆಲಸ ಸೇರಿ ಐದೂವರೆ ಸಾವಿರ ಸಂಬಳ, ಬೇಕಿತ್ತಾ ಅವನಿಗೆ ಇದು. ಏನಾದರೂ ಹೇಳಿದರೆ ನೀನ್ ಬಿಡಪ್ಪಾ ಇಂಜಿನಿಯರು ನಾವ್ ಏನ್ ಮಾಡೋಣ ಅಂತ ಮಾತು ಬೇರೆ ಕೇಳಬೇಕು. ಸಂಬಳ ಜಾಸ್ತಿ ಮಾಡ್ತಿಲ್ಲಾ ಅಂತ ಅವರ ಬಾಸ್ ಜೊತೆ ಜಗಳ ಆಡಿ ಕೆಲ್ಸ ಬಿಡೋ ಸಂದರ್ಭ ಇದೆ ಅಂತಾನೆ. ತಂಗಿ ಕೆಲ್ಸ ಮಾಡ್ತಿರೋ ಆಟೋಕ್ಯಾಡ್ ಕಂಪನಿಯಲ್ಲಿ ಕೆಲ್ಸ ಈ ನಡುವೆ ಕಡಿಮೆಯಾಗಿರೋದ್ರಿಂದ ಮಾಲೀಕರು ಕೆಲ್ಸ ನಿಲ್ಲಿಸುವ ಯೋಜನೆಯಿದೆಯಂತೆ, ಈ ಹೊಚ್ಚ ಹೊಸದಾಗಿ ಶುರುವಾಗಿರುವ ಕಂಪೆನಿಗೆ ಸೇರಿ, ಏನೂ ಕೆಲ್ಸ ಇರದಿರುವುದು ನೋಡಿದ್ರೆ ಯಾವಾಗ ಇದೂ ಹೋಗುತ್ತೋ ಗೊತ್ತಾಗ್ತಿಲ್ಲ. ಇಂತಹ ಸಮಯದಲ್ಲಿ ಅಪ್ಪ ಪ್ರೆಸ್ ಓನರ್ ಅತ್ರ ಜಗಳ ಮಾಡ್ಕೊಂಡು ಕೆಲ್ಸ ಬಿಟ್ಟು ಮನೆಗೆ ಬಂದಿದ್ದಾರೆ. ಯಾರಿಗೆ ಏನು ಅಂತ ಹೇಳೋದು?

ಅಜ್ಜಿಯ ಮರಣದ ಸಮಯದಲ್ಲಿ ಅರವತ್ತು ಸಾವಿರ ಖರ್ಚು. ಅಜ್ಜಿಯ ಸಾವಿನ ನಷ್ಟ ದುಡ್ಡಿನಿಂದ ಅಳೆಯುವಹಾಗಾಯ್ತಲ್ಲಾ ಅಂತ ಬೇಸರ ಕೆಲವು ಸಲ. ಅಜ್ಜಿ ಸತ್ತ ಘಳಿಗೆ ಕೂಡ ಸರಿಯಿಲ್ಲವಂತೆ, ಅದಕ್ಕೇ ಸೂತಕ ಕಳೆದು ಸತ್ಯನಾರಾಯಣ ಪೂಜೆ ಮಾಡಿಸಿದಾಗ ಬಟ್ಟೆಗೆ ಬೆಂಕಿಹೊತ್ತಿಕೊಂಡಿದ್ದಂತೆ. ಶುದ್ಧ ಅವಿವೇಕ. ಅಜ್ಜಿಯ ತಿಥಿ ಮಾಡ್ತಿದ್ವೋ ನಮ್ಮ ತಿಥಿಯೇ ಮಾಡ್ಕೋತಿದ್ವೋ. ನಮ್ಮ ಜೀವನ ನಾವು ನೋಡ್ಕೊಳ್ಳೋದೇ ಕಷ್ಟ ಇದೆ ಅದರಲ್ಲಿ ಹುಟ್ಟಿದಾರಭ್ಯ ಮುಖ ಮೂತಿ ನೋಡಿರದ ಸಂಬಂಧಿಕರನ್ನೆಲ್ಲಾ ಕರೆಸಿ ಅಜ್ಜಿಯ ಹೆಸರಿನಲ್ಲಿ ತುಂಡು, ಗುಂಡು ಸೇವೆಯಂತೆ. ಯಾರಿಗೆ ಏನು ಹೇಳಿದರೂ ಏನೂ ಉಪಯೋಗ ಇಲ್ಲ. ನಮ್ಮನೆಯಲ್ಲಿ ಎಲ್ಲರಿಗೂ ಅವರಿಗೆ ಬೇಕಾದ ಹಾಗೇ ಅಗಬೇಕು. ಯಾಕೋ ಭವ್ಯ ತುಂಬಾ ನೆನಪಾಗ್ತಿದ್ದಾಳೆ. ಒಮ್ಮೆ ಫೋನ್ ಮಾಡಿ ಸುಮ್ಮನೆ ಧ್ವನಿ ಕೇಳಿದ್ರೆ ಸಾಕು ಅನ್ಸುತ್ತೆ. ಆದ್ರೆ ಅವಳು ಮತ್ತೆ ತಿರಸ್ಕರಿಸಿದರೆ ಮತ್ತಷ್ಟು ಸೋತ ಅನುಭವ. ಅವಳು ಒಳ್ಳೇ ಸ್ನೇಹಿತೆಯಾಗಿ ಆದ್ರೆ ಉಳ್ಕೋತಿದ್ದಳು. ಅವಳ ಸಂಬಂಧ ಕಳ್ಕೊಂಡವನೂ ನಾನೇನೇ. ಆದರೆ ಒಮ್ಮೆ ಪ್ರೀತಿ ಹುಟ್ಟಿದ ಮೇಲೆ ಮತ್ತೆ ಸ್ನೇಹಿತರಾಗಿರೋದು ನನ್ನಿಂದ ಸಾಧ್ಯವಿಲ್ಲದ ಮಾತು. ಅವಳ ಮದುವೆನೇ ಅಗೋಯ್ತೇನೋ.

ಎಲ್ಲೂ ಯಾವುದರಲ್ಲೂ ಗೆಲ್ಲಲಿಲ್ಲ ನಾನು. ಕಾಲೇಜಿನಲ್ಲಿದ್ದಾಗ ಸರಿಯಾಗಿ ಅತ್ತ ಮಜಾನೂ ಮಾಡಲಿಲ್ಲ, ಇತ್ತ ಓದಲೂ ಇಲ್ಲ, ವೀಡು, ಗಾಂಜಾ, ಬಿಎಫ್, ಹುಡುಗಿಯರು, ಟ್ರಿಪ್ಪುಗಳೆಂದು ಸುತ್ತುತ್ತಿದ್ದವರೆಲ್ಲಾ ಇವತ್ತು ವಿಪ್ರೋ, ಟಿಸಿಎಸ್ ಗಳಲ್ಲಿ ದುಡ್ಡೆಣಿಸುತ್ತಿದ್ದಾರೆ. ನನಗೆ ಅತ್ತ ಪ್ರೆಸ್ ಕೆಲಸವೂ ಕೈಗೆ ಹತ್ತಲಿಲ್ಲ ಇತ್ತ ಇಂಜಿನೀರಿಂಗ್ ಕೂಡ ಲಾಭ ಒದಗಿಸಲಿಲ್ಲ. ಈಗ ಕನಿಷ್ಟ ಪಕ್ಷ ನಾಲಕ್ಕು ಲಕ್ಷ ಬೇಕು. ಎಲ್ಲಿಂದ ಹುಟ್ಟಿಸುವುದು. ಯಾರು ಕೊಡ್ತಾರೆ? ಕೊಡೋರಿದ್ರು ಯಾವ ಗ್ಯಾರಂಟಿ ಮೇಲೆ ಕೊಡ್ತಾರೆ? ನಾನೇ ಯಾಕೆ ಹೀಗೆ ತಗುಲಿಹಾಕಿಕೊಳ್ತೀನಿ? ಎಲ್ಲಾ ಕಷ್ಟಗಳೂ ನನಗೇ ಯಾಕೆ ಬರ್ತಾವೆ? ಇವತ್ತು ಮನೆಯಿಂದ ಹೊರಡುವಾಗ ಹೆಲ್ಮೆಟ್ ಹಾಕೊಂಡೇ ಹೊರಡು ಎಂದು ಆರನೇ ಇಂದ್ರಿಯ ಕೂಗಿ ಕೂಗಿ ಯಾತಕ್ಕೆ ಹೇಳ್ತಿತ್ತು. ಅದಕ್ಕೆ ಸರಿಯಾಗಿ ರಸ್ತೆಯಲ್ಲಿ ಬರುವಾಗ ಆ ಕಜ್ಜಿ ನಾಯಿ ನನ್ನ ಗಾಡಿಗೆ ಅಡ್ಡ ಬಂದದ್ದೇ ತಪ್ಪಿಸಿಕೊಂಡು ಬಸ್ಸಿನ ಅಡಿ ಸಿಕ್ಕು ಚಟ್ನಿಯಾಗುವುದನ್ನ ಕಣ್ಣಾರೆ ನೋಡಿದಹಾಗಾಯ್ತು. ಅಸಹ್ಯ, ತಲೆ ತಿರುಗುತ್ತಿತ್ತೋ, ಯಾವಾಗ ವಾಂತಿ ಮಾಡಿಕೊಂಡೆನೋ ಒಂದೂ ಗೊತ್ತಾಗಲಿಲ್ಲ. ರಸ್ತೆಯ ಬದಿಯಲ್ಲಿ ಕೂರಿಸಿ ತಲೆ ಮೇಲೆ ಯಾರೋ ತಣ್ಣೀರು ತಟ್ಟಿದಾಗಲೇ ಎಚ್ಚರಾದದ್ದು. ಗಾಡಿಗೂ ಸಹ ಏನೂ ಆಗಿರಲಿಲ್ಲ. ಹೊಟ್ಟೆಗೆ ಏನೂ ಬಿದ್ದಿರದಿದ್ದುದರಿಂದ ನಿಶ್ಯಕ್ತಿಯಾಗಿರಬಹುದು. ಈ ಆಫೀಸಿನಲ್ಲಿ ಒಬ್ಬನೇ ದೆವ್ವದಂತೆ ಕೆಲಸವಿಲ್ಲದೇ ಕೂರುವುದಂತಹ ಹಿಂಸೆ ಇನ್ನೊಂದಿಲ್ಲ. ಹತ್ತು ಸಾವಿರ ಬಾಡಿಗೆ ಕೊಟ್ಟು ಕೆಲಸಗಳಿಲ್ಲದೇ ನನ್ನನ್ನು ಹೀಗೆ ಕೂರಿಸಿರುವಬದಲು ಹೇಗೂ ಲ್ಯಾಪ್ಟಾಪ್ ಇತ್ತು ಮನೆಯಲ್ಲೇ ಕೆಲಸ ಮಾಡು ಎಂದಿದ್ದರೆ ಇವರ ಗಂಟೇನು ಖರ್ಚಾಗುತ್ತಿತ್ತೋ ಗೊತ್ತಿಲ್ಲ. ನಾನು ಸತ್ತು ಹೋಗಿದ್ದೆನಾ? ಬೆಳಿಗ್ಗಿನಿಂದ ಫೂನು ಕೂಡ ಬಡಿದುಕೊಂಡಿಲ್ಲ. ಯಾರೂ ಆಫೀಸಿಗೂ ಬಂದಿಲ್ಲ. ನಾನು ಆ ನಾಯಿ ಸತ್ತಾಗಲೇ ಸತ್ತಿರಬಹುದೆನಿಸುತ್ತೆ. ಆ ನಾಯಿಯ ಕಳೇಬರದ ಮೇಲೆ ವಾಹನಗಳು ಸಾಗುತ್ತಿರುವಾಗ ಖಾಲಿ ಹೊಟ್ಟೆ ಕೂಡ ಕಲುಕಿದಹಾಗಾಗುತ್ತಿತ್ತು, ಹಾಗಾದರೆ ನಾನು ಬದುಕಿದ್ದೇನೆ. ಇಲ್ಲ ನನಗೆ ಹಸಿವೆಯೇ ಆಗ್ತಿಲ್ಲ, ಉಸಿರಾಡುತ್ತಿರುವುದೂ ಸಹ ಸಂಶಯವಾಗ್ತಿದೆ, ನಾನು ಬದುಕಿಲ್ಲ. ಓಹ್! ಇಲ್ಲ ಈ ವರ್ಷ ಶುರುವಾದಾಗಿನಿಂದ ಎಲ್ಲಾ ಅಪಶಕುನಗಳೇ ಆಗ್ತಿದ್ದಿದ್ದು ಇದಕ್ಕೇ ಇರಬೇಕು. ನಾನು ಇಷ್ಟು ಬೇಗ ಸಾಯುವ ಹಾಗಿಲ್ಲ. ಈ ವರ್ಷದಲ್ಲಿ ನನ್ನ ತಂಗಿಗೆ ಮದುವೆ ಮಾಡಲೇಬೇಕಂತೆ, ಇಲ್ಲವಾದಲ್ಲಿ ಇನ್ನೂ ಐದು ವರ್ಷ ಕಂಕಣಭಾಗ್ಯವಿಲ್ಲವಂತೆ. ನಾವು ಎಷ್ಟೇ ಕಿತ್ತಾಡಿಕೊಂಡರೂ ನಮ್ಮ ಮನೆಯಲ್ಲಿನ ಜೂಲಿ ವಯಸ್ಸಾಗಿ ಸತ್ತಾಗಲೇ ಒಂದು ತಿಂಗಳು ಹಾಸಿಗೆ ಹಿಡಿದಿದ್ದ ತಂಗಿ. ಅಪ್ಪನ ಮೇಲೆ ಅಷ್ಟು ಕೋಪವಿದ್ದರೂ ಅವರು ಮನೆಗೆ ಮರಳುವುದು ಕೊಂಚ ನಿಧಾನವಾದರೂ ತುಡಿಯುತ್ತಿದ್ದ ಅಮ್ಮಿ. ನಾನಾಗಲಿ, ನನ್ನ ತಮ್ಮನಾಗಲೀ ಅವರುಗಳ ಕಣ್ಮುಂದೆಯೇ ಇರಬೇಕೆಂದು ಬಯಸುವ ಎಲ್ಲರೂ. ನಾನಿನ್ನೂ ಒಮ್ಮೆಯಾದರೂ ಮದುವೆಯಾಗಬೇಕಿತ್ತು. ಪ್ರಪಂಚವನ್ನೇ ನೋಡದೆ ನಾನು ಸಾಯಬಾರದಿತ್ತು. ಸತ್ತ ಮೇಲೆ ಎಲ್ಲರೂ ಮೇಲೆ ಹೋಗ್ತಾರಂತೆ ನಾನು ಇಲ್ಲೇ ಇದ್ದೀನಿ. ಅಯ್ಯೋ ನಾನು ಮೇಲೆ ಹೋಗುವ ಮುನ್ನ ಅಮ್ಮನನ್ನ ಒಮ್ಮೆ ತಬ್ಬಿಕೊಳ್ಳಬೇಕು. ಅಪ್ಪನ ಬಳಿ ಕ್ಷಮೆ ಕೇಳಬೇಕೆನಿಸುತ್ತಿದೆ. ಮೊದಲು ಮನೆಗೆ ಹೋಗಬೇಕು.

ಗಾಡಿಯಲ್ಲಿ ಬರುತ್ತಿದ್ದರೂ ನನ್ನನ್ನು ಯಾರೂ ಗಮನಿಸುತ್ತಿಲ್ಲ. ನಾನು ಸತ್ತಿರುವುದು ಖಂಡಿತ. ಬೆಳಗ್ಗೆ ನನ್ನ ಮನಸ್ಸಿಗೆ ಹೊಳೆದದ್ದು ನಿಜ. ನೇರವಾಗಿ ಮನೆಗೆ ಬಂದು ಅಮ್ಮಿಯನ್ನು ತಬ್ಬಿಕೊಂಡು ಚಿಕ್ಕ ಮಗುವಿನಂತೆ ಅತ್ತೆ. ಎಲ್ಲರೂ ಹೆದರಿದರು. ಮೈಬಿಸಿಯಾಗಿರುವುದನ್ನು ಕಂಡು ಮಲಗಿಸಿದರು. ಕಣ್ಣಲ್ಲಿ ಇನ್ನೂ ನೀರು ಬರುತ್ತಲೇ ಇತ್ತು. ಅಪ್ಪ ಮಾತ್ರೆ ತಂದರೆಂದು ಕಾಣುತ್ತೆ. ತಣ್ಣೀರು ಬಟ್ಟೆ ತಲೆಯ ಮೇಲೆ ಹಾಕಿ ಬೆಚ್ಚಗೆ ಹೊದಿಸಿದರು. ಕತ್ತಲು.

ಗಾಢನಿದ್ರೆಯ ನಂತರ ಕತ್ತಲಲ್ಲಿ ಕಣ್ತೆರೆದೆ. ನನ್ನ ಕಥೆ ಮುಗಿದುಹೋಗಿತ್ತೆಂದು ಕಾಣುತ್ತೆ. ಎಲ್ಲಿದ್ದೀನೀಗ ನಾನು? ಪಕ್ಕದಲ್ಲಿ ಆಗತಾನೆ ಅಮ್ಮಿ ನಿದ್ರೆಗೆ ಸರಿದಿದ್ದರೆಂದು ಕಾಣುತ್ತೆ. ಓಹ್! ನಾನು ಮನೆಯಲ್ಲೇ ಇದ್ದೆ. ಬೆಳಗ್ಗೆ ನಾಲಕ್ಕು ಘಂಟೆ. ನಾನು ಸತ್ತಿಲ್ಲ. ನನ್ನ ಕಥೆಗೆ ಇದು ಮುಕ್ತಾಯವಲ್ಲ ಹಾಗಾದರೆ. ಎದ್ದು ನೇರ ಹೊರಗೆ ನಡೆದೆ. ಇನ್ನೂ ಮೈ ಬಿಸಿ ಇತ್ತು. ಬೆಳಗ್ಗಿನ ಚಳಿಯಲ್ಲಿ ಓಡಬೇಕೆನಿಸಿತು. ಚಪ್ಪಲಿ ಮೆಟ್ಟಿದ್ದೇ ಓಡಹತ್ತಿದೆ. ಖಾಲಿ ರಸ್ತೆ, ಮೊದ ಮೊದಲು ಕಾಲು ಇಡಲೂ ಸಹ ಆಗುತ್ತಿರಲಿಲ್ಲ. ಎದುರಿಗೆ ಬೀಸುತ್ತಿದ್ದ ಗಾಳಿಗೆ ಮೈಯೊಡ್ಡಿ ಓಡುವುದೇ ಒಂದು ಮಜಾ. ಮೈಕೈ ಸಡಿಲವಾಗುತ್ತಿದ್ದಂತೆ, ಓಡುವ ಹುರುಪು ಸಿಕ್ಕಿತು. ದಾರಿಗೊತ್ತಿಲ್ಲದೇ ಓಡುತ್ತಲಿದ್ದೆ. ಇನ್ನೂ ವೇಗವಾಗಿ ರಸ್ತೆಯ ತುಂಬಾ ಬೆಳಗ್ಗೆ ಅಷ್ಟು ಹೊತ್ತಿಗೇ ಕೆಲಸ ಶುರುಮಾಡಿದ್ದ ಹಲವಾಗು ಕಷ್ಟ ಜೀವಿಗಳನ್ನು ನೋಡಿದೆ. ಒಂದು ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಸೊಪ್ಪು ಇಳಿಸುತ್ತಿದ್ದಳೊಬ್ಬ ಹೆಂಗಸು. ಶಕ್ತಿಯಿರುವಷ್ಟೂ ಓಡಿ ಬೆವರಿನಿಂದ ಸ್ನಾನ ಮಾಡಿಕೊಂಡು ಬೆಳಕಾದ ಮೇಲೆ ಮನೆಗೆ ಮರಳಿದೆ. ಎಲ್ಲರೂ ಗಾಬರಿಗೊಂಡಿದ್ದರು. ನಗುಮುಖದಲ್ಲಿದ್ದವನನ್ನು ಕಂಡು ಚೇತರಿಸಿಕೊಂಡರು. ಹಿಂದಿನ ರಾತ್ರಿ ನಾನು ನಿದ್ರೆಯಲ್ಲಿ ಮಾಡಿದ್ದ ಏನೇನೋ ಅವಾಂತರಗಳನ್ನ ಹೇಳುತ್ತಿದ್ದರೆ ನನಗೆ ನಾಚಿಕೆಯಾಗುತ್ತಿತ್ತು. ಸ್ನಾನ ಮಾಡುವಾಗ ನಿರ್ಧರಿಸಿದೆ. ಯಾವುದೇ ಕಷ್ಟಕ್ಕೂ ಹೆದರಿ ಅಲ್ಲ ಎದುರಿಸಿ ಸಾಯಬೇಕು ಅಂತ. ಯಾವುದೇ ಸಮಯದಲ್ಲೂ ಕೈ ಕಟ್ಟುವುದನ್ನ ನಿಲ್ಲಿಸಿದೆ. ಮುಕ್ತವಾಗಿ ಕೈಗಳನ್ನು ತೆರೆದಿರುತ್ತಿದ್ದೆ. ಬಹಳ ಹಿಂದೆ ಮಾಡುತ್ತಿದ್ದ ಚಿತ್ರಕಲೆಯನ್ನ ಮತ್ತೆ ಶುರುಮಾಡಿದೆ. ಮನೆಯ ಮತ್ತು ಪ್ರಿಂಟಿಂಗ್ ಪ್ರೆಸ್ ಮಾಲೀಕರನ್ನು ಸುಮ್ಮ ಸುಮ್ಮನೆ ಮಾತನಾಡಿಸಿ, ಯೋಗಕ್ಷೇಮ ವಿಚಾರಿಸಲು ಶುರುಮಾಡಿದೆ. ಎರಡು ಕಲ್ಲುಗಳನ್ನು ಕೈಯಲ್ಲಿ ಹಿಡಿದು ಸುಮ್ಮನೆ ಕವಡೆಗಳಂತೆ ಆಡಿಸಲು ಶುರುಮಾಡಿದೆ. ಪ್ರತಿ ದಿನ ಬೆಳಗ್ಗೆ ಎದ್ದು ಓಡುತ್ತಿದ್ದೆ ಬಂದು ಸ್ನಾನಾದಿ ಮುಗಿಸಿ ದೇವರ ಫೋಟೋದ ಮೇಲೆ ಅಂಟಿಸಿದ್ದ ತಲುಪಬೇಕಿರುವ ಗುರಿಯ ಪಟ್ಟಿಯನ್ನು ನೋಡಿ ಅದನ್ನೇ ಒಮ್ಮೆ ಹೇಳಿಕೊಂಡು, ತಿಂಡಿ ತಿಂದು ಹೊರಡುತ್ತಿದ್ದೆ, ಸುಮ್ಮನೆ ಮನಸೋ ಇಚ್ಛೆ ಹಾಡಿಹೇಳಿಕೊಳ್ಳುತ್ತಿದ್ದೆ. ಅವಕಾಶ ಸಿಕ್ಕಾಗಲೆಲ್ಲ ನಗಲು ಶುರುಮಾಡಿದೆ. ದಿನಪೂರ್ತಿ ಏನೋ ಒಂದು ಮಾಡಿ ವ್ಯಯಿಸುತ್ತಲಿದ್ದೆ. ಸುಮ್ಮನೆ ನಾನೇ ಮೈಸೂರಿನಲ್ಲಿದ್ದ ನನ್ನ ಸಹಪಾಠಿಗಳಿಗೆ ತಲೆ ತಿನ್ನುತ್ತಿದೆ. ಮನೆಗೆ ಮರಳಿ ಚಿತ್ರಕಲೆ, ಮಾತುಕತೆ, ಹೊಸ ಪ್ರಿಂಟಿಂಗ್ ಪ್ರೆಸ್ ತೆರೆಯುವ ಪ್ಲಾನ್ ಬಗ್ಗೆ ಚರ್ಚೆ ಮಾಡುತ್ತಿದ್ದೆ. ನಾನೇನು ಒಬ್ಬಂಟಿಯಾಗಿರಲಿಲ್ಲ. ಎಲ್ಲರ ಸಹಕಾರವಿತ್ತು. ಸಮಸ್ಯೆಗಳು ಹಾಗೇ ಇತ್ತು. ನಾನು ಸಮಸ್ಯೆಯನ್ನ ನೋಡುವ ರೀತಿ ಬದಲಾಗಿತ್ತು. ಅದ್ಯಾಕೋ ಆಕಾಶ ಕಳಚಿಬಿದ್ದಂತೆನಿಸುತ್ತಿರಲಿಲ್ಲ. ಸಮಸ್ಯೆಯಿಂದ ಹೊರಗೆ ನಿಂತು ಯೋಚಿಸುತ್ತಿದ್ದೆ. ದಾರಿಗಳಿದ್ದವು. ನೋಡುವ ಕಣ್ಣುಗಳು ಬೇಕಿತ್ತಷ್ಟೇ. 


Sunday 22 April 2012

ನನ್ನಿಷ್ಟ!



            ದುಗ ಮಹಾಶಯರೇ ನನ್ನ ಬಗ್ಗೆ ಹೇಳ್ತೀನಿ ಕೇಳಿ. ನಾನೊಬ್ಬ ಐಟಿ ಉದ್ಯೋಗಿ ಕಣ್ರೀ. ನಾನು ಮೂವತ್ತು ದಿನಗಳಲ್ಲಿ ಇಪ್ಪತ್ನಾಲ್ಕು ದಿನಗಳು ಕೆಲಸ ಮಾಡಿದ್ರೆ ಮೂವತ್ತೊಂದನೆಯ ದಿನ ನನ್ನ ಕೆಲಸಕ್ಕೆ ಸಂಬಳ ಅಂತ ದುಡ್ಡು ಬಂದು ನನ್ನ ಬ್ಯಾಂಕಿನ ಖಾತೆಗೆ ಬೀಳ್ತಿತ್ತು ಕಣ್ರೀ. ಪೇ ಸ್ಲಿಪ್ ಅಂತ ಒಂದು ಇ-ಮೇಲ್ ಅದರಲ್ಲಿ ಸಂಬಳ ಕೊಟ್ಟಿರುವುದಕ್ಕೆ ಸಾಕ್ಷ್ಯ, ಮತ್ತು ಸಂಬಳದಲ್ಲಿ ದುಡ್ಡು ಹಿಡಿದಿರುವುದರ ಲೆಕ್ಕಾಚಾರಗಳ ವಿವರಗಳು ಇರುತ್ತಿದ್ದವು. ಅದನ್ನು ನೋಡಲು ಅಂದಿನ ದಿನ ನೂಕು ನುಗ್ಗಲು. ಪದೇ ಪದೇ ನೋಡಿದ್ದನ್ನೇ ನೋಡುತ್ತಿದ್ದ ನನ್ನ ಸಹಪಾಠಿಗಳನ್ನು ಕಂಡು ನನಗೆ ನಗೆ ಬರುತ್ತಲಿತ್ತು. ನೋಡಿ ಮೊದಲೇ ಹೇಳಿರ್ತೀನಿ ನಾನು ಹೇಳುತ್ತಿರುವುದು ಸರಿ ಇಲ್ಲ ಎಂದು ನೀವು ಹೇಳಿದರೆ ನೀವೇ ಸರಿ ಇಲ್ಲ ಅಂತ ನಾನ್ ಹೇಳ್ತೀನಿ. ಇದು ನನ್ನ ಕಥೆ ಕಣ್ರೀ. ನನಗೆ ಸರಿ ಅನ್ನಿಸಿದ್ದನ್ನ ಮಾತ್ರ ಹೇಳ್ತೀನಿ. ಮತ್ತೆ ನೀವು ಯಾಕ್ ಇದನ್ನ ಓದಬೇಕು ಅಂತ ಯೋಚಿಸ್ತಿದ್ದೀರಾ? ನನ್ನಂಥವನ ಬಗ್ಗೆ ತಿಳ್ಕೊತೀರಾ, ಅದಕ್ಕೇ ಕಣ್ರೀ. ಸರಿ ಓದಿ. ಎಲ್ಲಿದ್ದೇ? ಹಾ ಆ ಸಂಬಳವನ್ನು ಭಲೇ ಖುಷಿಯಿಂದ ನೋಡ್ತಿದ್ರು ಕಣ್ರೀ. ಒಂದು ದಿನ ಸಂಬಳ ಬರುವುದಕ್ಕೆ ಮೂವತ್ತು ದಿನ ನೆಮ್ಮದಿ, ಮಾನಸಿಕ ಮತ್ತು ದೈಹಿಕ ಆರೋಗ್ಯ ಕಳೆದುಕೊಂಡು ದುಡೀಬೇಕಿತ್ತು. ಇದ್ಯಾವ ಹಣೆಬರಹ ರೀ? ಸಂಬಳಕ್ಕೆ ದುಡಿಯೋಷ್ಟು ಚಿಕ್ಕ ಮನುಷ್ಯರಾಗೋದ್ವಲ್ಲಾ ನಾವು ಅಂತ ತುಂಬಾ ಸಂಕಟ ಆಗ್ತಿತ್ತು. ನಮ್ಮ ಮನೆ ಎದುರುಗಡೆ ಒಂದು ಚಿಕ್ಕ ತಳ್ಳುವ ಗಾಡಿ, ಬಿಸಿಲು, ಮಳೆಯಿಂದ ಬಚಾವಾಗಲು ಗಾಡಿಗೆ ಹೊದಿಸಿರುವ ಟಾರ್ಪಾಲು, ಆ ಟಾರ್ಪಾಲಿನ ಕೆಳಗಡೆ ಎರಡು ಕಲ್ಲಿದ್ದಲಿನಂತಹ ಎರಡು ಬೆವರಿನಲ್ಲಿ ಅದ್ದಿ ತೆಗೆದಿರುವ ಎರಡು ದೇಹಗಳು. ಒಂದು ಕಬ್ಬಿಣದ ಇಸ್ತ್ರಿ ಪೆಟ್ಟಿಗೆಯ ಹೊಟ್ಟೆಗೆ ಉರಿ ಉರಿ ಕೆಂಡವನ್ನು ಸುರಿದು ಆ ಇಸ್ತ್ರಿ ಪೆಟ್ಟಿಗೆಯನ್ನು ನಮ್ಮ ಬಟ್ಟೆಗಳ ಮೇಲೆ ಸರಕ್ ಸರಕ್ಕನೆ ಎಳೆದು ಗರಿಗರಿಗೊಳಿಸಿ ಕೊಡುತ್ತಿದ್ದ ಅದನ್ನು ನಾವು ಭಾರೀ ಮೇಧಾವಿಗಳು ಧರಿಸಿಕೊಂಡು ದೊಡ್ಡ ದೊಡ್ಡ ಕಂಪನಿ ಬಸ್ಸನ್ನು ಏರಿ ಕಾಲು ಮೇಲೆ ಕಾಲು ಹಾಕಿಕೊಂಡು ಹೋಗಿ ಏಸಿ ರೂಮಿನಲ್ಲಿ ಅಂಡೂರುತ್ತಿದ್ದೆವು. ನಂಬುತ್ತೀರೋ ಬಿಡ್ತೀರೋ ಆದರೆ ನಿಜ ಹೇಳ್ತೀನಿ, ಒಳಗೆ ಮಾಡುತ್ತಿದ್ದ ಕೆಲಸದಲ್ಲಿ ಒಂದು ದಿನಕ್ಕೆ ಬೆವರು ಬರಲಿಲ್ಲ ಕಣ್ರೀ, ಅಂಥಾ ಕೆಲಸವನ್ನ ಕೆಲಸ ಅಂತ ಕರೀತಿದ್ರು, ಅದಕ್ಕೆ ಘನತೆ, ಗೌರವವನ್ನ ಆರೋಪಿಸುತ್ತಿದ್ರು, ಮತ್ತು ನಡುಬಗ್ಗಿಸಿ ದುಡಿಯುವವರಿಗಿಂತ ಹೆಚ್ಚಿಗೆ ಸಂಬಳ ಕೊಡುತ್ತಿದ್ದರು. ತುಂಬಾ ಓದಿದರೆ ಕಡಿಮೆ ಕೆಲಸ ಮಾಡೋದು ಹೇಗೆ ಅಂತ ಕಲೀತೀವಂತೆ. ಕಡಿಮೆ ಕೆಲಸ ಮಾಡೋದನ್ನ ಕಲಿತವರಿಗೆ ಹೆಚ್ಚಿಗೆ ಸಂಬಳ ಕೊಡ್ತಾರಂತೆ. ನಾನು ನನ್ನ ಕಂಪನಿಯಲ್ಲಿ ಮೇಲೆ ಮೇಲಿನ ಹುದ್ದೆಗೆ ಹೋಗುತ್ತಿದ್ದ ಹಾಗೂ ಕೆಲಸ ಕಡಿತಗೊಳ್ಳುತ್ತಾ ಹೋಗುತ್ತಿತ್ತು ಸಂಬಳ ಹೆಚ್ಚುತ್ತಾ ಹೋಗುತ್ತಿತ್ತು. ಚೆನ್ನಾಗಿದೆ ಕಣ್ರೀ ನಮ್ಮ ಪ್ರಪಂಚ ಅಲ್ವಾ?

ನನ್ನ ಘನತೆ ಎಂಬ ಸುಕ್ಕು ಬಟ್ಟೆಗಳಿಗೆ ನೀರು ಚುಮುಕಿಸಿ ಬಿಸಿ ಬಿಸಿ ಇಸ್ತ್ರಿ ಪೆಟ್ಟಿಗೆಯನ್ನು ಸವರಿದಾಗ ಅದರಿಂದ ಏಳುತ್ತಿದ್ದ ಬುಸ್ಸ್ ಬುಸ್ಸ್ ಶಬ್ಧ, ಮತ್ತು ಸಣ್ಣದಾದ ಹೊಗೆ ಅದ್ಯಾಕೋ ಕಣ್ಮುಂದೆ ಬರುತ್ತಲೇ ಇತ್ತು. ಹಾಗೆ ಆ ಭಾರವಾಗಿರಬಹುದಾದ ಪೆಟ್ಟಿಗೆಯನ್ನು ಎಳೆಯುವಾಗ ಆ ತೊಳೆದಿಟ್ಟ ಕಲ್ಲಿದ್ದಲಿನಂಥ ಮನುಷ್ಯನ ಕೈಗಳಲ್ಲಿ ಹುರಿಗೊಂಡಿದ್ದ ಮಾಂಸಖಂಡಗಳು, ಹೊರಗೇಳುತ್ತಿದ್ದ ನರಗಳು ಛಂದವಾಗಿ ಕಾಣುತ್ತಿತ್ತು ನನಗೆ. ಕೆಲಸ ಅಂದ್ರೆ ಅದು ಕಣ್ರೀ. ಹಿಂಗೆ ಇಸ್ತ್ರಿ ಮಾಡಿಕೊಡುತ್ತಿದ್ದ ಹಂಗೆ ದುಡ್ಡೆಣಿಸುತ್ತಿದ್ದ. ಸಂಬಳ ಅಂದ್ರೆ ಅದು ಕಣ್ರೀ. ಗಂಡ ಅದೆಂಥ ಕಲಾವಿದ ಅಂತೀರಿ. ಪಕ್ಕದಲ್ಲಿದ್ದ ಹೆಂಡತಿಯ ಜೊತೆ ಸದಾ ಏನೋ ಮಾತನಾಡ್ತಾನೇ ಇರ್ತಿದ್ದ ಮತ್ತೆ ಅವಳು ನಗ್ತಿರ್ತಿದ್ದಳು ಅದೇ ನನಗೆ ಆಶ್ಚರ್ಯ. ಅದ್ಯಾವ ಹಾಸ್ಯ ಮಾಡಿರಬಹುದು ಅವನು, ಕದ್ದು ಕೇಳೋಣ ಅಂತ ಪ್ರಯತ್ನ ಪಟ್ಟಿದ್ದೆ ಕೂಡ ಅವರ ನಡುವಿನ ಖುಷಿಗೆ ಕಾರಣ ಏನೂಂತ ಗೊತ್ತೇ ಅಗಲಿಲ್ಲ. ನನಗೆ ನಾಳೆ ರಜಾ ತೊಗೋಬೇಕು ಅನ್ನಿಸಿತ್ತು. ಯಾಕೆ ಅಂತ ಕೇಳಿದ್ರು. ರಜ ತೊಗೋಬೇಕು ಅದೇ ಕಾರಣ ಅಂದೆ. ಕಾರಣ ಇಲ್ಲದೇ ರಜಾ ಕೊಡೋದಿಲ್ಲ. ಹಂಗೂ ಬೇಕಾದ್ರೆ, ನಾಳೆ ಆಗೊಲ್ಲ ಮುಂದಿನ ಬುಧವಾರ ತೊಗೋ ಅವತ್ತು ಕೊಡ್ತೀವಿ ಅಂದ್ರು. ನನಗೆ ನಾಳೆ ರಜಾ ತೊಗೋಬೇಕು ಅಂದ್ರೆ ಮುಂದಿನ ವಾರ ಕೊಡ್ತಾರೆ! ಸರಿ ನನಗೆ ಕೆಲಸ ಬಿಡಬೇಕು ಅನ್ನಿಸುತ್ತಿದೆ ಅಂದೆ. ಅದಕ್ಕೂ ಮನವಿ ಮಾಡು ಮೂರು ತಿಂಗಳ ನಂತರ ಕೆಲಸ ಬಿಡಬಹುದು ಅಂದ್ರು. ಮಾರನೆಯ ದಿನದಿಂದ ಕೆಲಸಕ್ಕೆ ಹೋಗೋದನ್ನ ನಿಲ್ಲಿಸಿದೆ. ಅನುಭವ ಪತ್ರ ಕೊಡಲ್ಲಾ ಅಂದ್ರು ಉಳಿದ ಸಂಬಳ ಕೊಡಲ್ಲ ಅಂದ್ರು ಇಟ್ಟುಕೊಳ್ಳಿ ಸಾರ್. ಮಜಾ ಮಾಡಿ ಅಂತ ಸುಮ್ಮನಾಗಿ ಹೋದೆ.

ಮನೆಯ ಮುಂದೆ ವಿಪರೀತ ಕೂಗಾಟ, ಹೊಡೆದಾಡ್ತಿದ್ರು ಕಣ್ರೀ. ಯಾವ ರೀತಿ ಅಂತೀರಿ? ಗಂಡ ಹೆಂಡತಿಯ ಜುಟ್ಟು ಹಿಡಿದು ಎಳೆದಾಡಿ, ಕಾಲು ಕಾಲಲ್ಲಿ ಒದೀತಿದ್ದ. ಅವಳೂ ರಸ್ತೆ ತುಂಬಾ ಬಿದ್ದು ಒದ್ದಾಡಿ ಎದೆ ಎದೆ ಬಡಿದುಕೊಂಡು ಗಂಡನನ್ನ ಅದು ಸೇದಿ ಹೋಗ ಇದು ಸೇದಿಹೋಗ ಎಂದು ಏನೇನೋ ಶಪಿಸುತ್ತಲೇ ಇದ್ದಳು. ಅರೆರೆ ಗಂಡ ಹೆಂಡಿರಾ ಇಲ್ಲ ಬದ್ಧ ವೈರಿಗಳಾ ಇವರು. ನನ್ನ ಕಣ್ಣೇ ತಗುಲಿರಬೇಕು ಇವರಿಗೆ ಎಂದುಕೊಂಡೆ. ಏನೇ ಹೇಳಿ ಎಷ್ಟು ಚೆನ್ನಾಗಿ ಒದೀತಿದ್ದ ಅಂತೀರಿ, ಫುಟ್ಬಾಲ್ ಆಟಕ್ಕೆ ಕಳುಹಿಸಬಹುದಿತ್ತು ಇವನ್ನ ಆದ್ರೆ ಪರಮಾತ್ಮ ಇಳಿಸಿದ ಮೇಲೆ. ನನಗೇನಾದ್ರು ಹೆಂಡತಿಯೆಂಬವಳೊಬ್ಬಳು ಗಂಟು ಬಿದ್ದಿದ್ರೆ. ಅವಳನ್ನ ನಾನು ಹಾಗೆ ಹೊಡೆಯುವುದೆಲ್ಲ ದೂ……ರದ ಮಾತು ಬಿಡಿ. ಅಕಸ್ಮಾತ್ತಾಗಿ ಕೈ ಎತ್ತಿ, ಕೆನ್ನೆಗೆ ನನ್ನ ಮೂರಿಂಚಿನ ನಾಲ್ಕು ಬೆರಳುಗಳನ್ನ ಅವಳ ಕಪಾಳೆಗೆ ಶಬ್ಧ ಕೂಡ ಬರದಷ್ಟು ಚಿಕ್ಕದಾಗಿ ತಗುಲಿಸಿ, ಅವಳ ಕಿವಿಯಲ್ಲಿ ಪ್ರತಿಧ್ವನಿಸಲೂ ಸಹ ಆಗದಷ್ಟು ಜೋರಾಗಿ ಲೆಕ್ಕ ಹಾಕಿ ಎರಡೇ ಎರಡು ಮಾತು ಆಡಿದ್ದರೆ ಮನೆ ಬಿಟ್ಟು ಹೋಗುವುದಲ್ಲದೇ ವಿಚ್ಛೇದನದವರೆಗೂ ಹೋಗಿಲ್ಲದಿದ್ದರೆ ನಮ್ಮದು ಗೌರವಾನ್ವಿತ ಸಂಸಾರ ಎಂದು ಹೇಳಲು ಯಾವ ಮನುಷ್ಯನಿಗೂ ಸಾಧ್ಯವೇ ಇಲ್ಲ ಬಿಡಿ. ಅಂತೂ ಆ ರಸ್ತೆಯಲ್ಲಿ ಪ್ರತಿನಿತ್ಯ ಬಿಟ್ಟಿಯಾಗಿ ಕಾಣಸಿಗುತ್ತಿದ್ದ ಆದರ್ಶ ಸಂಸಾರ ಮುರಿದು ಬಿತ್ತಾ ಎಂದು ರಾತ್ರಿ ಮಲಗುವಾಗ ಟಿವಿ ಕಡೆ ಗಮನವಿಲ್ಲದೇ ಯೋಚಿಸುತ್ತಿದ್ದೆ. ಒಂದು ಇರುವೆ ನನ್ನ ಮಂಚದ ಪಕ್ಕದಲ್ಲೇ ಅದರ ಎರಡರ ಗಾತ್ರದ ಸಕ್ಕರೆಯ ಹುಂಡೆಯನ್ನು ಎತ್ತಿಕೊಂಡು ಹೋಗುತ್ತಿತ್ತು. ಹಾಗೇ ಗಮನಿಸಿದೆ. ಸಕ್ಕರೆ ಹುಂಡೆ ಬಿದ್ದೋಯ್ತು. ನನ್ನ ಮಗಂದು ಇರುವೆ ಏನು ಸಾಹಸ ಮಾಡ್ತಿತ್ತು ಅಂತೀರಿ. ಬಿದ್ದಷ್ಟೂ ಬಾರಿ ಮತ್ತೆ ತನ್ನ ಮುಂಗಾಲುಗಳಿಗೆ ಸಿಗಿಸಿಕೊಳ್ಳುತ್ತಲೇ ಇತ್ತು. ಮುಂದೆ ಹೋಗುತ್ತಲೇ ಇತ್ತು. ನನಗೆ ನಿದ್ರೆ ಬಂದಿತ್ತು. ಮಾರನೆಯ ದಿನ ಎದ್ದು ಮೈಮುರಿಯುತ್ತಿರುವಷ್ಟರಲ್ಲಿ ಅದೇ ಗಾಡಿ ಅದೇ ಬಾಡಿಗಳು ಹಳದಿ ಹಲ್ಲುಗಳು, ಸುಕ್ಕು ಬಟ್ಟೆಗಳ ಗುಡ್ಡೆಗಳು, ಇಸ್ತ್ರಿ ಪೆಟ್ಟಿಗೆಯ ಬುಸ್ ಬುಸ್ ನಾದ.

ಬಿಜಿನೆಸ್ ಮಾಡುವ ಒಂದು ಆಲೋಚನೆಯಿತ್ತು ಆದರೆ ಮತ್ತೆ, ನಾನಿದ್ದ ಪರಿಸ್ಥಿತಿಯಲ್ಲಿ ನನ್ನ ಕೆಳಗೆ ಜನ ಇರುವಂತೆ ಮಾಡಲು ಮನಸು ಒಪ್ಪಲಿಲ್ಲ. ಮೂವತ್ತು ದಿನಗಳು ಅವರ ಕೈಯಲ್ಲಿ ದುಡಿಸಿ ಒಂದು ದಿನ ಸಂಬಳ ಕೊಡಲು ಯಾಕೋ ಮನಸ್ಸು ಒಪ್ಪಲೇ ಇಲ್ಲ. ಎಲ್ಲವನ್ನೂ ಇದ್ದಲ್ಲೇ ಬಿಟ್ಟೆ, ಮಾರನೆಯ ದಿನ ಕೋಳಿ ಕೂಗುವ ಮುನ್ನ ಹಹಹ.. ತಾಂತ್ರಿಕ ದೋಷ ಅದು, ನಾನು ಕೋಳಿ ಕೂಗಿದ್ದು ಕೇಳೇ ಇಲ್ಲ. ಹಾಗಾಗಿ ನಾಯಿಗಳು ಊಳಿಡುವುದನ್ನು ನಿಲ್ಲಿಸುವ ಮೊದಲೇ ಮನೆ ಬೀಗ ಹಾಕಿ, ಬೀಗವನ್ನು ಕಿಟಕಿಯ ಹಿಂದೆ ಮುಚ್ಚಿಟ್ಟು ಬಟ್ಟೆ ಒಂದೆರಡು ಬಿಟ್ಟರೆ ಬೇರೇನನ್ನೂ ತೆಗೆದುಕೊಳ್ಳದೇ ಹೊರಟೆ. ಊಟ, ಬಹಿರ್ದೆಶೆ, ಸ್ನಾನ, ಮಲಗಲು ಜಾಗ ಇಷ್ಟೇ ನನ್ನ ಮುಂದೆ ಇದ್ದ ಪ್ರಶ್ನೆಗಳು. ಆಫೀಸಿಗೆ ಹೋಗುವಾಗ ಬೆಳಗ್ಗೆ ತಿಂಡಿ ಮಾಡಿಕೊಡುವವರ್ಯಾರು ಇರಲಿಲ್ಲ ಏಳುವುದೂ ಕೂಡ ತಡವಾಗೇ ಆದ್ದರಿಂದ ಬೆಳಗ್ಗೆ ತಿಂದು ಅಭ್ಯಾಸ ತಪ್ಪಿ ಹೋಗಿತ್ತು. ಮಧ್ಯಾಹ್ನ ಹೊಟ್ಟೆ ಬಿರಿಯುವಹಾಗೆ ತಿನ್ನುತ್ತಿದ್ದೆ ಬಿಟ್ಟರೆ ಸಂಜೆ ಆಫೀಸಿನಿಂದ ಮರಳುವುದು ಮಾಮೂಲಿ ತಡವಾದಾಗ ಮನೆಗೆ ಹೋಗಿ ಶೂ ಕೂಡ ಬಿಚ್ಚದೇ ಮಲಗಿಬಿಡುತ್ತಿದ್ದೆ. ಹಾಗಾಗಿ ದಿನಕ್ಕೆ ಒಂದು ಹೊತ್ತು ಊಟ ಸಿಕ್ಕರೆ ಸಾಕಾಗಿತ್ತು. ೨೫ ವರ್ಷ ವಿದ್ಯೆಯ ಮಣ್ಣು ಹೊತ್ತು, ಲೋಕಜ್ಞಾನವನ್ನು ಪಡೆದಂತಹ ನನ್ನಂತಹವನಿಗೆ ದಿನಕ್ಕೆ ಒಂದು ಹೊತ್ತು ಊಟ ಕಂಡುಕೊಳ್ಳುವುದು ಕಷ್ಟವಾದರೆ ನನ್ನ ಸ್ಕೂಲು, ಕಾಲೇಜಿನ ಬಾಗಿಲು ಮೊದಲು ಮುಚ್ಚಿಸಬೇಕೆಂದು ತೀರ್ಮಾನಿಸಿದೆ. ಇನ್ನು ಬಹಿರ್ದೆಶೆಗೆ ಅಯ್ಯೋ ರಸ್ತೆಗಳು, ಪಾದಚಾರಿ ಮಾರ್ಗಗಳು, ಹಾಳು ಬಿದ್ದಿರುವ ಸೈಟು, ಪಕ್ಕದ ಮನೆಯ ಗೋಡೆ, ಹಿಂದಿನ ಮನೆಯ ಸಂಧಿ, ಎಲ್ಲವೂ ಅದಕ್ಕಾಗಿಯೇ ಮೀಸಲಿಟ್ಟದ್ದೆಂದು ನಮ್ಮ ನಗರವಾಸಿಗಳಿಗೆ ಹೊಸದಾಗಿ ಕಲಿಸಬೇಕಾಗಿರಲಿಲ್ಲ. ಸ್ನಾನ, ಅಫೀಸಿಗೆ ಹೋಗುವಾಗ ಸೆಂಟೇ ಸ್ನಾನವಾಗಿರಲಿಲ್ವಾ ಎಷ್ಟೋ ಬಾರಿ. ಈಗ ಯಾರನ್ನು ಆಕರ್ಷಿಸಬೇಕಾಗಿದೆ. ನನ್ನ ಬೆವರಿನ ವಾಸನೆ ನನಗೇ ಬರಲಾರದು ಅಂದುಕೊಂಡು ಹೊರಟೆ.

ಕಸ ಗುಡಿಸುತ್ತಿದ್ದ ಹಣ್ಣು ಹಣ್ಣು ಮುದುಕನಿಗೆ ಸಹಾಯ ಮಾಡಿದರೆ ತನ್ನ ಊಟ ಹಂಚಿಕೊಳ್ಳುತ್ತಾನೆ ನಿಮಗೆ ಗೊತ್ತಿತ್ತಾ? ನನಗೆ ಗೊತ್ತಿರಲಿಲ್ಲ. ನಮ್ಮ ಆಫೀಸಿನ ಕ್ಯಾಂಟೀನಿಗೆ ಹೋಲಿಸಿದರೆ ಅಮೃತ ಕಣ್ರೀ. ಅಂದ ಹಾಗೆ ಒಂದು ವಿಷಯ ನೆನೆಪಿಗೆ ಬಂತು. ಈ ಆಫೀಸು ಕ್ಯಾಂಟೀನುಗಳಲ್ಲಿ ಅಡುಗೆ ಹೇಗಿದೆಯೆಂದು ನಮ್ಮ ಅಭಿಪ್ರಾಯ ಬರೆಯಬಹುದು. ಒಮ್ಮೆ ನನ್ನ ಸಹಪಾಠಿಯೊಬ್ಬರು ಹೀಗೆ ಬರೆದಿದ್ರು “Appoint cook not butchers or barbers” (ಅಡುಗೆ ಮಾಡುವವರನ್ನು ಬಳಸಿ, ಹಜಾಮ ಕ್ಷೌರಿಕ ಅಥವಾ ಕಟುಕರನ್ನಲ್ಲ) ಎಂದು, ಸಾರು/ ಪಲ್ಯಗಳಲ್ಲಿ ತರಕಾರಿ ಅಷ್ಟು ಚೆನ್ನಾಗಿ ಕತ್ತರಿಸಿ ಹಾಕುತ್ತಿದ್ದರು ಅದಕ್ಕೇ. ಎಲ್ಲೆಲ್ಲಿ ಮನೆ ಕಟ್ಟುತ್ತಿದ್ದರೋ ಅಲ್ಲಿ ನನ್ನ ಸ್ನಾನ, ಬಹಿರ್ದೆಶೆಗಳನ್ನು ಮುಗಿಸುತ್ತಿದ್ದೆ. ಅವರೊಂದಿಗೆ ಕೂತು ಅವರ ರೊಟ್ಟಿ, ಮುದ್ದೆ ಕೂಡ ಜಡಾಯಿಸುತ್ತಿದ್ದೆ. ಅಂಗಡಿಗೆ ಅಕ್ಕಿ ಮೂಟೆ, ಗೋಧಿ ಮೂಟೆ, ಸಕ್ಕರೆ ಮೂಟೆಗಳನ್ನು ಹೊರಲು ಸಹಾಯ ಮಾಡಿ ದುಡ್ಡು ಕೇಳದಿದ್ದರೆ, ಊಟ, ಊಟದ ಜೊತೆಗೆ ಪಕ್ಕಾ ಲೋಕಲ್ ಸಾರಾಯಿ ಕೂಡ ಒಟ್ಟಿಗೆ ಕೂತು ಕುಡಿದು ರಂಗು ರಂಗಾಗಿ ಮಾತನಾಡುವ ಅನುಭವದ ಮಜಾ ಸಿಗುತ್ತಿತ್ತು.

ನಮ್ಮ ಆಫೀಸಿನ ಸಹಪಾಠಿಗಳೂ ಹೋಗ್ರಿದ್ವಿ ಸಾರ್, ಕುಡಿಯುವವರೆಗೂ ಆಹಾ ಏನು ಗತ್ತು, ಏನು ಗಾಂಭೀರ್ಯ, ಠೊಳ್ಳು ನನ್ನ ಮಕ್ಕಳು ಕಣ್ರೀ. ಕುಡಿದ ಮೇಲೇ ಅವರ ಅಸಲೀ ರೂಪ ಗೊತ್ತಾಗ್ತಿದ್ದಿದ್ದು, ಒಬ್ಬ ಮೂರು ಜನರೊಂದಿಗೆ ಸಹವಾಸವಂತೆ, ಇನ್ನೊಬ್ಬನಿಗೆ ಹೆಂಗಸು ಸಿಗದೇ ಇನ್ನೊಬ್ಬ ಗಂಡಸೊಂದಿಗೆ ಸಂಬಂಧವಂತೆ, ಇನ್ಯಾವನೋ ಏನು ಉತ್ತಮ ಮಟ್ಟದ ಇಂಗ್ಲೀಷು ಮಾತನಾಡಿ ಹುಡುಗಿಯರನ್ನ ಸೆಳೀತಿದ್ದ ಅಂತೀರಿ, ಕುಡಿದ ಮೇಲೆ ಬರುತ್ತಿದ್ದುದೆಲ್ಲಾ ಅಮ್ಮ, ಅಕ್ಕನ ಸ್ತೋತ್ರ. ಈ ಕೂಲಿಯವರು ಎಂಥಾ ಲೋಕಲ್ ಸರಕು ಏರಿಸಿದರೂ ಏನು ಗತ್ತಿನಿಂದ ಇರುತ್ತಿದ್ದರು ಗೊತ್ತಾ, ಮಿಲಿಟರಿ ಆಫೀಸರುಗಳಂತೆ ನಿಲ್ಲುತ್ತಿದ್ದರು. ನಮ್ಮ ಐಟಿ ಕೂಲಿಗಳೂ ಇದ್ರು. ಕುಡಿದದ್ದೇ ಪಾದಚಾರಿ ಮಾರ್ಗ, ರಸ್ತೆಯ ಉದ್ದಗಲ ಅಳೆಯುತ್ತಿದ್ದರು. ಎಲ್ಲಿ ಹೋದರೂ ಅನ್ನ ಹುಟ್ಟುತ್ತಿತ್ತು ಕಣ್ರೀ ಅದ್ಯಾಕೆ ಜೀವನ ಮಾಡಲು ಹೆದರಿ ಕೋಣೆಗಳೊಳಗೆ ಹೂತುಹೋಗುತಿದ್ವೋ ನಿಜವಾಗಲೂ ತಿಳೀತಿರಲಿಲ್ಲ ನನಗೆ.

ಬೆಂಗಳೂರಿನಿಂದ ಬಿಟ್ಟು ಎಷ್ಟು ದಿನಗಳು ಕಳೆದಿತ್ತೋ ಗೊತ್ತಿಲ್ಲ, ಗಡಿಯಾರ ಕೂಡ ನೋಡುವ ಇಷ್ಟವಿರಲಿಲ್ಲ. ಕತ್ತಲಾದಾಗ ಹತ್ತಿರದ ಸ್ಥಳದಲ್ಲಿ ಮಲಗುತ್ತಿದ್ದೆ, ಬೆಳಕಾದಾಗ ಯಾವಾಗಲೋ ಎಚ್ಚರಾದಾಗ ಎದ್ದು ಹೊರಡುತ್ತಿದ್ದೆ. ಸಿಕ್ಕ ಸಿಕ್ಕವರು ಊಟ ಕೊಡಿಸುತ್ತಿದ್ದರು, ಎರಡು, ಮೂರು ದಿನಗಳಿಗೊಮ್ಮೆ ಸ್ನಾನವೂ ಅಗುತ್ತಿತ್ತು. ಮತ್ತೆ ಈ ವಯಸ್ಸಿನಲ್ಲಿ ಅದಕ್ಕೆ ಏನು ಮಾಡಿದೆ ಅಂತ ನೀವು ನನ್ನ ವಯಸ್ಸಿನವರೇ ಆಗಿದ್ದರೆ ಯೋಚಿಸಿರ್ತೀರಿ! ಗೊತ್ತು ನನಗೆ ನೀವು ಪುಂಡ ಪೋಲಿಗಳು ಅಂತ. ಕಲಾಸಿಪಾಳ್ಯದಲ್ಲಿ ಮಾತ್ರ ಇರ್ತಾರೆ ಅಂತ ಗೊತ್ತಿತ್ತು ನನಗೆ. ಆದರೆ ದುಡ್ಡೇ ಇಲ್ಲದೇ ಹೋದ ಹೋದ ಕಡೆಯೆಲ್ಲಾ ಸಿಗುತ್ತಲಿದ್ದರು ಅಂತ ನನಗೆ ಎರಡು ಮೂರು ಬಾರಿ ಈ ಲಾರಿ, ಬಸ್ ಡ್ರೈವರ್ ಗಳಿಂದಲೇ ಗೊತ್ತಾಗಿದ್ದು. ಅದು ಬಿಡಿ ಪ್ರಕೃತಿ ಸಹಜ ಕಾರ್ಯಕ್ರಮಗಳು ನೀವು ಪ್ರಶ್ನಿಸುವ ಹಾಗಿಲ್ಲ, ನಾವು ಉತ್ತರಿಸುವಹಾಗಿಲ್ಲ. ಅಂತೂ ನಮ್ಮ ಜೀವನಜಾಥಾ ಮುಂದುವರೆಯುತ್ತಾ, ಅದೆಷ್ಟೋ ನಗರಗಳು, ಹಳ್ಳಿಗಳು, ಹೈವೇ ಮಾರ್ಗಗಳು, ನದಿಗಳು, ಬಯಲು, ಕಾಡು, ದೇವಸ್ಥಾನಗಳು, ಪುಣ್ಯಕ್ಷೇತ್ರಗಳು, ಬೆಟ್ಟ ಪ್ರದೇಶಗಳು, ಸಮುದ್ರ, ಎಲ್ಲವನ್ನೂ ದಾಟುತ್ತಾ, ತಲೆನೋವು, ನೆಗಡಿ, ಜ್ವರ, ಸರ್ಕಾರೀ ಆಸ್ಪತ್ರೆಯ ಔಷಧ, ವಾಂತಿ, ಬೇಧಿ, ಎಲ್ಲದರ ಸರದಿಯೂ ಮುಗಿದು, ಈಗ ಮಾಂಸ ಮುಕ್ಕಾಲು ಭಾಗ ಖಾಲಿ ಮಾಡಿಕೊಂಡು, ಚರ್ಮದ ವರ್ಣ ಬದಲಿಸಿಕೊಂಡು, ಕೂದಲು, ಗಡ್ಡ ಬೋಳಿಸಿಕೊಂಡು, ಇನ್ನೂ ಸಾಗುತ್ತಲೇ ಇತ್ತು. ಎಲ್ಲಿಗೆ ಅಂತ ನೀವು ಕೇಳುವ ಹಾಗಿಲ್ಲ ನಾನು ಹೇಳಲು ಗೊತ್ತೂ ಇರಲಿಲ್ಲ.

ಮುಂಚೆ ಏಸಿಯಲ್ಲಿ ಕೂರುತ್ತಿದ್ದಾಗ ಅಪರೂಪಕ್ಕೆ ಬಿಸಿಲಿಗೆ ಮೈಯೊಡ್ಡಿದರೆ ತಲೆನೋವು ಶುರುವಾಗುತ್ತಿತ್ತು, ಮಳೆಯಲ್ಲಿ ನೆಂದರೆ ನೆಗಡಿ, ಚೆಳಿಗೆ ಜ್ವರವೇ ಬಂದುಬಿಡುತ್ತಿತ್ತು. ಈಗ ಅಷ್ಟು ನಿಶ್ಯಕ್ತನಾಗಿರಲಿಲ್ಲ. ನಮ್ಮಾಫೀಸಿನ ಎಲ್ಲ ಕಸದತೊಟ್ಟಿಯ ಹೊಟ್ಟೆ ಇಟ್ಟುಕೊಂಡಿದ್ದ, ಏರೋಬಿಕ್ಸು, ಜಿಮ್ಮು ಎಂದು ಅಲಿಯುತ್ತಿದ್ದ ಎಲ್ಲರೂ ನನ್ನ ಹಾಗೆ ಬದುಕಿದ್ದರೆ ಉದ್ದಾರವಾಗುತ್ತಿದ್ದರೇನೋ. ಆದರೆ, ಎಲ್ಲರೂ ನನ್ನ ಹಾಗೆ ಹುಚ್ಚರೇನಲ್ಲವಲ್ಲಾ! ನೆಮ್ಮದಿಯಿದೆ, ಜೀವನವಿದೆ, ಆಸಕ್ತಿಯಿದೆ, ಮುಂದಿನ ಕ್ಷಣವೇನೆಂಬ ಕುತೂಹಲವಿದೆ, ಬದುಕಬೇಕೆಂಬ ಛಲವಿದೆ, ಸುಂದರವಾದ ಕನಸುಗಳಿವೆ, ಪ್ರತಿನಿತ್ಯ ಬೇರೆಯೇ ಪ್ರಪಂಚದ ದರ್ಶನವಾಗ್ತಿರ್ತವೆ, ಹೊಸ ಹೊಸ ಅನುಭವದ ಅವಕಾಶವಿದೆ, ಸ್ವಂತಿಕೆಯ ಬದುಕಿದೆ, ವೈರಾಗ್ಯವಿದೆ, ಸಂಸಾರವಿದೆ, ಹಂಗಿಲ್ಲ, ಲಗಾಮಿಲ್ಲ. ಸಾಧನೆಯೇ ಇಲ್ಲ ಎಂದು ನಿಮ್ಮ ಪ್ರಶ್ನೆ. ಗೊತ್ತು. ಅಲ್ಲ ಕಣ್ರೀ ಸಾಧನೆ ಮಾಡೋಕೆ ಇಡೀ ಪ್ರಪಂಚದ ಮಾಹಾ ಮೇಧಾವಿಗಳು ನೀವುಗಳಿದ್ದೀರಿ. ನಾನೂ ಸಾಧನೆ ಮಾಡಬೇಕೆಂದು ಯೋಚಿಸುವ ನೀವು ಎಷ್ಟು ಮನೋವಿಕಲತೆ ಪಡೆದಿದ್ದೀರಿ ನೀವೇ ಅರಿತುಕೊಳ್ಳಿ. ನಾನು ಚೆನ್ನಾಗಿದ್ದೇನೆ. ಇನ್ನೂ ನೋಡುವುದು, ಕೇಳುವುದು, ಅನುಭವಿಸುವುದು, ಆನಂದಿಸುವುದು, ನಡೆಯುವುದು, ಸಹಾಯ ಮಾಡುವುದು, ತಿಳಿದುಕೊಳ್ಳುವುದು, ಬದುಕುವುದು ತುಂಬಾ ಇದೆ. ಹೇಳಿದ್ದು ಸಾಕೆನಿಸುತ್ತಿದೆ. ಪ್ರಶ್ನೆಗಳಿದ್ದಲ್ಲಿ, ನಿಮ್ಮನ್ನೇ ಕೇಳ್ಕೊಳ್ಳಿ. ಇದೇ ಈ ಕತೆಗೆ ಮುಕ್ತಾಯ. ಕತೆಗೆ ಇದು ಸರಿಯಾದ ಅಂತ್ಯವೇ ಅಲ್ಲ ಅಂತ ನಿಮಗೆ ಅನಿಸಿದರೆ, ಅರೆ ನನ್ನಿಷ್ಟ ಕಣ್ರೀ!

                                                                                                     -ನೀ.ಮ. ಹೇಮಂತ್

ದಾರಿಹುಡುಕಹೊರಟವನು!


      ಸೂರ್ಯನ ಬೆಳಕು ಕಣ್ಣುಗಳಿಗೆ ಚುಚ್ಚಿದ್ದೇ ಹಾಸಿಗೆಯಿಂದೆದ್ದು ಧರಿಸಿದ್ದ ಬಟ್ಟೆ ಕಿತ್ತೆಸೆದು ಮನಸ್ಸನ್ನು ಶುಭ್ರ ನೀರಿನಿಂದ ತೊಳೆದು, ಮನಸನ್ನು ನಗ್ನವಾಗೇ ಇಟ್ಟು ದೇಹವನ್ನು ಮಾತ್ರ ಶುಚಿಯಾದ ಬಟ್ಟೆಯಿಂದ ಮುಚ್ಚಿಕೊಂಡು, ನೆರಳಿನಲ್ಲಿ ತನ್ನ ಮುಖವನ್ನು ನೋಡಿಕೊಂಡು ಕಿಟಕಿಗಳು, ಬಾಗಿಲು, ಮಾಡು, ದೊಡ್ಡ ದೊಡ್ಡ ಗೋಡೆಗಳನ್ನು ಹೊಂದಿದ್ದ ಕೊಠಡಿಯಿಂದ ಹೊರಬಿದ್ದವನೇ ಸುತ್ತ ಓಡುತ್ತಾ, ಜಿಗಿಯುತ್ತಾ, ನಡೆಯುತ್ತಾ, ತೆವಳುತ್ತಾ ಇದ್ದ ತನ್ನಂತೆಯೇ ಇದ್ದ ಇತರ ಮಾನವಾಕೃತಿಗಳನ್ನು ವಿಸ್ಮಯದಿಂದ ನೋಡುತ್ತಾ ರಸ್ತೆಯ ಒಂದು ತುದಿಯಿಂದ ಮತ್ತೊಂದು ತುದಿಗೆ ತಲುಪುವನು. ನೋಡ ನೋಡುತ್ತಿದ್ದಂತೆಯೇ ಎಲ್ಲರೂ ಕಾಯುತ್ತಿದ್ದ ಧಡೂತಿ ವಾಹನವೊಂದು ತನ್ನ ಒಡಲೊಳಗೆ ಸಹಸ್ರ ಜೀವಗಳನ್ನು ತುಂಬಿಸಿಕೊಂಡು ಬಂತಾದರೂ ಇನ್ನಷ್ಟು ಅಲ್ಲಿ ಕಾಯುತ್ತಿದ್ದ ಜೀವಗಳನ್ನು ನುಂಗಿಕೊಂಡು ಶ್ರಮವಹಿಸಿ ಗುಟುರು ಹಾಕುತ್ತಾ, ಬುಸ್ಸ ಬುಸ್ಸನೆ ಹೊಗೆಯುಗುಳುತ್ತಾ ಮುಂದೆ ಸಾಗಿತು. ಎಲ್ಲ ನೇತಾಡುತ್ತಾ, ತೂರಾಡುತ್ತಾ, ತೂಕಡಿಸುತ್ತಲಿದ್ದ ಕ್ಷುದ್ರ ಜೀವಿಗಳ ಮಧ್ಯದಲ್ಲಿ ಇವನೂ ಸಹ ನೇತಾಡುತ್ತಾ ನಿಂತಿದ್ದ. ಗುಡಾಣದೊಳಗೆ ಈಗ ತಾನೆ ಸೇರಿಕೊಂಡವರಲ್ಲೆರನ್ನೂ ತಟ್ಟಿ ತಟ್ಟಿ ಎಚ್ಚರಿಸುತ್ತಾ ಎಲ್ಲಿಗೆ… ಎಲ್ಲಿಗೆ ಪಯಣ ಎಂದು ಕೇಳುತ್ತಾ ಬಂದೋರ್ವ ವ್ಯಕ್ತಿಯನ್ನು ನೋಡುತ್ತಿದ್ದ ಇವನು ಅದ್ಯಾಕೋ ಇದ್ದಕಿದ್ದಂತೆ ಗೊಂದಲಕ್ಕೊಳಗಾದ. ಎಲ್ಲರೂ ಯಾವುದಾವುದೋ ನಿಲ್ದಾಣದ ಹೆಸರನ್ನು, ತಲುಪಲಿಚ್ಛಿಸುವ ಜಾಗದ ಹೆಸರನ್ನು ಹೇಳುತ್ತಿದ್ದುದನ್ನು ಕಂಡು ಇನ್ನಷ್ಟು ಚಿಂತಾಮಗ್ನನಾದ. ತನ್ನ ಚಿಂತನೆಗೆ ಸಮಯವೇ ಕೊಡದೆ ಎಲ್ಲರನ್ನು ಎಚ್ಚರಿಸುತ್ತಲಿದ್ದ ವ್ಯಕ್ತಿ ಇವನ ಬಳಿಗೆ ಧಾವಿಸಿಯೇ ಬಿಟ್ಟ. “ಎಲ್ಲಿಗೆ” ಎಂದು ಆತ ಕೇಳಿದ ಪರಿಗೇ ಇವನು ಬೆಚ್ಚಿ ಎಚ್ಚೆತ್ತು ಬೆವರತೊಡಗಿದ. ಹಾಗೆ ಎಚ್ಚರಿಸಿದ ವ್ಯಕ್ತಿಯನ್ನು ತೀಕ್ಷ್ಣವಾಗಿ ಗಮನಿಸಲು ಆತ ಚಿರಪರಿಚಿತನಂತೆ ಕಂಡ. ನಡುಗುತ್ತಿದ್ದ ಕೈಗಳಿಂದ ಬೆವರೊರೆಸಿಕೊಳ್ಳುತ್ತಾ, ಒಮ್ಮೆ ಎಂಜಲು ನುಂಗಿ ಆ ಎಚ್ಚರಿಸಿದಾತ ಬೇರಾರೂ ಅಲ್ಲ ತನ್ನ ಜನ್ಮದಾತನೇ ಎಂದು ತಿಳಿದು ಎಲ್ಲಿಗೆ ಎಂಬ ಆತನ ಪ್ರಶ್ನೆಗೆ ಏನೆಂದು ಉತ್ತರಿಸುವುದೆಂದು ಅರಿಯದೇ ಗೊ.. ಗೊ… ಗೊತ್ತಿಲ್ಲ ಎನ್ನುವನು. ಜನ್ಮದಾತ ತತ್ಕ್ಷಣವೇ ಕೋಪೋದ್ರಿಕ್ತನಾಗಿ ಎಲ್ಲಿಗೆಂದು ಗೊತ್ತಿಲ್ಲದೇ ಹೇಗೆ ಗಾಡಿ ಹತ್ತಿದೆ. ಮೂರ್ಖನ ತರಹ ವರ್ತಿಸಬೇಡ. ಎಲ್ಲಿಗೆಂದು ಹೇಳು ಸುಮ್ಮನೆ ಎಂದು ಗದರಿಸುವನು. ಯಾವುದಾವುದೋ ಗುರಿಗಳಿಗೆ ಹೊರಟಿದ್ದ ಸಮಸ್ತರ ಕಣ್ಣುಗಳೂ ಇವನನ್ನೇ ವಿಚಿತ್ರವಾಗಿ ನೋಡುತ್ತಿರುವುದನ್ನು ಕಂಡು ಇನ್ನಷ್ಟು ಗೊಂದಲಕ್ಕೊಳಗಾದ. ಎಲ್ಲಿಗೆಂದು ಹೇಳುವುದು? ತಾನು ಯಾಕೆ ಹೊರಟಿರುವನು? ಎಲ್ಲಿಗಾದರೂ ಯಾತಕ್ಕೆ ಹೋಗಬೇಕು? ತನ್ನ ಸುತ್ತ ಅಂಟಿಕೊಂಡಿದ್ದ ಎಲ್ಲರ ಕಿವಿಗಳು, ಕಣ್ಣುಗಳು, ಬಾಯಿಗಳು, ಕೈಗಳೊಂದು ಕಡೆ, ತನ್ನ ತಲೆಯಲ್ಲೇ ಏಳುತ್ತಿದ್ದ ಪ್ರಶ್ನೆಗಳಿನ್ನೊಂದು ಕಡೆ ತಲೆಯಲ್ಲಿ ಅಲ್ಲೋಲಕಲ್ಲೋಲ ಶುರುವಾಗಿ ತಲೆ ಗಟ್ಟಿಯಾಗಿ ಹಿಡಿದುಕೊಂಡು ಒದ್ದಾಡುವನು.

ವಿಕಾರವಾದ, ವ್ಯಂಗ್ಯವಾದ ನಗೆ. ಸುತ್ತಲಿದ್ದವರ ಅಟ್ಟಹಾಸದ ನಗೆ ಇವನನ್ನು ಎಚ್ಚರಿಸಿ ಸುತ್ತ ನೋಡಿದರೆ ಹಹಹ ಹ ಇವನಿಗೆ ಎಲ್ಲಿಗೆ ಹೋಗುವುದೆಂದು ಗೊತ್ತಿಲ್ಲವಂತೆ, ಇವನು ಮೂರ್ಖ, ಎಂದು ಏನೇನೋ ತಮ್ಮ ತಮ್ಮಲ್ಲೇ ಮಾತನಾಡುತ್ತಾ ನಗುತ್ತಲಿದ್ದುದನ್ನು ಕಂಡು, ಇವರುಗಳ್ಯಾರು, ಇವರ್ಯಾಕೆ ನನ್ನ ಪರಿಸ್ಥಿತಿಗೆ ನಗಬೇಕೆಂದು ಕಣ್ತೆರೆದರೆ ಎಲ್ಲರೂ ತನ್ನ ಸಂಬಂಧಿಕರು, ಸ್ನೇಹಿತರುಗಳು. ಇವನನ್ನು ಗೇಲಿ ಮಾಡಿ ನಗುತ್ತಲಿರುವರು. ಅವರ ಹಿಂಸೆಯಂತಹ ನಗುವನ್ನು ಸಹಿಸಲಾರದೆ ಬಸ್ಸಿನ ಕಿಟಕಿಯೊಂದರಿಂದ ಹೊರಗೆ ಧುಮುಕುವನು. ಬಿದ್ದು ಗಾಯಗಳನ್ನು ಮಾಡಿಕೊಂಡು ಎದ್ದು ಅಲ್ಲಿ ನಿಲ್ಲಲಾಗದೆ ಆ ಸ್ಥಳದಿಂದ ನಡೆದು ಹೊರಡುವನು. ಸುತ್ತ ಮತ್ತೊಂದಷ್ಟು ವಿಚಿತ್ರ ಜನರಿಂದ ಗಿಜಿಗಿಜಿಗುಡುತ್ತಾ ತುಂಬಿರುವ ರಸ್ತೆ. ಎಲ್ಲರ ಮೈಕೈಗಳಲ್ಲೂ ಏನೇನೋ ಹೇರಿಕೊಂಡು ಭಾರ ಹೊತ್ತವರಂತೆ ನಿಧಾನಗತಿಯಲ್ಲಿ ಯಾವುಯಾವುದೋ ಗುರಿಗಳತ್ತ ಸಾಗುತ್ತಿರುವರು. ನಡೆಯುತ್ತಿದ್ದ ಈತನೂ ಅರೆ! ಎಲ್ಲಿಗೆ ಹೊರೆಟಿದ್ದೀನೀಗ ಎಂದು ಪ್ರಶ್ನೆ ಮೂಡಿ ನಡೆಯುವುದನ್ನು ನಿಲ್ಲಿಸಿ ಅಲ್ಲೇ ನಿಲ್ಲುವನು. ಎಲ್ಲ ನಡೆಯುತ್ತಿದ್ದವರೂ ನಡೆದು ಮುಂದು ಮುಂದೆ ಹೋಗುತ್ತಿರುವವರ ನಡುವೆ ನಿಂತಿರುವ ತಾನೊಬ್ಬನೇ. ಪ್ರತಿಯೊಬ್ಬರಿಗೂ ಒಂದೊಂದು ಗುರಿಯಿದೆ ಆದರೆ ನನಗ್ಯಾಕಿಲ್ಲ. ಥು ಯಾಕೆ ನನಗೇ ಹೀಗಾಗ್ತಿದೆ, ಎಂದು ಬೇಸರಿಸುವನು. ಗುರಿ ಹೊಂದಿರುವವರ್ಯಾರಾದರೂ ತನಗೆ ಸಹಾಯ ಮಾಡಬಹುದೇನೋ ಎಂದು ಕೈಯಲ್ಲಿ ಕತ್ತರಿ, ಸಿರೆಂಜನ್ನು ಹಿಡಿದು ನಡೆಯುತ್ತಿದ್ದ ಬಿಳಿ ಬಟ್ಟೆಯ ವ್ಯಕ್ತಿಯನ್ನು ತಡೆದು ಎಲ್ಲಿಗೆ ಹೊರಟಿದ್ದೀರೆಂದು ಪ್ರಶ್ನಿಸುವನು. ನಾನು ಒಬ್ಬ ಮನುಷ್ಯನ ಚಿಕಿತ್ಸೆಗೆ ಹೊರಟಿದ್ದೀನಿ. ನಿಮಗೆ ಗೊತ್ತಾ ಈ ಬಾರಿ ನಾನು ಬಹುದೊಡ್ಡ ಹೊಸ ಸಾಧನೆ ನಿರ್ಮಿಸಲು ಮುಂದಾಗಿರುವೆ. ಆ ಮನುಷ್ಯನಿಗೆ ಮೂತ್ರಪಿಂಡ ಕೆಲ್ಸ ಮಾಡುವುದು ನಿಲ್ಲಿಸಿದಾಗ ಕಿತ್ತು ಹಾಕಿದೆ, ಮೂಲವ್ಯಾಧಿ ಬಂದಾಗ ಕತ್ತರಿಸಿ ಹಾಕಿದೆ, ಹೃದಯ ತೊಂದರೆ ಕೊಟ್ಟಾಗ ತೆಗೆದುಹಾಕಿದೆ ಈಗ ಅವನ ತಲೆ ಶೂಲೆ ಬಾಧೆ ಕೊಡುತ್ತಿದೆ, ಹಾಗಾಗಿ ತಲೆಯನ್ನೇ ಬೇರ್ಪಡಿಸುವ ಯೋಜನೆಯಲ್ಲಿದ್ದೇನೆ. ಎಂದು ಹೇಳಿ ಹೆಮ್ಮೆಯಿಂದ ಬೀಗುತ್ತಾ ಮುಂದೆ ಹೋಗುವನು.

ಏನೂ ಅರ್ಥವಾಗದೆ ಹಾಗೇ ನಿಂತಿದ್ದವನು ತನ್ನ ಬಳಿ ಹಾದು ಹೋದ ಹಲವರನ್ನು ಎಲ್ಲಿಗೆ ಹೊರಟಿದ್ದೀರೆಂದು ಕೇಳಿ ಕೇಳಿ ತನಗೆ ಸಹಾಯವಾಗುವ ಬದಲು ಇನ್ನೂ ಗೊಂದಲಕ್ಕೊಳಗಾಗುವನು. ತುಂಬಾ ಚಿಂತಿಸಬಾರದೆಂದು ತೀರ್ಮಾನಿಸಿ ಯಾರ ಯಾರ ಹಿಂದೆಯೋ ಅವರ ದಾರಿಯಲ್ಲಿ ಹೋಗಿ ಕೊಂಚ ದೂರ ಕ್ರಮಿಸುವುದರಲ್ಲೇ ಯಾಕೋ ಅವರ ದಾರಿಗಳು ರುಚಿಸದೇ, ತೀರಾ ತ್ರಾಸದಾಯಕವೆನಿಸಿ ಮತ್ತೆ ಇನ್ನೊಂದಾವುದೋ ಹಾದಿಯವನನ್ನು ಹಿಂಬಾಲಿಸುವನು. ಮತ್ತದೇ ಬೇಸರ ಒಟ್ಟಾರೆ ಜೀವನ ಕಲಸುಮೇಲೋಗರವಾದಂತಾಗಿ ಒಂದು ಹಂತದಲ್ಲಿ ಸುಮ್ಮನೆ ನಿಂತುಬಿಡುವನು. ಇದಾವುದೂ ತಾನು ಹೋಗಬೇಕಿದ್ದ ದಾರಿಯಲ್ಲ ಎಂದು ಚಿಂತಿಸುತ್ತಿರಲು ಯಾರೋ ಹಿರಿಯ ಕ್ಯಾಮೆರಾ ಹಿಡಿದು ಹಿಮ್ಮುಖವಾಗಿ ಆದರೂ ಎಲ್ಲರಿಗಿಂತ ವೇಗವಾಗಿ ಓಡುತ್ತಿದ ಮನುಷ್ಯನೋರ್ವನು ಇವನನ್ನೂ ಜೊತೆಗೆ ಕರೆದುಕೊಂಡು ಓಡುತ್ತಾ ಇವನ ಕಷ್ಟ ಏನೆಂದು ಕೇಳುವನು. ಹೀಗೆ ಹೀಗೆ ತನಗೆ ತಾನು ಎಲ್ಲಿಗೆ ಹೋಗಬೇಕೆಂದು ತಿಳಿಯುತ್ತಿಲ್ಲವೆಂದು ತನ್ನ ಅಳಲು ಹೇಳಿಕೊಳ್ಳುವನು. ಕ್ಯಾಮೆರಾ ಹಿಡಿದಿದ್ದ ಮನುಷ್ಯ ನಕ್ಕು. ಒಂದು ಬಾರಿ ಈ ಪ್ರಪಂಚವನ್ನು ನೋಡು ಎಲ್ಲ ಹೇಗೆ ಒಂದೇ ಸಮನೆ ಓಡುತ್ತಲಿದ್ದಾರೆ. ತಮ್ಮ ದಾರಿಯಲ್ಲಿ ಮೈಕೈ ತುಂಬಾ ಹೊಣೆ ಹೊತ್ತುಕೊಂಡು ಓಡುತ್ತಿರುವವರು ಪಾಪ ಅವರಿಗೆ ಬೇರೆ ದಾರಿಯೇ ಇಲ್ಲ. ಆದರೆ ನೀನು ಹಾಗಲ್ಲ ಬೇಕೆಂದ ದಾರಿಯಲ್ಲಿ ಹೋಗಬಹುದು. ನಿನಗೆ ಇನ್ನೂ ಸಂಪೂರ್ಣ ಸ್ವಾತಂತ್ರವಿದೆ. ಪ್ರಪಂಚದಲ್ಲಿನ ಯಾವ ದಾರಿಯಲ್ಲಿ ಬೇಕಾದರೂ ಹೋಗಿ, ಏನು ಬೇಕಾದರೂ ನೋಡಿ, ಹೇಗೆ ಬೇಕೋ ಹಾಗೆ ಬದುಕಲು ನಿನಗೆ ಮಾತ್ರ ಸಾಧ್ಯವಿದೆ. ಹೋಗು ಖುಷಿಯಿಂದ ಗುರಿಯಿಲ್ಲದೇ ಅಲಿಯುತ್ತಲಿರು ಎನ್ನುವನು.

ಒಂದು ಎತ್ತರದ ಜಾಗದಲ್ಲಿ ನಿಂತು ಎಲ್ಲ ಓಡುತ್ತಿರುವವರು ಎಲ್ಲಿಗೆ ಹೋಗಿ ಸೇರುತ್ತಿರುವವರೆಂದು ನೋಡುವನು. ನಡೆದು ಹೋಗುತ್ತಿದ್ದ ಎಷ್ಟೋ ಜನ, ವಾಹನಗಳಲ್ಲಿ ಹೋಗುತ್ತಿದ್ದ ಎಷ್ಟೋ ಜನ, ಇನ್ನೆಷ್ಟೋ ಜನರೊಂದಿಗೆ ಕೈಜೋಡಿಸುತ್ತಾ, ಇನ್ನೂ ಒಂದಷ್ಟು ಜನರನ್ನು ಸೇರಿಸಿಕೊಳ್ಳುತ್ತಾ ಮುಂದುವರೆಯುತ್ತಾ ಹಲವಾರು ಹಳ್ಳ ದಿಣ್ಣೆಗಳನ್ನು, ಕಲ್ಲು ಮುಳ್ಳುಗಳನ್ನು, ತಣ್ಣನೆಯ ನೆರಳಲ್ಲಿ ವಿಶ್ರಮಿಸುತ್ತಾ, ಬಿಸಿಯ ಸೂರ್ಯನಲ್ಲಿ ಬೇಯುತ್ತಾ, ಹಲವಾರು ಹಿಂಬಾಲಕರನ್ನು ಪಡೆದುಕೊಳ್ಳುತ್ತಾ ಯಾವುದೋ ಒಂದು ಹಂತದಲ್ಲಿ ಇದ್ದಕ್ಕಿದ್ದಂತೆ ಕಣ್ಮರೆಯಾಗಿಬಿಡುವರು. ಅವರು ತಮ್ಮ ಗುರಿ ತಲುಪಿದರೋ ಇಲ್ಲವೋ ಅವರಿಗೂ ಗೊತ್ತಿತ್ತೋ ಇಲ್ಲವೋ. ಆ ಕ್ಯಾಮೆರಾ ಹಿಡಿದ ಮನುಷ್ಯ ಹೇಳಿದ್ದು ಸರಿಯಿತ್ತು. ಕಣ್ಮರೆಯಾಗುವ ಮುನ್ನ ತಾನು ಕುದುರೆಯಂತಾಗದೇ, ಸ್ವಚ್ಛಂದವಾಗಿ ಬದುಕುವ ಹುಲಿಯಾಗಬೇಕಿತ್ತು. ಆ ಎತ್ತರದ ಜಾಗದಿಂದ ಹೀಗೆ ನಿರ್ಧರಿಸುತ್ತಾ ಮುಂದುವರೆದ ಹಾಗೆ ತನ್ನೊಂದಿಗೆ ತನ್ನ ವಯಸ್ಸಿನ ಹುಡುಗಿಯೊಬ್ಬಳು ಕೈ ಹಿಡಿದಳು. ಇನ್ನೂ ಮುಂದೆ ಹೋಗುತ್ತಾ ಅವಳ ಕೈಲೊಂದು ಚಿಕ್ಕ ಮಗುವೊಂದು ಸೇರಿಕೊಂಡಿತು. ತಾನು ನಿಧಾನವಾಗಿ ಮುನ್ನಡೆಯುತ್ತಾ ಕೆಲವು ಹೊತ್ತು ಮರಗಿಡಗಳ ನಡುವೆ, ಇನ್ನೂ ಕೊಂಚ ದಿನ ಪೆನ್ನು ಪೇಪರು ಕೈಲಿ ಹಿಡಿದು, ಇನ್ನೊಮ್ಮೆ ತನ್ನೊಂದಿಗಿನ ಹುಡುಗಿ, ಮಗುವಿನ ಜೊತೆ ಯಾವುದೋ ಮನೆಯೆದುರು, ಇನ್ನೊಮ್ಮೆ ಇನ್ನೆಲ್ಲೋ ಇನ್ನು ಹೇಗೋ ಬದುಕುತ್ತಾ ಒಮ್ಮೆ ಕಣ್ಮರೆಯಾಗುವನು. 


                                                                                              ನೀ.ಮ. ಹೇಮಂತ್

Saturday 21 April 2012

ಒಂದಾನೊಂದುಕಾಲದಲ್ಲೊಂದಿನ!



        ವಾಹನಗಳ ಹಾರ್ನುಗಳ ಕರ್ಕಶ ಶಬ್ಧ. ಊರಗಲದ ರಸ್ತೆಯ ತುಂಬಾ ಕಿಲೋಮೀಟರುಗಳ ಗಟ್ಟಲೆ ಉದ್ದೋಕೆ ಜಾಮ್ ಆಗಿರುವ ವಾಹನಗಳು. ಪ್ರತಿಯೊಂದು ಗಾಡಿಗಳಿಂದಲೂ ಏಳುತ್ತಿದ್ದ ಹೊಗೆಯ ಧಗೆಯಿಂದ ಪ್ರತಿಯೊಂದು ವಾಹನದೊಳಗೂ ಸೇರಿಕೊಂಡಿದ್ದ ಕ್ಷುದ್ರ ಜೀವಿಗಳ ಬಟ್ಟೆ ಒದ್ದೆಯಾಗುವ ಹಾಗೆ ಹರಿಯುತ್ತಿದ್ದ ಬೆವರು. ಆ ಮುಖಗಳಲ್ಲಿ ನೆಮ್ಮದಿ ಎಂಬ ಪದದ ಅರ್ಥ ಕಳೆದುಹೋಗಿ ಎಷ್ಟೋ ತಲೆಮಾರುಗಳು ಸಂದಿರುವ ಹಾಗಿದೆ. ಪಾದಚಾರಿ ಮಾರ್ಗಗಳಲ್ಲಿ ಇರುವೆದಂಡಿನೋಪಾದಿಯಲ್ಲಿ ಹಿಂಡು ಹಿಂಡು ಕಣ್ಣು ಕಾಣುವವರೆಗೂ ಸಾಗುತ್ತಲೇ ಇರುವ ಸಪೂರ ದೇಹಗಳನ್ನು ಹೊತ್ತ ಬೂಟ್ಸ್ ಕಾಲುಗಳು. ಅವೂ ಕೂಡ ಛಂದವಾಗಿ ಸಿಗ್ನಲ್ ಕೆಂಪಾದಾಗ ನಿಲ್ಲುತ್ತಿದ್ದ ಪರಿ ಧೇಟ್ ರೋಬೋಟ್ ಯಂತ್ರಗಳನ್ನು ನೆನಪಿಸುವಂತಿದ್ದವು. ಒಬ್ಬರನ್ನೊಬ್ಬರು ಜನಸಾಗರದಲ್ಲಿ ಅಂಟಿಕೊಂಡು ಸಾಗುವುದನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಆ ಗಲ್ಲಿಯ ಸಿಗ್ನಲ್ಲಿನಲ್ಲಿ ಮೂರೂ ಕಡೆ ಕಾಣಬಹುದಾದದ್ದು ಇದೇ ದೃಶ್ಯ. ಮತ್ತೊಂದು ಕಡೆ ಮಾತ್ರ ಹೊಗೆಯ ಮೋಡದ ಮಸುಕಿನಲ್ಲಿ ವಾಹನ ಸಮುದ್ರವೇ ಚಲಿಸುವ ಹಾಗೆ ಅಸ್ಪಶ್ಟವಾಗಿ ಕಾಣುತ್ತಲಿತ್ತು. ಇದೇ ರಸ್ತೆಯಲ್ಲಿ ಒಂದು ಮೊಬೈಲ್ ಜೈಲಿನಂತಹ ವಾಹನ ವೇಗವಾಗಿ ಬಂದು ರಸ್ತೆ ತುಂಬೆಲ್ಲಾ ವಾಹನಗಳು ನಿಲುಗಡೆಯಾಗಿದ್ದ ಅಕ್ಕ ಪಕ್ಕದಲ್ಲಿ ದೊಡ್ಡ ದೊಡ್ಡ ಕಟ್ಟಡಗಳಿದ್ದ ಒಂದು ಗಲ್ಲಿಯನ್ನು ಪ್ರವೇಶಿಸಿ ನಿಂತುಕೊಂಡಿತು. ಇಡೀ ಗಲ್ಲಿಯಲ್ಲಿ ನಿಶ್ಯಬ್ಧತೆ ಮನೆಮಾಡಿತ್ತು. ಆ ದೊಡ್ಡ ವಾಹನ ಕೂಡ ಕೊಂಚ ಹೊತ್ತು ನಿಶ್ಚಲವಾಗಿ ನಿಂತಿದ್ದುದು ಧಿಡೀರನೆ ಹಿಂದುಗಡೆಯ ಬಾಗಿಲು ತೆರೆದುಕೊಂಡದ್ದೇ ಎಂಟರಿಂದ ಹತ್ತು ಯೋಧರಂತಹ ಜನ ಹೊರನೆಗೆಯುತ್ತಿದ್ದಂತೆಯೇ, ಮೂಲೆ ಮೂಲೆಗಳಲ್ಲಿ ಹಾವುಗಳಂತೆ ಸುರುಳಿಸುತ್ತಿಕೊಂಡು, ಚೇಳುಗಳಂತೆ ಕುಟುಕಿಕೊಂಡು, ನಾಯಿಗಳಂತೆ ಒಂದರ ಮೇಲೊಂದು ಬಿದ್ದುಕೊಂಡು, ನರಿಗಳಂತೆ ಮೂಲೆ ಮೂಲೆಗಳಲ್ಲಿ ಅಡಗಿಕೊಂಡಿದ್ದ ಜೋಡಿಗಳು ನೋಡ ನೋಡುತ್ತಿದ್ದಂತೆ ಕ್ಷಣಾರ್ಧದಲ್ಲಿ ಮೂಲೆಮೂಲೆಗಳಿಂದ ಹೊರಬಿದ್ದು ಪ್ಯಾಂಟುಗಳನ್ನು ಸ್ಕರ್ಟುಗಳನ್ನು ಎಳೆದುಕೊಳ್ಳುತ್ತಲೇ ಎದ್ದು ಬಿದ್ದು ಓಡಲು ಶುರುಮಾಡಿದವು. ಅಷ್ಟೇ ಕಣ್ರೆಪ್ಪೆ ಬಡಿಯುವಷ್ಟರ ವೇಗದಲ್ಲಿ ವಾಹನದಿಂದ ಧುಮುಕಿದ ಗುಂಪು ಚದುರಿ ಅಟ್ಟಿಸಿಕೊಂಡು ಬಂದು ದಿಕ್ಕಾಪಾಲಾಗಿ ಓಡುತ್ತಿದ್ದ ಜೋಡಿಗಳಲ್ಲಿ ಕೆಲವರನ್ನು ತಮ್ಮ ಬಳಿ ಇದ್ದ ದೊಡ್ಡ ದೊಡ್ಡ ಬಲೆಗಳಲ್ಲಿ ಹುಲಿ ಸಿಂಹಗಳನ್ನು ಬೇಟೆಯಾಡಿ ಜೀವಂತವಾಗಿ ಹಿಡಿದಂತೆ ಕೆಡವಿಕೊಂಡು ಅದರಿಂದ ಹೊರಬರಲು ಶತಪ್ರಯತ್ನ ಪಡುತ್ತಾ, ಕೂಗಾಡುತ್ತಿದ್ದ ಹುಡುಗ ಹುಡುಗಿಯರ ಮೇಲೆ ತಮ್ಮ ಬಳಿ ಇದ್ದ ಕರೆಂಟಿನದ್ದೆನಬಹುದಾದ ಉದ್ದನೆಯ ಕೋಲಿನ ತುದಿಯನ್ನು ಮೈಗೆ ತಾಕಿಸಿದ್ದೇ ಧಿಮ್ಮನೆ ಕೆಳಗುರುಳುವರು. ಇನ್ನೂ ಕೆಲವರು ಸಿಕ್ಕ ಸಿಕ್ಕ ಜಾಗಗಳಲ್ಲಿ ಓಡೋಡಿ, ಚರಂಡಿಗಳಲ್ಲಿ, ಯಾವಯಾವುದೋ ಮನೆಗಳಲ್ಲಿ ಅವಿತು ಮರೆಯಾಗುವರು!

ಹಿಂದುಗಡೆ ದೂರದಲ್ಲಿ ಯಾವುದೋ ಕೊಠಡಿಯಲ್ಲಿ ಅರಚಾಟ, ಚೀರಾಟ, ಆಕ್ರಂದನ, ಗಲಾಟೆಯ ಶಬ್ಧಗಳ ಗೊಂದಲದ ವಾತಾವರಣದ ನಡುವೆ, ಸುತ್ತಲ ಕಡತಗಳ ಗೋಪುರಳಿಂದಲಂಕೃತ ತಲೆ ಕೂದಲು ಕೆದರಿಕೊಂಡು ತನ್ನ ಮೊಂಡು ಮೀಸೆಯನ್ನು ತುರಿಸಿಕೊಳ್ಳುತ್ತಾ ಇನ್ನೂ ಮೂರು ಪೈಲುಗಳನ್ನು ಹಿಡಿದುಬಂದ ಮೂವರು ಅಧಿಕಾರಿಗಳನ್ನೊಮ್ಮೆ ನೋಡಿ, ಇವತ್ತೆಷ್ಟಾಯ್ತು ಎಂದು ಕೇಳುವನು. ೪೫ ಜನ ಆಗಿದ್ದಾರೆ ಮುಂದಿನ ಕಾರ್ಯಚರಣೆಗೆ ನಿಮ್ಮ ಸಹಿ ಬೇಕಿತ್ತೆನ್ನಲು, ಕಡತಗಳನ್ನು ಪರಿಶೀಲಿಸಿ ಸಹಿ ಹಾಕುತ್ತಾ ಸರಿಯಾದ ಕ್ರಮದಲ್ಲಿ ಮುಂದುವರೆಯಿರಿ, ಕಳೆದಸಾರಿ ಮಾಡಿದ ಹಾಗೆ ಆತುರ ಬಿದ್ದು ನನ್ನ ತಲೆಗೆ ಮತ್ತೆ ತಂದರೆ ನೇರವಾಗಿ ಒಬ್ಬೊಬ್ಬರನ್ನೂ ಗುಂಡು ಹೊಡೆದು ಸಾಯಿಸಿಬಿಡ್ತೇನೆ. ಇಪ್ಪತ್ನಾಲ್ಕು ಘಂಟೆ ಕಾಲಾವಕಾಶ ಕೊಡಿ ಬಂಧಿತರ ಕಡೆಯ ಹೊಣೆ ಹೊತ್ತವರು ಯಾರೇ ಬಂದು ತಮ್ಮ ಬಳಿ ಇರುವ ಕಾನೂನುಬದ್ಧ ಪ್ರಮಾಣಪತ್ರಗಳನ್ನು ತೋರಿಸಲೇಬೇಕು. ಅವರ ಬಳಿ ಬಂಧಿತರು ತಮ್ಮ ಜವಾಬ್ದಾರಿ ಎಂದು ಸಾಬೀತು ಪಡಿಸುವ ಪುರಾವೆಗಳಿಲ್ಲದಿದ್ದಲ್ಲಿ, ಮತ್ತು ಬಂಧಿತರ ಬಳಿ ತಮ್ಮ ಕೃತ್ಯಕ್ಕೆ ಯಾವುದೇ ರೀತಿಯ ಪರವಾನಗಿ ಇಲ್ಲದಿದ್ದಲ್ಲಿ ಅಥವಾ ಪರವಾನಗಿ ಸಮಯ ಮೀರಿದ್ದಲ್ಲಿ ಸಹಿ ಹಾಕಿಸಿಕೊಂಡು ಕಾರ್ಯಾಚರಣೆಯನ್ನು ಮುಂದುವರೆಸಿ. ಪ್ರತಿಯೊಬ್ಬ ಶಿಕ್ಷೆಯಿಂದ ಬಚಾವಾದ ಮತ್ತು ಶಿಕ್ಷೆಗೆ ಪಾತ್ರರಾದವರ ವಿವರವೂ ದಾಖಲಾಗಬೇಕು. ಯಾವುದೇ ಉಲ್ಲಂಘನೆಯಾದಲ್ಲಿ ತೀವ್ರ ಶಿಕ್ಷೆ ಖಂಡಿತ, ನಿಮ್ಮ ಎಲ್ಲಾ ಅಧಿಕಾರಿಗಳಿಗೆ ತಿಳಿಸಿ. ಹೊರಡಿ ಎಂದು ಬೆದರಿಸಿ ಕಳುಹಿಸಿ ಮತ್ತೆ ತನ್ನ ಕಡತಗಳಲ್ಲಿ ಹೂತುಹೋಗುವನು.

ಒಳಗೆ ಕೇಳಿಬರುತ್ತಿದ್ದ ಬಂಧಿತರ ಚೀರಾಟ, ಆಕ್ರಂದನ ಒಂದು ಕಡೆ, ಸಾಲಾಗಿ ಇದ್ದ ಹತ್ತಿಪ್ಪತ್ತು ಮುಂಗಟ್ಟೆಗಳಿಗೆ ಅಳುತ್ತಾ, ಕೂಗಾಡುತ್ತಾ, ಕೋಪೋದ್ರಿಕ್ತ, ಹೆದರಿದ್ದ ಪೋಷಕರು ಸೇರುತ್ತಲೇ ಇದ್ದವರನ್ನು ಹೊಡೆದು, ಬಯ್ದು ಸಾಲು ನಿರ್ಮಿಸುತ್ತಿದ್ದ ಅಧಿಕಾರಿ, ಮುಂಗಟ್ಟೆಗಳಲ್ಲಿ ಕೂತು ಬಂದ ಪೋಷಕರ ದಾಖಲೆಗಾಳನ್ನು ಅಸಡ್ಡೆಯಿಂದ ತನ್ನ ಗಣಕಯಂತ್ರದೊಂದಿಗೆ ಹೊಂದಿಸುತ್ತಾ, ಪರಿಶೀಲಿಸುತ್ತಿರುವ ಇನ್ನೊಂದಷ್ಟು ಅಧಿಕಾರಿಗಳು. ಅದ್ಯಾವುದೋ ಮುಂಗಟ್ಟೆಯಲ್ಲಿ ಬಂಧಿತನ ಪೋಷಕ ತಂದಿದ್ದ ದಾಖಲೆಯಲ್ಲಿನ ಭಾವಚಿತ್ರಕ್ಕೂ ತನ್ನ ಕಡತ ತೋರುತ್ತಿದ್ದ ಭಾವಚಿತ್ರಕ್ಕೂ ಹೊಂದಾಣಿಕೆಯಾಗುತ್ತಿಲ್ಲವೆಂದು ಪುರಾವೆಗಳನ್ನು ಎಸೆದು ಕಳುಹಿಸಲು ಆಕೆ ಕಾಲು ಹಿಡಿದು, ಸಂಕಟ ತೋಡಿಕೊಂಡು, ಲಂಚವನ್ನೂ ತಳ್ಳಿ ಇತರ ದಾಖಲೆಗಳನ್ನು ತೋರಿಸಿ ಬಂಧಿತ ತನ್ನ ಮಗನನ್ನು ವಾಪಾಸು ಕರೆದುಕೊಂಡು ಹೋಗಲು ಪರವಾನಗಿ ದೊರೆತ ಮೇಲೆ ಒಳಗೆ ಹೋಗುವಳು. ಇನ್ನಾವುದೋ ಮುಂಗಟ್ಟೆಯಲ್ಲಿ ದೊಂಬಿಯೇಳಿಸುತ್ತಿದ್ದವನೊಬ್ಬನನ್ನು ಕೆಲಸಗಾರರು ಬಂದು ಹೊರಗೆ ಹಾಕಿ ಬರುವರು. ಇನ್ನೂ ಸಾವಿರಗಟ್ಟಲೆ ಸಾಲಿನಲ್ಲಿ ನಿಂತಿದ್ದ ಬಂಧಿತರ ಪೋಷಕರು, ಹೊಣೆ ಹೊತ್ತವರುಗಳು ಕಣ್ಣೊರೆಸಿಕೊಳ್ಳುತ್ತಾ, ಎದೆ ಎದೆ ಬಡಿದುಕೊಳ್ಳುತ್ತಾ, ಬೆವರೊರೆಸಿಕೊಳ್ಳುತ್ತಾ, ಕೈಕಾಲು ನಡುಗಿಸಿಕೊಂಡು ಮುಂದೆ ಸಾಗಿದ್ದರು. ಕೆಲವರ ದಾಖಲೆಗಳು ನಕಲೆಂದು ಸಾಬೀತಾಗುತ್ತಿದ್ದರೆ, ಇನ್ನೂ ಕೆಲವರ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲದೇ, ಇನ್ನೂ ಕೆಲವರ ಬಳಿ ಕೊಡಲು ಲಂಚ ಸಾಕಾಗದೇ ಇಂಥಿವೇ ಹಲವು ಕಾರಣಗಳಿಗೆ ತಿರಸ್ಕೃತವಾಗುತ್ತಾ, ಗಲಾಟೆ ಹುಯಿಲು ಮುಗಿಲು ಮುಟ್ಟುತ್ತಾ ಸಾಲುಗಳು ಕರಗುತ್ತಾ ಮತ್ತೆ ತುಂಬುತ್ತಾ ಹೋಗುತ್ತಿದ್ದವು. ಸ್ವೀಕೃತ ಕೆಲವು ದಾಖಲೆಗಳಿಂದಾಗಿ ಕೆಲವು ಬಂಧಿತ ತಮ್ಮ ಮಗ ಮಗಳನ್ನು ಬಿಡಿಸಿಕೊಳ್ಳಲು ಯಶಸ್ವಿಯಾಗಿ ಅಪ್ಪಿಕೊಂಡು, ಮುದ್ದಿಸುತ್ತಾ ಅಲ್ಲಿಂದ ಅತಿಶೀಘ್ರದಲ್ಲಿ ಜಾಗ ಖಾಲಿ ಮಾಡುತ್ತಿದ್ದರು, ಖಾಲಿಯಾದವರ ಜಾಗಕ್ಕೆ ಇನ್ನಷ್ಟು ಬಂಧಿತರು ಬಂದು ಸೇರುತ್ತಿದ್ದರು. ಈ ಚಕ್ರ ಹೀಗೇ ಸಾಗುತ್ತಲಿತ್ತು!

ಅಡುಗೆ ಮನೆಯಲ್ಲಿ ಮಧ್ಯಾಹ್ನದ ಊಟಕ್ಕೆ ಮಾತ್ರೆ ತಯಾರು ಮಾಡುತ್ತಿದ್ದ ಹೆಂಡತಿಯ ಬಳಿ ಒಂದು ಪುಸ್ತಕವನ್ನು ಹಿಡಿದು ಬಂದ ಗಂಡ ಹ ಹ ಹ ಇಲ್ಲಿ ನೋಡೇ ಈ ಕಥೆ ಹೇಗಿದೆ ಗೊತ್ತಾ ಒಂದು ಊರಂತೆ, ಅಲ್ಲಿ ಮಕ್ಕಳು ಮಾಡಿಕೊಂಡ್ರೆ ದುಡ್ಡು ಕೊಡ್ತಿದ್ರಂತೆ, ಆಮೇಲೆ ಯಾರು ಯಾರ ಜೊತೆ ಬೇಕಾದ್ರು ಸಂಭೋಗ ನಡೆಸಬಹುದಿತ್ತಂತೆ, ಅದಕ್ಕಾಗಿ ಸರಕಾರದಲ್ಲಿ ಯಾವುದೇ ಕಟ್ಟಳೆಗಳು, ನಿಯಮಾವಳಿಗಳು ಇರಲೇ ಇಲ್ವಂತೆ, ಇನ್ನೂ ಸರಕಾರದವರೇ ಅದೇನೋ ಕಂಡೋಮ್ ಗಳನ್ನು ಮುಫತ್ತಾಗಿ ಕೊಟ್ಟು ಪ್ರಚೋದಿಸುತ್ತಿದ್ದರಂತೆ. ಕೆಲವು ಹೆಂಗಸರಿಗೆ ಇಬ್ಬರು ಗಂಡಂದಿರಂತೆ, ಇನ್ನೂ ಕೆಲವರು ಗಂಡಸರು ಎಷ್ಟು ಸಲ ಬೇಕಾದರೂ ಮದುವೆಯಾಗಬಹುದಿತ್ತಂತೆ, ಮೂರ್ನಾಲ್ಕು ಹೆಂಡಂದಿರು ಅವರೆಲ್ಲರಿಗೂ ಕನಿಷ್ಠ ಪಕ್ಷ ಐದು ಮಕ್ಕಳಂತೆ. ಒಬ್ಬೊಬ್ಬನಿಗೆ ಮೂರ್ನಾಲ್ಕು ಮನೆಗಳಿರ್ತಿದ್ವಂತೆ. ಅವರುಗಳು ಊಟಕ್ಕೆ ಒಂದೊಂದು ತಟ್ಟೆಗಳು, ಪಾತ್ರೆಗಳನ್ನ ಇಟ್ಟಿರ್ತಿದ್ರಂತೆ ಅದರ ತುಂಬಾ ಅದೇನೋ ಬಿಳಿ ಬಿಳಿ ಕಾಳುಗಳನ್ನ ತುಂಬಿಸಿಕೊಂಡು ತಿನ್ನುತ್ತಿದ್ರಂತೆ. ಹಹಹ ಎಷ್ಟು ವಿಚಿತ್ರವಾಗಿದೆ ಅಲ್ವಾ. ಇನ್ನೂ ಏನೇನೋ ಬರೆದಿದ್ದಾನೆ. ಈ ಕಥೆ ಹೊರಗೆ ಬಂದಿದ್ದೇ ಕಥೆಗಾರನ್ನ ಗಲ್ಲಿಗೆ ಏರಿಸಲಾಯ್ತಾಂತೆ! ಹೆಂಡತಿ ಅದಕ್ಕೆ ಪ್ರತಿಕ್ರಿಯೆಯಾಗಿ ಆಗಬೇಕಾದ್ದೆ ಬಿಡಿ ಎಂದಷ್ಟೇ ಹೇಳಿ ನಿಟ್ಟುಸಿರುಬಿಟ್ಟು, ನಿಮ್ಮ ತಂಡ ಮಾಡಿದ ಪ್ರತಿಭಟನೆ ಏನಾದ್ರೂ ಉಪಯೋಗ ಆಯ್ತಾ, ಎಂದು ವಿಷಯ ಬದಲಿಸಲು, ಗಂಡನೂ ಉತ್ತರವೆಂಬಂತೆ ಒಂದು ನಿಟ್ಟುಸಿರು ಬಿಡುತ್ತಾ ತನ್ನ ಎಂಬತ್ತೊಂಬತ್ತನೇ ಮಹಡಿಯ ರೂಮಿನ ಕಿಟಕಿಯಿಂದ ಹೊರಗೆ ದಿಟ್ಟಿಸುತ್ತಾ, ಈಗ ಇಪ್ಪತ್ನಾಲ್ಕು ಘಂಟೆ ಸಮಯಾವಕಾಶ ಕೊಡಲಾಗಿದೆಯಂತೆ. ಯಾರನ್ನೇ ಹಿಡಿದರೂ ತಕ್ಷಣ ಶಸ್ತ್ರಚಿಕಿತ್ಸೆ ಮಾಡುವಹಾಗಿಲ್ಲ ಈಗ. ಒಂದು ಹಂತಕ್ಕೆ ಗೆದ್ದಂತೆಯೇ ಲೆಕ್ಕ. ಆದರೆ ನಮ್ಮ ಜನ ಯಾಕೆ ಹೀಗೆ ಮಾಡ್ಕೋಬೇಕು ಅಂತ, ಸರಕಾರದ ನಿಯಮಗಳನ್ನ ಅದ್ಯಾಕೆ ಮುರೀತಾರೋ, ನಮ್ಮಂತಹ ಎಷ್ಟು ಸಂಸಾರಗಳು ಕಾನೂನು ಪಾಲಿಸುತ್ತಾ ನೆಮ್ಮದಿಯಾಗಿ ಬದುಕುತ್ತಿಲ್ವಾ. ಮಕ್ಕಳು ಮಾಡಿಕೊಳ್ಳಲು ಪರವಾನಗಿ ದೊರೆತಿಲ್ಲ ಅಂದ್ರೆ, ಸಂಭೋಗಿಸಬಾರದು, ಕಾನೂನು ಬಾಹಿರವಾಗಿ ಮಕ್ಕಳು ಮಾಡ್ಕೋಬಾರದು. ಅದ್ಯಾವಾಗ ಬುದ್ದಿ ಬರುತ್ತೋ ನಮ್ಮ ಜನಕ್ಕೆ ಗೊತ್ತಿಲ್ಲಪ್ಪ ಎಂದು ಹೇಳಿದ್ದಕ್ಕೆ ಹೆಂಡತಿ ಮತ್ತದೇ ನಿಟ್ಟುಸಿರಿನಲ್ಲೇ ಪ್ರತಿಕ್ರಿಯಿಸುವರು.

ಕೆಂಪನೆ ಇಳಿಯುತ್ತಿರುವ ಸಂಜೆಯ ಸೂರ್ಯನಿಗೆ ಹೊಂದಾಣಿಕೆಯಾಗುವ ಹಾಗೆ ಯಾವುದೋ ಬೀದಿಯಲ್ಲಿ “ರಕ್ಷಣಾ ಕಾರ್ಯಗಾರ” ಎಂಬ ನಾಮಫಲಕವಿದ್ದ ಮೊಬೈಲ್ ಜೈಲಿನಂತಹ ವ್ಯಾನು ಬೆಂಕಿಹೊತ್ತಿ ಉರಿಯುತ್ತಿದೆ. ರಸ್ತೆಯ ಒಂದು ಮೂಲೆಯಲ್ಲಿ ಬಲೆಯಲ್ಲಿ ಸಿಲುಕಿ ಜ್ಞಾನ ತಪ್ಪಿ ಬಿದ್ದಿರುವ ಜೋಡಿ. ಮತ್ತೊಂದು ಕಡೆ ಹಿಡಿಯಲು ಬಂದಿದ್ದ ಅಷ್ಟೂ ಅಧಿಕಾರಿಗಳನ್ನು ಕೆಲವರು ಬಚ್ಚಿಟ್ಟುಕೊಂಡು ಕಾದಿದ್ದು ತಮ್ಮ ಬಳಿ ಇದ್ದ ದೊಡ್ಡ ದೊಡ್ಡ ಗನ್ನು ಸಿಡಿಮದ್ದುಗಳಿಂದ ಅನಿರೀಕ್ಷಿತ ದಾಳಿ ಎಸಗಿ, ರಕ್ತ ಕಾರುತ್ತಾ ಬಿದ್ದಿದ್ದ ಅಧಿಕಾರಿಗಳನ್ನು ಥಳಿಸಿ ಬಲೆಗಳಲ್ಲಿ ಸಿಲುಕಿದ್ದವರನ್ನು ಹೊತ್ತು ಮಾಯವಾಗುವರು. 

ರಸ್ತೆಗಳಲ್ಲಿ, ಅನುಮಾನವಿದ್ದ ಮನೆಗಳಲ್ಲಿ, ಸರ್ಕಾರ ನಡೆಸಿದ ಸಮೀಕ್ಷೆಯ ವರದಿಯ ಆಧಾರದ ಮೇಲೆ ಹಿಡಿದುತಂದ ಹುಡುಗ ಹುಡುಗಿಯರನ್ನು ಸಲಾಕೆಗಳ ಹಿಂದೆ ತಳ್ಳಿ ಇಪ್ಪತ್ತ ನಾಲ್ಕು ಘಂಟೆ ಕಾಲಾವಕಾಶ ಕೊಟ್ಟು ಅಷ್ಟರಲ್ಲಿ ಅವರುಗಳನ್ನು ಬಿಡಿಸಿಕೊಂಡು ಹೋಗಲು ಅವರ ಸಂಬಂಧಿಕರು ತಕ್ಕ ಪುರಾವೆಗಳನ್ನು ಮಂಡಿಸದಿದ್ದಲ್ಲಿ ಆ ಹುಡುಗರನ್ನು ತೆಗೆದುಕೊಂಡು ಹೋಗಿ ಸಂತಾನೋತ್ಪತ್ತಿಗೆ ಬೇಕಾದ ನರಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ನಿಶ್ಕ್ರಿಯಗೊಳಿಸಿ ಅವರನ್ನು ಮತ್ತೆ ಮುಕ್ತಗೊಳಿಸುತ್ತಿದ್ದರು.  ಈ ಕಾರ್ಯಾಚರಣೆಗಾಗಿಯೇ ಸರ್ಕಾರ ಒಂದು ಪಡೆಯನ್ನು ನೇಮಿಸಿತ್ತು. ಈ ಸಂಸ್ಥೆಯನ್ನು, ಮತ್ತು ಸರ್ಕಾರದ ಈ ಆದೇಶವನ್ನು ವಿರೋಧಿಸುವ, ಈ ಕಾರ್ಯಾಚರಣೆಯಲ್ಲಿ ನೊಂದ ಮತ್ತು ಇನ್ನೂ ಹಲವು ಸಂಘಟನೆಗಳು ಒಂದುಗೂಡಿ ತಲೆಮರೆಸಿಕೊಂಡು ಆಗಾಗ ಎಲ್ಲಂದರಲ್ಲಿ ಧಂಗೆಯೇಳುತ್ತಿತ್ತು.

ಹಲವಾರು ವರ್ಷಗಳ ಹಿಂದೆ ಜನ ಮಲಗಲು ಸಹಿತ ಜಾಗವಿಲ್ಲದೇ ಮನೆಗಳಲ್ಲಿ ಮಾತ್ರವಲ್ಲದೇ ರಸ್ತೆಗಳಲ್ಲಿ, ಎಲ್ಲಂದರಲ್ಲಿ ಮಲಗಲಿಕ್ಕೆಂದೇ ತಾತ್ಕಾಲಿಕ ಜೋಪಡಿಗಳನ್ನು ಕಟ್ಟಿಕೊಳ್ಳತೊಡಗಿದ್ದರು. ಈ ಜೋಪಡಿಗಳನ್ನು ರಾತ್ರಿಯ ಸಮಯದಲ್ಲಿ ೬ ಘಂಟೆಗಳ ಕಾಲ ಕಟ್ಟಿಕೊಳ್ಳಬಹುದಾದ ಪರವಾನಗಿ ಇತ್ತು. ನಂತರ ಇನ್ನೂ ಬಿಚ್ಚಿಟ್ಟಿ ಜಾಗ ಖಾಲಿ ಮಾಡಿರದಿದ್ದರೆ ದಂಡ ಕಟ್ಟುವುದಲ್ಲದೇ ಮತ್ತೆ ಕಟ್ಟಿಕೊಳ್ಳುವ ಪರವಾನಗಿ, ಮತ್ತು ಜೋಪಡಿಗಳನ್ನು ಕಿತ್ತುಕೊಳ್ಳಲಾಗುತ್ತಿತ್ತು. ಊಟಕ್ಕೆ ಶಕ್ತಿ ವೃದ್ಧಿಸುವ ಮಾತ್ರೆಗಳನ್ನ ಹೆಚು ಹೆಚ್ಚು ತಯಾರಿಸಲಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ಸರ್ಕಾರ ಮತ್ತು ಹಲವು ಸಂಘಟನೆಗಳು ಒಟ್ಟುಗೂಡಿ ಅಂದಿನಿಂದ ಮನೆಗೊಂದೇ ಮಗುವೆಂಬ ನಿಯಮವನ್ನು ಕಿತ್ತು ಹಾಕಿ ಹೊಸ ನಿಯಮವನ್ನು ಜಾರಿಗೆ ತಂದಿತು. ಪ್ರತಿಯೊಂದು ಸಂಸಾರದ ಒಟ್ಟು ಸದಸ್ಯರ ಸಂಖ್ಯೆಯ ಆಧಾರದ ಮೇಲೆ ಲೆಕ್ಕಾಚಾರ ಮಾಡಿ ಮಗು ಪಡೆಯಲು ಪರವಾನಗಿ ನೀಡುತ್ತಿತ್ತು. ಪರವಾನಗಿ ಪಡೆದೇ ಸಂತಾನೋತ್ಪತ್ತಿ ಯೋಜನೆ ಹಾಕಿಕೊಳ್ಳಲು ಅರ್ಹರಾಗಿರುತ್ತಿದ್ದರು. ನಿಯಮ ಉಲ್ಲಂಘಿಸಿದರೆ, ವೈದ್ಯ ಸೇವೆಯಿಂದ ಹಿಡಿದು ಎಲ್ಲ ರೀತಿಯ ಸವಲತ್ತುಗಳನ್ನು ಕಿತ್ತುಕೊಳ್ಳುವ ಸಂಪೂರ್ಣ ಹಕ್ಕು ಸರ್ಕಾರಕ್ಕಿತ್ತು. ಜನಸಂಖ್ಯೆಯನ್ನು ನಿಯಂತ್ರಿಸಲಿಕ್ಕೆ, ಮಾನವಕುಲವನ್ನು ಉಳಿಸಲಿಕ್ಕೆ, ಈ ನಿಯಂತ್ರಣ ಹೇರುವುದು ಅನಿವಾರ್ಯವಾಗಿತ್ತು!

ಟಿವಿ, ರೇಡಿಯೋಗಳಲ್ಲಿ ರಾತ್ರಿ ೯ ಘಂಟೆಗೆ ನೇರ ಪ್ರಸಾರದಲ್ಲಿ ದೇಶದ ಮೊದಲ ವ್ಯಕ್ತಿ ಬದಲಾಗಿರುವ ನಿಯಮಗಳನ್ನು ಸ್ಪಷ್ಟವಾಗಿ ವಿವರಿಸುವರು. ರಸ್ತೆ ರಸ್ತೆಗಳಲ್ಲಿದ್ದ ದೊಡ್ಡ ದೊಡ್ಡ ಟಿವಿ ಪರದೆಗಳಲ್ಲಿ ಜನ ಬಾಯಿಕಳೆದು ನಿಂತು ವೀಕ್ಷಿಸುವರು. “ಪ್ರೀತಿಯ ಪ್ರಜೆಗಳೇ, ನಿಮ್ಮ ಸುಖ, ಸಂತೋಷವೇ ನಮ್ಮ ಸಂತೋಷ. ನಿಮ್ಮ ಸುಗಮ ಜೀವನ ನಿರ್ಮಹಣೆಗಾಗಿ ಮಾರ್ಪಾಟುಗಳಾದ ನಂತರದ ನಿಯಮಗಳನ್ನು ನಿಮ್ಮ ಮುಂದೆ ತೆರೆದಿಡಲಿದ್ದೇವೆ. ದಯವಿಟ್ಟು ಸಹಕರಿಸಿ. ಯಾವುದೇ ಗಂಡು ಅಥವಾ ಹೆಣ್ಣು ಸಂಭೋಗಿಸಲು ಪರವಾನಗಿ ಪತ್ರ ಪಡೆದಿರಬೇಕು. ಪರವಾನಗಿ ಹೊಂದಿದವರಿಗೆ ಮಾತ್ರ ಕಂಡೋಮ್ ಗಳನ್ನು ತಿಂಗಳಿಗೆ ಐದು ಗರ್ಭನಿರೋಧಕಗಳನ್ನು ನೀಡಲಾಗುವುದು. ಮತ್ತು ಯಾವುದೇ ಕಾರಣಕ್ಕೂ ಸಂತಾನೋತ್ಪತ್ತಿಯ ಯೋಜನೆಯಿದ್ದಲ್ಲಿ ಅದಕ್ಕೆ ಸರ್ಕಾರಕ್ಕೆ ಸೂಕ್ತ ಕಾರಣಗಳನ್ನು ನಮೂದಿಸಿ ಅರ್ಜಿ ನೀಡತಕ್ಕದ್ದು. ಅರ್ಜಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಒಪ್ಪಿಗೆ ನೀಡಿದ ನಂತರವೇ ಮುಂದುವರೆಯತಕ್ಕದ್ದು. ಕಾನೂನು ಬಾಹಿರ ಮಕ್ಕಳನ್ನು ಮಾಡಿಕೊಂಡವರಿಗೆ ಸಜಾ ಮತ್ತು ಅಂತಹ ಮಕ್ಕಳನ್ನು ಕಾನೂನು ಬಾಹಿರ ಮಕ್ಕಳೆಂದೇ ಪರಿಗಣಿಸಿ, ಆ ಮಕ್ಕಳಿಗೆ ಪ್ರಾಪ್ತ ವಯಸ್ಸಿಗೆ ಬಂದಕೂಡಲೆ ಸಂತಾನೋತ್ಪತ್ತಿಯಾಗದಂತೆ ಶಸ್ತ್ರ ಚಿಕಿತ್ಸೆ ಮಾಡಲಾಗುವುದು. ಹಾಗೂ ಕಾನೂನೀ ಹುಡುಗ ಹುಡುಗಿಯರು ಹದಿಮೂರು ವರ್ಷದ ತನಕ ಯಾವುದೇ ರೀತಿ ಲೈಂಗಿಕ ಕ್ರಿಯೆಯಲ್ಲಿ ಸಿಕ್ಕಿಬಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಶಸ್ತ್ರಚಿಕಿತ್ಸೆ ಮಾಡಲಾಗುವುದು. ನಾವು ಇದೇ ಹಾದಿಯಲ್ಲಿ ಸಾಗಿದಲ್ಲಿ ಇನ್ನೂ ಐದು ವರ್ಷದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಬಂದು ಮತ್ತೆ ಉಸಿರಾಡಲು ಸ್ವಚ್ಚ ಗಾಳಿ, ಪ್ರರಿಯೊಬ್ಬರಿಗೂ ಒಂದು ಮನೆ, ಮತ್ತು ಎರಡು ಹೊತ್ತಿನ ಆಹಾರ ಪದಾರ್ಥಗಳನ್ನು ಒದಗಿಸುವಲ್ಲಿ ನಾವು ಗೆಲ್ಲುವಂತಾಗುತ್ತದೆ. ಎಲ್ಲರೂ ಸಹಕರಿಸಬೇಕೆಂದು ವಿನಂತಿ. ಮತ್ತು ಸರ್ಕಾರ ಯಾವುದೇ ರೀತಿಯ ಭಯೋತ್ಪಾದನೆಯನ್ನು ಸಹಿಸುವುದಿಲ್ಲ. ಸೂಕ್ತ ಕ್ರಮ ಶೀಘ್ರದಲ್ಲೇ ಜರುಗಲಿದೆ. ಶುಭವಾಗಲಿ.” ಬಾಯ್ಕಳೆದುಕೊಂಡು ಆಕಾಶದೆತ್ತರಕ್ಕೆ ಇದ್ದ ಟಿವಿ ಪರದೆಗಳನ್ನು ನೋಡುತ್ತಿದ್ದ ಸ್ತಭ್ದವಾಗಿದ್ದ ಜನತೆಯಲ್ಲಿ ಮತ್ತೆ ಚಲನೆ ಮೂಡಿತು. ಮತ್ತೆ ಜನಸಂಖ್ಯೆ ನಿಯಂತ್ರಣಕ್ಕೆ ಬಂದರೆ ಒಂದಾದರೂ ಖಾಲಿ ರೋಡು ನೋಡಿ ಸಾಯಬೇಕೆಂದು ಹಲವರು ಅಂದುಕೊಳ್ಳುತ್ತಾ ಸಿಗ್ನಲ್ ಗಾಗಿ ಕಾಯುವರು. ಕಪ್ಪನೆ ಆಕಾಶದಲ್ಲಿ ಕಪ್ಪು ಕಲೆಗಳೇ ಹೆಚ್ಚಿದ್ದ ಚಂದ್ರ ಜನಸಂಖ್ಯಾಸ್ಫೋಟದ ಪರಿಣಾಮವನ್ನು ಕಂಡು ನಗುತ್ತಾ ರಾತ್ರಿಗೆ ನಾಂದಿ ಹಾಡುವನು. 

                                                                                         -ನೀ.ಮ. ಹೇಮಂತ್


Thursday 19 April 2012

ಧಿಕ್ಕಾರಾರ್ಹ ಗುರುವಿಗೆ!



ಧಿಕ್ಕಾರ ನಿಮಗಲ್ಲ. ನಿಮ್ಮಲ್ಲಿನ ಒಂದು ಗುಣಕ್ಕೆ. ನನ್ನ ಈ ಖಾರವಾದ ಮಾತುಗಳಿಂದ ನಿಮ್ಮ ಮನಸ್ಸಿಗೆ ನೋವಾಗುವುದು ಖಂಡಿತ. ನಾನು ಕ್ಷಮೆ ಕೇಳುವ ದುಸ್ಸಾಹಸ ಮಾಡುವುದಿಲ್ಲ. ಆದರೆ ಬರೆದು ನಿಮಗೆ ತಲುಪಿಸಿಯೇ ತೀರುತ್ತೇನೆ. ನನ್ನ ಮನಸ್ಸಿಗೆ ನಿಮ್ಮ ಇಂದಿನ ವರ್ತನೆಯಿಂದಾಗಿ ಅಪಾರವಾದ ಖೇದ ಉಂಟಾಗಿರುವುದು ಖಂಡಿತ. ಇನ್ನು ಮುಂದೆ ನೀವು ಯಾವ ವಿದ್ಯಾರ್ಥಿಯ ಭುಜದ ಮೇಲೆ ಕೈಹಾಕಿ ಸ್ನೇಹಪೂರ್ವಕವಾಗಿ ಮಾತನಾಡಿಸುವಾಗಲೂ ನಿಮ್ಮ ಕೈ ಏನನ್ನೋ ಹುಡುಕುತ್ತಿದೆ ಎಂದು ಭಾಸವಾಗುತ್ತದೆ. ಅದನ್ನು ತಡೆಯಲು ನನ್ನಿಂದ ಸಾಧ್ಯವಿಲ್ಲ. ನನ್ನ ಸ್ನೇಹಿತ ವೃಂದದವರು ನಿಮ್ಮನ್ನು ಏಕವಚನದಿಂದ ಕರೆದಾಗಲೆಲ್ಲಾ ಎಲ್ಲರ ಮೇಲೂ ಕೆಂಡ ಕಾರುತ್ತಿದ್ದೆ. ನಾನೇನೂ ಸಾಚಾ ಖಂಡಿತಾ ಅಲ್ಲಾ, ಇತರ ನನಗೆ ಇಷ್ಟವಾಗದ ಪ್ರಾಧ್ಯಾಪಕರನ್ನು ನಾನೂ ಸಹ ಏಕವಚನದಲ್ಲೇ ಸಂಬೋಧಿಸುವೆ. ಇದು ಕೇವಲ ವಿದ್ಯಾರ್ಥಿಗಳಿಗೆ ಪ್ರಾದ್ಯಾಪಕರ ಮೇಲಿರಬಹುದಾದ ಕೋಪ, ಯಾವುದೋ ಹಳೆಯ ವೈಶಮ್ಯ ಅಥವಾ ಹುಡುಗುಬುದ್ದಿಯ, ಹಾಗೆ ಸಂಬೋಧಿಸುವುದರಿಂದ ಸಿಗಬಹುದಾದ ವಿಕೃತವಾದ ತೃಪ್ತಿಯ ಪ್ರತೀಕವಷ್ಟೇ. ನಮ್ಮ ವರ್ತನೆಯನ್ನು ನಾನು ಸಮರ್ಥಿಸಿಕೊಳ್ಳುತ್ತಿಲ್ಲ ಆದರೆ ಯಾರೆದುರಿಗೂ ಅಗೌರವ ಸೂಚಕವಾಗಿ ನಡೆದುಕೊಳ್ಳದಿರುವುದರಿಂದ, ಯಾರ ಮನಸಿಗೂ ಹಾನಿಯಾಗದಿರುವುದರಿಂದ ಅಂತಹ ದೊಡ್ಡ ಮೊತ್ತದ ತಪ್ಪೆಂದು ಪರಿಗಣಿಸುತ್ತಿಲ್ಲ.

ನಾನು ಕಾಲೇಜಿಗೆ ಸೇರಿ ಇದು ಮೂರನೇ ವರ್ಷ. ಇನ್ನು ಕೆಲವು ತಿಂಗಳಲ್ಲಿ ಈ ಕಾಲೇಜಿಗೆ ನಮಸ್ಕಾರ ಹೊಡೆದು ಹೊರೆಟು ಹೋಗುವವ. ಮೊದಲ ದಿನದ ನಿಮ್ಮ ಮೊದಲ ಉಪನ್ಯಾಸದಿಂದ ಹಿಡಿದು ಇಂದಿನ ಉಪನ್ಯಾಸದವರೆಗೂ ಎಲ್ಲಿ ಏನು ಹೇಗೆ ಕೇಳಿದರೂ ಕರಾರುವಾಕ್ಕಾಗಿ ವಿವರಿಸುವ ಶಕ್ತಿ ನನ್ನಲ್ಲಿದೆ. ಅದರ ಸಂಪೂರ್ಣ ಶ್ರೇಯ ನಿಮಗೇ ಸಲ್ಲಬೇಕಾದ್ದು. ನಿಮ್ಮ ಉಪನ್ಯಾಸದ ವೈಖರಿ ಹಾಗಿದೆ. ನೀವು ಪಾಠದ ಜೊತೆಗೆ ಹೇಳುತ್ತಿದ್ದ ನೀತಿ ಮಾತುಗಳನ್ನೂ ಸಹ ಪುಸ್ತಕದಲ್ಲಿ, ಮನಸ್ಸಿನಲ್ಲಿ ಬರೆದುಕೊಳ್ಳುತ್ತಿದ್ದೆ. ಎಲ್ಲವನ್ನೂ ನೆನೆಯುತ್ತಿರುತ್ತೇನೆ. ನನ್ನ ಅಪ್ಪ ಅಮ್ಮನ ನಂತರ ನನಗೆ “ರೋಲ್ ಮಾಡೆಲ್” ಎಂದು ಯಾರಾದರೂ ಇದ್ದರೆ ಅದು ನೀವೇ. ನನಗೆ ಗಣಿತ ಕಂಡರೆ ಗುಮ್ಮನನ್ನು ಕಂಡ ಹಾಗೆ ಅಗುತ್ತಿತ್ತು. ಪದವಿಗೆ ಸೇರುವ ಮುನ್ನ ಚೀಟಿಗಳು, ಪಕ್ಕದವನ ಉತ್ತರಪತ್ರಿಕೆಗಳು, ನೋಟ್ ಪುಸ್ತಕಗಳು, ಏನೆಲ್ಲಾ ಕಂತ್ರಿ ಕೆಲಸ ಮಾಡಲು ಸಾಧ್ಯವಿತ್ತೋ ಎಲ್ಲ ವಿದ್ಯೆಯನ್ನೂ ಉಪಯೋಗಿಸಿ ಪದವಿಪೂರ್ವದವರೆಗೂ ಗಣಿತದಲ್ಲಿ ಉತ್ತೀರ್ಣನಾಗುತ್ತಿದ್ದೆ. ನುಂಗಲಾರದ ಬಿಸಿತುಪ್ಪದಂತಿತ್ತು ಗಣಿತ. ಆ ಉಪಾಧ್ಯಾಯರುಗಳೂ ಹಾಗೇ ಇರುತ್ತಿದ್ದರು. ಪದವಿಯಲ್ಲಿ ನೀವು ಹೇಳಿಕೊಡುತ್ತಿದ್ದ ರೀತಿಗೇ ಗಣಿತ ಸುಲಲಿತವಾಗಿ ತಲೆಯೊಳಗಡೆ ಇಳಿದುಬಿಡುತ್ತಿತ್ತು. ನೀವು ಇಷ್ಟವಾದ್ದರಿಂದಲೋ ಅಥವಾ ಗಣಿತದ ಲೆಕ್ಕಗಳು ಪ್ರಪ್ರಥಮ ಬಾರಿಗೆ ಅರ್ಥವಾಗುತ್ತಿದ್ದುದರಿಂದಲೋ ನೀವು ಮತ್ತು ಗಣಿತ ಎರಡೂ ಅತಿ ಇಷ್ಟಪಡುವ ವಿಷಯಗಳಾಗಿ ಹೋಯ್ತು. ಕನಸಿನಲ್ಲೂ ಕೂಡ ಡಿಫರೆನ್ಶಿಯೇಶನ್, ಇಂಟಿಗ್ರೇಶನ್, ಟ್ರಿಗ್ನೋಮೆಟ್ರಿ ವಿಷಯಗಳು ಬರಲು ಶುರುಮಾಡಿದ್ದವು. ಅತಿದೊಡ್ಡ ಲೆಕ್ಕಗಳನ್ನು ಪಟಪಟನೆ ಬಿಡಿಸಿದ ಹಾಗೆ, ಸೈನ್ ಟೀಟಾ, ಕಾಸ್ ಟೀಟಾ, ಆಲ್ಫಾ ಗಾಮಾ ಗಾಳೆಂಬ ಅಪ್ಪಟ ಗಣಿತ ಶಬ್ಧಗಳ ಜೊತೆ ಕುಣಿತ ಮಾಡಿದ ಹಾಗೆ ಅನ್ನಿಸುತ್ತಲಿತ್ತು.

ನೀವು ವರ್ಷಕ್ಕೆ ಕನಿಷ್ಠ ಪಕ್ಷ ಐದು ಜನ ಬಡ ಹುಡುಗರನ್ನು ನಿಮ್ಮ ಸ್ವಂತ ಖರ್ಚಿನಲ್ಲಿ ಓದಿಸುತ್ತೀರೆಂಬ ವಿಷಯ ಕಿವಿಗೆ ಬಿದ್ದಾಗಲಂತೂ ನಿಮ್ಮ ಮೇಲೆ ಗೌರವ ಇಮ್ಮಡಿಗೊಂಡಿತ್ತು. ಆ ಅಷ್ಟೂ ಜನ ಹುಡುಗರು ನಿಮ್ಮ ಜಾತಿಯವರೇ ಆಗಿರುತ್ತಿದ್ದರೆಂದು ಹೇಳಿ ನಿಮ್ಮ ಬಗ್ಗೆ ಇಲ್ಲಸಲ್ಲದ ವಿಷಯಗಳನ್ನು, ನಿಮ್ಮ ಹೆಸರು ಹಾಳುಮಾಡಲು ಯಾರೋ ಕಾಲೇಜಿಗೆ ಹಬ್ಬಿಸಿದ್ದರು. ಮೈ ಉರಿಯುತ್ತಿತ್ತು. ನಮ್ಮ ತರಗತಿಯಲ್ಲೀ ನೀವು ನಂಬುತ್ತೀರೋ ಇಲ್ಲವೋ ಹುಡುಗ ಹುಡುಗಿಯರಲ್ಲಿ ಒಳಗೊಳಗೇ ಜಾತಿಯ ಆಧಾರದ ಮೇಲೆ ಗುಂಪುಗಳಿದ್ದವು. ಬೇರೆ ಜಾತಿಯವನನ್ನು ತಮ್ಮ ಗುಂಪಿನಲ್ಲಿ ಬಿಟ್ಟುಕೊಳ್ಳುತ್ತಲೂ ಇರಲಿಲ್ಲ. ಛೇ, ಎಷ್ಟೋ ಸಲ ಬೇಸರವಾಗುತ್ತಿತ್ತು ಕೊನೆಯ ಸಾಲಿನಲ್ಲಿ ಯಾರಗೊಡವೆಗೂ ಹೋಗದೆ ಇದ್ದುಬಿಡುತ್ತಿದ್ದೆ. ಧರಿದ್ರ ಅವರವರ ಅಪ್ಪ ಅಮ್ಮಂದಿರು ಕಲಿಸಿರುವ ಬುದ್ಧಿಯೇ ಬಂದಿರುತ್ತದೆಂದು ಅವರ ಪೋಷಕರನ್ನೂ ಸಹ ಶಪಿಸಿದ್ದೇನೆ. ನನ್ನ ಸಾಲಿನಲ್ಲಿ ಎಲ್ಲ ಜಾತಿಯ ಹುಡುಗರು ಕುಳಿತಿರುತ್ತಿದ್ದರು ಒಟ್ಟಿಗೆ ಊಟ ಮಾಡುತ್ತಿದ್ದೆವು. ವಿದ್ಯೆ ಕಲಿಯುವುದು ಅಂಕಗಳಿಸಲಿಕ್ಕಲ್ಲ, ಅಷ್ಟೇ ಉದ್ದೇಶವಾದರೆ ಕೂಲಿಮಾಡುವವರಿಗೂ ನಮಗೂ ವ್ಯತ್ಯಾಸವಿರುವುದಿಲ್ಲ, ವಿದ್ಯೆ ವೈಚಾರಿಕತೆಯನ್ನ ಬೆಳಸಬೇಕೆಂದು ನೀವು ಎಂದೋ ಹೇಳಿದ ಮಾತು ನೆನಪಾಗುತ್ತಿತ್ತು.

ನನ್ನ ಆಸಕ್ತಿ ಕಂಡು ನೀವು ಎರಡು ಅಪರೂಪದ ಪುಸ್ತಕಗಳನ್ನು ತಂದುಕೊಟ್ಟಾಗ ನನ್ನ ಕಣ್ಣಲ್ಲಿ ನೀರು ತಡೆಯಲು ನನ್ನಿಂದ ಸಾಧ್ಯವಾಗಲೇ ಇಲ್ಲ. ಕುಣಿದು ಕುಪ್ಪಳಿಸಿದ್ದೆ. ನನ್ನ ಜೀವಮಾನದ ಅತಿಶ್ರೇಷ್ಠ ಉಡುಗೊರೆಯಾಗಿದ್ದವು ಅವು. ಇದುವರೆಗೂ ಮೂರು ಬಾರಿ ಓದಿದ್ದೇನೆ. ನೀವು ಕೊಟ್ಟ ಮೂರು ದಿನದವರೆಗೂ ಅವು ಮಲಗುವಾಗಲೂ ಸಹ ನನ್ನ ಕೈಯಲ್ಲೇ ಇರುತ್ತಿದ್ದವು. ಪ್ರತಿನಿತ್ಯ ತರಗತಿಯ ನಂತರ ನಿಮ್ಮ ಬಳಿ ಬಂದು ಹೊಸ ಲೆಕ್ಕವನ್ನು ನಿಮ್ಮೊಂದಿಗೆ ಚರ್ಚಿಸದಿದ್ದರೆ ಅಂದು ಏನೋ ಕಳೆದುಕೊಂಡ ಅನುಭವ. ನೀವು ನಿಮ್ಮ ಮಗಳ ವಿಷಯಗಳನ್ನೂ ಹಂಚಿಕೊಳ್ಳುವಾಗ ನಿಮಗೆ ನನ್ನ ಮೇಲೆ ಎಷ್ಟು ನಂಬಿಕೆ ಇತ್ತೆಂದು ಸ್ಪಷ್ಟವಾಗಿ ತಿಳಿಯುತ್ತಿತ್ತು. ಆಸಕ್ತಿ, ಶ್ರದ್ಧೆ, ಆಸ್ಥೆ, ಉತ್ಸಾಹ, ಸನ್ಮಾರ್ಗದಲ್ಲಿದ್ದವರೆಲ್ಲರನ್ನೂ ನೀವು ಹೀಗೇ ನಡೆಸಿಕೊಳ್ಳುತ್ತಿದ್ದಿರಿ ನನಗೆ ಗೊತ್ತಿತ್ತು. ನಿಮ್ಮ ವಿಶ್ವಾಸವನ್ನು ಉಳಿಸಿಕೊಳ್ಳುವ ಹೊಣೆ ನನ್ನ ಮೇಲಿತ್ತು. ಬೇರೆಲ್ಲಾ ವಿಷಯಗಳಲ್ಲಿ ೬೦, ೭೦ ಪಡೆಯುತ್ತಿದ್ದ ನಾನು ಗಣಿತದಲ್ಲಿ ೯೦ರ ಮೇಲೆ ಪಡೆಯುತ್ತಿದ್ದುದಕ್ಕೆ ನಿಮ್ಮ ಪ್ರೋತ್ಸಾಹ, ಸ್ಪೂರ್ತಿಯೇ ಕಾರಣ.

ಗೆಳೆಯರೆನಿಸಿಕೊಂಡವರು ನಿಮ್ಮ ಮಗಳನ್ನು ನನಗೆ ಕೊಡುವಿರೆಂದು, ಅದಕ್ಕೇ ನಿಮಗೆ ನನ್ನ ಮೆಲೆ ಅಷ್ಟು ಆಸಕ್ತಿ ಎಂದು, ನೀವು ನಾನು ಒಂದೇ ಜಾತಿಯವರಿರಬೇಕೆಂದೂ ಈ ರೀತಿಯಾಗಿ ಏನೇನೋ ಛೇಡಿಸುತ್ತಿದ್ದರು. ನಕ್ಕು ಸುಮ್ಮನಾಗುತ್ತಲಿದ್ದೆ. ನನಗೆ ಗೊತ್ತಿತ್ತು ಕಲಿಯುವ ಆಸಕ್ತಿಯಿದ್ದವರೆಲ್ಲರನ್ನೂ ನೀವು ಹೀಗೇ ಪ್ರೋತ್ಸಾಹಿಸುತ್ತಿದ್ದಿರೆಂದು. ಆದರೆ ಇಂದು ನೀವು ನಿಮ್ಮ ಕಛೇರಿಯಲ್ಲಿ ಆಡಿದ ಮಾತಿನಿಂದಾಗಿ ಇನ್ನೂ ಒತ್ತಿಬರುತ್ತಿರುವ ಹಲವಾರು ನಿಮ್ಮ ಸನ್ನಡತೆಯ ನೆನಪುಗಳು ಕಹಿ ಅನುಭವ ತರುತ್ತಿದೆ. ಮನೆಯಲ್ಲಿ ಈ ಭಾನುವಾರ **** ಪೂಜೆ ಇಟ್ಟುಕೊಂಡಿದ್ದೇನೆ. ನಮ್ಮ ಜಾತಿಯವರನ್ನ ಮಾತ್ರ ಕರೀತಿರೋದು, ಅಂದಹಾಗೆ ನಿನಗೆ ಉಪನ** ಆಗಿದೆಯೆ…. ಎಂದು ಮಾತನಾಡುತ್ತಲಿದ್ದ ನಿಮ್ಮ ಮಾತುಗಳು ನಿಜಕ್ಕೂ ಕಿವಿಯನ್ನು ಕೊರೆದುಕೊಂಡೇ ಹೋಗುತ್ತಿದ್ದವು. ಇಲ್ಲ ನಾನು ನಿಮ್ಮ ಜಾತಿಯವನಲ್ಲ ನಾನೊಬ್ಬ ಶೂಧ್ರನೆಂದು ಕೂಗಬೇಕೆನಿಸಿತು. ಆದರೆ ಯಾವ ಜಾತಿಯೂ ಮೇಲು ಕೀಳೆಂಬ ನಂಬಿಕೆ ನನ್ನಲ್ಲಿರಲಿಲ್ಲ. ನಾನು ವಿದ್ಯಾರ್ಥಿ ಜಾತಿಯಲ್ಲಿದ್ದೆ ಅಷ್ಟೇ. ನೀವು “ಗುರು” ಜಾತಿಯಲ್ಲಿದ್ದಿರಿ. ಬಾಯಿ ತೆರೆಯಲೂ ಸಾಧ್ಯವಾಗಲಿಲ್ಲ ನಿಮಗೆ ಹೇಳದೆಯೇ ಹೊರಟುಬಂದೆ.

ನಿಮ್ಮಂದ ಸಮಾಜಕ್ಕೆ ಉತ್ತಮ ನಾಗರಿಕರು, ಮಾನವತಾವಾದಿಗಳು ಹೊರಬರಬೇಕೇ ಹೊರತು, ಜಾತಿಪ್ರತಿನಿಧಿಗಳಲ್ಲ. ನನ್ನ ಸುತ್ತ ಇದ್ದ ಗೆಳೆಯರಲ್ಲಿನ ಮೂರ್ಖತನ ನಿಮ್ಮಲ್ಲೂ ಇತ್ತು. ನೀವೇ ಇನ್ನೂ ಕಲಿಯುವುದಿದೆ, ಇನ್ನು ನಮಗೇನು ಕಲಿಸಲು ಸಾಧ್ಯ. ನೀವು ಇಷ್ಟು ದಿನ ನನಗೆ ನೀಡಿದ ಎಲ್ಲ ರೀತಿಯ ಪ್ರೋತ್ಸಾಹ, ಗುರುಶಿಷ್ಯ ಸಂಬಂಧವಾಗಿರಲಿಲ್ಲವೇನೋ ಎಂದು ಈಗ ಅನುಮಾನ ಹುಟ್ಟುತ್ತಿದೆ. ನೀವು ಕೊಟ್ಟ ಪುಸ್ತಕವನ್ನು ಕೋಪಕ್ಕೆ ಸಿಲುಕಿ ತಿಪ್ಪೆಗೆ ಎಸೆದುಬಿಟ್ಟೆ. ಗಣಿತದ ಲೆಕ್ಕ ಒಂದೂ ಸರಿಯಾಗುತ್ತಿಲ್ಲ. ಅಂಕಗಳಿಗಾಗಿ ಪಾಠ ಮಾಡುವುದು ಮುಖ್ಯವಲ್ಲ, ನಿಮ್ಮಿಂದ ವೈಚಾರಿಕತೆಯನ್ನು ಹೊತ್ತ ಪ್ರಜೆಗಳು ಹೊರಬರಬೇಕಲ್ಲವೇ? ಹೀಗೆಲ್ಲಾ ಅವಾಚ್ಯವಾಗಿ ಮನಸು ಬೇಡವೆಂದರೂ ಯೋಚಿಸುತ್ತಲಿದೆ. ನೇರವಾಗಿ ಬರೆದಿದ್ದೇನೆ ಸಹ.

ಇನ್ನೂ ಅದೇ ಹಳಸು ಜಾತಿಗಳನ್ನು ಬೆಳೆಸುತ್ತಾ, ದೇಶದ ಉನ್ನತಿಯ ಲೆಕ್ಕಾಚಾರ ತಲೆಕೆಳಗು ಮಾಡುವ ಪ್ರಯತ್ನ ನಿಲ್ಲಿಸೋಣ. ದೇಶದ ಏಳಿಗಾಗಿಯಲ್ಲದಿದ್ದರೂ ಯಕ:ಶ್ಚಿತ್ ಮಾನವೀಯತೆಯ ಏಳಿಗೆಗಾಗಿಯಾದರೂ ಒಟ್ಟಾಗಿ ಕಲಿಯೋಣ, ದುಡಿಯೋಣ, ಬದುಕೋಣ. ಮೊದಲು ಮಾನವರಾಗೋಣ. ಇಂತಿ ನಿಮ್ಮ ಅವಿಧೇಯ, ಧಿಕ್ಕಾರಾರ್ಹ ಶಿಷ್ಯ.

***********

ಕಾಲೇಜಿನ ಪ್ರಿನ್ಸಿಪಾಲ್ ಕಛೇರಿಯಿಂದ ಫೋನ್ ಬಂದು ಅಪ್ಪ ಅಮ್ಮ ಕಛೇರಿಯಲ್ಲಿ ಪ್ರಾಂಶುಪಾಲರು, ಗಣಿತದ ನನ್ನ ಗುರುಗಳ ಜೊತೆ ದೊಡ್ಡ ವಾದ ವಿವಾದವೇ ನಡೆದಿತ್ತು. ಹೊರಗೆ ನನಗೆ ಕಾಲು ಕೈಗಳು ನಡುಗುತ್ತಲಿತ್ತು. ನನ್ನ ಬಳಿ ಮಾತನ್ನೂ ಆಡದೆ ನನ್ನನ್ನು ಕಾಲೇಜಿನಿಂದ ತೆಗೆದುಹಾಕುವರೆಂದು ನಿರ್ಧರಿಸಿದರಂತೆ. ನಾನು ಮಾಡಿದ್ದು ತಪ್ಪಾದರೆ ಅವರು ಮಾಡಿದ್ದು ಕೂಡ ತಪ್ಪೇ. ನಾನು ಕಾಲೇಜಿನಿಂದ ಹೊರಗಡೆ ಹೋಗುವಹಾಗಿದ್ದರೆ ಅವರೂ ಹೊರಗೋಗಬೇಕು. ನನ್ನ ತಪ್ಪಿಗೆ ಕಾರಣ ಅವರೇ ಎಂದು ಧಿಕ್ಕರಿಸುವುದರಲ್ಲಿದ್ದ ನನಗೆ ಅಪ್ಪನ ಕಪಾಳೆ ಮೋಕ್ಷ ಸುಮ್ಮನಾಗಿಸಿತು. ಇಡೀ ಕಾಲೇಜಿನಲ್ಲಿ ಹಾಗಂತೆ ಹೀಗಂತೆ ಎಂದು ಅಂತೆ ಕಂತೆಗಳಲ್ಲಿ ಸುದ್ದಿ ಹಬ್ಬತೊಡಗಿತು.

*********

ಪತ್ರ ತೆಗೆದುಕೊಂಡು ಇನ್ನೂ ಬಂದಿರದ ಗುರುಗಳ ಟೇಬಲ್ ಬಳಿ ಇಟ್ಟು ಬಂದೆ, ಮಾಮೂಲಿನಂತೆ ೯ ಘಂಟೆಯ ವೇಳೆಗೆ ತಮ್ಮ ವಿಭಾಗಕ್ಕೆ ಹೋದವರು ಮತ್ತೆ ಇನ್ನರ್ಧ ಘಂಟೆಯಲ್ಲಿ ಕಾಲೇಜಿನಿಂದ ಹೊರಟು ಹೋದರು. ಅದೇನು ಪತ್ರ ಓದಿದರೋ ಇಲ್ಲವೋ ಗೊತ್ತಾಗದೆ ಹೋಗಿ ಪತ್ರ ಇಟ್ಟ ಸ್ಥಳವನ್ನು ಹುಡುಕಾಡಿದರೆ ಅಲ್ಲಿರಲಿಲ್ಲ. ಸರಿ, ಯಾವ ರೀತಿ ಪ್ರತಿಕ್ರಿಯೆ ಬರಬಹುದೆಂದು ಒಂದೆರಡು ದಿನ ಕಾದೆ. ಒಂದೆರಡು ದಿನವಿರಲಿ ಉಳಿದಿದ್ದ ಮೂರು ತಿಂಗಳು ಕಳೆದರೂ ಗುರುಗಳ ಪತ್ತೆಯೇ ಇಲ್ಲ. ಉಳಿದಿದ್ದ ಪಾಠಗಳನ್ನು ಇನ್ನೊಬ್ಬರಿಗೆ ವಹಿಸಲಾಗಿತ್ತು. ದೀರ್ಘವಾದ ರಜೆಯಲ್ಲಿರುವರೆಂದು ಕೆಲವರು ಮಾತನಾಡಿಕೊಳ್ಳುತ್ತಿದ್ದರು. ಹುಷಾರಿಲ್ಲವೆಂದರು ಕೆಲವರು. ಯಾವುದೋ ಕ್ಷುಲ್ಲಕ ಕಾರಣಕ್ಕೆ ನಾನು ಅಷ್ಟು ದೊಡ್ಡ ಮೇಧಾವಿಯಂತೆ ಪತ್ರ ಬರೆಯಬಾರದಿತ್ತು. ಅವರವರ ನಂಬಿಕೆ ಅವರವರಿಗೆ ಬಿಟ್ಟದ್ದು. ನನಗೇಕೆ ಬೇಕಿತ್ತು ಅವರ ವಿಷಯ. ಏನೇ ಆದರೂ ಅವರಲ್ಲಿದ್ದ ಗಣಿತದ ಮತ್ತು ಉಪನ್ಯಾಸದ ಮೇಲಿನ ಹಿಡಿತ, ಅನುಭವಕ್ಕೆ ನಾನು ಗೌರವ ಕೊಡಬೇಕಿತ್ತು. ಆತ ವ್ಯಯಕ್ತಿಕವಾಗಿ ಏನೇ ಆಗಿದ್ದರೂ ಅದು ನನಗೆ ಬೇಡವಾದ ವಿಷಯವಾಗಿತ್ತು. ಈಗ ಅವರು ನನ್ನಿಂದಲೇ ಕಾಲೇಜಿಗೆ ಬರದಹಾಗಾಗಿದ್ದರೆ ಎಂದು ಸಂಕಟವಾಯ್ತು. ತಪ್ಪು ಒಪ್ಪುಗಳ ಗೊಡವೆಗೆ ಹೋಗದೆ ಎಷ್ಟೇ ಆದರೂ ದೊಡ್ಡವರು, ಅವರ ಮುಂದೆ ಸಣ್ಣವನಾದರೂ ಪರವಾಗಿಲ್ಲವೆನಿಸಿ ಕ್ಷಮಾಪಣೆ ಕೇಳುವುದೆಂದು ತೀರ್ಮಾನಿಸಿ ಕರೆ ಮಾಡಿದರೆ ಕಟ್ ಮಾಡುತ್ತಿದ್ದರು. ಎರಡು ಮೂರು ಬಾರಿ ಪ್ರಯತ್ನಿಸಿದರೂ ಅದೇ ಪ್ರತಿಕ್ರಿಯೆ. ಮೊದಲೇ ಸೂಕ್ಷ್ಮ ಭಾವನೆಯ ಮನುಷ್ಯ, ಹಚ್ಚಿಕೊಂಡಿದ್ದರು ಬೇರೆ. ಆದರೆ ಅವರು ಹಚ್ಚಿಕೊಂಡಿದ್ದು ಜಾತಿಯ ಆಧಾರದ ಮೇಲೆ. ಥು ಮತ್ತದೇ ಯೋಚನೆ. ಬೆಂಕಿಗೆ ಹಾಕಬೇಕು ಜಾತಿ. ಇದರಿಂದಲೇ ನಾನು ಮಾಡಬಾರದ್ದನ್ನು ಮಾಡಿದ್ದು. ತಪ್ಪಿಗೆ ತಪ್ಪು ಉತ್ತರವಾಗಿರಲಿಲ್ಲ, ನಿರ್ಲಕ್ಷಿಸಿದ್ದರೆ ಪಾಠ ಹೇಳಿದಹಾಗಿರುತ್ತಿತ್ತು. ಈಗ ಅವರ ಜೀವನದ ಕೆಲವು ದಿನಗಳನ್ನಾದರೂ ಹಾನಿಗೊಳಿಸಿದ್ದರೆ ಆ ನೋವು ನನ್ನ ಜೀವನನ್ನು ಕಿತ್ತು ತಿನ್ನುವುದು ಖಂಡಿತ. ಛೇ ಹೀಗಾಗಿರಲಾರದು!
************

ಪತ್ರ ತಲುಪಿಸಿದ ದಿನವೇ ಮೂರನೇ ಪೀರಿಯಡ್ ಅವರದ್ದೇ ಇತ್ತು, ಪ್ರತಿನಿತ್ಯ ಬರುವಂತೆ ಎರಡನೇ ಪೀರಿಯಡ್ ಮುಗಿಯುತ್ತಿದ್ದಂತೆಯೇ ಒಂದು ಕೈಯಲ್ಲಿ ಮೂರು ಚಾಕ್ ಪೀಸ್, ಎರೇಜರ್ ಇನ್ನೊಂದು ಕೈಯಲ್ಲಿ ಹಾಜರಾತಿ ಪುಸ್ತಕ ತಂದಿದ್ದರು. ಹಾಜರಾತಿಗಾಗಿ ಮಾತ್ರ ಬರುತ್ತಿದ್ದ ಕೆಲವರು ಇವರ ಕ್ಲಾಸಿಗೆ ಬರುವ ಅಗತ್ಯವೇ ಇರಲಿಲ್ಲ ಏಕೆಂದರೆ ಎಲ್ಲರಿಗೂ ಹಾಜರಾತಿ ಬೀಳುತ್ತಿತ್ತು. ಬಂದವರೇ ಅಂದಿನ ವಿಷಯ ವಿವರಿಸಲು ಶುರುಮಾಡಿದರು. ನನ್ನ ಪತ್ರ ಇನ್ನೂ ಓದಿಲ್ಲವೆಂದು ನನಗೆ ಅನುಮಾನ. ನನ್ನ ಕಡೆ ನೋಡುವುದನ್ನ ನಿಲ್ಲಿಸಿದ್ದರೇನೋ ಎಂಬ ಅನುಮಾನ ಶುರುವಾಯ್ತು. ಎರಡು ಮೂರು ದಿನ ಕಳೆದರೂ ಪತ್ರದ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲಿಲ್ಲ. ಪಾಠ ಮಾಡುತ್ತಿದ್ದರು. ಬೇಕೆಂತಲೇ ಏನಾದರೂ ಸಂದೇಹಗಳನ್ನು ಕೇಳಿದಾಗ ವಿವರಿಸುತ್ತಿದ್ದರು. ಅವರು ನನ್ನ ಕಡೆ ನೋಡುವುದನ್ನ ನಿಲ್ಲಿಸಿದ್ದರೆಂಬುದು ಖಾತ್ರಿಯಾಯ್ತು. ಹಲವು ದಿನಗಳ ನಂತರ ಪತ್ರದ ವಿಷಯ ಎತ್ತದೇ ಯಾವುದೋ ಅರ್ಥವಾಗದಿದ್ದ ವಿಷಯವನ್ನು ಹೇಳಿಸಿಕೊಳ್ಳಲು ಹೋದಾಗ ಕೂಡ ವಿವರಿಸಿ ಕಳುಹಿಸಿದರು. ಹೆಚ್ಚು ಮಾತುಕತೆಯಿರಲಿಲ್ಲ, ಮತ್ತು ಕೊಂಚ ಗರಮ್ಮಾಗಿದ್ದರೋ ಎಂದು ಅನುಮಾನವಾಯ್ತು. ಆದರೆ ಮುಂಚಿನಂತೆ ಮುಕ್ತವಾಗಿ ಮಾತನಾಡುತ್ತಿರಲಿಲ್ಲ. ಇದು ಖಂಡಿತಾ ನನ್ನ ಪತ್ರದ ನಂತರದ ಪರಿಣಾಮವೇ ಹೌದೆಂದು ಗೊತ್ತಾಯ್ತು. ಪ್ರತಿದಿನ ಅವರು ಯಾರಿಗೇ ಬಯ್ದರು, ಏನೇ ಮಾತನಾಡಿದರೂ ಪರೋಕ್ಷವಾಗಿ ನನಗೇ ಹೇಳಿದರೇನೋ ಎಂದೆನಿಸುತ್ತಿತ್ತು ಅದು ನಿಜವೋ ನನ್ನ ಮೂಗಿನ ನೇರದ ಯೋಚನೆಯೋ, ನನ್ನಲ್ಲಿ ಕಾಡುತ್ತಿದ್ದ ಪಾಪಪ್ರಜ್ಞೆಯ ಫಲವೋ ಗೊತ್ತಿಲ್ಲ. ಕೋಪಕ್ಕೆ ಮೂಗು ಕೊಯ್ದುಕೊಂಡಾಗಿತ್ತು. ಒಮ್ಮೆ ಧೈರ್ಯ ಮಾಡಿ ಅವರು ಮನೆಗೆ ಮರಳುವ ಸಮಯದಲ್ಲಿ ಕಾರಿನ ಬಳಿಯೇ ಹೋಗಿ ನಾನು ನಿಮಗೆ ಒಂದು ಪತ್ರ ಬರೆದಿದ್ದೆ ನೀವ್ಯಾಕೆ ಏನೂ ಪ್ರತಿಕ್ರಿಯೆ ಎಂದು ಹೇಳುವಷ್ಟರಲ್ಲಿ ತಡೆದು ನೀನು ನಿನ್ನ ಏನೆಂದು ತಿಳಿದಿದ್ದೀಯ, ನಾನ್ಯಾರಂತ ಗೊತ್ತಾ ನಿನಗೆ, ನಿನ್ನ ವಯಸ್ಸಿನಷ್ಟು ತರಗತಿಗಳಿಗೆ ಪಾಠ ಮಾಡಿದ್ದೇನೆ ನಾನು. ಯಾರ ಹತ್ತಿರ ಹೇಗೆ ನಡೆದುಕೊಳ್ಳಬೇಕೆಂಬ ಕನಿಷ್ಠ ಕಾಮನ್ ಸೆನ್ಸ್ ಇಲ್ವಾ ನಿನಗೆ. ನನ್ನ ಕಣ್ಮುಂದೆ ನಿಲ್ಲಬೇಡ ಹೊರಡು. ಎಂದು ಕಾರ್ ಹತ್ತಿ ಹೊರಟೇ ಹೋದರು. ಇಡೀ ಕಾಲೇಜು ನನ್ನನ್ನೇ ನೋಡುತ್ತಿರುವಂತೆ ಅನಿಸುತ್ತಿತ್ತು. ತಲೆಯೆತ್ತಲೂ ಆಗಲಿಲ್ಲ. ನಿಂತಲ್ಲೇ ಕುಸಿದು ಹೋಗಿದ್ದೆ. ಆದರೆ ಇತ್ತೀಚೆಗೆ ಗುರುಗಳು ಯಾರ ಹೆಗಲ ಮೇಲೂ ಕೈ ಹಾಕಿ ಹುಡುಕುತ್ತಿದ್ದುದು ನಿಂತಿತ್ತು. ಆದರೆ ಪಾಠವನ್ನು ಮಾತ್ರ ಯಾವುದೇ ಲೋಪವಿಲ್ಲದೇ ಮುಂದುವರೆಸಿದ್ದರು.

**********

ರಾತ್ರಿಯೆಲ್ಲಾ ಕಣ್ಣಿಗೆ ನಿದ್ರೆ ಹತ್ತಲಿಲ್ಲ. ಪುಸ್ತಕದೊಳಗೆ ಇಟ್ಟಿದ್ದ ಪತ್ರ ತಲೆಯಲ್ಲಿ ಸೇರಿಕೊಂಡು ಪತ್ರ ನೀಡಿದಮೇಲೆ ಆಗಬಹುದಾದ ನಂತರದ ಪರಿಣಾಮವನ್ನು ಚಿಂತಿಸುತ್ತಲೇ ಇತ್ತು. ಮುಂಜಾನೆ ೩ ಘಂಟೆ ಬಾರಿಸುತ್ತಲಿತ್ತು. ಕಣ್ಣುರಿಗಿಂತ ಹೆಚ್ಚಾಗಿ ಎದೆ ಉರಿಯುತ್ತಲಿತ್ತು. ಪತ್ರ ಕೊಟ್ಟರೆ ಆಗುವ ಪುರುಷಾರ್ಥ ಏನಿತ್ತು? ಹೆಚ್ಚೆಂದರೆ ಅವರಲ್ಲಿದ್ದ ಗುರುವನ್ನು ಕಳೆದುಕೊಳ್ಳುತ್ತೇನೇನೋ? ಆದರೆ ಇನ್ನು ಮುಂದೆ ಯಾರೊಂದಿಗೂ ಮತಾಂಧರಂತೆ ನಡೆದುಕೊಳ್ಳುವ ಧೈರ್ಯ ಮಾಡಲಾರರು. ಮುಂದಿನ ವರ್ಷದಿಂದ ಜಾತಿಯ ಆಧಾರದ ಮೇಲೆ ಧನಸಹಾಯ ಕೂಡ ಮಾಡಲಾರರು. ಆದರೆ ನಾನು ಖಿನ್ನನಾಗಿ ನನ್ನ ಉಳಿದ ವರ್ಷ ಕಳೆಯಬೇಕಾದೀತು. ಇಷ್ಟು ವಯಸ್ಸಾಗುವವರೆಗೂ ಅವರ ನಂಬಿಕೆಗಳು ಬದಲಾಗದ್ದು ಈಗ ನಾನು ಬರೆಯುವ ಯಕಃಶ್ಚಿತ್ ಪತ್ರದಿಂದ ಬದಲಾಗುತ್ತದೆಂದು ಹೇಗೆ ನಂಬುವುದು? ಇದು ನನ್ನ ಮೂರ್ಖತನವಷ್ಟೇ. ನನಗೆ ಈ ಜಾತಿ ವ್ಯವಸ್ಥೆಯ ಮೇಲಿರುವ ಕ್ರೋಧವನ್ನು ಇವರ ಮೂಲಕ ಹೊರಗಾಕಿದ್ದೆನಷ್ಟೇಯೇನೋ? ಅವರವರ ನಂಬಿಕೆ ಅವರವರಿಗೆ ಹಾಗೇ ಇದ್ದುಬಿಡಲಿ ಉಪದೇಶ ಮಾಡಲು ನಾನ್ಯಾವ ದೊಡ್ಡ ಮನುಷ್ಯ? ಈ ಪತ್ರವನ್ನು ಹರಿದುಬಿಡಲೆ? ನೆಮ್ಮದಿಯಾಗಿ ನಿದ್ರೆಯಾದರೂ ಬರುತ್ತಲಿತ್ತು! ಆದರೆ ಸಾವಿರಾರು ವಿದ್ಯಾರ್ಥಿಗಳಿಗೆ ಗುರುಗಳಾಗಿದ್ದವರೂ, ನನ್ನಂತಹ ಎಷ್ಟೋ ಜನರ ಮೊಟ್ಟ ಮೊದಲ ರೋಲ್ ಮಾಡೆಲ್ ಗಳಾಗಿರುವವರು ಮಾಡಿದ ತಪ್ಪನ್ನ ನಾಳೆ ನಾವು ಮುಂದುವರೆಸಿಕೊಂಡು ಹೋಗುವಹಾಗಾದರೆ? ಬೇರೆ ಯಾವುದೇ ಮಾರ್ಗದಲ್ಲಿಯಾದರೂ ತಿಳಿಹೇಳಲು ಸಾಧ್ಯವಿದೆಯೆ? ಅಥವಾ ಯಾರೇ ಹೀಗೆ ಮಾತನಾಡಿದಾಗಲೂ ನಿರ್ಲಕ್ಷಿಸುವುದೇ ಉತ್ತಮ ಮಾರ್ಗವೇ? ರಾತ್ರಿ ಕಳೆದು ಬೆಳಗಾಗೇ ಹೋಯ್ತು. ಕಾಲೇಜಿನ ದಾರಿ ಹಿಡಿದೆ. ಪತ್ರ ಪುಸ್ತಕದೊಳಗೆ ಹಾಗೇ ಇತ್ತು!

                                                                                           -ನೀ.ಮ. ಹೇಮಂತ್


Sunday 15 April 2012

ದೇಹತ್ಯೆ! (ಒಂದು ವಿಕೃತಿ)


       ನನ್ನ ಎಡಗಡೆ ನಿಂತಿರುವವನು ನನ್ನ ಅಪ್ಪ. ನನ್ನ ಬಲಗಡೆ ಇರುವವಳು ನನ್ನ ಅಮ್ಮ ಎಂದು ಕೈಕಾಲುಗಳನ್ನು ಕಟ್ಟಿ ಮೂಖಕ್ಕೆ ಕಪ್ಪು ಬಟ್ಟೆ ಸುತ್ತಿ ನಿಲ್ಲಿಸಿರುವ ಇಬ್ಬರು ವ್ಯಕ್ತಿಗಳನ್ನು ತೋರಿಸುವನು. ಎತ್ತರದ ವೇದಿಕೆ ಮೇಲೆ ನಿಲ್ಲಿಸಲಾಗಿರುವ ಎರಡು ಅಲುಗಾಡದಂತೆ  ಕಪ್ಪುಬಟ್ಟೆಯಿಂದ ಸುತ್ತಲ್ಪಟ್ಟಿರುವ ದೇಹಗಳು ಮತ್ತು ಅದರ ಮಧ್ಯದಲ್ಲಿ ಕೊಂಚ ಎದುರಿಗೆ ನಿಂತು ಮಾತನಾಡುತ್ತಿರುವ ಯುವಕನನ್ನು ಆಶ್ಚರ್ಯಚಕಿತರಾಗಿ ನೋಡುತ್ತಿರುವ ಲಕ್ಷಾಂತರ ಜನತೆ. ಅಲ್ಲಿ ಏನು ನಡೆಯುತ್ತಲಿತ್ತೆಂಬುದು ಯಾರಿಗೂ ಅಂದಾಜಿರಲಿಲ್ಲ. ಇದಾವ ರೀತಿಯ ಸಮಾರಂಭವಿರಬಹುದು ಎಂದು ನೆರೆದಿದ್ದ ಜನ ಬಾಯಿ ಕಳೆದುಕೊಂಡು ನೋಡುತ್ತಿರಲು ಯುವಕ ತನ್ನ ಮಾತು ಮುಂದುವರೆಸುವನು. ನಾನೊಬ್ಬ ರಾಕ್ಷಸ. ಇಲ್ಲಿದ್ದಾಳಲ್ಲ ಈ ನನ್ನ ತಾಯಿಗೆ ನಾನು ತುಂಬಾ ಕಾಟ ಕೊಟ್ಟಿದ್ದೀನಿ. ನಾನು ಇವಳ ಮೇಲೆ ಕೊಂಚವೂ ಗೌರವ ತೋರಿದವನಲ್ಲ. ಪ್ರೀತಿಯಿಂದ ನಡೆಸಿಕೊಂಡವನಲ್ಲ. ಬೆಳಗ್ಗೆ ತಿಂಡಿ ತಯಾರಿಸುವುದು ಕೊಂಚ ತಡವಾಯ್ತೆಂದು ಕಪಾಳೆಗೆ ಹೊಡೆಯುತ್ತಿದ್ದೆ. ಕೆಲವು ಸಲ ಅಡುಗೆ ರುಚಿಕರವಾಗಿರದಿದ್ದಲ್ಲಿ ಬಿಸಿ ಅಡುಗೆಯನ್ನು ಅವಳ ಮೇಲೆ ಎಸೆದಿದ್ದೇನೆ. ಕೆಲವು ಸಲ ಮಾತಿಗೆ ಮಾತು ಬೆಳೆಸಿ ನನ್ನೊಂದಿಗೆ ಇವಳು ಜಗಳವಾಡಿದ್ದಾಗ ಕಾಲಿನಲ್ಲೇ ಒದ್ದಿದ್ದೇನೆ. ಕುಡಿದಾಗಲಂತೂ ಒಳಗಿದ್ದ ಕ್ರೋಧವಷ್ಟನ್ನೂ ಇವಳ ಮೇಲೆ ತೀರಿಸಿಕೊಳ್ಳುತ್ತಾ ನಾಯಿಗೆ ಚಚ್ಚಿದ ಹಾಗೆ ಚಚ್ಚಿದ್ದೇನೆ. ಎದುರಿಗಿದ್ದ ಜನತೆ ಸ್ಥಬ್ಧವಾಗಿ ನಿಂತಿತ್ತು. ಇದಾವುದೋ ದೊಂಬರಾಟ, ಬಯಲಾಟವಂತೂ ಅಲ್ಲ. ಇವನೇನು ಕಥೆ ಹೇಳುತ್ತಿರುವನೋ ಇಲ್ಲ ನಿಜಸಂಗತಿಯನ್ನು ವಿವರಿಸುತ್ತಿರುವನೋ, ಗೊತ್ತಾಗದೇ ಗೊಂದಲದಲ್ಲಿ ಸಿಲುಕಿ, ತಮಗ್ಯಾಕೆ ಬೇಕು ಇವನ ತಲೆನೋವಿನ ಕಥೆ ಎಂದು ಕೆಲವರು ಹೋಗಲು ಮನಸುಮಾಡಿದರಾದರೂ ಇನ್ನೂ ಕುತೂಹಲದಿಂದ ಸೇರಿಕೊಳ್ಳುತ್ತಲೇ ಇದ್ದ ನೂರಾರು ಜನರನ್ನು ಕಂಡು ಮತ್ತೆ ಏನಿರಬಹುದು ಮುಂದೆ ಎಂದು ನಿಂತು ನೋಡಹತ್ತಿದರು. ಮೊದ ಮೊದಲು ವೇದಿಕೆ ಮೇಲಿದ್ದ ಯುವಕನ ಮಾತುಗಳಿಗೆ ಅಲ್ಲಲ್ಲಿ ವ್ಯಕ್ತವಾಗುತ್ತಿದ್ದ ಓಹೋ.. ಆಹಾ… ಹೋಗಲಿ ಬಿಡು… ಕಳ್ಳನನ್ನ ಮಗನೆ.. ಎಂಬಿತ್ಯಾದಿಯಾದ ಪ್ರತಿಕ್ರಿಯೆಗಳು ಕ್ರಮೇಣ ಕುಂಠಿತವಾದವು. ಯುವಕ ತನ್ನ ಸ್ವಗತ ಲಹರಿ ಮುಂದುವರೆಸಿದ.

ನನಗೆ ನನ್ನ ತಾಯಿಯ ಮೇಲೆ ಪ್ರಪಂಚದ ಯಾವ ಮನುಷ್ಯರ ಮೇಲೂ ಇರಲಾರದಂಥ ಕ್ರೋಧ, ವೈಶಮ್ಯವಿತ್ತು. ಇದಕ್ಕೆ ನಾನು ಹೊಣೆಗಾರನಲ್ಲ ಇದಕ್ಕೆ ನೇರ ಹೊಣೆ ಇವಳೇ. ಹೊಡೀತಿದ್ದಳು. ಒಂದು ದಿನ ಪ್ರೀತಿಯಿಂದ ಅಪ್ಪಿಕೊಂಡವಳಲ್ಲ. ಯಾವುದೋ ದೆವ್ವವನ್ನ ಕಂಡವಳ ಹಾಗೆ ದೂರ ತಳ್ಳುತ್ತಿದ್ದಳು. ಮಾತುಮಾತಿಗೆ ಕಪಾಳೆಗೆ ಹೊಡೆಯುತ್ತಿದ್ದಳು. ಸದಾ ಅಳುತ್ತಿದ್ದಳು. ನನಗಿನ್ನೂ ನೆನಪಿದೆ ಶಾಲೆಯಲ್ಲಿ ಉತ್ತಮ ಅಂಕ ಪಡೆದು, ಮಾರ್ಕ್ಸ್ ಕಾರ್ಡ್ ಹಿಡಿದು ಇವಳ ಬಳಿಗೆ ಓಡಿಬಂದರೆ ಹರಿದು ಬಿಸಾಕಿದ್ದಳು. ಇವಳ ಎದುರಿಗೆ ನಾನು ಆಟವಾಡುವ ಹಾಗಿರಲಿಲ್ಲ ಜುಟ್ಟು ಹಿಡಿದು ಗೋಡೆಗೆ ಜಪ್ಪುತ್ತಿದ್ದಳು. ನನ್ನ ಸಹನೆಯೂ ಮೀರಿತ್ತು. ತಿರುಗಿ ಹೊಡೆಯಲು ಶುರುಮಾಡಿದೆ. ಅಪ್ಪನೂ ಸೇರಿ ಹೊಡೆದು ಹೆಡೆಮುರಿಕಟ್ಟುತ್ತಿದ್ದೆವು. ಆಗೆಲ್ಲಾ ನನ್ನ ಅಪ್ಪನಿಲ್ಲದೇ ಇದ್ದಿದ್ರೆ ಇವಳು ವಿಷ ಹಾಕಿ ಕೊಲ್ಲಲೂ ಹೇಸುತ್ತಿರಲಿಲ್ಲ. ಹೆಮ್ಮಾರಿ ಇವಳು. ಕೆಟ್ಟ ಮಗನಿರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯವೇ ಇಲ್ಲ ಎಂದು ಎಲ್ಲರೂ ಹೇಳುತ್ತಿದ್ದರು. ಇವಳಿಗೆ ನನ್ನ ಮೇಲೇಕಿಷ್ಟು ಕೋಪ ಎಂದು ನನಗೆ ಅರ್ಥವೇ ಆಗಲಿಲ್ಲ. ನನ್ನನ್ನು ಕಂಡರೇ ಉರಿದು ಬೀಳುತ್ತಿದ್ದಳು. ಮೊದಮೊದಲು ನನ್ನ ಅಪ್ಪ ಕುಡಿದು ಬಂದು ತರಾಟೆಗೆ ತೆಗೆದುಕೊಂಡಾಗಲೆಲ್ಲಾ ಖುಷಿ ನನಗೆ. ಆಗಬೇಕಿತ್ತು ಇವಳಿಗೆ, ಮಾರಿ ಎಂದುಕೊಳ್ಳುತ್ತಿದ್ದೆ. ಅಷ್ಟರಲ್ಲಿ ಜನರ ಗುಂಪಿನಿಂದ ಗಲಾಟೆ ಶುರುವಾಯ್ತು. ಯಾವುದೋ ಹೆಂಗಸು, ತಾಯಿಯ ಬಗ್ಗೆ ಹೀಗೆ ಮಾತನಾಡುತ್ತಿರುವನಲ್ಲಾ ಎಂದು ಧಿಕ್ಕಾರ ಸಹಾ ಕೂಗಲು ಶುರುಮಾಡಿದಳು. ಅವಳ ಬೆಂಬಲಕ್ಕೆ ಗಂಡಸರೂ ಸಹ ನಿಂತುದು ಒಂದು ವಿಸ್ಮಯ. ಆ ಯುವಕ ಸಮಾಧಾನ ಪಡಿಸಿ ತನ್ನ ಮಾತುಗಳನ್ನು ಪೂರ್ತಿ ಕೇಳುವವರೆಗೂ ಯಾರೂ ಪ್ರತಿಕ್ರಿಯಿಸದಿರುವಂತೆ ಗುಡುಗಿದನು. ಕೊಂಚ ಸಮಯದ ನಂತರ ವಾತಾವರಣ ಹಿಡಿತಕ್ಕೆ ಬಂತು. ಯುವಕ ಮತ್ತೆ ಮುಂದುವರೆಸಿದ.

ಈ ನಮ್ಮಪ್ಪನಿಗೆ ನನ್ನನ್ನು ಕಂಡರೆ ಅದೇಕೆ ಅಷ್ಟು ಇಷ್ಟವೋ ಗೊತ್ತಿಲ್ಲ, ಇವನೇ ನನ್ನನ್ನು ಬಾಲ್ಯದಿಂದಲೂ ಸಾಕಿದ್ದು, ನನಗೆ ಪಾಠ, ಆಟ, ಊಟ ಎಲ್ಲಾ ಇವನೇ ನೋಡಿಕೊಳ್ಳುತ್ತಿದ್ದ. ಸದಾ ಹುಲಿಯಂತೆ ಬದುಕಬೇಕೆಂದು, ಈ ತಾಯಿಯ ರೀತಿಯ ಕ್ಷುದ್ರ ಹೆಣ್ಣು ಜೀವಿಗಳನ್ನು ಹೊಸಕಿ ಹಾಕಬೇಕೆಂದು ಸದಾ ಹೇಳಿಕೊಡುತ್ತಿದ್ದ. ಯಾರಿಗೂ ಹೆದರಕೂಡದೆಂದು, ಅನಿಸಿದ್ದೆಲ್ಲವನ್ನೂ ಮಾಡಬೇಕೆಂದು ಹೇಳಿಕೊಡುತ್ತಿದ್ದ. ಇವನ ಉಪದ್ರವಗಳನ್ನು ನನ್ನ ಅಮ್ಮ ಹೇಗೆ ತಡೆದುಕೊಂಡು ಇನ್ನೂ ಜೊತೆಗಿದ್ದಳೋ ನನಗೆ ಅರ್ಥವಾಗುತ್ತಿರಲಿಲ್ಲ. ಕೆಲವು ಸಲ ಅವಳ ದಾರುಣ ಪರಿಸ್ಥಿತಿಗೆ ಕರುಣೆ ಹುಟ್ಟಿ ಅವಳ ತಂಟೆಗೆ ಹೋಗದಿದ್ದರೂ, ಅವಳ ಕಣ್ಣುಗಳಲ್ಲಿ ನನಗಾಗಿ ಇದ್ದ ದ್ವೇಷವನ್ನು ಕಂಡು ನನ್ನಲ್ಲಿನ ಕಿಚ್ಚು ಜಾಗೃತಗೊಳ್ಳುತ್ತಿತ್ತು. ನಾನು ಅಪ್ಪನ ಜೊತೆಗೆ ಇರುತ್ತಿದ್ದ ಪ್ರತಿಕ್ಷಣದಲ್ಲೂ ಆಕೆಗೆ ನನ್ನ ಮೇಲೆ ಕೋಪ ಹೆಚ್ಚುತ್ತಿತ್ತು. ನಾನು ಮನಸಿಗೆ ಬಂದದ್ದನ್ನೆಲ್ಲಾ ಮಾಡುವುದನ್ನ ಕಲಿತದ್ದು ಅಪ್ಪನಿಂದಲೇ, ನಾನು ಹುಲಿಯಂತೆಯೇ ಬೆಳೆದೆ. ಎಲ್ಲ ಅಪ್ಪನ ಅಭ್ಯಾಸಗಳನ್ನೂ ಕಲಿತೆ. ಇಷ್ಟು ಹೊತ್ತಿಗಾಗಲೇ ನೆರೆದಿದ್ದ ಜನರಲ್ಲಿ ಯಾರಾದರೂ ಅಗಳು ನುಂಗಿದರೂ ಸಹ ಶಬ್ಧ ಮಾರ್ದನಿಸುತ್ತಿತ್ತು, ಅಷ್ಟು ನಿಶ್ಯಬ್ಧತೆ. ಯುಮಕ ಮುಂದುವರೆದ.

ನನಗೆ ಮೊಲಗಳನ್ನು ಹೊಡೆದು, ಅದರ ರಕ್ತ ಬಿಸಿಯಿರುವಾಗಲೇ ಹಸಿ ಹಸಿ ಹಾಗೇ ತಿಂದು ಮುಗಿಸುವುದರಲ್ಲಿ ಒಂದು ರೀತಿಯ ವಿಕೃತ ಆನಂದ ಸಿಗುತ್ತಲಿತ್ತು. ನನಗೀಗ ಇಪ್ಪತ್ತೆರಡು ವರ್ಷ. ದಷ್ಟಪುಷ್ಟವಾಗಿದ್ದೇನೆ. ನನ್ನ ಅಪ್ಪ ಇಪ್ಪತ್ತೆರಡು ವರ್ಷ ನೀರೆರೆದ ಮರ ಈಗ ಫಲ ನೀಡುವ ಸಮಯ. ಆದರೆ ನನ್ನ ಕಿವಿಗೆ ಈಗ ಇಪ್ಪತ್ತೆರಡು ಮರ್ಷದ ನಂತರ ಒಂದು ಸುದ್ದಿ ಬಿತ್ತು. ನನ್ನ ಈ ಅಪ್ಪನ ದೆಸೆಯಿಂದ ಈ ಅಮ್ಮನಿಗೆ ಇಪ್ಪತ್ನಾಲ್ಕು ವರ್ಷಗಳ ಹಿಂದೆ, ಒಂದು ಮಗು ಜನಿಸಿತ್ತಂತೆ. ಅದು ಕೂಡ ಮೊಲದಂತಹ ಒಂದು ಹೆಣ್ಣು ಜಾತಿಯದ್ದಂತೆ. ನನ್ನ ಅಪ್ಪನಂತಹ ವ್ಯಾಘ್ರನಿಗೆ ನನ್ನಂತಹ ಹುಲಿಯೇ ಬೇಕಿತ್ತಂತೆ. ಮೊಲ ಕಣ್ಬಿಡುವ ಮುನ್ನವೇ ಅದನ್ನು ಸುಲಭವಾಗಿ ಕೊಂದು ತೇಗಿದ್ದನಂತೆ. ನಂತರ ನನ್ನ ತಾಯಿಯಿಂದಲೇ ಬಲಾತ್ಕಾರವಾಗಿ ನನ್ನನ್ನು ಹುಟ್ಟಿಸಿದನಂತೆ. ಹಾಲು ಕೂಡ ಉಣಿಸದೇ, ನನ್ನ ಕಡೆ ತಿರುಗಿ ಕೂಡ ನೋಡದೇ ಮಲಗಿದ್ದ ನನ್ನ ತಾಯಿಯಿಂದ ನನ್ನನು ಕಿತ್ತು ತಂದು ನನ್ನ ತಂದೆ ಸಾಕಿದನಂತೆ. ನನ್ನ ಬಾಲ್ಯದಲ್ಲಿ ನನ್ನ ತಾಯಿ ಹಲವು ಸಲ ನಿನ್ನಿಂದಲೇ ಕಣೋ ಅವಳು ಸತ್ತದ್ದು ಎಂದು ಅರಚಿದ್ದು ನನಗೆ ನೆನಪಿದೆ. ಅವಳ ಕಣ್ಣೆದುರಿಗೇ ಅವಳ ಮೊಲದ ಮರಿ ಸತ್ತಾಗ ಆಕೆಗೆ ಹೇಗೆನಿಸಿರಬಹುದು. ಹಂತಹಂತದಲ್ಲೂ ತಂದೆಯ ಜೊತೆಗೇ ಸೇರಿ, ತಂದೆಯ ಪ್ರತಿ ಗುಣಲಕ್ಷಣಗಳನ್ನೇ ಪಡೆಯುತ್ತಾ ಬೆಳೆದ ನನ್ನನ್ನು ಕಂಡು ಎಷ್ಟು ರೋಷ ಉಕ್ಕಿರಬಹುದು. ಆದರೆ ನಾನೇನು ಮಾಡಲಿ ನನ್ನ ತಪ್ಪೇನಿತ್ತು ಇದರಲ್ಲಿ. ಈ ನನ್ನ ತಾಯಿ ನಾನು ಹೊಟ್ಟೆಯಲ್ಲಿದ್ದಾಗಲೇ ಹೊಡೆದು ಸಾಯಿಸಲು ಪ್ರಯತ್ನಿಸಿದ್ದಳಂತೆ, ಯಶಸ್ವಿಯಾಗಿದ್ದಿದ್ದರೆ ನಾನು ನೆಮ್ಮದಿಯಾಗಿ ಸತ್ತಿರುತ್ತಿದ್ದೆ. ಈ ನನ್ನ ತಂದೆಗೆ ಹುಲಿಯ ಖಯಾಲಿ ನಾನು ಇವನಿಗೇನೋ ಮೋಕ್ಷ ನೀಡುವ, ಸ್ವರ್ಗ ಪ್ರಾಪ್ತಿ ಮಾಡಿಸುವೆನೆಂಬ ಅಪೇಕ್ಷೆ. ನನ್ನಂತಹ ಹುಲಿ ಇವನ ವಂಶ ಬೆಳೆಸುವೆನೆಂಬ ಖಾತ್ರಿ!

ನನಗೆ ನಾನು ಸಾಕಿದ್ದ ಮೊಲಗಳನ್ನು ತಿವಿದು ಕೊಲ್ಲುವುದಕ್ಕಿಂತ ಅದು ಚಿಕ್ಕದರಲ್ಲಿ ಆಟವಾಡುವುದನ್ನ ನೋಡಲು ಬಲು ಇಷ್ಟವಿತ್ತು. ಅದರ ಕುತ್ತಿಗೆಗೆ ಗೆಜ್ಜೆ ಕಟ್ಟಿ ಅದು ಓಡಿಯಾಡಿದಾಗ ಅದು ಮಾಡುವ ಸದ್ದನ್ನು ಕೇಳಬೇಕೆಂಬ ಆಸೆಯಿತ್ತು. ನನ್ನ ಅಮ್ಮನ ಬೆಚ್ಚನೆಯ ತೋಳಿನಲ್ಲಿ ಸೇರಬೇಕು, ಅವಳ ಕೈಯಲ್ಲಿ ಎಣ್ನೆ ಉಜ್ಜಿಸಿಕೊಂಡು ಬಿಸಿ ಬಿಸಿ ನೀರು ಸುರಿಸಿಕೊಂಡು ಮೀಯಬೇಕು, ಮಮತೆ ತುಂಬಿದ ಕೈಗಳಿಂದ ಅನ್ನ ಉಣ್ಣಿಸಿಕೊಳ್ಳಬೇಕೆಂಬ ಹಂಬಲವಿತ್ತು. ಅವಳ ತೊಡೆಗಳ ಮೇಲೆ ನೆಮ್ಮದಿಯಾಗಿ ಒಮ್ಮೆಯಾದ್ರೂ ನಿದ್ರಿಸುವ, ಅವಳ ಕೈಬೆರಳುಗಳು ನನ್ನ ಕೂದಲನ್ನು ಸವರುವ ಸ್ಪರ್ಶದನುಭವ ಬೇಕಿತ್ತು. ಬಿದ್ದು ಗಾಯ ಮಾಡಿಕೊಂಡಾಗ ಮುಲಾಮು ಹಚ್ಚುವ ಅಕ್ಕ ಬೇಕಿತ್ತು. ಅಮ್ಮನ ಹತ್ತಿರವೂ ಹೇಳಲಾಗದ ಆಸೆ, ಕನಸುಗಳನ್ನು ಅಕ್ಕನ ಕಿವಿಯಲ್ಲಿ ಒಸರಬೇಕಿತ್ತು. ಅಕ್ಕನ ತೋಳ್ತೆಕ್ಕೆಯಲ್ಲಿ ನನ್ನ ಬಾಲ್ಯದ ರಾತ್ರಿಗಳನ್ನು ನೆಮ್ಮದಿಯಾಗಿ ಕಳೆಯಬೇಕಿತ್ತು. ನನ್ನಲ್ಲಿದ್ದ ಎಲ್ಲ ಮೊಲಗಳಿಗೂ ಅಕ್ಕನ ಹೆಸರು ಇಡಬೇಕಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಒಂದೇ ಒಂದು ಹೆಣ್ಣು ಜೀವ ನನ್ನ ಸುತ್ತ ತನ್ನ ಪ್ರೀತಿ ಚೆಲ್ಲಬೇಕಿತ್ತು. ಆದರೆ ಎಲ್ಲವನ್ನೂ ಕಿತ್ತುಕೊಂಡ ಈ ಅಪ್ಪ ಅಮ್ಮ ನನಗೀಗ ಬೇಕಿರಲಿಲ್ಲ. ನೀವೇ ಹೇಳಿ ಏನು ಮಾಡಲಿ ಇವರನ್ನು. ಇನ್ನೊಬ್ಬರನ್ನು ಬದುಕಗೊಡದ ಈ ದೇಹಗಳಿಗೆ ಬದುಕುವ ಹಕ್ಕು ಇನ್ನು ಉಳಿದಿಲ್ಲ. ಎಂದು ಖಾಲಿ ಬಯಲಿನಷ್ಟೇ ನಿಸ್ತೇಜವಾಗಿ ನಿಂತಿದ್ದ ಜನಸ್ತೋಮವನ್ನು ನೋಡುತ್ತಾ ಜೇಬಿನಿಂದ ರಿವಾಲ್ವರೊಂದನ್ನು ಹೊರತೆಗೆದದ್ದೇ, ಎಲ್ಲ ದೇಹಗಳಲ್ಲಿ ಜೀವಸಂಚಾರವಾದಂತಾಗಿ, ಇಲ್ಲಾ, ತಡೆ, ಕೊಲ್ಲು, ಹೋ, ಹಾ.. ಎಂದು ಏನೇನೋ ಮಾತುಗಳು ಗಿಜಿಗಿಜಿಗಿಜಿಗಿಜಿಗಿಜಿಗಿಜಿಯಲ್ಲಿ ಏನೂ ಕೇಳದಂತಾಯ್ತು. ಎಲ್ಲೆಲ್ಲೂ ಗುಸುಗುಸು ಪಿಸ ಪಿಸ ಮಾತುಗಳು, ನೆರೆದಿದ್ದವರೆಲ್ಲರಲ್ಲೂ ಚೆಲ್ಲಾಪಿಲ್ಲಿಯಾಗುತ್ತಿರಲು. ಎಲ್ಲೆಲ್ಲಿಂದಲೋ ಖಾಕಿ, ಖಾದಿಗಳೆಲ್ಲಾ ಸಭಾಂಗಣದತ್ತ ನುಗ್ಗುತ್ತಿರಲು…

ಯುವಕ ರಕ್ತ ಕಾರುತ್ತಾ ಧರೆಗುರುಳುವನು……!


                                                     -ನೀ.ಮ. ಹೇಮಂತ್